Thursday 26 April 2018

ಅಂತರಂಗದ ಯುದ್ಧ.



'ಯುದ್ಧಯುದ್ಧರಂಗದಲ್ಲೇ ನಡೆಯಬೇಕಾಗಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಯುದ್ಧ ಬಹಿರಂಗವಾಗಿಯೂ ನಡೆಯುವುದಿಲ್ಲ. ವ್ಯಕ್ತಿ ವ್ಯಕ್ತಿಗಳ ಸಂಬಂಧಗಳಲ್ಲಿ, ಸಂಸ್ಥೆಗಳಲ್ಲಿ, ಸಮಾಜದಲ್ಲಿ, ಸಂಸಾರದಲ್ಲಿ, ಸರಿ ತಪ್ಪುಗಳ ನಡುವೆ, ಧರ್ಮ ಅಧರ್ಮಗಳ ನಡುವೆ, ನ್ಯಾಯ ಅನ್ಯಾಯಗಳ ನಡುವೆ, ನಿತ್ಯ ಯುದ್ಧ ನಡೆಯುವುದು ಉಂಟು.ಇನ್ನು ಆಂತರ್ಯದಲ್ಲಿ ಅರಿಷಡ್ವರ್ಗಗಳ ಕೋಟೆಯಲ್ಲಿ, ಮೋಹ ಮಮಕಾರಗಳು ರಚಿಸಿರುವ ಚಕ್ರವ್ಯೂಹದಲ್ಲಿ, ನಿತ್ಯ ಅನಿತ್ಯಗಳ ನಡುವೆ ನಡೆಯುವ ಯುದ್ಧ ಅಂತೂ ಇನ್ನೂ ತೀಕ್ಷ್ಣತಮ. ಇಂತಹ ವಿಭಿನ್ನ ರೀತಿಯ ವಿಭಿನ್ನ ಸ್ತರಗಳಲ್ಲಿ ನಡೆವ ನಿತ್ಯ ಯುದ್ಧವನ್ನು ಸಹಿಸಲಾಗದೆ ನಾವು ಕುಗ್ಗುವುದುಂಟು, ಒಮ್ಮೊಮ್ಮೆ ಯುದ್ಧಕ್ಕೆ ಅಂಜಿ ಹಿಂಜರಿಯುವುದುಂಟು.

ಅರ್ಜುನನಂತಹ ಮಹಾಪರಾಕ್ರಮಿಯೇ ಯುದ್ಧ ಬೇಡವೆಂದು ಹಿಮ್ಮೆಟ್ಟುವಾಗ ಸಾಮಾನ್ಯರಾದ ನಾವು ದಿನ ನಿತ್ಯದ ಸಂಸಾರದ ಸೆಣೆಸಾಟಕೆ ಅಂಜುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಸಂಸಾರದಲ್ಲಿ ಹೆಜ್ಜೆ ಇಟ್ಟಾದ ಮೇಲೆ ಹೆಜ್ಜೆ ಹೆಜ್ಜೆಯಲ್ಲೂ ನಾವು ಕಾದಾಡಲೇ ಬೇಕಿದೆ - ಒಮ್ಮೊಮ್ಮೆ ಹೊರಗಿನ ಶತ್ರುಗಳ ಜೊತೆಗೆ ಒಮ್ಮೊಮ್ಮೆ ಒಳಗಿನ ಶತ್ರುಗಳ ಜೊತೆಗೆ. ನಿತ್ಯ ಸಮರ ಅನಿವಾರ್ಯವೇ ಆಗಿರುವಾಗ ಒಳಗಿನ ವೈರಿ ಆರ್ಭಟಿಸುತ್ತಿರುವಾಗ ಅಬಲರಾಗಿದ್ದರೂ ನಾವು ಯುದ್ಧ ಮಾಡಲೇ ಬೇಕು. ಸಮರ ಸಹಿಸಲಾಗದೆ ಅರ್ಜುನನಂತೆ ಹಿಮ್ಮೆಟ್ಟುವಂತಾದಾಗ ಶ್ರೀ ಕೃಷ್ಣ ಅರ್ಜುನನಿಗೆ ಹೇಳಿದ ಕಿವಿ ಮಾತನ್ನು ನೆನಪಿಸಿಕೊಂಡು ಪುನಶ್ಚೇತನ ಪಡೆದುಕೊಳ್ಳಬೇಕು, ಮತ್ತೆ ಯುಯುತ್ಸುಗಳಾಗಿ ಹೋರಾಡಬೇಕು. ಕೃಷ್ಣ ಹೇಳುತ್ತಾನೆ  "ಕ್ಷುದ್ರಮ್ ಹೃದಯ ದೌರ್ಬಲ್ಯಮ್ ತ್ಯಕ್ತ್ವೋತ್ತಿಷ್ಠ ಪರಂತಪ" ಎಂದರೆ ಶೋಭೆ ತರದ ಹೃದಯ ದೌರ್ಬಲ್ಯ ತ್ಯಜಿಸಿ ಎದ್ದು ಹೋರಾಡು ಮತ್ತು "ತಸ್ಮಾತ್ ಸರ್ವೇಷು ಕಾಲೇಷು ಮಾಮನುಸ್ಮರ ಯುದ್ಧ್ಯ "  ಎಲ್ಲಾ ಸಂದರ್ಭದಲ್ಲಿ ನನ್ನ ನೆನಪು ಮಾಡಿಕೊಂಡು ಹೋರಾಡು ಎಂದು. ಅದಕ್ಕೆ ನಮ್ಮ ಪುರಂದರ ದಾಸರು "ದಾರಿಯ ನಡೆವಾಗ ಭಾರವ ಹೊರುವಾಗ ಕೃಷ್ಣಾ ಎನಬಾರದೆ" ಎಂದು ಹೇಳುತ್ತಾ ಜೀವನದಲ್ಲಿ ಎಂತಹದೇ ಬಿಕ್ಕಟ್ಟಿರಲಿ ಭಗವಂತನ ಸ್ಮರಣೆ ಮಾಡುತ್ತಾ ಹೋರಾಡಬೇಕು. ಆಗ ನಮ್ಮ ಬವಣೆ ನಮಗೆ ಭಾರವಾಗುವುದಿಲ್ಲ ಎಂದು ಆದೇಶಿಸಿದ್ದಾರೆ.

ಬದುಕಿನಲ್ಲಿ ನಾವು ನಿರಂತರವಾಗಿ ಹೋರಾಡುತ್ತೇವೆ, ಕೆಲವೆಡೆ ಸೋಲುತ್ತೇವೆ ಮತ್ತು ಕೆಲವೆಡೆ ಗೆಲ್ಲುತ್ತೇವೆ. ಅಂತರಂಗದ ಅಥವಾ ಬಹಿರಂಗದ ಹೋರಾಟಗಳು ಬರುತ್ತವೆ ಹೋಗುತ್ತವೆ.  ಆದರೆ ನಮ್ಮ ಜೀವನದಲ್ಲಿ ನಮ್ಮೊಡನೆ ನಾವು ಮಾಡುವುದೇ ಅತೀ ದೊಡ್ಡ ಹೋರಾಟ. ಅಂತರಂಗದ ಯುದ್ಧ ಬಹಳ ಧೀರ್ಘಕಾಲದ್ದಾಗಿದ್ದು, ಅಂತ್ಯವೇ ಇಲ್ಲದಂತೆ ಗೋಚರಿಸುತ್ತದೆ ಮತ್ತು ಅದು ನಮ್ಮನ್ನು ಒಳಗಿನಿಂದ ಛಿದ್ರಛಿದ್ರವಾಗಿಸುತ್ತದೆ. ಮನಸ್ಸಿನಲ್ಲಿ ತಿಳಿಯಾದ ಆಲೋಚನೆಗಳು ಮತ್ತು ಸರಿಯಾದ ಕರ್ಮಗಳು ಬಲುದೂರವೆನಿಸುತ್ತದೆ.

ನಿನ್ನೆಯ ದಿನ ನಾ ಏನು ಮಾಡಿದೆ? ನಾನೇಕೆ ತಪ್ಪಾದ ಆಯ್ಕೆಯನ್ನು ಮಾಡಿದೆ? ನಾನು ಇದರ ಬದಲು ಅದನ್ನು ಮಾಡಿದ್ದರೆ ಚೆನ್ನಾಗಿತ್ತೋ ಏನೋ? ನಾನು ಚಿಕ್ಕಂದಿನಲ್ಲಿ ವಿದ್ಯಾಭ್ಯಾಸಕ್ಕೆ ಚೆನ್ನಾಗಿ ಗಮನ ಕೊಟ್ಟಿದಿದ್ದರೆ, ಇಂದು ಬದುಕಿನಲ್ಲಿ ಹೋರಾಟ ಕಡಿಮೆಯಾಗುತ್ತಿತ್ತೋ ಏನೋ?  ನಾನು ಇವಳ()ನಲ್ಲದೆ ಮತ್ಯಾರನ್ನಾದರೂ ವಿವಾಹವಾಗಿದ್ದಿದ್ದರೆ ಚೆನ್ನಾಗಿತ್ತೋ ಏನೋ? ನನಗೆ ಇನ್ನೂ ಒಂದೆರಡು ಮಕ್ಕಳಾಗಿದ್ದಿದ್ದರೆ ಚೆನ್ನಾಗಿತ್ತೋ ಏನೋ? ನಾನು ಅಂದು ಧೈರ್ಯವಾಗಿ ಎದ್ದು ನಿಂತು ಮಾತನಾಡಿದ್ದಿದ್ದರೆ ಒಳಿತಾಗುತ್ತಿತ್ತೋ ಏನೋ? ಬಹುಶಃ ಎಲ್ಲವೂ ಸರಿಯಾಗುತ್ತೋ ಇಲ್ಲವೋ? ನಾನಂದು ಅಲ್ಲಿಗೆ ಹೋಗಿರದಿದ್ದಿದ್ದರೆ ಚೆನ್ನಾಗಿರುತ್ತಿತ್ತೋ ಏನೋ? ಅಯ್ಯೋ ಕೆಲಸ ಕೆಟ್ಟರೆ ಏನು ಮಾಡುವುದು? ಏನಾದರೂ ಭಯಂಕರ ಖಾಯಿಲೆ ಬಂದು ನಾನು ನರಳುವಂತಾದರೆ?   ಅಯ್ಯೋ ನನ್ನ ಹೆಂಡತಿಯ(ಗಂಡನ )ಆರೋಗ್ಯ ತೀರಾ ಹದಗೆಟ್ಟರೆ ಏನು ಮಾಡುವುದು? ನಾನು ಕೆಲಸ ಕಳೆದುಕೊಂಡರೆ ಏನು ಮಾಡುವುದು? ಬದುಕಿನುದ್ದಕ್ಕೂ ಬೇಕಾಗುವಷ್ಟು ಹಣ ನನ್ನ ಬಳಿ ಸಾಕಷ್ಟು ಇದೆಯೇ?  ಅನ್ಯ ಜನರು ನನ್ನನ್ನು ಇಷ್ಟಪಡುವಂತೆ ನಾ ಹೇಗೆ ಇರುವುದು? ಏನು ಮಾಡಿದರೆ ನಾನು ಅಧಿಕ ಖ್ಯಾತಿ, ಕೀರ್ತಿ ಮತ್ತು ಹಣ ಗಳಿಸಬಹುದು? ನಾ ಮಾಡಿದ್ದು ತಪ್ಪಾಯಿತೋ ಏನೋ? ಅನ್ಯರು ನನ್ನನ್ನು ಏಕೆ ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ? ಹೀಗೆ ಇನ್ನೂ ನೂರಾರು ಅಥವಾ ಸಾವಿರಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಸದಾಕಾಲ ಬಗ್ಗೆ ಬಗ್ಗೆಯಾಗಿ ಮೇಲೇಳುತ್ತಲೇ ಇರುತ್ತವೆ, ಅಲ್ಲವೇ?

ನಮ್ಮ ಅಂತರಂಗದಲ್ಲಿ ನಡೆಯುವ ತುಮುಲ ಮತ್ತು ಹೋರಾಟಕ್ಕೆ ಕಾರಣವಾಗುವುದು ರೀತಿಯ ಹತ್ತು ಹಲವಾರು ಪ್ರಶ್ನೆಗಳೇ ಅಲ್ಲವೇ? ನಾವು ಹಿಂದೆ ಯಾವ ರೀತಿಯ ಕೆಲಸವನ್ನು ಮಾಡಿದ್ದೇವೆ, ನಾವು ನಮ್ಮನ್ನೇ ಸುಧಾರಿಸಿಕೊಳ್ಳಲು ಯಾವ ರೀತಿಯ ಗಟ್ಟಿ ಪ್ರಯತ್ನವನ್ನು ಮಾಡಿದ್ದೇವೆ ಎನ್ನುವುದನ್ನು ಪರಿಗಣಿಸದೆಯೇ ಬಡವ-ಬಲ್ಲಿದ, ಯುವಕ- ಮುದುಕ, ಹೆಣ್ಣು-ಗಂಡು ಎಂಬ ಬೇಧವಿಲ್ಲದೆಯೇ  ಪ್ರತೀ ಮನುಷ್ಯನ ಮನಸ್ಸುಗಳಲ್ಲಿ ರೀತಿಯ ಪ್ರಶ್ನೆಗಳು ಸದಾಕಾಲ ಉದ್ಭವವಾಗುತ್ತಲೇ ಇರುತ್ತವೆ ಮತ್ತು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ನಿರಂತರ ಪ್ರಯತ್ನವೂ ನಡೆಯುತ್ತಿರುತ್ತದೆ.  ಹೀಗೆ, ಸರಿ-ತಪ್ಪುಗಳ ನಡುವೆ, ಒಳಿತು- ಕೆಡುಕುಗಳ ನಡುವೆ ನಡೆಯುವ ಒಳಗಿನ ಯುದ್ಧ ಅಥವಾ ಹೋರಾಟ ನಮ್ಮನ್ನು ಛಿಧ್ರಗೊಳಿಸುತ್ತದೆ, ಜಿಗುಪ್ಸೆ ಹುಟ್ಟಿಸುತ್ತದೆ, ಖಿನ್ನರಾಗಿಸುತ್ತದೆ ಮತ್ತು ನಮ್ಮಿಂದ ದೂರವಿರುವ ಮತ್ತು  ಸಿಕ್ಕರೂ ತಾತ್ಕಾಲಿಕವೆನ್ನಿಸುವ ಮಾನಸಿಕ  ಶಾಂತಿ ಮತ್ತು  ಆನಂದವನ್ನು ಹುಡುಕುವಂತೆ ಮಾಡುತ್ತದೆ.

ಇದು ಒಬ್ಬಿಬ್ಬರ ಕಥೆಯಲ್ಲ. ಇದು ಇಡೀ ಮನುಕುಲದ ಕಥೆ. ಸದಾಕಾಲ ತನ್ನ ಅಂತರಂಗದಲ್ಲಿ ತನ್ನದೇ ವಿಷಯಗಳ ತುಮುಲಗಳಲ್ಲಿ ಮತ್ತು ದ್ವಂದ್ವಗಳಲ್ಲಿ ಹೋರಾಡದೆ ಇರುವ ಒಬ್ಬನೇ ಒಬ್ಬ ವ್ಯಕ್ತಿಯೂ ನಮಗೆ ಸಿಗಲಾರ. ಒಂದಾದಮೇಲೆ ಒಂದರಂತೆ ಆಲೋಚನೆಗಳ ಮಹಾಪೂರವೇ ಹರಿಯುತ್ತಿರುತ್ತದೆ, ನಮ್ಮ ಮನಸ್ಸುಗಳಲ್ಲಿ. ಆಲೋಚನೆಗಳು ನಮ್ಮನ್ನು ಕುರಿತಾದದ್ದೇ ಆಗಿರದೆ ನಮ್ಮ ಮನಸ್ಸಿಗೆ ಬರುವ ಎಲ್ಲಾ ಹೊರಗಿನ ವ್ಯಕ್ತಿಗಳು, ವಿಷಯಗಳು ಮತ್ತು ವಿಚಾರಗಳದ್ದೂ ಆಗಿರುತ್ತದೆ.  ಅವನೇಕೆ ಹಾಗೆ ಮಾಡಿದ? ಅವನೇಕೆ ನನಗೆ ಅವಮಾನ ಮಾಡಿದ? ನಾನು ವೈದ್ಯನೋ, ಎಂಜಿನೀಯರೋ ಆಗುವುದಕ್ಕೆ ನನ್ನ ತಂದೆ ನನ್ನನ್ನು ಏಕೆ ತಡೆದರು? ನನ್ನ ತಾಯಿ ನನ್ನನ್ನು ಹುಡುಗ/ಹುಡುಗಿಯನ್ನು ವಿವಾಹವಾಗಲು ಏಕೆ ಒತ್ತಾಯ ಮಾಡಿದರು? ನನಗಿಂತ ನನ್ನ ಒಡಹುಟ್ಟಿದವರಿಗೆ ನನ್ನ ತಂದೆ ತಾಯಿಯರು ಏಕೆ ಹೆಚ್ಚು ಗಮನವನ್ನು ನೀಡುತ್ತಾರೆ? ನನ್ನ ಸ್ನೇಹಿತ ಇಷ್ಟು ಸಣ್ಣ ವಯಸ್ಸಿನಲ್ಲಿ ' ಕ್ಯಾನ್ಸರ್ ' ಗೆ ಏಕೆ ತುತ್ತಾದ? ಅಯ್ಯೋ ರೀತಿಯ ಪ್ರಶ್ನೆಗಳಿಗೆ ಅಂತ್ಯವುಂಟೆ

ರೀತಿಯ ಪ್ರಶ್ನೆಗಳು ಉಂಟುಮಾಡುವ ಅಂತರಂಗದ ಯುದ್ಧವನ್ನು ತಡೆಯುವುದು ಹೇಗೆ? ಮಾನಸಿಕ ಸಮನ್ವಯ ಮತ್ತು ಶಾಂತಿಯನ್ನು ಸಾಧಿಸುವುದು ಹೇಗೆ? ನಮ್ಮ ಬದುಕು ಹೀಗೆ ಚಿಂತೆ, ಆತಂಕ, ಅಪಾರ್ಥ, ಅಪರಾಧಿ ಭಾವ, ಕೋಪ, ಜಿಗುಪ್ಸೆ, ದ್ವೇಷ, ಭಯ ಮತ್ತು ದುರಾಸೆಗಳಿಂದ ತುಂಬಿದೆ.  ಇದು ಸಾಮನ್ಯವಾಗಿ ಎಲ್ಲರ ಮನೋಭಾವವೂ ಹೌದೋ ಅಥವಾ ನಾವು ಮಾತ್ರ ರೀತಿಯ ಆಲೋಚನೆಗಳಿಂದ ತುಂಬಿದ್ದೇವೋ? ಇದಕ್ಕೆ ಪರಿಹಾರವುಂಟೆ? ಎಲ್ಲಾ ದ್ವಂದ್ವ ಮತ್ತು ಅಂತರಂಗದ ಹೋರಾಟದಿಂದ ಮುಕ್ತರಾಗಿ ಮಾನಸಿಕ ಶಾಂತಿಯನ್ನು ಪಡೆಯುವ ಮಾರ್ಗವಾವುದಾರೂ ಉಂಟೆ? ರೀತಿಯ ಪ್ರಶ್ನೆಗಳು ಸಾಮಾನ್ಯವಾಗಿ ಪ್ರಮಾಣ ಬೇಧವಿದ್ದರೂ ಎಲ್ಲರ ಮನಸ್ಸುಗಳಲ್ಲೂ ಉದ್ಭವವಾಗುತ್ತಲೇ ಇರುತ್ತದೆ.

ಮಾರ್ಗವಿದೆ, ಆದರೆ ಅದು ಸುಲಭವಲ್ಲ. ಬದುಕಿನಲ್ಲಿ ಒಳ್ಳೆಯದಾವುದೂ ಸುಲಭವಾಗಿ ದಕ್ಕುವುದಿಲ್ಲ. ಕೆಟ್ಟದ್ದು ಅಥವಾ ದುಷ್ಟದ್ದು ಬಹಳ ಸುಲಭವಾಗಿ ಬಂದುಬಿಡುತ್ತದೆ. ಲಾಭ ಬರಲು ಬಹಳ ವಿಳಂಬವಾಗುತ್ತದೆ, ಆದರೆ ನಷ್ಟ ಒಂದೇ ಘಳಿಗೆಯಲ್ಲಾಗಿಬಿಡಬಹುದು.  ಜಯಕ್ಕಿಂತ ಸೋಲು ಶೀಘ್ರವಾಗಿ ಆಗುತ್ತದೆ.  ಖಾಯಿಲೆ ಬೀಳುವುದು ಬಹಳ ಸುಲಭ ಆದರೆ ಸಂಪೂರ್ಣ ಗುಣಮುಖವಾಗುವುದು ನಿಧಾನದ ಪ್ರಕ್ರಿಯೆ.  ನ್ಯಾಯಯುತವಾಗಿ ದುಡಿದು ಕೋಟ್ಯಾಧಿಪತಿಯಾಗುವುದಕ್ಕೆ ದಶಮಾನಗಳೇ ಬೇಕಾಗುತ್ತದೆ. ಆದರೆ ವಾಮಮಾರ್ಗದಲ್ಲಿ ಕೇವಲ ಐದು ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಿಬಿಡಬಹುದುದು. ಹಾಗಾಗಿ ಬದುಕಿನಲ್ಲಿ ಒಳಿತಿಗಿಂತ ಕೆಡುಕು ಶೀಘ್ರವಾಗಿ ಕೆಲಸಮಾಡುತ್ತದೆ.

ಮನವನ್ನು ಶಾಂತಗೊಳಿಸಲು ಮತ್ತು ಅಂತರಂಗದ ಯುದ್ಧವನ್ನು ಕಡಿಮೆಮಾಡಲು ಅಥವಾ ನಿಲ್ಲಿಸಲು, ನಮಗೆ ಧೈರ್ಯ, ಭರವಸೆ ಮತ್ತು ಉತ್ತೇಜನವೀಯುವ, ಒಂದು ದಾರಿ ದೀಪದ ಅವಶ್ಯಕತೆಯಿದೆ.  ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಧಾರ ಸಿಗುತ್ತದೆ. ಕೆಲವರಿಗೆ ಕೆಲಸದಲ್ಲಿ, ಕೆಲವರಿಗೆ ಹವ್ಯಾಸದಲ್ಲಿ, ಕೆಲವರಿಗೆ ವ್ಯಸನದಲ್ಲಿ ಮತ್ತೆ ಕೆಲವರಿಗೆ ಧ್ಯಾನ, ಪ್ರಾರ್ಥನೆ, ಪೂಜೆ ಮತ್ತು ಆಧ್ಯಾತ್ಮದಲ್ಲಿ.  ಒಂದು ಶಾಂತ ಸ್ಥಿತಿಯನ್ನು ಕಾಣಲು ನಂಬಿಕೆ ಮತ್ತು ಒಪ್ಪಿಕೊಳ್ಳುವಿಕೆ ಬೇಕು. ನಮ್ಮೆಲ್ಲಾ ಅಂತರಂಗದ ಯುದ್ಧಗಳು ಕೇವಲ ನಮ್ಮ ನಂಬಿಕೆಯ ಮತ್ತು ವಿಶ್ವಾಸದ ಕೊರತೆಯಿಂದ ಉಂಟಾಗುತ್ತದೆ. ಬದುಕಿನಲ್ಲಿ ಸ್ವಚ್ಛಂದವಾಗಿ ಹಾರಾಡಲು ನಂಬಿಕೆ ಮತ್ತು ಒಪ್ಪಿಕೊಳ್ಳುವಿಕೆಗಳೆಂಬ ಎರಡು ರೆಕ್ಕೆಗಳು ಇದ್ದರೆ ಸಾಕು. ಅದರ ಬದಲು, ಭಯ ಕಾತರತೆ, ಅತಿಯಾಸೆ, ಅಪರಾಧೀ ಭಾವ ಮುಂತಾದ ರೆಕ್ಕೆಗಳನ್ನು ಕಟ್ಟಿಕೊಂಡರೆ ಹಾರಾಟ ದಿಕ್ಕುತಪ್ಪುತ್ತದೆ.

ದೇವರು, ಸೃಷ್ಟಿ, ಪರಮಾತ್ಮ, ಪ್ರಕೃತಿ, ಅಗೋಚರ ಶಕ್ತಿ ಹೀಗೆ ನೀವು ಅದನ್ನು ಯಾವ ಹೆಸರಿನಿಂದಾಗಲೀ ಕರೆಯಿರಿ, ಅದರಲ್ಲಿ ಸಂಪೂರ್ಣ ನಂಬಿಕೆ ಮತ್ತು ನಮ್ಮ ಜೀವನದಲ್ಲಿ ಅದರ ಪ್ರಭಾವವನ್ನು ಒಪ್ಪಿಕೊಳ್ಳುವಿಕೆಯೊಂದೇ ನಮ್ಮೆಲ್ಲಾ ಗೊಂದಲಗಳಿಂದ ಹೊರಬರುವ ನಮಗಿರುವ ಏಕೈಕ  ಮಾರ್ಗ. ಹಿಂದೆ ನಡೆದ, ಇಂದು ನಡೆಯುತ್ತಿರುವ ಮತ್ತು ಮುಂದೆ ನಡೆಯುವುದೆಲ್ಲವೂ, ಕೋಟ್ಯಂತರ ವರ್ಷಗಳಿಂದ ಇರುವ ದೈವೀ ವಿನ್ಯಾಸದ ಪ್ರಕಾರ ನಡೆಯುತ್ತಿದೆ ಮತ್ತು ಅದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಬೇಕು.  ಇಲ್ಲಿರುವುದೆಲ್ಲವೂ ದೈವೀ ಶಕ್ತಿಯ ಪ್ರಕಟರೂಪವಷ್ಟೇ. ನಾವು, ಅದು ಬೇರೆಯ ರೀತಿಯಲ್ಲಿರಬೇಕೆಂದು ಬಯಸುವುದು, ದೈವಕ್ಕೇ ಸವಾಲೆಸೆದಂತೆ ಆಗುತ್ತದೆ. ಇರುವುದಕ್ಕಿಂತ ಬೇರೆಯದನ್ನೇ ಬಯಸಿದರೆ ನಾವು ಸಕಲವನ್ನೂ ಸೃಷ್ಟಿಸಿರುವ ಪರಮಾತ್ಮನೊಡನೆ ಯುದ್ಧಕ್ಕೆ ನಿಂತ ಹಾಗಾಗುತ್ತದೆ. ಖಂಡಿತವಾಗಿಯೂ ನಾವು ಯುದ್ಧದಲ್ಲಿ ಜಯಿಸಲು ಆಗುವುದೇ ಇಲ್ಲ.  ಪರತತ್ವದಲ್ಲಿ ದೃಢ ಮತ್ತು ಶುದ್ಧ ನಂಬಿಕೆಯಿದ್ದರೆ ಆಗ ಸಮಸ್ಯೆಗಳನ್ನು ಸಮಸ್ಯೆಗಳಂತೆ ಅಲ್ಲದೆ ದೈವ ನಿಯಮಿತಗಳೆಂದು ಪರಿಗಣಿಸಲು ಸಾಧ್ಯ.  ಬೇರೆಬೇರೆಯವರ ಅದೃಷ್ಟ ಭಿನ್ನಭಿನ್ನವಾಗಿ ಇರುತ್ತದೆ ಏಕೆ ಎಂಬ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ. ಆದರೆ ಒಂದು ಬಾರಿ, ನಮ್ಮ ಬದುಕು ನಮ್ಮಿಂದಲೇ ನಡೆಸಲ್ಪಡುವುದಿಲ್ಲ, ಅದನ್ನು ನಡೆಸುವುದು ಒಂದು ಅಗೋಚರ ದೈವೀ ಶಕ್ತಿ.  ನಾವು ಕೇವಲ ದೈವ ತನ್ನ ಕಾರ್ಯಗಳನ್ನು ನಡೆಸಲು ಬಳಸುವ ಉಪಕರಣಗಳು ಮಾತ್ರ, ಎಂಬ ವಾದವನ್ನು ಒಪ್ಪಿಕೊಂಡರೆ, ಸೋಲು ಮತ್ತು ಗೆಲುವುಗಳಿಗೆ ನಾವು ಭಾಧ್ಯರಾಗದೆ, ನಮ್ಮ ಮನಸ್ಸು ನಿರಾಳವಾಗಿ ನಮಗೆ ಶಾಂತಿ ಮತ್ತು ಸಂತೋಷ ಸಿಗುತ್ತದೆ.  ಆಗ ನಮ್ಮೊಳಗೇ ' ಆಹಂ '  ಕರಗಿ, ನಾವು ಅನುಭವಿಸುತ್ತಿದ್ದ ಸೋಲು ಗೆಲುವಿನ ಭಾಧ್ಯತೆಯ ಹೊರೆ ಕಡಿಮೆಯಾಗುತ್ತದೆ.  ನಮ್ಮಲ್ಲಿ ಅಹಂಕಾರ ನಶಿಸಿದರೆ ಆಗ ನಮ್ಮ ' ಅಂತರಂಗದಲ್ಲಿ ನಡೆಯುವ ಯುದ್ಧ ನಿಲ್ಲುತ್ತದೆ. ಮನಸ್ಸು ಶಾಂತವಾಗಿ ಆನಂದದ ನೆಲೆಯಾಗುತ್ತದೆ. ದ್ವಂದ್ವ ಮತ್ತು ವೈರುಧ್ಯವನ್ನು
ನಿವಾರಿಸಿಕೊಳ್ಳುವುದು ಹೇಗೆ?


ಅವುಗಳನ್ನು ನಿವಾರಿಸಲು ಪ್ರಯತ್ನಿಸಬಾರದು; ಪ್ರೀತಿ, ದಯೆ ಮತ್ತು ನಮ್ರತೆಯಿಂದ ಅವುಗಳನ್ನು ತಿದ್ದಿ, ರೂಪಿಸಿ, ಸರಿಪಡಿಸಲು ಸಮಯ ನೀಡಬೇಕು. ಸಮಯದಲ್ಲಿ ನಮ್ಮ ಜೀವನದಲ್ಲಿ ಬೇರೆಯೇ ಒಂದು ಶಕ್ತಿಯು ಹರಿಯುತ್ತದೆ. ಅಂತಹ ಶಕ್ತಿಗಳಲ್ಲಿ ಎರಡು ವಿಧಗಳಿವೆ - ಒಂದು, ತನ್ನ ಅಸ್ತಿತ್ವಕ್ಕೆ ಕಾರಣಗಳನ್ನು ಮತ್ತು ಗುರಿಗನ್ನಿಟ್ಟುಕೊಂಡಂತಹ ನಮ್ಮ ಅಹಂಕಾರವನ್ನು ಬೆಂಬಲಿಸುವ ಒಂದು ಸಾಮಾನ್ಯ ಶಕ್ತಿ ಮತ್ತು ಮತ್ತೊಂದು ನಮ್ಮ ಅಹಂಕಾರವನ್ನು ಕರಗಿಸಿ ನಾಶಮಾಡುವ ದೈವೀ ಶಕ್ತಿ. ಶಕ್ತಿ ನಮ್ಮ ಬದುಕಿಗೆ ಒಂದು ಹೊಸ ಆಯಾಮವನ್ನು ನೀಡುತ್ತದೆ. ಅಂತಹ ಶಕ್ತಿಯ ಒಳಹರಿವಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು, ಸಕಾರಾತ್ಮಕವಾಗಿ ಮುನ್ನಡೆಯಬೇಕು ಮತ್ತು ಅದರ ಹಾದಿಯಲ್ಲಿ ನಿರಂತರವಾಗಿರಬೇಕು. ನಮ್ಮಲ್ಲಿ ಮೂರು ಕೇಂದ್ರಗಳುಂಟು. ಅವುಗಳೇ ದೇಹ, ಭಾವನೆ ಮತ್ತು ಬುದ್ಧಿಶಕ್ತಿ. ಮೂರೂ ಕೇಂದ್ರಗಳು ನಮ್ಮ ನಿತ್ಯದ ಜೀವನದಲ್ಲಿ ಸಮನ್ವಯಗೊಂಡಾಗ ನಮ್ಮೊಳಗೇ ಒಂದು ದೈವೀಶಕ್ತಿಯು ಪ್ರವಹಿಸಿ ಅದ್ಭುತ ರೀತಿಯಲ್ಲಿ
ಬದಲಾವಣೆಗಳು ಕಂಡುಬರುತ್ತವೆ. ಆಗ ಜಗತ್ತೆಲ್ಲಾ ನಮಗೆ ಸುಂದರವಾಗಿ ಕಾಣಲಾರಂಭವಾಗುತ್ತದೆ.


ಮನಸ್ಸನ್ನು ನಿರಾಳವಾಗಿಸಿದರೆ ದೇಹ ಶಾಂತವಾಗುತ್ತದೆ. ದೇಹ ಶಾಂತವಾದರೆ ದೇಹಕ್ಕನುಕೂಲವಾದ ರಸಗಳ ಉತ್ಪತ್ತಿಯಾಗಿ ಆರೋಗ್ಯ ಉಂಟಾಗುತ್ತದೆ. ಹಾಗಲ್ಲದೆ, ಸದಾ ಚಿಂತೆಯಲ್ಲಿ ಮುಳುಗಿರುವ ಮನಸ್ಸು ದೇಹವನ್ನು ದಣಿಸುತ್ತಾ ಅನಾರೋಗ್ಯದ ಆಗರವಾಗುತ್ತದೆ. ಹಾಗಾಗಿ ಮನಸ್ಸನ್ನು ನಿರಾತಂಕಗೊಳಿಸುವುದು ಮಾನಸಿಕ ಮತ್ತು ದೈಹಿಕ ಆರೋಗ್ಯದ ದೃಷ್ಟಿಯಿಂದ ಅತೀ ಅವಶ್ಯಕ.

ಆತಂಕದಿಂದ ಕೂಡಿದ ಮನಸ್ಸು ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತದೆ. ಯಾವುದೇ ಕೆಲಸವನ್ನು ಮಾಡುವಾಗಲೂ ನಿರಾತಂಕವಾಗಿರುವುದು ಬಹಳ ಅವಶ್ಯಕ. "ಸಂತೋಷವಾಗಿರಬೇಕಾದರೆ, ಸಂತೋಷವಾಗಿರಬೇಕುಅಷ್ಟೇ. ವಸ್ತು ವಿಷಯ ಅಥವಾ ವ್ಯಕ್ತಿಗಳಿಂದ ಸಂತೋಷ ಸಿಗುತ್ತದೆ, ಆಗ ನಾನು ಸಂತೋಷವಾಗಿರುತ್ತೇನೆ ಎಂದೋ ಅಥವಾ ಇಂತಿಂತಹದ್ದು ಸಿಕ್ಕರೆ ನನಗೆ ಸಂತೋಷ ಸಿಗುತ್ತದೆ ಎಂದೋ ಭಾವಿಸಿದರೆ, ಅದು ಕೇವಲ ಭ್ರಮೆ ಅಷ್ಟೇ!!!! ಹಾಗೆ ಅವುಗಳು ಸಿಗದಿದ್ದರೆ ನಮಗೆ ಕೋಪಬರುತ್ತದೆ. ಕೋಪ, ಅವುಗಳನ್ನು ಪಡೆಯಲಾಗದ ನಮ್ಮ ಮೇಲೆಯೇ ಆಗಿರಬಹುದು ಅಥವಾ ನಾವು ದೂಷಿಸುವ ಅನ್ಯರ ಮೇಲಾಗಿರಬಹುದು. ಆದರೆ ಕೋಪ ಯಾವ ಕಾರಣಕ್ಕೆ ಬಂದರೂ, ಯಾರ ಮೇಲೆ ಬಂದರೂಅದು ಮೊದಲು ಭಾದಿಸುವುದು ಕೇವಲ ನಮ್ಮ ಮನಸ್ಸನ್ನು ಮತ್ತು ತತ್ಕಾರಣವಾಗಿ ನಮ್ಮ ದೇಹದ  ಆರೋಗ್ಯವನ್ನು. ಹಾಗಾಗಿ ಸಂತೋಷವಾಗಿರಬೇಕು. ನಗುನಗುತ್ತಾ ಸಂತೋಷವಾಗಿರಬೇಕು. ಅದೇ ಆನಂದಕ್ಕೆ ಸಿದ್ಧ ಔಷದಿ 


ನಾವು ಸದಾಕಾಲ ನಮ್ಮ ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳ ಬಗ್ಗೆ ಜಾಗರೂಕರಾಗಿರಬೇಕು. ಪ್ರಯತ್ನಪೂರ್ವಕವಾಗಿ ನಮ್ಮೊಳಗೇ ಉಂಟಾಗುವ ಋಣಾತ್ಮಕ ಆಲೋಚನೆಗಳನ್ನು ಹತ್ತಿಕ್ಕಿ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಬೇಕು. ಎಲ್ಲರಲ್ಲೂ ಪ್ರೀತಿಯಿಂದ ಇಡೀ ಜಗತ್ತನ್ನೇ
ಅಪ್ಪಿಕೊಳ್ಳುವಂತಹ ಮನೋಭಾವ ನಮ್ಮದಾಗಬೇಕು


ಆದರೆ ಧನಾತ್ಮಕ ಚಿಂತನೆ ಅಥವಾ ಆಲೋಚನೆಗಳನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎನ್ನುವದೇ ಸಮಸ್ಯೆ. ಇದಕ್ಕೆ ನಮ್ಮ ಪೂರ್ವಜರು ನಮಗೆ ಅನೇಕಾನೇಕ ಮಾರ್ಗಗಳನ್ನು ತೋರಿದ್ದಾರೆ. ಭಕ್ತಿ, ಧ್ಯಾನ, ಸೇವೆ, ಅಧ್ಯಯನ, ಶ್ರದ್ಧೆ, ತ್ಯಾಗ ಮುಂತಾದ ಗುಣಗಳನ್ನು ಪ್ರಯತ್ನಪೂರ್ವಕವಾಗಿ ನಮ್ಮಲ್ಲಿ ಬೆಳೆಸಿಕೊಂಡರೆ ಆಗ ಋಣಾತ್ಮಕ ಗುಣಗಳಾದ ದ್ವೇಷ, ಅಸೂಯೆ, ಕೋಪ ಮುಂತಾದವುಗಳು ನಮ್ಮನ್ನು ತೊರೆದು ಹೋಗುತ್ತವೆ.  ನಮ್ಮ ಬದುಕಿನಲ್ಲಿ ನಡೆಯುವ ವಿದ್ಯಮಾನಗಳೇ ನಮಗೆ ಪಾಠ ಕಲಿಸುತ್ತವೆ.   


 ರವಿ ತಿರುಮಲೈ