Saturday 25 February 2012

ಪವಿತ್ರ ವನ



 ಕಂಡೆಯಾ   ಬೆಟ್ಟದಲಿ  ಜಗಮಗಿಸುವ ಮಂದಿರವಾ....  


ಸುಶ್ರಾವ್ಯ ಮಂತ್ರ ಘೋಷವಾ
 ಗಾಳಿಯಲಿ  ತುಂಬಿರುವ ಸುಗಂಧವಾ
 ಕೃಷ್ಣನ ಮುರಳೀ ಗಾನದಂತೆ
 ನಟರಾಜನ ಗೆಜ್ಜೆಯುಲಿಯಂತೆ
 ಕಾವಲಿಗೆ ಜಯ ವಿಜಯರಂತೆ

ಕಂಡೆಯಾ 
 ಬೆಟ್ಟದಲಿ  ಜಗಮಗಿಸುವ ಮಂದಿರವಾ ....  



ಕಂಡು ಒಳಗಣ ದೃಶ್ಯವನು ಚಕಿತನಾದೆನು ನಾ
  ಹೂ ಗಿಡ ತರು ಲತೆಗಳನು
 ದುಂಬಿ ಪತಂಗ ಹಕ್ಕಿಗಳಾಲಪನೆಯನು
 ದೇವ ದೇವತೆಗಳ ಭೂಲೋಕ ಸ್ವರ್ಗವನು
  ದೈವರೂಪದ ಎಲ್ಲ ಗಿಡಮರಗಳ ಪೂಜೆಯನು



 ಆ ದೇವಾಲಯದಲಿ ಕಂಡೆ ನಾ..................................
   
ಭೂಮಂಡಲದಲಿ ದೈವೀ ಶಕ್ತಿಯನು ಪಸರಿಪ
 ಬ್ರಹ್ಮ ವಿಷ್ಣು ಮಹೇಶ್ವರರ ರೂಪಧರಿಸಿದಶ್ವತ್ಥವೃಕ್ಷವನು
 ಮಹಾದೇವನ ತಾಂಡವ ನೃತ್ಯವನು
ಸೃಷ್ಟಿಕರ್ತನ ಕೈ ತಾಳವಾದ್ಯದ ಝೇಂಕಾರವನು
ದೇವತೆಗಳಾನಂದಿಪ ಮದನಾರಿಯ ವೇಣುಗಾನವನು


 
 ಮನದೇಹಾತ್ಮಗಳ ಆನಂದಿಪುದು ಈ ಗುಡಿ............................. 

 'ಕದಂಬ'ವನ ಗೋಪೀ ಕೃಷ್ಣರ ನೃತ್ಯವ ತೋರಿದಂತೆ
ಎಲೆಗಳೆಲ್ಲವು  ಪವನನಿಗೆ ಉತ್ತರವನಿತ್ತಂತೆ
ಮೀನಾಕ್ಷಿ ಸುಂದರೇಶರ ಶುಭಲಗ್ನವಾದಂತೆ
'ಆಲ' ದೇವ  ದಕ್ಷಿಣಾಮೂರ್ತಿಯು ಧ್ಯಾನಕ್ಕೆ ಕುಳಿತಂತೆ


 
 ಮನದೇಹಾತ್ಮಗಳ ಆನಂದಿಪುದು ಈ ಗುಡಿ............................. 

 ಸರಸತಿಯ ಪ್ರತಿರೂಪ ಮಲ್ಲಿಗೆಯ ಘಮಘಮಲು
 ಶಕ್ತಿ ದೇವಿಯ ರೂಪದಿ ರಕ್ತವರ್ಣದ  ಜಪಾಕುಸುಮಗಳು
 ವಿಷ್ಣುವಿನರ್ಧಾಂಗಿ ಪದ್ಮಜಳೆ  ಕೆಂಪುವರ್ಣದ ಕಮಲಗಳು
 ವಿಘ್ನನಾಶನರೂಪದಿ ಸುಂದರ ಅರ್ಕ ಪುಷ್ಪದ  ವನಗಳು
 

 ಮನದೇಹಾತ್ಮಗಳ ಆನಂದಿಪುದು ಈ ಗುಡಿ............................. 

 ಕಾರ್ತಿಕೇಯನ  ಕಮಲದಾ ಕೊಳದೊಳು
ತಮಾಲ ಸುಗಂಧ ತರುವುದು, ಮಾಧವನಾ ಮನದೊಳು
ಅವನರಸಿ, ತುಳಸಿ ವಾಯುವನು ಶುದ್ಧಿಗೊಳಿಸಿರಲು
ಮದನನಾ ಮಾವು ರುಚಿಭರಿತ ಫಲ ನೀಡಿರಲು


 
ಮನದೇಹಾತ್ಮಗಳ ಆನಂದಿಪುದು ಈ ಗುಡಿ............................. 

ಶಿವನನುಜೆ   ಲಕ್ಷ್ಮಿ'ಬಿಲ್ವ' ರೂಪದಿ ರೋಗ ನೀಗುತಿರೆ
ಹರನ ರುದ್ರಾಕ್ಷ  ದೇಹ-ಮನಗಳ ಸಮತೋಲನವ ಕಾಯುತಿರೆ
ವಾಸಮಾಡಿಹರಿಲ್ಲಿ ಈ ಭವ್ಯ ಗುಡಿಯಲ್ಲಿ
ದೇವ ವೈದ್ಯರು ಪಾವನ ವೃಕ್ಷ ಗರ್ಭಗೃಹದಲ್ಲಿ

ಮನದೇಹಾತ್ಮಗಳ ಆನಂದಿಪುದು ಈ ಗುಡಿ............................. 

ಶಕ್ತಿನೀಡಿ ಉದ್ದೀಪಿಸುವುದಿಲ್ಲಿ 'ಆಮಳಕ'ವು ವಿಷ್ಣುರೂಪದಲಿ
ಹೊಳಪ ನೀಡುವುದು  'ನಂದಿಬಟ್ಟಲು' ಶಿವನ ಪಾಲನೇತ್ರ ರೂಪದಲಿ
 ನೀಡಿತು ಮನಕೆ ಶಾಂತಿ ಸೀತೆಗೆ 'ಅಶೋಕ'ವದು ರಾವಣನ ಲಂಕೆಯಲಿ
 ಮೆರುಗನೀವುದು ತ್ವಚೆಗೆ ಚೆಂದದಿ ತಾಯೆ ಗಿರಿಜೆಯಾ 'ಚಂದನವು'

ಮನದೇಹಾತ್ಮಗಳ ಆನಂದಿಪುದು ಈ ಗುಡಿ............................. 

ಆತ್ಮಾನಂದವೀವುದು 'ಬಿದಿರ' ಪಿಳ್ಳಂಗೋವಿ ಮಾಧವನ ಸ್ವರದಲಿ  
ಕಾಯ್ವುದೆಲ್ಲ ಮರಗಿಡಬಳ್ಳಿಗಳು  ಸ್ವಾಸ್ಥ್ಯವೆಮ್ಮಯ ನಿರತದಲಿ 
ಒಹ್ ಪ್ರಾಜ್ವಲ್ಯಮರಗಳೇ ನಿಂತಿರುವಿರಿ ನೀವುಗಳು, ನಮ್ಮ ದೈವ ರೂಪದಲಿ  
ನಮ್ಮ ದೈವ ರೂಪದಲಿ  ನಮ್ಮ ದೈವ ರೂಪದಲಿ  ನಮ್ಮ ದೈವ ರೂಪದಲಿ  




Friday 24 February 2012


ಬ್ರಾಹ್ಮಣರೇಕೆ   ಮಾಂಸಾಹಾರಿಗಳಲ್ಲ 

ಆಹಾರ ದೇಹಧಾರಣೆಗೆ ಮಾತ್ರ ಎಂದು ನಾವು ತಿಳಿದಿದ್ದೇವೆ. ಆದರೆ ದೇಹಧಾರಣೆಗಾಗಿ ನಾವು ಸೇವಿಸುವ ಆಹಾರ ನಮ್ಮಲ್ಲಿ ಗುಣವೃಧ್ಧಿ ಮತ್ತು ಗುಣ ಪರಿವರ್ತನೆಯನ್ನೂ ಮಾಡುತ್ತದೆ. ಈ ಸೃಷ್ಟಿಯಲ್ಲಿ ಇರುವುದು ಮೂರು ಗುಣಗಳು. ಸಾತ್ವಿಕ, ರಾಜಸ ಮತ್ತು ತಾಮಸ. ಮಾನವನನ್ನೂ ಸೇರಿ ಎಲ್ಲಾ ಪ್ರಾಣಿಗಳಲ್ಲೂ ಈ ಮೂರು ಗುಣಗಳು ಬೇರೆ ಬೇರೆ ಪ್ರಮಾಣಗಳಲ್ಲಿ ಇರುತ್ತದೆ. ಯಾವ ಗುಣದ ಪ್ರಮಾಣ ಯಾರಲ್ಲಿ ಅಧಿಕವಾಗಿರುತ್ತದೋ,  ಅವರ ಕಾರ್ಯ ಕೆಲಸಗಳು ಹಾಗಿರುತ್ತವೆ.  

ನಮ್ಮ ಎಲ್ಲಾ ಕೆಲಸ ಕಾರ್ಯಗಳೂ ನಮ್ಮ ಮನಸ್ಸು ಬುಧ್ಧಿಯ ಮೇಲೆ ಅವಲಂಬಿಸಿರುತ್ತದೆ. ಮನಸ್ಸು ಬುಧ್ಧಿಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಜೀವ ರಸಗಳನ್ನು ಅವಲಂಬಿಸಿರುತ್ತದೆ. ಈ ರಸಗಳ ಉತ್ಪತ್ತಿಯು ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ಹಾಗಾಗಿ ನೇರವಾಗಿ ನಮ್ಮ ಕೆಲಸ, ಸ್ವಭಾವ ಮತ್ತು ಗುಣ ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. 

ಮೇಲೆ ಹೇಳಿದ ಮೂರು ಗುಣಗಳನ್ನು ಸ್ವಲ್ಪ ವಿಶ್ಲೇಸಿಸೋಣ. ಶಾಂತತೆ , ಕಾರುಣ್ಯ , ದಯೆ , ಪ್ರೇಮ, ಪೀತಿ,  ಸಹನೆ, ಸಹಿಷ್ಣುತೆ, ಸಭ್ಯತೆ, ಭಕ್ತಿ, ಮುಂತಾದ ಎಲ್ಲ ಗುಣಗಳೂಸಾತ್ವಿಕ ಗುಣದ ಪರಿಧಿಯಲ್ಲಿ ನಿಲ್ಲುತ್ತವೆ. ವೇಗ, ಸಿಟ್ಟು, ಆತುರ,  ಕ್ರೋದ, ಅಸಹನೆ, ಹಠ, ಮೋಹ, ಮುಂತಾದ ಗುಣಗಳು ರಾಜಸ ಗುಣದ ಪ್ರತೀಕವಾಗಿರುತ್ತದೆ. ಆಲಸ್ಯ, ನಿದ್ದೆ, ಕ್ರಿಯಾಹೀನತೆ, ಕೊಳಕುತನ, ಕಳ್ಳಬುಧ್ಧಿ, ಅಸಭ್ಯತೆ, ಮಾತು, ಕ್ರಿಯೆ ಮತ್ತು ನಡತೆಯಲ್ಲಿ ಹೊಲಸುತನ ಮುಂತಾದವು ತಾಮಸಿಕ ಗುಣವನ್ನು ಸೂಚಿಸುತ್ತದೆ. 

ಪೂರ್ವದಲ್ಲಿ ಬ್ರಾಹ್ಮಣರೂ ಸಹ ಮಾಂಸಾಹಾರಿಗಳಾಗಿದ್ದರು ಎಂಬ ವಿಷಯ ವೇದದ ಮತ್ತು ಪುರಾಣಗಳ ಹಲವಾರು ದೃಷ್ಟಾಂತಗಳಿಂದ ತಿಳಿಯುತ್ತದೆ. ಇಲ್ಲಿ ನಾವು ಬ್ರಾಹ್ಮಣರು ಯಾರು ಎಂಬುದನ್ನು ನೋಡಬೇಕು. ಇಲ್ಲಿ ನಾನು ಮೂರು ವಿಚಾರಗಳನ್ನು ಪ್ರಸ್ತಾಪಮಾದುತ್ತೇನೆ. 

ಮೊದಲನೆಯದಾಗಿ " ನಾಲ್ಕು ವರ್ಣಗಳನ್ನೂ ಆಯಾಯಾ ಮನುಷ್ಯರ ಗುಣ ಮತ್ತು ಕರ್ಮದ ಆಧಾರದ ಮೇಲೆ ನಾನೇ ವಿಭಾಗ ಮಾಡಿದ್ದೇನೆ" ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ್ದಾನೆ. ಅಂದರೆ ಬ್ರಾಹ್ಮಣ ವೈಶ್ಯ, ಕ್ಷತ್ರಿಯ ಮತ್ತು ಶೂದ್ರರೆಂಬ ವಿಭಾಗ,  ವ್ಯಕ್ತಿಗಳ ಗುಣ ಮತ್ತು ಕರ್ಮದಿಂದಲೇ ಹೊರತು ಜನ್ಮದಿಂದಲ್ಲವೆಂಬುದು ತಾತ್ಪರ್ಯ.ಬ್ರಾಹ್ಮಣ ವೈಶ್ಯ, ಕ್ಷತ್ರಿಯ ಮತ್ತು ಶೂದ್ರರೆಂದು ವಿಭಾಗಕ್ಕೆ ಒಳಗಾದ ಎಲ್ಲ ಮಾನವರು  ಯಾವ ಯಾವ ರೀತಿಯ ಗುಣಗಳನ್ನು ಹೊಂದಿರಬೇಕು ಮತ್ತು ಯಾವ ಯಾವ ರೀತಿಯ ಕೆಲಸಗಳನ್ನು ಮಾಡಬೇಕು ಎಂಬುದನ್ನು ನಮ್ಮ ಋಷಿ ಮುನಿಗಳು ಮತ್ತು ಗುರುವರೇಣ್ಯರುಗಳು ವೇದ , ಉಪನಿಷತ್ತು ಮತ್ತು ಪುರಾಣಗಳ ಆಧಾರದಮೇಲೆ ವಿಷದೀಕರಿಸಿದ್ದಾರೆ. 

ಎರಡನೆಯದಾಗಿ, " ಜನ್ಮನಾ ಜಾಯೆತೆ ಶೂದ್ರ: ಕರ್ಮಣ  ದ್ವಿಜ: ಜಾಯತೆ"  ಎಂದು ಪುರಾಣದಲ್ಲಿ ಯಾರೋ ಮಹಾತ್ಮರು ಹೇಳಿದ್ದಾರೆ. ಅಂದರೆ ಜನ್ಮದಿಂದ ಎಲ್ಲರೂ ಶೂದ್ರರಾಗಿಯೇ ಹುಟ್ಟುತ್ತಾರೆ, ಅವರು ಬೆಳೆಸಿಕೊಳ್ಳುವ ಗುಣ ಮತ್ತು ಅವರು ಅವಲಂಬಿಸುವ ಕೆಲಸ ಅಥವಾ ಕರ್ಮದ ಆಧಾರದಮೇಲೆ ಅವರು ಬ್ರಾಹ್ಮಣರೋ, ವೈಶ್ಯರೋ ಕ್ಷತ್ರಿಯರೋ ಅಥವಾ ಶೂದ್ರರೋ ಎಂದು ವಿಭಾಗ ಮಾಡಬೇಕು ಎನ್ನುತ್ತಾರೆ ಆ ಮಹಾತ್ಮರು. ಹಾಗಾಗಿ ಇಲ್ಲಿಯೂ ಸಹ ವರ್ಣಾಧಾರಿತ ವಿಭಾಗ ಗುಣ  ಮತ್ತು ಕರ್ಮದ ಆಧಾರದಮೇಲೆ ಆಗಿರುತ್ತದೆ. 

ಮೂರನೆಯದಾಗಿ  ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ. ಒಂದುಬಾರಿ ಭೀಮ ಕಾಡಿನಲ್ಲಿ ಅಲೆದಾಡುವಾಗ ಒಂದು ಬೃಹತ್ತಾದ ಸರ್ಪವು ಅವನನ್ನು ಸುತ್ತಿಕೊಂಡು ಬಿಡುತ್ತದೆ. ಸಾವಿರ ಆನೆ ಬಲವುಳ್ಳ ಭೀಮನೂ ಸಹ ಅದರ ಹಿಡಿತದಿಂದ ಬಿಡಿಸಿಕೊಳ್ಳಲಾಗದೆ ಹೋಗುತ್ತಾನೆ. ಅವನ ಸಹಾಯಕ್ಕೆ ಹೋದ ಅರ್ಜುನ, ನಕುಲ ಸಹದೇವರೂ  ಸಹ ಅವನನ್ನು ಬಿಡಿಸುವಲ್ಲಿ ವಿಫಲರಾಗುತ್ತಾರೆ. ಕಡೆಯದಾಗಿ ಯುದಿಷ್ಟಿರ ಅಲ್ಲಿಗಿ ಬರುತ್ತಾನೆ. " ಯಾವ ತಪ್ಪನ್ನೂ ಮಾಡದ ಮತ್ತು ನಿನಗೆ ಯಾವ ದ್ರೋಹವನ್ನೂ ಮಾಡದ ಭೀಮನನ್ನು ಏತಕ್ಕಾಗಿ ಹಿಡಿದಿದ್ದೀಯೇ" ಎಂದು ಆ ಸರ್ಪವನ್ನು ಕೇಳಿದಾಗ " ನನ್ನ ಒಂದು ಸಂದೇಹಕ್ಕೆ ಉತ್ತರವನ್ನು ನೀಡಿ ನಿನ್ನ ತಮ್ಮನನ್ನು ಬಿಡಿಸಿಕೊಂಡು ಹೋಗು" ಎನ್ನುತದೆ ಆ ಸರ್ಪ. ಯುದಿಷ್ಟಿರನು " ಕೇಳು ಅದೇನು ನಿನ್ನ ಸಂದೇಹ" ವೆಂದಾಗ ಆ ಸರ್ಪವು " ಬ್ರಾಹ್ಮಣನೆಂದರೆ ಯಾರು" ಎನ್ನುತದೆ.

 "ಯಾರು ಬಡತನವನ್ನು ಅಪ್ಪಿಕೊಂಡು ಒಪ್ಪಿಕೊಂಡಿರುತ್ತಾನೋ, ಯಾರು ವೇದಾಭ್ಯಾಸ ನಿರತನೋ, ಯಾರು ಸಾತ್ವಿಕ ಗುಣವುಳ್ಳವನೋ,  ಯಾರು ಸರ್ವರ ಒಳಿತನ್ನೇ ಬಯಸುವವನೋ, ಸಹನೆ ಮತ್ತು ಸಮಭಾವ ಯಾರಲ್ಲಿ ತುಂಬಿದೆಯೋ ಸದಾಕಾಲ ಭಗವನ್ನಾಮಸ್ಮರಣೆಯಲ್ಲಿ ಯಾರು ಸದಾ ನಿರತನೋ ಇಂತಹ ಗುಣಗಳು ಮತ್ತು ಕರ್ಮವಿದ್ದರೆ ಅವನನ್ನು ಬ್ರಾಹ್ಮಣನೆನ್ನಬಹುದು." ಎನ್ನುತ್ತಾನೆ ಯುಧಿಷ್ಠಿರ.
ಬ್ರಾಹ್ಮಣ ಕುಲದಲ್ಲಿ ಹುಟ್ಟಿ ಈ ಗುಣಗಲ್ಲಿಲ್ಲದಿದ್ದರೆ"  ಎನ್ನುತ್ತದೆ ಸರ್ಪ. " ಅಂತಹವನು ಬ್ರಾಹ್ಮಣನಲ್ಲ" ಎಂದು ಪ್ರತ್ಯುತ್ತರ ನೀಡುತ್ತಾನೆ ಯುಧಿಷ್ಠಿರ. " ಶೂದ್ರ ಕುಲದಲ್ಲಿ ಹುಟ್ಟಿ, ಮೇಲೆ ಹೇಳಿದ ಗುಣಗಳು ಇದ್ದರೆ  " ಎಂಬ ಸರ್ಪದ ಮತ್ತೊಂದು ಪ್ರಶ್ನೆಗೆ " ಅವನು ಶೂದ್ರನೂ ಅಲ್ಲ " ಎನ್ನುತ್ತಾನೆ ಯುಧಿಷ್ಠಿರ. ಇದರಿಂದ ನಮಗೆ ತಿಳಿಯಬೇಕಾದ ವಿಷಯವೇನೆಂದರೆ ಜನ್ಮದಿಂದ ವರ್ಣ ವಿಭಾಗವಾಗುವುದಿಲ್ಲ, ಮಾತ್ರ ಗುಣ ಮತ್ತು ಕರ್ಮದಿಂದ ವರ್ಣದ ವಿಭಾಗ ಎಂದು. 

ನಮ್ಮ ಮುಂದಿರುವ ಪ್ರಶ್ನೆಗೆ ಬರುವ. ಹಾಗಾಗಿ ಬ್ರಾಹ್ಮಣನಾಗಬೇಕಾದರೆ ಬ್ರಾಹ್ಮಣ್ಯಕ್ಕೆ ಅನುಗುಣವಾದ ಗುಣ ಮತ್ತು ಕರ್ಮವನ್ನು ಬೆಳೆಸಿಕೊಳ್ಳಬೇಕು, ಅದನ್ನು ಬೆಳೆಸಿಕೊಳ್ಳಬೇಕಾದರೆ ಆಚಾರ, ವಿಚಾರ, ಆಹಾರ, ಸಂಗ, ವಿದ್ಯೆ, ಅಭ್ಯಾಸ ಎಲ್ಲವೂ ಬ್ರಾಹ್ಮಣ್ಯಕ್ಕೆ  ಆಭಿಮುಖವಾಗಿರಬೇಕಲ್ಲವೇ .ಸಾತ್ವಿಕ ಗುಣಗಳನ್ನು ಬೆಳೆಸಿಕೊಳ್ಳಲು ಪೂರಕವಾದ ಮತ್ತು ಪೋಷಕವಾದ ಹತ್ತು ಹಲವಾರಿನಲ್ಲಿ ಸಾತ್ವಿಕ ಆಹಾರವೂ ಒಂದಾದ್ದರಿಂದ ಬ್ರಾಹ್ಮಣ್ಯವನ್ನು ಬೆಳೆಸಿಕ್ಕೊಳ್ಳಲು ಮತ್ತು ಉಳಿಸಿಕೊಳ್ಳಲು ಬ್ರಾಹ್ಮಣರು  ರಾಜಸ ಮತ್ತು ತಾಮಸಗುಣಭರಿತವಾದ ಮಾಂಸಾಹಾರವನ್ನು ಕಾಲಕ್ರಮೇಣ ತ್ಯಜಿಸಿರಬಹುದು.  

ಆದರೆ ಇಂದಿನ ಪರಿಸ್ಥಿತಿಯನ್ನು ನೋಡಿ ನಿಜಸ್ವರೂಪದಲ್ಲಿ ಬ್ರಾಹ್ಮಣರು ಇದ್ದಾರೆಯೇ. ಮಾಂಸಾಹಾರ , ಧೂಮಪಾನ, ಮದ್ಯಪಾನ, ಲಂಚಗುಳಿತನ, ವ್ಯಭಿಚಾರ ( ಇಲ್ಲಿ ದೈಹಿಕ ವ್ಯಭಿಚಾರ ಮಾತ್ರವಲ್ಲ, ಮಾನಸಿಕ  ವ್ಯಭಿಚಾರವೂ ಸಹ  ಬ್ರಾಹ್ಮಣ್ಯಕ್ಕೆ ಧಕ್ಕೆ ತರುವಂತಾದ್ದೆ ಅಲ್ಲವೇ) ವ್ಯಾಪಾರ ಮುಂತಾದ ಅಬ್ರಾಹ್ಮಣ್ಯದ ಗುಣಗಳನ್ನು ಬೆಳೆಸಿಕೊಂಡು ಕೇವಲ ಬ್ರಾಹ್ಮಣಕುಲದಲ್ಲಿ ಜನಿಸಿದ ಕಾರಣದಿಂದ ತಮ್ಮನ್ನು ತಾವು ಬ್ರಾಹ್ಮಣರೆಂದು, ಉತ್ತಮ ಕುಲದವರೆಂದು ತಿಳಿದು ಅಹಂಕಾರಪಡುವ ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. 

ಸರ್ವೇ  ಜನಾಃ ಸುಜನಾ ಭವಂತು 
ಸರ್ವೇ ಸುಜನಾಃ ಸುಖಿನಃ ಸಂತು 

ರವಿ ತಿರುಮಲೈ 
9632246255 
5.7.2011 

Saturday 11 February 2012

ಪರಮಾತ್ಮ ಸ್ವರೂಪ.




ಆವರವರ ಭಾವಕ್ಕೆ ಅವರವರ ಭಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ
ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ
ನರರೇನು ಭಾವಿಸುವರದರಂತೆ ಕಾಣುವನು  

ಎಂತಹ ಸುಂದರ ಕಲ್ಪನೆ.ವೀರಶೈವ ಪಂಥದ ಯಾರೋ ಶರಣರು ಬರೆದ ಪಂಕ್ತಿಗಳು.ಇದೇ ರೀತಿಯ ಕಲ್ಪನೆಯನ್ನು ಬಹಳ ಜನ ಸಂತರು ಬೇರೆ ಬೇರೆ ಸಮಯಗಳಲ್ಲಿ ಅನುಭವಿಸಿದ್ದಾರೆ. ಉದಾಹರಣೆಗೆ ತೆಲುಗಿನ  ಶ್ರೇಷ್ಠ ಕವಿ ಭಕ್ತ ವರೇಣ್ಯ ಶ್ರೀ ತಾಳ್ಳಪಾಕ ಅನ್ನಮಾಚಾರ್ಯರು  " ಎಂತ ಮಾತ್ರಮುನ ಎವ್ವರು ತಲಚಿನ ಅಂತಮಾತ್ರಮೆ ನೀವು. ಅಂತರಾಂತರಮು ವೆತಕಿ ಚೂಡ ಪಿಂಡಂತೆ ನಿಪ್ಪಟಿ ಅನ್ನಟ್ಟು "ಎಂದು ಹೇಳುತ್ತಾ ಭಗವಂತನನ್ನು,  "ಹಿಟ್ಟಿನ ಗಾತ್ರದ೦ತೆ ನಿಪ್ಪಟ್ಟು" ಇದ್ದಹಾಗೆ, ಮಾನವ ಮನಸ್ಸಿನ  ಕಲ್ಪನೆ ಹೇಗಿರುತ್ತದೋ ಅವರಿಗೆ ಹಾಗೆ ದೇವರು ಕಾಣುವನೆಂದು ಭಾವಿಸುತ್ತಾರೆ.ಹಾಗೆ ಆ ದೇವರು ಎಂಬ ವಸ್ತು  ಮಾನವರು ಏನೆಂದು ನೆನೆದರೆ ಅಷ್ಟು.

ಮಾನವನ ಮಷ್ಟಿಷ್ಕದಲ್ಲಿ ಆಲೋಚನೆ ಮಾಡುವ ಪ್ರವೃತ್ತಿ ಬಂದಾಗಿನಿಂದ,ಈ ಪರಮಾತ್ಮ ನಾರು ?ಇವನ ಸ್ವರೂಪವೇನು ?ಎಂಬ ಕುತೂಹಲ ಕಾಡಿದೆ.ತಮಗೆ ಕಾಣದ ಆದರೂ ತಮ್ಮನ್ನು ರಕ್ಷಿಸುವ ಯಾವುದೋ ಒಂದು ಶಕ್ತಿಯೇ ಆ ದೇವರು ಎಂಬ ವಿಚಾರ ಮನುಷ್ಯನ ಮನಸ್ಸಿನಲ್ಲಿ ಮೂಡಿದುದು ಹೀಗಿರಬಹುದು.

ಬಹಳ ಬಹಳ ಹಿಂದೆ ಮನುಷ್ಯ ಇನ್ನೂ ಕಾಡಿನಲ್ಲಿ ಅಲೆಮಾರಿ ಜೀವನ ಮಾಡುತ್ತಿದ್ದಾಗ, ಏನೋ ಸಿಕ್ಕ ಆಹಾರವನ್ನು ತಿನ್ನುವುದು, ಕೈಗೆ ಸಿಕ್ಕ ಹಣ್ಣು, ಗೆಡ್ಡೆ, ಗೆಣಸು, ಪ್ರಾಣಿಗಳ ಮಾಂಸಗಳನ್ನು  ತಿಂದು ಸ್ಥಳದಿಂದ ಸ್ಥಳಕ್ಕೆ ಅಲೆಯುತ್ತಾ,ಬೇರೆ ದುಷ್ಟ ಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದ್ದ.ಆಗ ತಾನೇ ಅಲ್ಪ ಸ್ವಲ್ಪ ವಿಚಾರ ಅವನ ಮನಸ್ಸಿನಲ್ಲಿ ಮೂಡುತ್ತಿರುವಾಗ ಅವನಲ್ಲಿ ಬಂದ ಯೋಚನೆ ಹೀಗಿದ್ದಿರಬಹುದು.ದಿನದ ಯಾವೊದೋ ಸಮಯದಲ್ಲಿ ಆಕಾಶದಲ್ಲಿ ಯಾವುದೋ ಒಂದು ವಸ್ತು ಬರುತ್ತದೆ.ಅದು ಬಂದಾಗ ತನಗೆ ಎಲ್ಲ ವಸ್ತುಗಳೂ ನಿಚ್ಚಳವಾಗಿ ಕಾಣುತ್ತದೆ.ಆಗ ತನ್ನ ಮತ್ತು ತನ್ನ ಸಂಗಡಿಗರ ರಕ್ಷಣೆಯನ್ನು ಸಮರ್ಪಕವಾಗಿ ಮಾಡಿಕೊಳ್ಳಬಹುದು.ಆದರೆ ಯಾವುದೋ ಸಮಯಕ್ಕೆ,ಆ ವಸ್ತು ಕಾಣೆಯಾದಾಗ ಕಣ್ಣು ಕತ್ತಲಿಟ್ಟು, ಏನೂ ಕಾಣದಾದಾಗ,ದುಷ್ಟ ಕಾಡುಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿ ಕೊಳ್ಳಲಾಗುತ್ತಿರಲ್ಲಿಲ್ಲ.ಅವನು ಹೆದರುತ್ತಾ ಹೆದರುತ್ತಾ ಬದುಕುತ್ತಿದ್ದ. ಹೆದರಿದಾಗ, ಸ್ವ ರಕ್ಷಣೆಗೆ ನಾವು ಯಾರನ್ನಾದರೂ ಅವಲಂಬಿಸುವಂತೆ, ತನ್ನ ರಕ್ಷಣೆಗೆ ಸಹಾಯಮಾಡುವ ಆ "ವಸ್ತು"ವನ್ನು ತನ್ನ ಆಪ್ತನೆಂದು,ರಕ್ಷಕನೆಂದು,ದೇವರೆಂದು ನಂಬಿ ಅವಲಂಬಿಸಿರಬಹುದು.ಅದೇ ರೀತಿ ಮೇಲಿಂದ ಬರುವ ಮಳೆ, ಮಳೆಯಿಂದಾಗುವ ಬೆಳೆ, ಬೆಳೆಯಿಂದ  ಸಿಗುವ ಆಹಾರ, ಹೀಗೆ ತನಗೆ ಉಪಯೋಗಕ್ಕೆ ಬರುವ ಎಲ್ಲಾ ವಸ್ತುಗಳನ್ನೂ ದೈವವೆಂದು ಭಾವಿಸುವ,ಆರಾದಿಸುವ, ಪೂಜಿಸುವ ಮತ್ತು ಅವಲಂಬಿಸುವ ಪ್ರವೃತ್ತಿ ಅವನಲ್ಲಿ ಬೆಳೆಯುತ್ತಾ ಹೋಗಿರಬಹುದು.

ಮಾನವನ ವಿಚಾರ ಶಕ್ತಿ ಬೆಳೆಯುತ್ತಾ ಹೋದಂತೆ ಅವನ ಕಲ್ಪನೆಯೂ ಬೆಳೆಯುತ್ತಾ ಹೋಯಿತು. ಯಾರ ಕಲ್ಪನೆ ಪ್ರಬಲವಾಗಿತ್ತೋ ಅವರ ಪ್ರಭಾವ ಸುತ್ತಲಿನ ಜನಸಮೂಹದಮೇಲೆ ಗಾಢವಾಗಿ ಆಯಿತು.ಅವರನ್ನು ಮತ್ತು ಅವರ ವಿಚಾರಧಾರೆಯನ್ನು ಮಿಕ್ಕೆಲ್ಲರೂ ನಂಬ ತೊಡಗಿದರು.ಅವರನ್ನೇ ಹಿಂಬಾಲಿಸುತ್ತಾ ಹೋದರು.ಹೀಗೆ ಬೆಳೆಯುತ್ತಾ ಹೋದ ಆ ದೇವರ ಕಲ್ಪನೆ ಹತ್ತು ಹಲವಾರು ಆಯಾಮಗಳನ್ನು ಸೃಷ್ಟಿಸಿಕೊಂಡು ಇಂದಿಗೂ ಬದಲಾಗುತ್ತಲೇ ಇದೆ. ಹೊಸ ಹೊಸ ಕಲ್ಪನೆಗಳು ಬೆಳೆಯುತ್ತಾ, ಹಳೆಯ ಮತ್ತು ಬಲಹೀನ ಕಲ್ಪನೆಗಳು ಮತ್ತು ಅವುಗಳ ಮೇಲಿನ ನಂಬಿಕೆ ಅಳಿಸಿಹೊಗುತ್ತಾ ಹೋದವು.ಸತ್ಯಕ್ಕೆ ಹತ್ತಿರವಾದ ವಿಶ್ಲೇಷಣೆಗಳು ಮತ್ತು ವ್ಯಾಖ್ಯಾನಗಳು ಸ್ಥಿರವಾಗಿ ನಿಂತು ಇಂದಿಗೂ ಪ್ರಚಾರದಲ್ಲಿವೆ. ಈ  ಗುಂಪಿಗೆ ಸೇರುವುದೇ ವೇದೋಪನಿಷತ್ತುಗಳು ಮತ್ತು ಅವುಗಳನ್ನುಅವಲಂಬಿಸಿದ ಕಾವ್ಯ ಪುರಾಣ ಗಳು.ಕಾಲಾನುಕಾಲಕ್ಕೆ ಈ ವೇದ ಉಪನಿಷತ್ತುಗಳನ್ನೂ ಮತ್ತು ಅದರ ಘಹನವಾದ ಅರ್ಥವನ್ನೂ ಬೇರೆ ಬೇರೆ ರೀತಿಯಲ್ಲಿ ವಿಶ್ಲೇಷಿಸುತ್ತಾ ಹೋದಂತೆ ಬೇರೆ ಬೇರೆ ಪಂಥಗಳೂ,ಮತಗಳು ಪಂಗಡಗಳೂ ಹುಟ್ಟಿಕೊಂಡವು.ತಮ್ಮ ಅಭಿಮತವೇ ಉತ್ಕೃಷ್ಟವೆನ್ನುವ ಅಭಿಪ್ರಾಯ ಪ್ರಾಯಶಃ ಎಲ್ಲಾ ಪಂಗಡದವರಿಗೂ ಇತ್ತು. 

ಆದರೆ ಬೇರೆ ಬೇರೆ ವಿಚಾರಧಾರೆಗಳು ಸೃಷ್ಟಿಯಾದಂತೆ ಬೇರೆ ಬೇರೆ ಧರ್ಮಗಳೂ ಮತ್ತು ಬೇರೆ ಬೇರೆ ಜಾತಿಗಳೂ ಹುಟ್ಟಿಕೊಳ್ಳತೊಡಗಿದವು.ಬೇರೆಬೇರೆ ಪಂಗಡಗಳು ತಮ್ಮ ಮತವನ್ನು ತೀವ್ರವಾಗಿ ಪ್ರಚಾರಮಾಡಲು ಮೊದಲಾದವು.ಪಂಗಡ ಪಂಗಡಗಳಲ್ಲೇ ಪರಮಾತ್ಮನ ವಿಚಾರವಾಗಿ ಪೈಪೋಟಿ, ವಾದ, ವಿವಾದ, ಜಗಳ ಯುಧ್ಧಗಳು ಮೊದಲಾದವು.

ಪಾಪ ದೇವರು ತನ್ನ ಸ್ವರೂಪವನ್ನು ಇಟ್ಟಕೊಂಡು ತನ್ನಷ್ಟಕ್ಕೆ ತಾನು ಹಾಯಾಗಿ ಇದ್ದರೂ ಅವನಲ್ಲಿ ಇಲ್ಲದ ಭೇಧವನ್ನು ಕುರುತು ತಮ್ಮ ಕಲ್ಪನೆಗನುಸಾರವಾಗಿ ಚರ್ಚೆ,ವಾದ ಮತ್ತು ವಿವಾದ ವಿಕೋಪಕ್ಕೆ ಹೋಗಿ, ಇನ್ನೂ ಹೆಚ್ಚು ಹೆಚ್ಚು ಮತಗಳು, ಆ ಮತಗಳನ್ನು ಅವಲಂಬಿಸುವ ಪಂಗಡಗಳು, ಆ ಪಂಗಡಗಳ ಮತ್ತು ಒಳ ಪಂಗಡಗಳ ಮಧ್ಯೆ ಛಲ ಮತ್ತು ಯುಧ್ಧ ನಡೆಯುತ್ತಲೇ ಬ೦ದಿದೆ.

ಆದರೆ ಕೋಟ್ಯಾಂತರ ಜನರ ನಂಬಿಕೆಗೆ ಪಾತ್ರನಾದ,ಈ ಪರಮಾತ್ಮನಾರು.ಈ ಪರಮಾತ್ಮನನ್ನು ನಂಬಬೇಕೆ ಅಥವಾ ಪೂಜಿಸಬೇಕೆ ಅಥವಾ ಬೇಡವೇ,ಎಂಬ ಪ್ರಶ್ನೆಗಳು ಪ್ರತಿಯೊಬ್ಬನ ಹೃದಯದಲ್ಲೂ ಪ್ರಮಾಣ ಭೇಧವಿದ್ದರೂ,ಬಂದೆ ಬಂದಿರುತ್ತದೆ.

ನಮ್ಮ ಜೀವನದಲ್ಲಿ ನಡೆದ,ನಡೆಯುತ್ತಿರುವ ಮತ್ತು ನಡೆಯಬಹುದಾದ ಘಟನೆಗಳಿಗೆ ನಾವು ಸರಿಯಾದ ಕಾರಣವನ್ನು ಕೊಡಲು ಅಸಾಧ್ಯ.ಏಕೆಂದರೆ ಈ ಸೃಷ್ಟಿಯ ಎಲ್ಲ ರಹಸ್ಯಗಳನ್ನೂ ಮಾನವ ಇನ್ನೂ ಭೇದಿಸಿಲ್ಲ.ವಿಜ್ಞಾನಿಗಳು ಅಲ್ಪ ಪ್ರಮಾಣದಲ್ಲಿ ಈ ಸೃಷ್ಟಿಯ ರಹಸ್ಯಗಳನ್ನು ಛೇದಿಸುವ ಪ್ರಯತ್ನವನ್ನು ಮಾಡಿದ್ದರೂ  ಅಗಾಧವಾದ  ವಿಶ್ವದ ಮತ್ತು ಸೃಷ್ಟಿಯ ರಹಸ್ಯಗಳು ಇನ್ನೂ ನಿಘೂಡ ವಾಗಿಯೇ ಇವೆ.ನಿರಂತರ ಬದಲಾಗುವ ಈ ಪ್ರಪಂಚದಲ್ಲಿ ಹೊಸ ಹೊಸ ರಹಸ್ಯಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ.ಹಾಗಾಗಿ ಯಾವುದೇ ಕಾಲಕ್ಕೂ ಸೃಷ್ಟಿಯ ಎಲ್ಲಾ ರಹಸ್ಯಗಳನ್ನೂ ಮತ್ತು  ನಿಘೂಡತೆಗಳನ್ನೂ  ಛೇದಿಸಲು ಎಂದಿಗೂ ಸಾಧ್ಯವೇ ಇಲ್ಲ ಎಂದು ಹೇಳಬಹುದು.

ಹಾಗಾಗಿ ನಮ್ಮ ತಿಳುವಳಿಕೆಗೆ ನಿಲುಕದ ಮತ್ತು ನಮ್ಮ ಜೀವನದಲ್ಲಿ ನಡೆದ ಮತ್ತು ನಡೆಯಬಹುದಾದ ಘಟನೆಗಳ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದೆ,ಅವುಗಳನ್ನೆಲ್ಲ ಆ ಕಾಣದ ದೇವನಿಗೆ ಆರೋಪ ಮಾಡಿ ನಾವು ನೆಮ್ಮದಿಯಿಂದ ಇರಬೇಕಷ್ಟೇ.ನಂಬ ಬೇಕು ಮತ್ತು ನಂಬಲೇಬೇಕು. ಬೇರೆ ದಾರಿ ಇಲ್ಲ. ಆದರೆ ಏನನ್ನು ನಂಬುವುದು? ಹಾಗೆ ಮತ್ತೊಂದು ರೀತಿಯಲ್ಲಿ ಯೋಚಿಸಿ, ಈ ಸೃಷ್ಟಿಯಲ್ಲಿ ನಾನು ಒಂದಂಶ.ಎಲ್ಲ ಪ್ರಾಣಿಗಳಂತೆಯೇ ನಾನೂ ಇದ್ದೇನೆ. ಎಲ್ಲವೂ ವ್ಯವಸ್ತಿತ ರೀತಿಯಲ್ಲಿ ನಡೆಯುತ್ತಿದೆ. ಯಾವುದರಿಂದ ನಡೆಯುತ್ತದೆ, ಏಕೆ ನಡೆಯುತ್ತದೆ ಹೇಗೆ ನಡೆಯುತ್ತದೆ ಎಂದು ಯೋಚನೆ ಮಾಡದೆ,ನಾನು ಸುಮ್ಮನೆ ಜೀವನ ಮಾಡಿದರೆ ಸಾಲದೇ ಎಂದರೆ,ಹೌದು ಸಾಕು.ಆದರೆ ದೇವರಿದ್ದಾನೆ ಎಂದು ನಂಬುವುದರಿಂದ ಇಡೀ ಪ್ರಪಂಚದ ಸಾಮಾಜಿಕ ವ್ಯವಸ್ತೆಯೇ ಒಂದು ಸುವ್ಯವಸ್ತೆಗೆ ಬಂದಿದೆಯಂದರೆ,ಆ ದೇವರನ್ನು ನಂಬಿದರೆ ತಪ್ಪೇನು.ನಾನು ಎಂಬ ಅಹಂಕಾರ ಒಂದು ವ್ಯಕ್ತಿಯನ್ನು ಸತ್ಪ್ರಜೆಯಾಗಿ ರೂಪಿಸುವಲ್ಲಿ ಭಾದಕವಾಗಿರುತ್ತದೆ.ವ್ಯವಸ್ಥಿತರೀತಿಯಲ್ಲಿ ಒಂದು ಸಮಾಜದ ಬೆಳವಣಿಗೆಗೆ ಸಹಕಾರ ಮತ್ತು ಸಹಬಾಳ್ವೆ ಅಗತ್ಯ.ಹಾಗೆ ಹುಟ್ಟಿಕೊಂಡ ಈ ದೇವರ ನಂಬಿಕೆಯಿಂದ ಪ್ರಪಂಚದ ಎಲ್ಲ ಸಮಾಜಗಳೂ ವ್ಯವಸ್ಥಿತ ರೀತಿಯಲ್ಲಿ ರೂಪುಗೊಂಡಿದೆ ಎಂದಾಗ, ಆ ದೇವರನ್ನು  ನಂಬಿದರೆ ತಪ್ಪೇನು? 

ವಿಚಾರವಂತನಾದವನು, ಜಿಜ್ಞಾಸೆಯಿಂದ ಈ ಪರಮಾತ್ಮ ಸ್ವರೂಪವನ್ನು ತನ್ನದೇ ರೀತಿಯಲ್ಲಿ  ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ.ಏಕೆಂದರೆ ಸ್ವತಂತ್ರವಾಗಿ ಯೋಚಿಸುವ ಮತ್ತು ತಾನು ಕಂಡುಕೊಂಡಂತಹ ವಿಚಾರವನ್ನು ನಂಬಲು ಮತ್ತು ತನ್ನ ನಂಬಿಕೆಯಂತೆ ತನ್ನ ಜೀವನವನ್ನು ರೂಪಿಸಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಮಾನವನಿಗೆ ಇದೆ. 

ಹಾಗೆ  ನನಗೆ ಉಂಟಾದ ಜಿಜ್ಞಾಸೆಯಿಂದ ಹುಟ್ಟಿದ ಅಭಿಪ್ರಾಯವು ಈ ರೀತಿ ಇದೆ. ಪುರುಷ ಸೂಕ್ತ ದಲ್ಲಿ ಪುರುಷನು (ಪುರೇ ಶಯತೀತಿ ಪುರುಷಃ-ನವರಂದ್ರಗಳಿಂದ ಕೂಡಿದ ಈ ದೇಹ (ಪುರ) ವನ್ನು ಧಾರಣೆಮಾಡಿರುವವನು)ಸಾವಿರಾರು ತಲೆ,ಕಣ್ಣು,ಕಾಲುಗಳು ಉಳ್ಳವನು ಎಂದೂ,( this is just a hyperbole) ಈ ಭೂಮಿಯನ್ನೂ ಸೇರಿದಂತೆ ಇಡೀ ವಿಶ್ವವನ್ನೇ ಆವರಿಸಿಕೊಂಡು ಅದರಮೇಲೆ ಹತ್ತಂಗುಲದಲ್ಲಿ ನಿಂತಿದ್ದಾನೆ,ಎಂಬ ವ್ಯಾಖ್ಯಾನವಿದೆ.ಈ ಜಗತ್ ಸೃಷ್ಟಿಗೆ ಕಾರ್ಯಕಾರಣ ಸ್ವರೂಪಿಯಾಗಿಯೂ ತಾನೇ ವಿವಿಧರೂಪದಲ್ಲಿ ಪ್ರಕಟಗೊಂಡು ಈ ಜಗತ್ತನ್ನು ಅನುಭವಿಸುತ್ತಿದ್ದಾನೆ ಎಂಬ ಅಭಿಮತವೂ ಉಂಟು."ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಅಟು ತಾನೈ,ಅನ್ದಮೈನ ಶ್ರೀ ವೆಂಕಟಾದ್ರಿನಿ ಸೇವಿಂಚಿ ಅಂದರಾನಿ ಪದಮುಲು ಅ೦ದನೆರಡುಜಾಲ"ಎಂಬುದು ಅನ್ನಮಾಚಾರ್ಯರ ಗೀತೆಯ ಉಕ್ತಿ.ಅಂದರೆ "ಎಲ್ಲರಲ್ಲೂ ಹುಟ್ಟಿ, ಎಲ್ಲರಲ್ಲೂ ಸೇರಿ ಎಲ್ಲರ ರೂಪವು ತಾನಾಗಿರುವ ಅಂದವಾದ ವೆಂಕಟಾದ್ರಿ" ಎಂದು ಅದರ ಅರ್ಥ.ಅದರ ಪ್ರಕಾರ ಎಲ್ಲವೂ ಪರಮಾತ್ಮನೇ ಅಲ್ಲವೇ?

ಆದರೆ ಇದು ನಂಬಿಕೆಗೆ ಸೇರಿದ್ದು.ಇದಕ್ಕೆ ಒಂದು ವೈಜ್ಞಾನಿಕ ಆಯಾಮವನ್ನು ಸೇರಿಸಿ ನೋಡಿದರೆ ನಮಗೆ ಗೊತ್ತಾಗುವುದು ಏನಂದರೆ,ನಮಗೆ ಕಾಣುವ ಮತ್ತು ನಮ್ಮ ಸೌರಮಂಡಲದಲ್ಲಿರುವ ಸೂರ್ಯನ ಸುತ್ತಳತೆ 13,92,000 ಕಿಲೋ ಮೀಟರ್ ಮತ್ತು ನಾವಿರುವ ಭೂಮಿಯ ಸುತ್ತಳತೆ  12756 ಕಿಲೋ ಮೀಟರುಗಳು. ಆ  ಲೆಖ್ಕದಲ್ಲಿ 13 ಲಕ್ಷ ಭೂಮಿಗಳನ್ನು ನಮ್ಮ ಸೂರ್ಯನೊಳಕ್ಕೆ ಹಾಕಬಹುದು.ಆದರೆ ವಾಸ್ತವವಾಗಿ ಸೂರ್ಯನೂ ಭೂಮಿಯಂತೆ ಗುಂಡಾಗಿರುವುದರಿಂದ,ಕೇವಲ 980000 ಭೂಮಿಗಳನ್ನು ನಮ್ಮ ಸೂರ್ಯನೊಳಕ್ಕೆ ಸೇರಿಸಿ ಬಿಡಬಹುದು.ಈ ಸೌರಮಂಡಲ,ಭೂಮಿ ಮತ್ತು ಇತರೆ ಗ್ರಹಗಳು ಎಲ್ಲವೂ ಒಂದು ಅದ್ಭುತ ಸೂತ್ರದಲ್ಲಿ ಹೆಣೆಯಲ್ಪಟ್ಟಿದೆ. ಇದು ನಿಶ್ಚಯ.      

ನಾವಿರುವ ಭೂಮಿಯ ಸೌರಮಂಡಲ,ಒಂದು ಕ್ಷೀರಪಥದಲ್ಲಿರುವ ಲಕ್ಷಾಂತರ ಸೌರ ಮಂಡಲಗಳಲ್ಲಿ ಒಂದು. ಇಂತಹ ಕ್ಷೀರಪಥಗಳು ಒಂದು ಆಕಾಶಗಂಗೆಯಲ್ಲಿ ಲಕ್ಷಾಂತರ. ಈ ಜಗತ್ತಿನ ಸೃಷ್ಟಿಯಲ್ಲಿ ಇಂಥ ಆಕಾಶಗಂಗೆಗಳು ಲಕ್ಷಾಂತರ.ಯಾವ ಶಕ್ತಿಯ ಸೂತ್ರದಲ್ಲಿ ನಮ್ಮ ಸೌರಮಂಡಲದ ಭೂಮಿ,ಅನ್ಯ ಗ್ರಹಗಳು ಮತ್ತು ಈ ಸೌರಮಂಡಲದ ಅಧಿಪತಿಯಾದ ಮತ್ತು ನಮಗೆ ಕಾಣುವ ಸೂರ್ಯ ಎಲ್ಲವೂ ಹೆಣೆದುಕೊಂಡಿವೆಯೋ ಅದೇ ಶಕ್ತಿಯು ತನ್ನ ವಿಸ್ತಾರ ರೂಪದಿಂದ ಎಲ್ಲ ಕ್ಷೀರಪಥಗಳನ್ನೂ,ಎಲ್ಲ ಅಕಾಶಗಂಗೆಗಳನ್ನೂ ಒಂದೇ ಸೂತ್ರದಲ್ಲಿ ಹಿಡಿದಿಟ್ಟಿದೆ.ಅಂದರೆ ಆ ಶಕ್ತಿಯು ಇವೆಲ್ಲವನ್ನೂ ತನ್ನ ಹಿಡಿತದಲ್ಲಿ ಒಂದು ಸೂತ್ರದಲ್ಲಿ ಹಿಡಿದಿಟ್ಟುಕೊಂಡಿದೆ ಎಂದರೆ,"ಆ ಶಕ್ತಿ ಇವೆಲ್ಲಕ್ಕಿಂತ ಉನ್ನತ ಸ್ಥಾನದಲ್ಲಿದೆ"ಯೆಂದು ಅರ್ಥವಲ್ಲವೇ. ಹಾಗೆ ಈ ಸೃಷ್ಟಿಯನ್ನೇ ತನ್ನ ಸೂತ್ರದ ಹಿಡಿತದಲ್ಲಿ ಇಟ್ಟಿಕೊಂಡಿರುವ ಆ ಶಕ್ತಿಯೇ ಪರಮಾತ್ಮ ಅಥವಾ ದೈವ ಎಂದರೆ ತಪ್ಪಗಲಾರದಲ್ಲವೇ? ಇದೇ ಶಕ್ತಿಯೇ ಈ ಜಗತ್ತಿನ ಎಲ್ಲಕ್ಕೂ ಕಾರಣವೆಂದು ಎಲ್ಲರ ಅಭಿಮತ ಮತ್ತು ಈ ವಿಷಯದಲ್ಲಿ ಮಾತ್ರ ಎಲ್ಲರ ಏಕೀಭಾವವಿದೆ. ಆದರೆ ಅದರ ಸ್ವರೂಪ ಮತ್ತು ಅದರ ಕಾರ್ಯ ವೈಖರಿಯ ಬಗ್ಗೆ ಸಾವಿರಾರು ಅಭಿಪ್ರಾಯಗಳು ಮತ್ತು ಭಿನ್ನಾಭಿಪ್ರಾಯಗಳು.

ಪ್ರಾಣವೆಂದರೆ ಚೇತನ.ಜಡವ ಕಾರ್ಯರೂಪಕ್ಕೆ ಪ್ರೇರೇಪಿಸುವುದೇ ಈ ಶಕ್ತಿ.  ಜಡ ಮತ್ತು ಶಕ್ತಿಯ ಸಮ್ಮಿಲನದಿಂದ ನಡೆಯುವ ಕೆಲಸ ಕಾರ್ಯಗಳೇ ಈ ಜಗದ್ವ್ಯಾಪಾರ.ಅಂದರೆ ಈ ಜಗತ್ತಿನ ಆಗು ಹೋಗುಗಳೆಲ್ಲಾ ಈ ಶಕ್ತಿಯ ಮೇಲೆ ಅವಲಂಬಿಸಿರುತ್ತದೆ.ಈ ಜಗತ್ತಿನ ಎಲ್ಲ ವಸ್ತುಗಳೂ ಅದೇ ಶಕ್ತಿಯ ಸಹಾಯದಿಂದ ಕಾರ್ಯೋನ್ಮುಖವಾದರೂ, ಆಯಾಯ ವಸ್ತುವಿನ ಕಾರ್ಯದ ಪ್ರಮಾಣ ಮತ್ತು ವ್ಯಾಪ್ತಿ,ಆ ವಸ್ತುವಿನ ಆಕಾರ ಮತ್ತು ಕ್ಷಮತೆಯ (capacity)ಮೇಲೆ ಆಧಾರವಾಗಿರುತ್ತದೆ.

ಇದಕ್ಕೊಂದು ಉದಾಹರಣೆಯನ್ನು ಕೊಡುವ.ನಮ್ಮ ಶಿವನಸಮುದ್ರದ ಅಥವ ಯಾವುದೇ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನ ಪ್ರಮಾಣವನ್ನು Mega Watts ಎನ್ನುತ್ತಾರೆ. ಆ ವಿದ್ಯುತ್ತಿನ ಶಕ್ತಿಯ ತೀವ್ರತೆ ಎಷ್ಟಿರುತ್ತದೆ ಎಂದರೆ ಅದರ ಹತ್ತಿರ ಹೋಗಲು ಯೋಚನೆ ಮಾಡಿದರೆ ಸಾಕು ಸುಟ್ಟು ಬೂದಿಯೂ ಮಿಗದಂತಾಗುತ್ತದೆ.ಅಷ್ಟು ತೀವ್ರವಾಗಿರುತ್ತದೆ ಅದರ ಶಕ್ತಿ.ಅದನ್ನೇ ಪರಮಾತ್ಮ ಎಂದು ಇಟ್ಟುಕೊಳ್ಳೋಣ.ಅಲ್ಲಿ ಉತ್ಪಾದನೆಯಾದ ವಿದ್ಯುತ್ತೇ ನಿಮ್ಮ-ನಮ್ಮ ಮನೆಗಳಿಗೆ ಬರುವುದು.ಆದರೆ ಅದು ನೇರವಾಗಿ ಬರುವುದಿಲ್ಲ. ಹಂತ ಹಂತವಾಗಿ ಅದರ ತೀವ್ರತೆಯನ್ನು ಕಡಿಮೆಗೊಳಿಸುತ್ತ (step down) ಕಡೆಗೆ    ನಮ್ಮ-ನಿಮ್ಮ ಬೀದಿಯಲ್ಲಿರುವ ಒಂದು transformer ಗೆ ಕಳುಹಿಸಿ ಅದರಿಂದ ನಿಮ್ಮ ಬೀದಿಯಲ್ಲಿರುವ ಎಲ್ಲ ಮನೆಗಳಿಗೆ ತಂತಿಗಳ ಮೂಲಕ ಕಳುಹಿಸುತ್ತಾರೆ. ನಿಮ್ಮ ಮನೆಗೆ ಬರುವ ವಿದ್ಯುತ್ತಿನ ಪರಿಮಾಣ 220 volts ಆಗಿರುತ್ತೆ. ಹಾಗೆ ಎಲ್ಲೋ ಮೂಲವಿರುವ ಆ ವಿದ್ಯುತ್ತನ್ನು ನಿಮ್ಮ ಮನೆಗೆ ಕಳುಹಿಸಿದಾಗ ನೀವು ಅದನ್ನು ಬೇರೆ ಬೇರೆ ಉಪಕರಣಗಳನ್ನು ಉಪಯೋಗಿಸಲು ಬಳಸುತ್ತೀರಿ.ಆದರೆ ಪ್ರತಿಯೊಂದು ಉಪಕರಣವೂ ಅದೇ ವಿದ್ಯುತ್ತನ್ನು ಉಪಯೋಗಿಸಿದರೂ, ಅದರಿಂದ ಹೊರಬರುವ ಫಲ(output)ಮಾತ್ರ ಬೇರೆ ಬೇರೆಯಾಗಿರುತ್ತದೆ. geyser,Fridge,TV,Iron ಬಾಕ್ಸ್, ಫ್ಯಾನ್, ಹೀಗೆ ಎಲ್ಲವೂ ಅದೇ ವಿದ್ಯುತ್ತನ್ನು ಉಪಯೋಗಿಸಿಕೊಂಡರೂ ಅದರ ಉಪಯೋಗಗಳು ನಮಗೆ ಬೇರೆ ಬೇರೆ ರೀತಿಯಲ್ಲಿರುತ್ತದೆ.

ಹಾಗೆಯೇ ಈ ಜಗತ್ತನ್ನು ಸೃಜಿಸಿ, ನಿಯಂತ್ರಿಸಿ, ನಡೆಸಿಕೊಂಡು ಹೋಗುವ  ಆ ಅದ್ಭುತ ಶಕ್ತಿಯೇ ಬೇರೆ ಬೇರೆ ಪ್ರಾಣಿ ಪಕ್ಷಿ,ಕೀಟ, ಗಿಡ ಮರ ಹೀಗೆ ಈ ಸೃಷ್ಟಿಯಲ್ಲಿ ಏನೇನಿದೆಯೋ ಅದೆಲ್ಲದರಲ್ಲೂ ಸೇರಿ ಬೃಹತ್ ಚೇತನದ ಅಲ್ಪ ರೂಪದಲ್ಲಿ ಆಯಾಯಾ ದೇಹಗಳ ಶಕ್ತಿಯ ಮಿತಿಯಲ್ಲಿ ಕೆಲಸ ಮಾಡುತ್ತಾ ಇರುತ್ತದೆ. ಈ ಪ್ರಪಂಚದ ಎಲ್ಲಾ ಬೇರೆ ಬೇರೆ ಪ್ರಾಣಿ ಪಕ್ಷಿ,ಕೀಟ, ಗಿಡ,ಮರ ಎಲ್ಲದರ ದೇಹರಚನೆ ಮತ್ತು ಆಕಾರ ಭಿನ್ನ ಭಿನ್ನವಾಗಿರುವಾಗ,ಇವೆಲ್ಲವೂ ಜೀವಂತವಾಗಿರಲು ಒಂದೇ ಶಕ್ತಿಯನ್ನು ಉಪಯೋಗಿಸಿಕೊಂಡರೂ, ಮಾಡುವ ಕೆಲಸ, ಕೆಲಸ ಮಾಡುವ ರೀತಿ, ಆ ಕೆಲಸದ ಕಾರಣ ಮತ್ತು ಆ ಕೆಲಸದಿಂದ ಆಗುವ ಪ್ರಯೋಜನ ಎಲ್ಲವೂ ಭಿನ್ನ ಭಿನ್ನವಾಗಿರುತ್ತದೆ.

ಈ ಜಗತ್ತನ್ನು ಒಂದು ಸೂತ್ರದಲ್ಲಿ ನಿಯಂತ್ರಿಸುತ್ತಿರುವ ಆ ಅದ್ಭುತ ಶಕ್ತಿಯನ್ನು ನಾವು ಪರಮಾತ್ಮ ಎಂದು ಪರಿಗಣಿಸಿದರೆ, ಸೃಷ್ಟಿಯಲ್ಲಿರುವ ಅಖಂಡ ಸಂಖ್ಯೆಯ ಜೀವರಾಶಿಗಳಲ್ಲಿರುವ ಚೇತನವೂ ಅದೇ ಪರಮಾತ್ಮನ ಸ್ವರೂಪವಾದದು ಎಂದರೆ ತಪ್ಪಾಗಲಾರದು. ಹಾಗಾಗಿ ಎಲ್ಲ ಜೀವಿಗಳನ್ನೂ ಚೈತನ್ಯದಿಂದಿಡುವ ಆ ಚೇತನ ಮತ್ತು ಈ ಜಗತ್ತನ್ನು ಒಂದು ಸೂತ್ರದಲ್ಲಿ ನಿಯಂತ್ರಿಸುವ ಆ ಬೃಹತ್ ಚೇತನವೂ ಒಂದೇ ಎಂದು ಒಪ್ಪಲೇಬೇಕು. ಪರ್ಯಾಯ ವಿಶ್ಲೇಷಣೆ ಇಲ್ಲ. ಇದನ್ನೊಪ್ಪಿದರೆ,ಆ ಪರಮಾತ್ಮನನ್ನು ಎಲ್ಲ ಜೀವಿಗಳಲ್ಲೂ ಕಾಣುತ್ತಾ ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಾ ಈ ಜೀವನವನ್ನು ಎಲ್ಲರೂ ಸುಂದರವನ್ನಾಗಿಸಿಕೊಳ್ಳಬಹುದಲ್ಲವೇ.

ಜೀವಾತ್ಮ ಪರಮಾತ್ಮ ಸಂಬಂಧವನ್ನು ಹೀಗೆ ಅರ್ಥಮಾಡಿಕೊಂಡ ನನಗೆ ಎಲ್ಲ ಪ್ರಾಣಿಗಳಲ್ಲೂ ಆ ಬೃಹತ್ ಚೇತನದ ರೂಪವೇ ಕಾಣುವಾಗ ಆ ದೇವರನ್ನು ಬೇರೆಲ್ಲೋ ಹುಡುಕಬೇಕೆ ನೀವೇ ಹೇಳಿ?
ಸರ್ವೇ ಜನಾಃ ಸುಜನಾ  ಭವಂತು
ಸರ್ವೇ ಸುಜನಾಃ  ಸುಖಿನಃ ಸಂತು
 
 ರವಿ ತಿರುಮಲೈ

Friday 10 February 2012

ಪ್ರಣಯ ಚರಿತ್ರೆ


ಒಮ್ಮೆ ನಾನೆಂದೋ ಒಂದು ಬಾರಿ 

ಬಿದ್ದಿದ್ದೆ ಗಾಢ ಪ್ರೇಮದಲಿ ಜಾರಿ 
ಶುದ್ಧ ಅಂತಃಕರಣದಿಂದ ಪ್ರೀತಿಸಿದ್ದೆ 
ಕೇಳದೆಯೇ ಮನವೆನ್ನ ಅರ್ಪಿಸಿದ್ದೆ. 



ಪ್ರತಿ ಅಗಲಿಕೆಯೆಲ್ಲೂ ಒಂದು ನೋವಿತ್ತು 
ಸದಾ ಸನಿಹವೇ ಇರಬಾರದೇ ಎನಿಸಿತ್ತು 
ನಾನೇನೋ ಮನದಾಸೆ ಬಿಚ್ಚಿ ಇಟ್ಟಿದ್ದೆ 
ಪದರ ಪದರಗಳನ್ನೆಲ್ಲ ತೆರೆದುಬಿಟ್ಟಿದ್ದೆ 

ಸುಮ್ಮನೆ ನಡೆದಿತ್ತು ನಮ್ಮ ಒಡನಾಟ 
ಅವಳ ಮನವನರಿಯಲು ನನ್ನ ಪರದಾಟ 
ಬಿಗಿದ ತುಟಿ ತೆರೆದು ಬಾಯಿ ಬಿಡಳವಳು 
ಇಂಗಿತವನರುಹೆ ಮನವ ತೆರೆಯಳವಳು 

" ಹೇಳು, ನಿನಗೆ ಪ್ರೇಮವು೦ಟೆ" ಎಂದು 
ಕೇಳಲಾತುರ ಪಡಬಾರದೆಂದು 
ಕಷ್ಟದಲಿ ಹಿಡಿದಿಟ್ಟೆ ಎನ್ನ ಮನವಂದು 
ಪರಿತಪಿಸಿ ಪರದಾಡಿ ಮನದೊಳಗೆನೊಂದು 

ಕೇಳಿದರೆ ಏನ ಹೇಳುವಳೋ ಎಂಬ ಆತಂಕ
ಕಾದು ನೋಡುವಾ ಎಂದು ಕಡೆಯ ತನಕ 
ದಿನ ವಾರ ತಿಂಗಳು ವರುಷಗಳುರುಳಿದರೂ
ಅರಿಯದಾದೆ ನಾನವಳ ಮನವನಿನಿತಾದರೂ 

ವರುಷ ಏಳಾದರೂ ವಯಸು ಮುಂದಾದರೂ 
ಕುಗ್ಗದಾ ಹರುಷದಿ ನಾನವಳ ಹಿಂದೆ ಸುತ್ತಿದರೂ 
ಕಲ್ಲು ಮನ ಕರಗಲಿಲ್ಲ ನಾನವಳ ಬಿಡಲಿಲ್ಲ. 
ಎನ್ನ ರೋದನಕೀಗ ಮೊದಲಿಲ್ಲ ಕೊನೆಯಿಲ್ಲ 

ನಾ ಇದ್ದ ಊರಿಂದ ಅವಳೂರಿಗೆ ಬಂದೆ 
ಮೊಂಡು ಹಿಡಿದವನಂತೆ ನಿಂತೆನವಳಾ ಮುಂದೆ
ಮತ್ತದೇ ಮೌನ ನಿಶ್ಶಬ್ದ ಬಿಗುಮಾನ 
ಹೇಳಲೊಳ್ಳಲು ಮಾತು ಸುಮ್ಮನೆ ಸುಮ್ಮಾನ. 

ಒಂದು ದಿನ ಹೊರಟೆ ನಾನವರ ಮನೆಗೆ 
ಮುಟ್ಟಿಸಲು ಈ ಕಥೆಯನೊಂದು ಕೊನೆಗೆ 
ಅವಳಿಲ್ಲ, ತಾಯಿಂದ ಸ್ವಾಗತವು ಎನಗೆ 
ನೋಟದಲೆ ಹಚ್ಚಿದರು ಅವರೆನ್ನ ಒರೆಗೆ

"ನೇರ ಹೇಳಿಹಳವಳು ನೀ ಒಲ್ಲೆಯಂದು, 
ಬುದ್ಧಿಯಲಿ, ನೀ ಅವಳಿಗಿಂತ ಕಮ್ಮಿಯಂದು"
ತಾಯಿ ಎಂದರು" ಒಲ್ಲದ ಬಂಧವು ನಿನಗೇಕೆ" ಎಂದು
ಪೆಚ್ಚಾಗಿ, ಹೊರಟೆ ನಾ ಬಂದ ದಾರಿಗೆ ಸುಂಕವಿಲ್ಲವೆಂದು

ಎರಡು ಮೂರು ದಿನ ನಾ ಬೆಪ್ಪಾಗಿ ಹೋದೆ
ಮುಂದಿನಾ ದಾರಿ ಹೇಗೆ-ಏನು ಎಂದು ತಿಳಿಯದೆ
ಜೀವನದ ಅಂತ್ಯಕ್ಕೆ ಕಾರಣವಿದಲ್ಲ,
ಯೋಚಿಸೆ ತೋಚಿತು, ಬೇರೆ ಯಾರೋ ಇಹರಲ್ಲ.

ತಟ್ಟನೆ ಮೂಡಿತು, ನಿರ್ಲಿಪ್ತ ಭಾವ,
ಲೋಕದೊಳು ಉಂಟೆ ಹುಡುಗಿಯರಿಗಭಾವ 
ಪತ್ರವೊಂದನು ಬರೆದೆ ನಾ ಎನ್ನ ತಂದೆಗೆ
"ಹುಡುಕಿರೊಂದು ಹೆಣ್ಣನ್ನು ಸಿದ್ಧ ನಾ ಮದುವೆಗೆ".

ಹೇಳಿದ್ದೆ ಸಾಕೆಂದು ತ್ವರೆ ಮಾಡಿದರವರು 
ಹುಡುಕಿ ಎಲ್ಲೆಲ್ಲೋ,ಹುಡುಗಿಯರ ನೋಡಿದರವರು 
ಅನುರೂಪಳಾದವಳು ಸಾದ್ವಿ ಸುಮನಸ್ಸಿನವಳು 
ಬಂದಳೆನ್ನ ಮಡದಿ ಮನ ಮನೆಯ ತುಂಬಿದಳು 

ಹತ್ತು ಹದಿನೈದು ದಿನ ಕಳೆದಿರಬೇಕು 
ಗತವನೆಲ್ಲವ ನಾ ಮರೆತಿರಬೇಕು 
ಬಂತಾಗ ಸುದ್ದಿಬಂದಿಹಳು ಎಂದು 
ಮನಗೆ ನನ್ನ ಮಾಜಿ ಪ್ರಿಯತಮೆಯು ಇಂದು 

ಕಾಣ ಹೋದೆ ನಾ ಬಲು ಸಮದಾನದಿಂದ 
ಸಾವಕಾಶದಿ ಸಾಗಿತು ಮಾತು ನಿಧಾನದಿಂದ 
ತಟ್ಟನೆ ಅವಳ ಮಾತಿನಾ ಬಾಂಬೊಂದು ಬಿತ್ತು 
" ನೀ ಇನ್ನೂ ಸ್ವಲ್ಪ ದಿನ ಕಾಯಬಹುದಿತ್ತು" 

ಗೆಳೆಯರೇ,ಇದ ಕೇಳಿದಾ ಎನಗೆ ಮೈಯಲ್ಲ ಬೆವರಿತ್ತು 
ಹೇಳಿ ನಾ ಆಗ ಏನು ಮಾಡಬಹುದಿತ್ತು, ಏನು ಮಾಡಬಹುದಿತ್ತು 

Wednesday 8 February 2012

ಕನ್ನಡ ಬ್ಲಾಗಿನ ಗೆಳೆಯರು

ಈ ಕನ್ನಡ ಬ್ಲಾಗಿನ ಗೆಳೆಯರನು 
ಮುಖತಃ ನೋಡದಿದ್ದರೇನು 
ಬೆಳೆದಿದೆ ಒಂದು ಪ್ರೀತಿಯ ತಂತು 
ಕಳೆದಿದೆ ಅಪರಿಚಿತರೆಂಬ ಮಾತು 

ಹೃದಯ ಸಂವೇದನೆಗೆ ರೂಪ ಬೇಕಿಲ್ಲ
ಪ್ರೇಮದ ಭಾಷೆಗೆ ಶಬ್ದದದರಿವಿಲ್ಲ
ಮನಕೆ ಮನವು ಸವಿನುಡಿಯ ನುಡಿದಾಗ
ಚಿಗುರುವುದೆಲ್ಲರ ಮನದಿ ಪ್ರೇಮಾನುರಾಗ.

ಸಹೃದಯವೇ ಸಾಕಾರವಾದ
ಎಲ್ಲ ಗೆಳೆಯರ ಮೂಕ ಸಂವಾದ
ನೋಡದಿದ್ದರೇನಂತೆ ಪ್ರೀತಿಗೇನು ಕೊರತೆ
ಉಕ್ಕುತ್ತಿರುವಾಗ ಭಾವರಸದಾ ಒರತೆ

ಪುಟ್ಟ ಮಕ್ಕಳಿವರಲ್ಲ, ಭಾವ ಪ್ರಬುಧ್ಧರು
ಒಬ್ಬರಿಗೊಬ್ಬರು ಹೃದಯದಿಂ ಬಧ್ಧರು
ಬರವಣಿಗೆಯಲ್ಲಿ ಎತ್ತಿದಕೈ ಒಬ್ಬೊಬ್ಬರು
ವಿನಯ ವಿನಮ್ರತೆಯ ಮೂರ್ತಿಗಳೆಲ್ಲರು

ಹಿಂದೆ ನಾ ಕವಿತೆಯಂಬ ಸಾಲುಗಳ ಬರೆಯುತ್ತಲಿದ್ದೆ
ಮತ್ತೆ ಬರೆಯಲು ಸ್ಪೂರ್ತಿಯಿಲ್ಲದೆ ನಾ ಅದ ಮರೆತಿದ್ದೆ
ಇಂದು ಹಲವಾರು ಸಹೃದಯ ಸ್ನೇಹಿತರು ಸಿಕ್ಕಿಹರು
ಮತ್ತೆ ನಾಲ್ಕು ಪಂಕ್ತಿ ಬರೆಯಲು ಇಂಬನಿತ್ತಿಹರು

ಒಮ್ಮೆ ಒಂದಾಗಿ ಎಲ್ಲರನು ನೋಡುವಾಸೆ
ಹಿಂದೊಮ್ಮೆ ಹೇಳಿರುವೆ ನನ್ನ ಮನದಾಸೆ
ಎಂದು ಆಗುವುದೋ ನನ್ನಾಸೆ ಪೂರ್ತಿ
ಇಂದು ಬದ್ರಿಯಾ ಕಥೆ ಈ ಕವಿತೆಗೆ ಸ್ಫೂರ್ತಿ

ಇಂದು Nataraju Seegekote Mariyappa ನವರು Badarinath Palavalli ಯವರ ಬಗ್ಗೆ ಬರೆದ
ಒಂದು ಲೇಖನವೇ ನನ್ನ ಈ ಕವಿತೆ ( ಕವಿತೆ ಎನ್ನ ಬಹುದೋ ಇಲ್ಲವೋ ಗೊತ್ತಿಲ್ಲ) ಸ್ಫೂರ್ತಿ. ಬರೆದ ನಾಟ್ಯದರಸಿನಿಗೂ ಲೇಖನಕ್ಕೆ ವಸ್ತುವಾದ ಆಮಲಕದರಸನಿಗೂ ನನ್ನ ಹೃದಯ ತುಂಬಿದ ಧನ್ಯವಾದಗಳು

Tuesday 7 February 2012

ನೀನಾರಿಗಾದೆಯೋ ಎಲೆ ಮಾನವ.




ಮುದ್ದಾದ ಕುರಿಮರಿಯೊಂದನ್ನು 


ಅಕ್ಕರೆಯಿಂದ ತಂದು, ಹಸಿರು, 

ಎಲೆ, ಹುಲ್ಲು, ಸೊಪ್ಪು ಸೊದೆಗಳ

ಜೊತೆಗೆ ನಿಮ್ಮ, ಮನೆಯವರ 

ಪ್ರೀತಿಯಕ್ಕರೆಯ ಉಣಬಡಿಸಿ, 

ತನ್ನ ಮಕ್ಕಳಂತೆ, ಬೆಳೆಸಿ



ಪಾಪ, ತನ್ನ ಸಾಕುವರೆಂದು 

ನಿಮ್ಮ ನೋಡಿ,ದೈನ್ಯತೆಯೇ,

ಕರುಣೆಯೇ ಮೂರ್ತವೆತ್ತಂತೆ 

ನಿಮ್ಮ ಮನೆಯ ಬಾಗಿಲಲ್ಲಿ 

ನಿಂತು, ಬ್ಯಾ ಬ್ಯಾ ಎಂದು 

ತನ್ನೆಲ್ಲ ಭಾವನೆಗಳ ನಿಮಗರುಹಿ 



ತನ್ನ ಬಲಿಕೊಡುವ ದಿನವೂ 

ಅರಿಯದೆ ನಿಮ್ಮ ಹಿಂದೆ ಮುಂದೆ 

ಸುತ್ತುವ ಆ ಮೂಕ ಪ್ರಾಣಿಯ 

ಮನದಾಳವ ಅರಿಯದೆ 

ಅದ ಕಡಿದು, ತುಂಡರಿಸಿ 

ತಿಂದು ತೇಗುವ 

ನೀನಾರಿಗಾದೆಯೋ ಎಲೆ ಮಾನವ.


ತಿರುಮಲೈ ರವಿ

Friday 3 February 2012

ಏಕಾಂತದಾಶಯ

ಮನದೊಳಗೆ ಮನವಾಗಿ 
ಬದುಕೊಳಗೆ ಬದುಕಾಗಿ 
ಇದ್ದರೆ ಒಬ್ಬರು ಜೊತೆಯಾಗಿ 
ಅದೇ ಭಾಗ್ಯವು ಅದೇ ಸ್ವರ್ಗವು

ಪ್ರೇಮವದು ಕಡಿಮೆಯಾಗೆ
ಪ್ರೀತಿಯದು ಕಾಣೆಯಾಗೆ
ಛಿದ್ರಹೃದಯವದು ಪಾಷಾಣವಾಗೆ
ನಿನ್ನವರೆಂದು ಬದಿಯಲೊಬ್ಬರಿರೆ
ಅದೇ ಭಾಗ್ಯವು ಅದೇ ಸ್ವರ್ಗವು

ನೀ ಇರುವಂತೆಯೇ ನಿನ್ನ ಪ್ರೀತಿಸಲು
ನಿನಗಾಗಿ ಎರಡುಹನಿ ಕಣ್ಣೀರ ಹರಿಸಲು
ನಾನಿರುವೆನೆಂದು ತುಂಬಿ ನುಡಿಯಲು
ನಿನ್ನವರೆಂದು ಜೊತೆಯಲೊಬ್ಬರಿರೆ
ಅದೇ ಭಾಗ್ಯವು ಅದೇ ಸ್ವರ್ಗವು

ಆಸೆಯು ತೀರದ ಆವೇಶದೊಳು
ಆಶಯಗಳ ಆವೇದನೆಯೊಳು
ನಿನ್ನೊಡನಿದ್ದು ಏಕಾಂತದೊಳು
ನುಡಿಯಲು ತುಂಬಿದ ಸಾಂತ್ವನದುಲಿಗಳು
ಅದೇ ಭಾಗ್ಯವು ಅದೇ ಸ್ವರ್ಗವು

ವಾಚಕರೆ, ಈಗ್ಗೆ ನಲವತ್ತೈದು ವರ್ಷಗಳ ಹಿಂದೆ ಬಂದ ಒಂದು ತೆಲುಗು ಸಿನಿಮಾ ಹಾಡಿನ ಭಾವಾನುವಾದವಿದು.

ರವಿ ತಿರುಮಲೈ