Saturday 21 April 2012

   ಆ ಭಾವ 

( ಇಂದು ಅಭಾವ) 


ಅಂದೆಂದೋ ಕಂಡಿದ್ದೆ 

ನೀ ಎನ್ನ ಮೊದಲಬಾರಿಗೆ 

ಇಂದು ಕೂಡ ಆ ಭಾವ 

ಜೀವಂತ ನನ್ನ ಮನದೊಳಗೆ 


ಇಂದೂ ಸಹ ಮೂಡುವುದು 

ಕಿರುನಗೆ ನನ್ನದರಗಳಲ್ಲಿ 

ದೂರದಿಂದ  ನೀ ನಕ್ಕಾಗ 

ಅಂದು ಕೆಲಕ್ಷಣ ಎನ್ನ ಕಂಡು 


ನಿನ್ನ ಮೊದಲ ಸ್ಪರ್ಶ 

ನನ್ನಲ್ಲಿ ನೆನೆಪಾದಾಗ 

ಇಂದೂ ಸಹ ಬಡಿಯುವುದು 

ವೇಗದಿ ಎನ್ನ ಹೃದಯ 


ನೀನಿಂದು ಸನಿಹದಲಿ 

ಇಲ್ಲದಿದ್ದರೆ ಏನಾಯ್ತು 

ಇನ್ನೂ ಸಹ ಜೀವಂತ 

ನಿನ್ನ ಭಾವವೆನ್ನ ಹೃದಯದಲಿ.   


 ರವಿ ತಿರುಮಲೈ 

Thursday 19 April 2012

ನಲ್ಲೆ















ಪ್ರೇಮ   ಸಮಾನತೆ  

ನಲ್ಲೆ ನಿನಗೆ ಚಂದಿರನೊಲು 
ವದನವನು ಇತ್ತವನು
ಮನದಲೆನ್ನೊಳು ಪ್ರಣಯ 
ಭಾವವನು ಬಿತ್ತಿಹನು                 "ನಲ್ಲೆ ನಿನಗೆ  ಚಂದಿರನೊಲು  " 

ನಲ್ಲೆ   ಕೋಗಿಲೆಯೊಲು 
ಕಂಠ ನಿನಗಿತ್ತವನು   
ಕೇಳಿ ಆನಂದಿಸುವ 
ಮನಸೆನಗೆ ಇತ್ತಿಹನು                     "ನಲ್ಲೆ ನಿನಗೆ  ಚಂದಿರನೊಲು  " 

ನಲ್ಲೆ ನಿನಗೆ  ಲಾವಣ್ಯ 
ರೂಪವನು  ಕೊಟ್ಟವನು 
ಅದನಾರಾಧಿಸುವ 
ಹೃದಯವೆನಗಿತ್ತಿಹನು                       "ನಲ್ಲೆ ನಿನಗೆ  ಚಂದಿರನೊಲು  "    

ಎನಗು ನಿನಗೂ ನಡುವಿನಲಿ 
ಅಂತರವನಿಟ್ಟವನು
ಅಂತರಂಗದಲಿ ನಿನ್ನ 
ನೆನವ ಮನವಿನಿತ್ತಿಹನು                       "ನಲ್ಲೆ ನಿನಗೆ  ಚಂದಿರನೊಲು  " 

ನಲ್ಲೆ ದೂರದೂರಿನಲಿ 
ನಿನ್ನನಿಂದು ಬಿಟ್ಟವನು 
ಮಿಲನೋತ್ಸವಕೆ  ಕಾಯ್ವ 
ತಾಳ್ಮೆಯನು ಕೊಟ್ಟಿಹನು                    "ನಲ್ಲೆ ನಿನಗೆ  ಚಂದಿರನೊಲು  " 

ರವಿ ತಿರುಮಲೈ 
                                                                                 

Sunday 15 April 2012

ಮತ್ತೆ ಬಂದಿದೆ ಸಂಜೆ 

ಮತ್ತೆ ಬಂದಿದೆ ಸಂಜೆ 
ಹೊತ್ತು ವಿರಹದ ನೋವ 
ಮರೆಯಬೇಕೆಂದರೂ 
ಮರೆಯಾಗದೀ ಭಾವ "ಮತ್ತೆ "

ಮತ್ತೆ ಆ ಮುಂಗುರುಳ
ಮಾತು ಮನದೊಳಗೆ
ಮತ್ತೆ ನಾ ಒಂಟಿ ಇಂದು
ಬರಡು ಬಾಳೊಳಗೆ
ನಡೆವ ಹಾದಿಯು ಇಂದು
ಸರಿದು ಹೋಗಿದೆಯಲ್ಲ
ಮತ್ತೆ ಪ್ರೇಮದ ರಾಗ
ಹಾಡಿ ಸೋತಿಹೆನಲ್ಲ "ಮತ್ತೆ "

ಮತ್ತೆ ನಿನ್ನ ನೋಡುವ
ತವಕ ಮನದೊಳಗೆ
ಉಳಿದೆರಡು ಮಾತುಗಳ
ನುಡಿವ ಬಯಕೆಯೊಳಗೆ
ಮನವು ವಿರಹದೊಳಿಂದು
ತೊಳಲಿ ಬಳಲಿದೆಯಲ್ಲ
ಸೇರುವಾಸೆಯ ಒರತೆ
ಬತ್ತಿ ಹೋಗಿದೆಯಲ್ಲ " ಮತ್ತೆ


ಎಲ್ಲಿಹೆಯೋ ನೀನಿಂದು
ನಾನಿನಿತು ಅರಿಯೆ
ತೊರೆದೆನ್ನ ಸರಿದದ್ದು
ಪ್ರೇಮದಲಿ ಸರಿಯೇ ?
ನಾ ನಿನ್ನ ಮನದೊಳಗೆ
ಇಲ್ಲವಾದರೆ ಏನು,
ನೀ ಎನ್ನ ಹೃದಯದಲಿ
ಇಹೆಯಲ್ಲ ಚಂದದಲಿ "ಮತ್ತೆ " 





http://www.youtube.com/watch?v=ygmCyDbEFok

Sunday 8 April 2012




ಪ್ರೇಯಸಿಗೊಂದು ಭಿನ್ನಹ


ದೂರ ನಿಂತು ಮಾತನಾಡದಿರು
ನೀ ಬಾ ಹತ್ತಿರಕೆ!
ಇಂದು ವಶದೊಳಿಲ್ಲ ಮನದ ಭಾವ
ನೀ ಬಾ ಹತ್ತಿರಕೆ!!

ಒಂದು ಯುಗದಿಂದ
ಆಸೆ ತುಂಬಿಹುದು
ನಿನ್ನ ಸೇರಲೂ,(೨)     

ಚಂದ್ರ ಚೆಲ್ಲಿಹ ಬೆಳಕು
ಇರುಳ ಬೆಳಗಿಹುದು
ನೀ ಬಾ ಹತ್ತಿರಕೆ !!! " ದೂರ ನಿಂತು "

ಮಂದ ಮಾರುತವಿಂದು
ಹೊತ್ತು ತಂದಿದೆ ಸಕಲ
ಸುಮಗಳಾ ಘಮಲಾ (೨)
ಕಳೆದುಹೋದರೆ ಇರುಳು
ಮತ್ತೆಂದು ಬರದು
ನೀ ಬಾ ಹತ್ತಿರಕೆ!!! "ದೂರ ನಿಂತು "

ಕಂಡ ಕನಸುಗಳೆಲ್ಲ
ನನಸಾಗುವ ಕಾಲ
ಸಂದಿದೇ ಇಂದು (೨)
ಒಂದಾಗುವ ಸಮಯ
ಬಂದು ನಿಂತಿದೆ ಇಂದು
ನೀ ಬಾ ಹತ್ತಿರಕೆ !!! "ದೂರ ನಿಂತು "

ರವಿ ತಿರುಮಲೈ

Wednesday 4 April 2012

ಅರಿಯದಾ ಪ್ರೆಯಸಿಗೊಂದು ಪ್ರೇಮಕವಿತೆ






ಡವಡವಿಸುವ ಹೃದಯವಿದೆ
ಹಪಹಪಿಸುವ ಮನಸು ಇದೆ 
ಸೇರಬೇಕೆಂಬ ತವಕವಿದೆ 
ನಿನ್ನೂರಿಲ್ಲಿಗೆ ಬಹಳ ದೂರವಿದೆ 

ಪ್ರೇಮಲೋಕದ ಕನಸು ಕಾಣುತಿಹೆ 
ಕನಸಲಿ ನಾ ನಿನ್ನ ಸೇರುತಿಹೆ 
ನನಸಲೂ ನಾ ನಿನ್ನ ಬಯಸುತಿಹೆ 
ಏಕೆ ನಿನ್ನ ವದನವನು ತೋರದಿಹೆ 

ಒಮ್ಮೆ ಸಿಕ್ಕರೆ ನೀ, ಬಿಡೆನು ಎಂದೂ ನಾ 
ಮೈಮನಗಳಲಿ ನಿನ್ನ ತುಂಬಿಕೊಳ್ಳುವೆ ನಾ 
ಹೆಜ್ಜೆ ಹೆಜ್ಜೆಗೂ ನಿನ್ನ ಜೊತೆಗಿರುವೆನು ನಾ 
ಜನುಮ ಜನುಮಕ್ಕೂ ನಿನ್ನ ಜೊತೆಬಿಡೆನು ನಾ 

ನೀ ಯಾರೆಂದು ಅರಿಯದಿಹೆನು ನಾ 
ಸುಂದರಿ ನೀನಿರಬಹುದೆಂದು ಊಹಿಸಿಹೆನು ನಾ 
ಊಹೆ ಸುಳ್ಳಾದರೆ ಚಿಂತಿಸೆನು ನಾ 
ಒಂದು ಹೆಣ್ಣಾದರೆ ನೀನು ಸಾಕೆನುವೆನು ನಾ 


ಇದನ್ನು ಬರೆದದ್ದು ನಾನಲ್ಲ . .ನನ್ನ ಕೋತಿಯಂತಾ ಮನಸ್ಸು.