Wednesday 28 December 2011

ಬಾ ಬಾರೆ ಸಖೀ

ಕೃಷ್ಣ, ಭಾರತೀಯ ಜನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಹೆಸರು. ಸಾವಿರಾರು ವಸಂತಗಳು ಕಳೆದರೂ ಇಂದಿಗೂ ಮಾಸದ ಆ ಪ್ರೇಮ ಪುತ್ಥಳಿಯನ್ನು ಅಂದು ಬೃಂದಾವನದ ಪ್ರಜೆಗಳು, ಗೋಪಾ ಬಾಲಕರು, ಗೋಪಿಕಾ ಸ್ತ್ರೀಯರು, ಕಾಣಲು, ಸಂಗದಿ ಇರಲು, ಒಡನಾಡಲು ಹೇಗೆ ಬಯಸುತ್ತಿದ್ದರು ಎಂಬ ಭಾವ ಹೊತ್ತ ಪದ್ಯ. ಈಗ್ಗೆ ಒಂದು ನಾಲ್ಕು ವರ್ಷಗಳ ಹಿಂದೆ ಬರೆದದ್ದು. 


ಬೃಂದಾವನದಲ್ಲಿ ಕೃಷ್ಣ ದನಗಾಹಿಯಾಗಿ ಗೋಪಾಲಕರ ಕಣ್ಮಣಿ. ಬೆಳಗ್ಗೆ ಗೋಗಳ ಜೊತೆಗೆ ಗೋವರ್ಧನ ಶಿಖರಕ್ಕೆ ಹೋಗಿ ಸಂಜೆ ೪ ಘಂಟೆಗೆ ಮನೆಯಕಡೆ ಪಯಣ. ದಾರಿಯಲ್ಲಿ ಸಿಗುವ ನಂದನವನದಲ್ಲಿ, ಒಂದು ಎತ್ತರವಾದ ಮರದಲ್ಲಿ ಹತ್ತಿ ಕುಳಿತು ವೇಣು ಗಾಯನ. ಗೋಗಳು ಗೋಪಾಲಕರು, ಪ್ರಾಣಿ, ಪಕ್ಷಿಗಳಿಗೆ,ಆ ಸಮಯದ ಕಾತರದ ನಿರೀಕ್ಷೆ. ಎಲ್ಲರಿಗೂ ಆ ಸಮಯಕ್ಕೆ ಅಲ್ಲಿ ಹೋಗಿ ಸೇರುವ ತವಕ ಆತುರ. ಈ ಭಾವನಗಳನ್ನು ಹೊತ್ತ ಇಬ್ಬರು ಗೋ ಕನ್ನಿಕೆಯರಲ್ಲಿ ಒಬ್ಬಳ ಭಾವ ಹೀಗಿದೆ.

ಬಾ ಬಾರೆ ಸಖೀ
ಬೇಗನೆ ಹೋಗುವ ನಾವು
ಬೃಂದಾವನದ ನಂದನವನದೀ
ರಂಗನ ಸಂಗದಿ ಚೆಂದದಿ ನಲಿಯಲು " ಬಾ ಬಾರೆ "

ಅಲ್ಲಿರುವನೆ ಅವ ಅರವಿಂದಾಕ್ಷನು
ಮುರಳೀ ಗಾನದಿ ಸೆಳೆದಿಹ ನಮ್ಮನು
ಗೋಪಿಯರೆಲ್ಲರು ಸೇರುವ ಮುನ್ನ
ಮುಂದಿನಸಾಲಲಿ ನಿಲ್ಲುವ ಬಾರೆ " ಬಾ ಬಾರೆ "

ಪ್ರತಿದಿನ ನಡೆಯುವ ಕೂಟದಿ ಅವನು
ಎಲ್ಲರ ಮನಕೆ ಮುದವನು ಈವನು
ವಾರಿಜಾಕ್ಷನಾ ವೇಣುಗಾನವನು
ಮನದಲಿ ತುಂಬಿ ತಣಿಯುವ ಬಾರೆ " ಬಾ ಬಾರೆ "

ಹರವಿದ ಅರಿವೆಯು ಆರುವ ಮುನ್ನ
ಕಡೆದಿಹ ಬೆಣ್ಣೆಯ ತೆಗೆಯುವ ಮುನ್ನ
ಅಮ್ಮನ ಕಣ್ಣಿಗೆ ಬೀಳುವ ಮುನ್ನ
ಮುರಳೀ ಗಾನವು ನಿಲ್ಲುವ ಮುನ್ನ " ಬಾ ಬಾರೆ "

ಇದನ್ನು ನಾನು "ದೇಶ್" ರಾಗದಲ್ಲಿ ಹಾಡಿಕೊಂಡಿದ್ದೇನೆ.ಸೂಕ್ತವಾಗಿರುತ್ತೆ ಎಂದು ಅನಿಸುತ್ತದೆ.


No comments:

Post a Comment