Wednesday 10 October 2012

ನಂಬಿಕೆ ಮತ್ತು ಅಧ್ಯಾತ್ಮ




Photo

ಹಿಂದಿನವರ ಅನುಭವವೇ ಆಧ್ಯಾತ್ಮ ಸಾಧಕನಿಗೆ ನಂಬಿಕೆಯಾಗುತ್ತದೆ. ನಂಬಿಕೆ ತೀವ್ರವಾಗಿ, ಅನುಭವವನ್ನು ಪಡೆಯಬೇಕೆಂಬ ಆಸೆ ಉತ್ಕಟವಾದಾಗ ನಂಬಿಕೆಯೇ ಶ್ರಧ್ಧೆಯಾಗುತ್ತದೆ. ನಂಬಿಕೆ ಶ್ರಧ್ಧೆಯಾಗಿ  ಪ್ರಯತ್ನಪೂರ್ವಕವಾಗಿ ಅನುಭವ ಪಡೆದಾಗ ಜ್ಞಾನವಾಗುತ್ತದೆ. ತಂದೆ ಮಗನಿಗೆ" ಮಾವು ಸಿಹಿಯಾಗಿದೆ "  ಎಂದು ಹೇಳಿದರೆ ಮಗನಿಗೆ ಅದು ನಂಬಿಕೆಯಾಗುತ್ತದೆ. ಆ ಮಗು ಹಣ್ಣನ್ನು ತಿಂದಾಗ ಹಣ್ಣಿನ ಸವಿ ಸವಿದಾಗ ಮಾವಿನ ಸವಿತನ ಮಗುವಿಗೆ ಜ್ಞಾತವಾಗುತ್ತದೆ. ಇದು ತತ್ಕ್ಷಣ ಅರಿವಿಗೆ ಬರುವಂತ ಜ್ಞಾನ.

ಕಾಪರ್ನಿಕಸ್ಸನು, ಅಂದು ಪ್ರವರ್ತಮಾನದಲ್ಲಿದ್ದ ನಂಬಿಕೆಗೆ ಭಿನ್ನವಾಗಿ, ಭೂಮಿ ಸೂರ್ಯನ ಸುತ್ತ ತಿರುಗುತ್ತದೆ ಎಂದು ಕಂಡು ಕೊಂಡನಂತೆ. ಆದಿಯಲ್ಲಿ ಕೆಲವು ಜನ ಅವನ ವಾದವನ್ನು ನಂಬಿದರು ಆದರೆ ಬಹಳಕಾಲದ ಮೇಲೆ  ಆ ಸಿಧ್ಧಾ೦ತವನ್ನು  ಎಲ್ಲರೂ ಒಪ್ಪಿಕೊಂಡಾಗ ಅದು ಸಾರ್ವಜನಿಕ ಜ್ಞಾನವಾಯಿತು. ಇಲ್ಲಿ ನಂಬಿಕೆ ಜ್ಞಾನವಾಗಿ ಪರಿವರ್ತನೆಯಾಗಲು ಬಹಳ ಸಮಯ ಬೇಕಾಯಿತು. ಏನೂ ಅರಿಯದವನಿಗೆ, ಸತ್ಯವನ್ನರಿತು ಜ್ಞಾನ ಪಡೆಯಲು, ನಂಬಿಕೆಯೇ ಮೊದಲ ಹೆಜ್ಜೆ. ಅದು ಬಧ್ಧಾವಸ್ತೆಯಿಂದ ಜಾಗೃತಾವಸ್ತೆಗೆ ಹೋಗುವ ಪ್ರಕ್ರಿಯೆ. ನಂಬಿಕೆ ಮಾನವನನ್ನು ಚುರುಕಾಗಿಸಿ ಕಾರ್ಯೋನ್ಮುಖನನ್ನಾಗಿಸುತ್ತದೆ.  ಈ ಪ್ರಕ್ರಿಯೆಯಲ್ಲಿ ನಂಬಿಕೆ ಬದಲಾಗಿತ್ತಿರುವಂತೆ ಕಾಣಿಸುತ್ತದೆ. ಈ ಬದಲಾವಣೆಯೇ ಚೈತನ್ಯದ ಪ್ರತೀಕ.  ಉದಾಹರಣೆಗೆ  ಭೌತಿಕ ವಿಜ್ಞಾನದಲ್ಲಿ  ಸಿಧ್ಧಾ೦ತಗಳು ನ್ಯೂಟನ್ನಿನಿಂದ ಆಯಿನ್ಸ್ಟೀನ್ನಿನವರೆಗೆ ಹೇಗೆ ಬದಲಾಗಿವೆ ನೋಡಿ.

ನಾವು ನಂಬಿಕೆ ಎನ್ನುವ ಪದವನ್ನು ಉಪಯೋಗಿಸಿದರೆ, ಬುಧ್ಧಿಜೀವಿಗಳು " ವೈಜ್ಞಾನಿಕತೆ ಕಳೆದುಹೋಗಿದೆ" ಎಂದು ಅರುಚುತ್ತಾರೆ. ಅವರ ವಿಜ್ಞಾನ ಮತ್ತು ವೈಜ್ಞಾನಿಕ ಪ್ರಯೋಗಗಳ ವಿಧಾನ ಎಲ್ಲವೂ ಅವರ ಹಿಂದಿನ ತಲೆಮಾರಿನ ವಿಜ್ಞಾನಿಗಳ ಶೋದನೆ ಮತ್ತು ಸಂಶೋದನೆಗಳ ಮೇಲಿನ ನಂಬಿಕೆಯ ಮೇಲೆಯೇ ಅಧಾರಪಟ್ಟಿರುತ್ತದೆ ಮತ್ತು ಅವಲಂಬಿಸಿರುತ್ತದೆ ಎಂಬುದನ್ನು ಇವರುಗಳು ಒಪ್ಪುವುದೇ ಇಲ್ಲ. ಅವರುಗಳು ನಂಬಿಕೆಯೆನ್ನೇ ಜ್ಞಾನವೆಂದು ಅಪಾರ್ಥಮಾಡಿಕೊಂಡಿರುತ್ತಾರೆ.  ನಮ್ಮ  ಬಲವಾದ ನಂಬಿಕೆಯ ಅರಿವು ಅನುಭವದ ಮೂಲಕ ಸತ್ಯವಾಗಿ ಗೋಚರಿಸಿ ಜ್ಞಾನವಾಗಿ ಮಾರ್ಪಾಡಾಗುವುದೆಂಬ, ವೇದಾಂತದ ಮೂಲಭೂತ ತತ್ವ ಇಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಶ್ರಧ್ಧ್ದಾಪೂರ್ವಕ ನಂಬಿಕೆಯಲ್ಲಿನ ಸತ್ಯ ಗೋಚರವಾದಾಗ, ಆ ವ್ಯಕ್ತಿಯ ನಂಬಿಕೆಯೇ ಅವನಲ್ಲಿ ಜ್ಞಾನವಾಗಿ ಪ್ರಕಟಗೊಳ್ಳುತ್ತದೆ. 

"
ಒಂದು ತತ್ವದಲ್ಲಿ ಶುಧ್ಧ ನಂಬಿಕೆ ಮತ್ತು ಅದರಲ್ಲಿರುವ ಅಂತಃಸತ್ಯವನ್ನು ಅರಿಯಲು ಇರುವ ತೀವ್ರ ತವಕವೇ ವಿಶ್ವಾಸ "ಎನ್ನುತ್ತಾರೆ  ಸ್ವಾಮಿ ವಿವೇಕಾನಂದ. ಸ್ವಾಮಿ ರಾಮಕೃಷ್ಣ ಪರಮಹಂಸರು ಇದಕ್ಕೊಂದು ಅದ್ಭುತ ಉದಾಹರಣೆಯನ್ನು ಕೊಡುತ್ತಾರೆ." ಒಂದು ಕೊಠಡಿಯಲ್ಲಿ ಒಬ್ಬ ಕಳ್ಳನಿದ್ದಾನೆಂದು ಇಟ್ಟುಕೊಳ್ಳೋಣ. "ಪಕ್ಕದ  ಕೊಠಡಿಯಲ್ಲಿ ಒಂದು ಚೀಲದ ತುಂಬಾ ಚಿನ್ನವಿದೆ" ಎಂದು ಅವನಿಗೆ ಹೇಳಿದರೆ, ಅವನ ಮನಃಸ್ಥಿತಿ ಹೇಗಿರಬಹುದೆಂದು ಊಹಿಸಿ ನೋಡೋಣ. ಅವನ ಬುಧ್ಧಿ. ಮಲಗಿದರೆ ನಿದ್ದೆ ಬರುವುದಿಲ್ಲ. ಅಲ್ಲಿರುವ ಚಿನ್ನವನ್ನು ಹೇಗಾದರೂ ಪಡೆಯಬೇಕು ಎಂದು ಯೋಚಿಸುತ್ತಾನೆ. ಪಡೆಯುವ ಮಾರ್ಗಗಳನ್ನೆಲ್ಲ ಕಲ್ಪನೆಯಲ್ಲೇ  ರೂಪಿಸಿಕೊಳ್ಳುತ್ತಾನೇ ಹೊರತು ಬೇರೇನನ್ನೂ ಯೋಚಿಸುವುದಿಲ್ಲ.  
ಇಲ್ಲಿ ಮೂರು ವಿಷಯಗಳನ್ನು ಗಮನಿಸ ಬೇಕು:

1 .
ಅವನು ಮೂಲತಃ ಕಳ್ಳನಾಗಿದ್ದಾನೆ.  
2 .
ಅವನು ತಾನು ಸ್ವತಃ ನೋಡದಿದ್ದರೂಆ ಕೊಠಡಿಯಲ್ಲಿ ಚಿನ್ನವಿದೆ ಎಂದು ಯಾರೋ ಹೇಳಿದ್ದನ್ನು  ನಂಬಿದ್ದಾನೆ.    
3 .
ಅವನು ಕಾತರನಾಗಿ ತಳಮಳಿಸುತ್ತಿದ್ದಾನೆ. ಆ ಚಿನ್ನ ಅವನ ಕೈಗೆ ಸಿಕ್ಕಾಗ ಅವನಿಗೆ ಸಂತೋಷವಾಗುತ್ತದೆ ಮತ್ತು ಅದನ್ನು ಪಡೆಯಲು ಅವನು ಪ್ರಯತ್ನ ಪಡಬೇಕಾಗಿದೆ. 


ಇಲ್ಲಿ " ಕಳ್ಳ " ಎಂಬ ಪದಕ್ಕೆ " ವೈದ್ಯ, ವಕೀಲ, ಇಂಜಿನಿಯರ್, ಅಧಿಕಾರಿ, ವ್ಯಾಪಾರಿ, ಕ್ರೀಡಾಪಟು, ಸಾಮಾನ್ಯ ಉದ್ಯೋಗಿ" ಹೀಗೆ ಯಾವುದಾದರೂ ಪದವನ್ನು ಬದಲಿಸಿಕೊಳ್ಳಿ ಹಾಗೆಯೇ ಅಪೇಕ್ಷೆಯ ವಸ್ತುವಾದ  " ಚಿನ್ನ " ಎಂಬ ಪದಕ್ಕೆ, ಕೀರ್ತಿ, ಯಶಸ್ಸು, ಜಯ, ಲಾಭ ಮುಂತಾದ ಯಾವುದಾದರೂ ಪದವನ್ನು ಬದಲಿಸಿ ಉಪಯೋಗಿಸಿಕೊಳ್ಳಿ. ಫಲಾಪೇಕ್ಷೆಯಿಂದಕೂಡಿದ ಉತ್ಕಟ ಆಸೆ ಇರುತ್ತದೆ ಮತ್ತು ಆ ಆಸೆ ಈಡೇರಿದಾಗ ಆ ವ್ಯಕ್ತಿಗೆ ಸಂತೋಷ ಅಥವಾ ಆನಂದವಾಗುತ್ತದೆ.  ಇಲ್ಲಿ ಸಾದನೆಯ ಉತ್ಕಟಾಪೇಕ್ಷೆಯೇ ಶ್ರಧ್ಧೆಯಾಗಿ ಮಾರ್ಪಾಡಾಗುತ್ತದೆ, ಆದರೆ ಈ ರೀತಿ ಸಿಗುವ ಆನಂದಾನುಭಾವಗಳೆಲ್ಲಾ ಕ್ಷಣಿಕವಾದದ್ದು. ಅವು ನಮ್ಮ ಮನಸ್ಸು ಬುಧ್ಧಿಗಳಿಗೆ ಕಚಗುಳಿ ಇಡುತ್ತದೆ. ಆದರೆ ಮೇಲೆ ಹೇಳಿದಂತೆ " ಕಳ್ಳ " ನಿಗೆ ಬದಲಾಗಿ " ಸಾಧಕ" ಎಂದಿಟ್ಟುಕೊಂಡು " ಚಿನ್ನ" ದ ಬದಲು "ದೇವರು" ಎಂದು ಬದಲಾಯಿಸಿಕೊಂಡರೆ ನಮಗೆ ಪರಮಾತ್ಮ ಸಂಬಂಧವಾದ ಜ್ಞಾನಾರ್ಜನೆಯಾಗಿ ನಿರಂತರ ಆನಂದ ಸಿಗುತ್ತದೆ. 

ವಿಶೇಷಾಧಿಕಾರ :
ನಾವು ಯಾವರೀತಿಯ ಶ್ರಧ್ಧೆಯನ್ನು ಬೆಳೆಸಿಕೊಳ್ಳುತ್ತೀವೋ, ನಮಗಿರುವ  ವಿಶೇಷಾಧಿಕಾರವೂ ಅದೇ ರೀತಿ ಇರುತ್ತದೆ. ಉದಾಹರಣೆಗೆ ನಮಗೆ ಐಹಿಕ ಸುಖ-ಭೋಗಗಳಲ್ಲಿ ಹೆಚ್ಚು ಆಸಕ್ತಿ ಇದೆಯಾದರೆ, ನಾವು ಹಣ, ಅಧಿಕಾರ, ವಿಧ್ಯಾಭ್ಯಾಸ ಮುಂತಾದ ಐಹಿಕ ಸುಖ-ಭೋಗಗಳಿಗೆ ಒತ್ತಾಸೆ ನೀಡುವ ವಸ್ತುಗಳನ್ನು ಪಡೆಯಲು ಹೆಚ್ಚು ಹೆಚ್ಚು  ಅಧಿಕಾರ ಪಡೆಯಲು ಪ್ರಯತ್ನಿಸುತ್ತೇವೆ. ಇಂದ್ರಿಯ ಅಥವಾ ಐಹಿಕ ಸುಖ ಭೋಗಗಳಿಗೆ  ಹೆಚ್ಚು ಮಹತ್ವನೀಡುವ ಸಮಾಜದಲ್ಲಿ ಜಾತಿ ಅಥವಾ ವರ್ಣ ಪ್ರಾಬಲ್ಯ ಮತ್ತು ಕೇವಲ ಕೆಲವರ ಆರ್ಥಿಕಾಭಿವೃಧ್ಧಿಯನ್ನೇ ಹೆಚ್ಚಿಸಲು ಬೇಕಾದ ವಿಶೇಷಾಧಿಕಾರವನ್ನು ಪಡೆಯಲು ಪ್ರಯತ್ನಪಡುತ್ತದೆ. ಹಾಗೆಯೇ, ತಾಂತ್ರಿಕಾಧಿಕ್ಯವಿರುವ ಮತ್ತು ಹಣವಂತ ದೇಶಗಳು, ಬಡ ರಾಷ್ಟ್ರಗಳ ಮೇಲೆ ಪ್ರಭಾವ ಅಥವಾ ಅಧಿಪತ್ಯ ಸ್ಥಾಪಿಸಲು ಪ್ರಯತ್ನಪಡುತ್ತವೆ. 
ಪ್ರತಿ ಮಾನವನ ಜೀವನದಲ್ಲೂ  ಎಂದಾದರೂ ಒಂದು ದಿನ ನಂಬಿಕೆಗಳು ಬದಲಾಗುತ್ತಾ, ಸಂಸ್ಕಾರಗೊಂಡು, " ಮಾನವ ಸೇವೆಯೇ ಮಾಧವ ಸೇವೆ" ಅಥವಾ " ಪಡೆಯುವವನೆ ಕೊಡುವವನಿಗಿಂತ ಉತ್ತಮ "   ಎನ್ನುವ ತತ್ವಗಳು ಮನದಟ್ಟಾಗುತ್ತವೆ. ಹಾಗಾದಾಗ, ಅವನ ಮನಸ್ಸಿನಿಂದ ವಿಶೇಷ ಅಧಿಕಾರದ ಅಥವಾ ಅಧಿಪತ್ಯದ ಭಾವ ಮನಸ್ಸಿನಿಂದ ಅಳಿಸಿ ಹೋಗುತ್ತದೆ.
ಇಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ " ಮರ ಕಡಿಯುವವನ" " ಮುಂದೆ ಹೋಗು" ಎನ್ನುವ ಸಣ್ಣ ಕಥೆ ಉಲ್ಲೇಖನೀಯ.  
ಒಂದು ಬಾರಿ ಒಬ್ಬ ಮರ ಕಡಿಯುವವ ಕಾಡಿಗೆ ಮರಕಡಿಯಲು ಹೋದಾಗ, ಅಲ್ಲಿ ಕಡಿಯಲು ಯೋಗ್ಯವಾದ ಮರಗಳು ಅವನಿಗೆ ಕಾಣಲೇ ಇಲ್ಲ. ಏನು  ಮಾಡುವುದೆಂದು ಯೋಚಿಸುತ್ತಿರುವಾಗ, ಒಬ್ಬ ಸಾಧು ಪುಂಗವನು ಅವನಿಗೆ, " ಮುಂದೆ ಹೋಗು " ಎಂದು ಹೇಳಿದನಂತೆ. ಅಲ್ಲಿಂದ ಮುಂದೆ ಹೋಗಲು ಅಲ್ಲಿ ಅವನಿಗೆ ಕೆಲವು ಶ್ರೀ ಗ೦ಧದ ಮರಗಳು ಕಂಡವಂತೆ.  " ಮುಂದೆ ಹೋಗು " ಎಂದು ಸಾಧು ಹೇಳಿದ್ದನಲ್ಲವೇ, ನಿಲ್ಲಲು ಹೇಳಿಲ್ಲವಲ್ಲ  ಎಂದು ಯೋಚಿಸಿ ಅವನು ಇನ್ನೂ ಸ್ವಲ್ಪ ಮುಂದೆ ಹೋದನಂತೆ. ಅಲ್ಲಿ ಅವನಿಗೆ ಬೆಳ್ಳಿಯ ಗಣಿಗಳು ಗೋಚರಿಸಿದವಂತೆ. ಇನ್ನೂ ಮುಂದೆ ಹೋಗಲು ಅಲ್ಲಿ ಅವನಿಗೆ ಬಂಗಾರದ ಗಣಿಗಳು ಕಂಡವಂತೆ. ಇನ್ನೂ ಮುಂದೆ ಹೋಗಲು ಅವನಿಗೆ ವಜ್ರಗಳ ಮತ್ತು ಅಮೂಲ್ಯ ಹರಳುಗಳ ಗಣಿಗಳು ಕಂಡವಂತೆ. ಅವನು ಅವುಗಳನ್ನು ಪಡೆದು ಬಹಳ ಧನಿಕನಾದನoತೆ.
ಹೀಗೆ ಆ ಸಾಧು ಪುಂಗವನ " ಮುಂದೆ ಹೋಗು" ಎನ್ನುವ ಉಪದೇಶ ಅವನ ಮನಸ್ಸಿನಲ್ಲಿ ನಾಟಿತ್ತು. ಅವನು, ಮುಂದೆ ಸಂಪತ್ತಿನ ಭಂಡಾರವೇ ಇದೆ, ಎಂದು ಸೂಚ್ಯವಾಗುವ ಆ ಸಾಧುವಿನ ಉಪದೇಶದಲ್ಲಿ ಸಂಪೂರ್ಣವಾಗಿ ನಂಬಿಕೆ ಇಟ್ಟಿದ್ದ. " ಆದರೆ ಆ ಸಾಧುವು ತನಗೆ ತಿಳಿದಿದ್ದ ಆ ಸಂಪತ್ತಿನ ಭಂಡಾರವನ್ನು ತಾನೇ ಏಕೆ ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಉದ್ಭವವಾಗಬಹುದು. ಅದಕ್ಕೆ ವೇದಾಂತವು ಹೀಗೆ ಉತ್ತರಿಸುತ್ತದೆ. ಆ ಸಾಧುವು ಇನ್ನೂ "ಮುಂದೆ ಹೋಗಿ"  ಮೇಲೆ ಹೇಳಿದ ಎಲ್ಲ ನಿಧಿ ಸಂಪತ್ತುಗಳಿಗೂ  ಮಿಗಿಲಾದ ಆತ್ಮ ಜ್ಞಾನದ ಸಂಪತ್ತನ್ನು ಪಡೆದುಕೊಂಡಿದ್ದನು. ಹಾಗಾಗಿ ಅವನಿಗೆ  ಚಂದನ, ಬೆಳ್ಳಿ, ಚಿನ್ನದಂತಹ ವಸ್ತುಗಳಿಗೆ ಯಾವ ಬೆಲೆಯೂ ಇರಲಿಲ್ಲ. ಈ ಕಥೆಯನ್ನು ಸ್ವಲ್ಪ ಮುಂದುವರೆಸಿದರೆ, ಆ ಮರಕಡಿಯುವವನೂ ಸಹ ಈ ಸಂಪತ್ತುಗಳ ಅನುಭವವನ್ನು ಪಡೆದು ಇನ್ನೂ ಮುಂದೆ ಹೋದಲ್ಲಿ ಅವನಿಗೂ ಅವುಗಳನ್ನೆಲ್ಲ ತ್ಯಜಿಸಿ ಆತ್ಮಜ್ಞಾನವನ್ನು ಪಡೆಯುವ ಯೋಗ ಲಭಿಸಬಹುದು.



ನಂಬಿಕೆ ಮತ್ತು ಅಧ್ಯಾತ್ಮ :
ನಂಬಿಕೆಯ ನಮ್ಮ ಪರಿಭಾಷೆ ಮತ್ತು ನಾವು ಎಷ್ಟು ಮುಂದೆ ಹೋಗಿದ್ದೇವೆ ಎನ್ನುವುದರನ್ನು ಅವಲಂಬಿಸಿ ನಮಗೆ ಮೇಲಿನ ಕಥೆ ಅರ್ಥವಾಗುತ್ತದೆ. ಕೆಲವರಿಗೆ ಇದು ಪೊಳ್ಳಾಗಿ, ಕೆಲಸಕ್ಕೆ ಬಾರದ ಮಾತಾಗಿ ಕಾಣಬಹುದು. ಕೆಲವರಿಗೆ ಸುಮ್ಮನೆ ಓದುವ ಮತ್ತು ಯೋಚಿಸುವ ವಿಷಯವಾಗಿ ಕಾಣಬಹುದು. ಮತ್ತೂ ಕೆಲವರಿಗೆ ಈ ಕಥೆಯೇ "ಮುಂದೆ ಹೋಗಲು" ಪ್ರೇರಕವಾಗಿ ಸುಲಭ ಲಭ್ಯವಲ್ಲದಂತಹ ಆಧ್ಯಾತ್ಮ ಜ್ಞಾನ ಪಡೆಯಲು ಉಪಕರಣವಾಗಬಹುದು.  
ಆದರೆ ಪ್ರಸಕ್ತ ಮಾನವ ವಿಕಾಸದ ಹಂತದಲ್ಲಿ ಇದು ಇಂದು ಯಾರು ಯಾರು ಏನೇನ್ನನ್ನು ನಂಬಿ, ಶ್ರಧ್ಧೆಯನ್ನು ಬೆಳೆಸಿಕೊಂಡು ಅವರವರು ಅಪೇಕ್ಷೆ ಪಟ್ಟ, ಹಣ, ಹೆಸರು, ಯಶಸ್ಸು, ಅಧಿಕಾರ ಮುಂತಾದವುಗಳನ್ನು ಪಡೆದುಕೊಳ್ಳಲು ಮಾರ್ಗವಾಗಬಹುದು. ಮಾರ್ಮಿಕವಾಗಿ ಪ್ರತಿಯೊಬ್ಬರನ್ನೂ ಗಮನಿಸಿದಾಗ, ಅವರವರು ಮಾಡುವ ಕೆಲಸಗಳಿಂದ ಅವರುಗಳ ನಂಬಿಕೆಯ ಸ್ವರೂಪ ನಮಗೆ ಅರ್ಥವಾಗಬಹುದು. ದೊಡ್ಡ ದೊಡ್ಡ ತತ್ವಗಳನ್ನು ಬರೆವ ನಾನು ಈ ತತ್ವಗಳನ್ನು ಸ್ವತಃ ಪಾಲಿಸದಿದ್ದರೆ, ನನ್ನ ನಂಬಿಕೆ, ಮಾತ್ರ ಬರೆಯುವುದರಲ್ಲಿದಿಯೇ ಹೊರತು, ಅದಕ್ಕಿಂತ " ಮುಂದೆ ಹೋಗಿಲ್ಲ" ಎಂದರ್ಥವಲ್ಲವೇಅಂದರೆ ನಾನಿನ್ನೂ ಚಂದನವನ್ನೋ, ಬೆಳ್ಳಿಯನ್ನೋ ಅಥವಾ ಚಿನ್ನವನ್ನೋ, ನಂಬಿ, ಕೆದಕಿ, ತೆಗೆದು ಅನುಭವಿಸುವ ಮಟ್ಟದಲ್ಲೇ ಇದ್ದೇನೆ ಎಂದರ್ಥವಲ್ಲವೇ
ಈ ಸ್ಥಿತಿಯಲ್ಲಿ ನಮಗೆ ಬೇಧಗಳೆಲ್ಲವೂ ನಿಚ್ಚಳವಾಗಿ ಕಾಣುತ್ತವೆ ಅಥವಾ ನಾವಿನ್ನೂ ಭೇಧಗಳನ್ನೇ ನೋಡುತ್ತಿದ್ದೇವೆ ಎಂದರ್ಥ. ಇಲ್ಲಿಂದ ನಾವು "ಮುಂದೆ ಹೋಗುವ" ಪ್ರವೃತ್ತಿ ಬೆಳೆಸಿಕೊಳ್ಳಲು ನಮಗೆ ಮಾರ್ಗದರ್ಶಕರು, ಒಬ್ಬ ಗುರುವಿನ ರೂಪದಲ್ಲಿ ಬೇಕು. ಅಂತಹ ಗುರುಗಳು ತಾವು ನಂಬಿದ ಮತ್ತು ಶ್ರಧ್ಧೆಯಿಂದ ಆ ನಂಬಿಕೆಯನ್ನು ಬೆಳೆಸಿಕೊಂಡು, ಕಂಡುಕೊಂಡಂತಹ  ಸತ್ಯವನ್ನು ಪ್ರಸಾರಮಾಡಲು ಉಧ್ಯುಕ್ತರಾಗುತ್ತಾರೆ. ಈ ನಿಟ್ಟಿನಲ್ಲಿ ನಾವು ಮುಂದೆ ಹೋದಾಗ, ನಮಗೆ " ಎಲ್ಲ ಪ್ರಾಣಿಗಳಲ್ಲೂ ಒಂದೇ ರೂಪದಲ್ಲಿರುವುದು  ಆ ಪರಮಾತ್ಮ" ಎಂಬ ಅದ್ವೈತ ಸಿಧ್ಧಾಂತದ ತಿರುಳು ಅರ್ಥವಾಗುತ್ತದೆ. ಆಗ ಈ ತತ್ವ ಶಾಸ್ತ್ರವು ಕೇವಲ ವಿಷಯಾಧಾರಿತ ಎಂದು ಅರ್ಥವಾಗುತ್ತದೆ. ನಾನು ಬದಲಾದರೆ, ನನ್ನ ದೃಷ್ಟಿಕೋನ ಬದಲಾದರೆ ಇಡೀ ಪ್ರಪಂಚವೇ ನನಗೆ  ಭಿನ್ನವಾಗಿ ಕಾಣುತ್ತದೆ. ವಿಷಯದ ವ್ಯಾಪ್ತಿ ವಿಶಾಲವಾಗುತ್ತಾ ಹೋಗಿ ಆಧ್ಯಾತ್ಮ-ಪ್ರೇಮ-ಚಿತ್ತಶುಧ್ಧಿ-ಸಜ್ಜನಿಕೆ ಬೆಳೆದು ನಾವು ಈ  ಪ್ರಪಂಚವನ್ನು ನೋಡುವ ದೃಷ್ಟಿಕೋನ ಖಂಡಿತ ಬದಲಾಗುತ್ತದೆ ಮತ್ತು ಆ ನಮಗೆ ಸಮಭಾವ ಬೆಳೆಯುತ್ತದೆ.
ಸಾಮಾನ್ಯರಿಗೆ, ಎಲ್ಲದರಲ್ಲೂ ಸುಖ-ದುಃಖ, ಸರಿ-ತಪ್ಪು, ಒಳ್ಳೆಯದು - ಕೆಟ್ಟದು ಮುಂತಾದ  ಭೇಧಗಳು ಗೋಚರವಾಗುತ್ತಾ ಇರುತ್ತದೆ.  ಇರಲಿ, ಆದರೆ " ಮುಂದೆ ಹೋಗುವ" ಪ್ರವೃತ್ತಿ ಬೆಳೆದರೆ ಸಾಕು.ಬೇರೆಯವರ ಕುಂದುಗಳನ್ನು ಕಂಡುಕೊಳ್ಳದೆ ಮುಂದೆ ಹೋಗಬೇಕು.  ಎಲ್ಲಿಯತನಕ ನಾವು ಅನ್ಯರನ್ನು, ಬಲಹೀನ, ಕೆಟ್ಟವಪಾಪಿ, ಮೂರ್ಖ ಅಥವಾ ಸ್ವಾರ್ಥಿ ಎಂದು ಗುರುತಿಸುತ್ತೇವೆಯೋ ಅಲ್ಲಿಯತನಕ ನಮ್ಮಲ್ಲಿ ಸಹ ಅಂಥಹ ಗುಣಗಳು ಸಂಪೂರ್ಣವಾಗಿ ಇನ್ನೂ ನಶಿಸಿಲ್ಲವೆಂದು ಅರ್ಥವಲ್ಲವೇ?
ವಸ್ತುಗಳು ಹೇಗೆ ಕ್ರಮೇಣ ಬದಲಾಗುತ್ತವೆಯೋ, ಅದೇ ರೀತಿ ನಮ್ಮ ನಂಬಿಕೆಯೂ ಕ್ರಮೇಣ ಬದಲಾಗುತ್ತದೆ. ಯಾವುದಾದರೂ ವಸ್ತು ಅಥವಾ ವಿಷಯದಲ್ಲಿ ನಾವು ಶ್ರಧ್ಧೆಯಿಂದ ನಂಬಿದಾಗ ಆ ವಿಷಯದ ಅಥವಾ ವಸ್ತುವಿನ ಜ್ಞಾನ ನಮಗೆ ಉಂಟಾಗುತ್ತದೆ. ಅಧ್ಯಾತ್ಮದಲ್ಲಿ ನಮಗೆ ಶ್ರಧ್ಧೆಯಿಂದ ಕೂಡಿದ ನಂಬಿಕೆ ಹೆಚ್ಚಾಗುತ್ತಾ ಹೋದಂತೆವಸ್ತು-ವಿಷಯಗಳಲ್ಲಿ ಭೇಧ ನಶಿಸಿ ಸೃಷ್ಟಿಯ ಏಕತ್ವದ ಅನುಭವವಾಗುತ್ತದೆ.  ಸ್ವಪ್ರೇಮ, ಸ್ವಜನ ಪ್ರೇಮ ಎಂಬ ಸಂಕುಚಿತ ಪ್ರೇಮ ವಿಶಾಲವಾಗಿ ನಮ್ಮಲ್ಲಿ ಇಡೀ ಸಮಾಜಕ್ಕೆ, ಪ್ರಪಂಚಕ್ಕೆ ಹಂಚುವಷ್ಟು ಪ್ರೀತಿ ಕರುಣೆ ಉಂಟಾಗುತ್ತದೆ. ಸೀಮಿತ "ಅಹಂ" ಕಾರ ನಮ್ಮ ಮನಸ್ಸಿನ ಮೇಲೆ ತನ್ನ ಹಿಡಿತವನ್ನು ಸಡಿಲಿಸಿ ನಮಗೆ ಒಂದು ಮುಕ್ತ ಭಾವದ ಅನುಭವವಾಗುತ್ತದೆ.
ದೈವದಲ್ಲಿ ಶ್ರಧ್ಧಾಪೂರಿತ ನಂಬಿಕೆಯಿದ್ದಾಗ ನಮಗೆ ದೈವಜ್ಞಾನ ಉಂಟಾಗುವುದು .  ಇದೇ  ಧರ್ಮಶ್ರಧ್ಧೆಯ ಅಡಿಪಾಯ.
ಮೇಲೆ ಉಲ್ಲೇಖ ಮಾಡಿದ ವಿಷಯವನ್ನು ಸಂಕ್ಷಿಪ್ತಗೊಳಿಸಿದರೆ ನಮಗೆ ಅರ್ಥವಾಗುವುದು ಇಷ್ಟು. ಪ್ರತಿ ಮಾನವನಿಗೂ ಮುಂದೆ ಹೋಗಲು ಸಾಧ್ಯ. ಹಾಗೆ ಮುಂದೆ ಹೋಗಲು, ಮೊದಲು ತಾನು ಯಾವ ಸ್ಥಿತಿಯಲ್ಲಿ ಇದ್ದೇನೆ ಎಂದು ಅರ್ಥಮಾಡಿಕೊಳ್ಳಬೇಕು. ನಂತರ ಮುಂದೆಹೋಗಲು, ಅನುಕೂಲವಾದ ಮಾರ್ಗದರ್ಶನ ಪಡೆದು, ನಂಬಿಕೆ ಬೆಳೆಸಿಕೊಂಡು  ಶ್ರಧ್ಧೆಯಿಂದ ಪ್ರಯತ್ನಪಡಬೇಕು. ಹಾಗಾದಲ್ಲಿ ಎಲ್ಲರೂ ತಾವಿರುವ ಸ್ತರದಿಂದ ಉತ್ತಮ ಸ್ಥಿತಿಗೆ ಹೋಗುವುದರಲ್ಲಿ ಸಂದೇಹವೇ ಇಲ್ಲ.

ಸರ್ವೇ ಜನಾಃ ಸುಜನಾಃ ಭವಂತು 
ಸರ್ವೇ  ಸುಜನಾಃ  ಸುಖಿನಃ ಸಂತು 

Saturday 1 September 2012

ಬಂಜೆ



ನಾ ಹೆರ್ಲಿಲ್ಲಾಂತ 
ಗೊಣಗ್ಲಿಲ್ಲ ಅವ್ನೆಂದೂ
ಮೂಗ್ಮುರಿಯೋ ಜನ
ಚಿಂತಿಲ್ಲ ಅವ್ನೀಗೆ

ಅವ್ನಿಗೆ ನಂದೇ ಚಿಂತೆ
"ನೀ ಚೆಂದಾಕಿರು ಚಿನ್ನ"
ದಿವ್ಸಕ್ಕೊಂದು ಹತ್ಕಿತ
ಹೇಳ್ದಿದ್ರೆ ಅರ್ಗಕಿಲ್ಲ ತಿನ್ದನ್ನ

ನನ್ಗಂತೂ ಒಳ್ಗೊಳ್ಗೆ ಬೇಸ್ರ
ವಂಸಕ್ಕೆ ಒಬ್ಬ ಮಗಾ ಬೇಕಂತ
ಮನ್ಸಾಗೆ ಬಂದಾಗೆಲ್ಲ ಕಣ್ಕಪ್ಪಾಗಿ
ದಡದಡಡ್ನೆ ಸುರೀತಿತ್ತು ಕಣ್ಣೀರ್

ಹಂಗೂ ಹಿಂಗೂ
ಹತ್ತು ವರ್ಸ ಕಳದಾಯ್ತು,
ಬಂಜೆ ಅಂತ ಬೇರೆ
ನಂಗೆ ಹೆಸ್ರಾಯ್ತು

ಬಸ್ರು ಕಟ್ದೆ ಇದ್ರೂ
ಹೆಸ್ರು ಮಾತ್ರ ಸಂತಾನಲಕ್ಷ್ಮಿ
ಸಾಕವ್ವಾಂತ ಹೆಸ್ರಿಟ್ಕೊಂಡರೂ
ಪಕದ್ಮನಿಯಾಕಿ ಹೆತ್ತವ್ಳಾರು

ಮುಪ್ಪಾತು, ಮಕ್ಳಿಲ್ಲಾಂತ
ಕೊರ್ಗ್ಹೆಚ್ಚಾತು, ಜೀವ್ನ ಸಾಕಾಯ್ತು
ನಾವಿಬ್ರೂ ಹೆಂಗೋ ಒಂದಂಗೆ
ನಿಟ್ಟುಸ್ರುಬಿಟ್ಕೊಂಡು ದಿವ್ಸ ದೂಡಾಯ್ತು,

ಪಟ್ಣಸೇರಿದ್ ಸಾಕವ್ವನ್ ಆರೂ ಮಕ್ಳು
ಬಂದವ್ರೆ ಅಂತ ಅವ್ರ ಮನೆ ಕುಟ್ಟೆ ಹೋದ್ರೆ
ಕಂಡದ್ದೇನುನಾ! ಯವ್ವ! ಎಲ್ಲ ಸೇರ್ಕೊಂಡು
ಅವ್ವನ್ ನೋಡ್ಕೊಳೋಕ್ ಆಗಾಕಿಲ್ಲ ಅಂತ

ವೃದ್ಧಾಶ್ರಮಕ್ ಸೇರಿಸ್ತೀವಿ ನಮ್ಮವ್ವನ್
ಅಂದಾಗ ಎದೀ ಧಕ್ ಅಂತು, ಅಯ್ಯೋ
ನಾ ಹೆತ್ತಿದ್ರೂ ಇದೆ ಗತೀ ಆಗ್ತಿತ್ತೋ ಏನೋ
ಅಂತ, ಬಾಯ್ಮುಚ್ಗೊಂಡು, ಮನೀಗ್ ಬಂದೆ.

"ಮಕ್ಲಿಲ್ದಿದ್ರೆ ಏನಾತು ಬಾಳೈತಲ್ಲ," ಅಂತ
ನಮ್ಮೆಜಮಾನ ಹೇಳಿದ್ ಮಾತ್ ನೆಪ್ಪಾಯ್ತು
'ಮಕ್ಳಿಲ್ದಿದ್ರೆ ಏನು ದುಃಖವಂತೂ ಇಲ್ವಲ್ಲ' ಅಂತ
ಮನೀಗ್ಬಂದ್ ಕುಂತಾಗ, ಮನ್ಸಿಗ್ ನಿರಾಳಾಯ್ತು

ರವಿ ತಿರುಮಲೈ

ಮರೆತ ಮದುವೆಯ ದಿನ

ಇಂದಾಯ್ತು ವರುಷ ಇಪ್ಪತ್ತೆಂಟು 
ಬಿದ್ದು ನನಗೆ ವೈವಾಹಿಕ ಗಂಟು 
"ಮರೆತೆಯಲ್ಲ ನೀ ಅದನು" ಎಂದು 
ಹೆಂಡತಿ ತೆಗೆದಳು ಸಕತ್ತಾಗಿ ಬೆಂಡು 

ತಪ್ಪಾಯ್ತು ಮಾರಾಯ್ತಿ ಮನ್ನಿಸೆನ್ನೆಂದು 
ಗೋಗರೆದು ಕೈಮುಗಿದು ಬೇಡಿದರು ಇಂದು 
ಗಂಟು ಕಟ್ಟಿದ ಮುಖ ತಿಳಿಯಾಗಲಿಲ್ಲಿನ್ನು 
ಪೂಸಿಹೊಡೆಯುವ ಪರಿ ಅರಿಯದಾದೆನಿನ್ನು 

ಹಿಂದೆಲ್ಲ ಮಕ್ಕಳ ಮಧ್ಯಸ್ಥಿಕೆಯೊಂದಿತ್ತು 
ಸ್ವಲ್ಪ ಸಮಯದ ನಂತರ ಸರಿಹೋಗುತ್ತಿತ್ತು 
ಮಗನೊಬ್ಬ ಗಡಿದಾಟಿ ಹೋಗಿರುವನು ಹಾರಿ 
ಮಗಳಂತೂ ಸೇರಿದಳು ಮೈಸೂರ ರೈಲನೇರಿ

ಉಂಟು ನನಗವಳು ಅವಳಿಗೆ ನಾನು 
ಸರಿಮಾಡಬೇಕು ಸ್ಥಿತಿ, ಏನಾದರೇನು 
ಬಿಗಿತವನು ಸಡಿಲಿಸಲು ಉಪಾಯವೇನು 
ಶರಣೆನ್ನದೆ ಕಾಣೆ ಬೇರೆ ದಾರಿಯೇನು. 

ಸಹೃದಯ ಮಿತ್ರರೇ ಶುಭವೆನಗೆ ಕೋರಿರಿ
ನಮ್ಮಿಬ್ಬರ ಬಾಳ್ವೆ ಹಸನಾಗಲೆಂದು 
ಶೇಷ ಜೀವನವೆಲ್ಲ ನಸು ನಗಲಿ ಎಂದು 
ಕಡೆಯ ತನಕ ನಾವು ಹಾಗೆ ಇರಲೆಂದು. 

ರವಿ ತಿರುಮಲೈ

Monday 27 August 2012

ಸಂಸಾರ



ತಾಯಿ, ನೇರ ಕರುಳಬಳ್ಳಿಯ ನಂಟು.
ತಂದೆ, ಇವನೆಂಬ ನಂಬಿಕೆಯು ಉಂಟು 
ಒದರುವಳು ತಾಯಿ ತನ್ನನಿಸಿಕೆಯನೆಲ್ಲ 
ಒಳಗೊಳಗದುಮಿಡುವ ತಂದೆ ಭಾವಗಳನ್ನೆಲ್ಲ 

ಪ್ರೀತಿ ಹೆಚ್ಚು ಯಾರದ್ದೆಂದು ಹೇಳುವುದು ಹೇಗೆ 
ಸಮನಾಗಿ ತೋರುವುದು, ಜಗದ ಪರಿ ಹೀಗೆ. 
ತಾಯಲ್ಲಿ ಮನಬಿಚ್ಚಿ ಆಡುವರು ಮಾತ
ನೆತ್ತರಿನ ಬಂಧವದು ಸಂಕೋಚವಿಲ್ಲೆನುತ

ತಾಯೆ ಆಶಯ ಜಗದೊಳಗೆ ಒಂದೇ
ಸಕಲವೂ ಸಮನಾಗಿ ಇರಬೇಕು ಎಂದೇ
ತಂದೆ ಪೂರಕ ಪ್ರತ್ಯಕ್ಷ ಪಾತ್ರ ರಹಿತ
ಅರ್ಥವಾಗುವುದವಗೆ ಸಂಸಾರದ ಹಿತ

ಮಿತವಾದ ಹಿತವಾದ ಕಾರ್ಯಪರಿಯವನದು
ಕೆದಕಿ ಬೆದಕದಿದ್ದರೆ ನೆಮ್ಮದಿಯವಳಿಗಿರದು
ಇವನೊಂದು ಪರಿಯಾದರವಳೊಂದು ಪರಿ
ಯಾರು ಹೇಗಾದರೇನು ಬಾಳು ತೂಗಿದರೆ ಸರಿ.








ರವಿ ತಿರುಮಲೈ 

Saturday 14 July 2012

ಮೃತ್ಯು ಭಯ - ನಿವಾರಣೆ.

ನಮಗೆ ಗೊತ್ತಿಲ್ಲದ ವಿಷಯ ಮತ್ತು ಅದರಿಂದಾಗಬಹುದಾದ ಪರಿಣಾಮಗಳಿಂದನಾವು ಭಯ ಪಡುವುದು ಸಹಜ. ಈ ಗುಂಪಿಗೆ ಮೃತ್ಯು ಅಥವಾ ಸಾವಿನಭಯವೂ ಸೇರುತ್ತದೆ. ಈ ಭಯಕ್ಕೆ ಕಾರಣಸಾಯುವಾಗ ಏನಾಗುತ್ತದೆ ಎಂಬುದು ನಮಗೆ ಗೊತ್ತಿಲ್ಲದಿರುವುದು. ಅಂತ್ಯಕಾಲದ ಖಾಯಿಲೆಗಳು ಮತ್ತು ಅವುಗಳ ನೋವುಸಾವಿನಂಚಿನಲ್ಲಿರುವಾಗ ನಮ್ಮ ಆಪ್ತೇಷ್ಟರು ನಮ್ಮನ್ನು ಬಿಟ್ಟುಹೋಗಬಹುದಾದಂತಹ ಭಯ,  ಸಾವಿನ೦ಚಿನಲ್ಲಿರುವ  ಮನುಷ್ಯನ ಮನೆಯಲ್ಲಿ ಸುತ್ತ ಮುತ್ತಲಿನ ಜನದ ಶೋಕ ಭಾವಆ ವ್ಯಕ್ತಿಯನ್ನು ನೋಡುತ್ತಿರುವ ವೈದ್ಯರ ಮತ್ತು ದಾದಿಯರ ಅಸಹಾಯಕತೆಹೀಗೆ ಹತ್ತು ಹಲವಾರು ರೀತಿಯ ಭಯಗಳು ನಮ್ಮನ್ನು ಮುತ್ತಿಕೊಳ್ಳ ಬಹುದುಆದರೆ ಅನಾರೋಗ್ಯ ಪೂರಿತವಾದ ದೇಹದಿಂದವಾಸಿಯಾಗದ ಖಾಯಿಲೆಯಿಂದ ನರಳುತ್ತಿರುವ ದೇಹದಿಂದ ವ್ಯಕ್ತಿಗೆ ಮುಕ್ತಿ ಮಾತ್ರ ಸಾವಿನಿಂದಲೇ ಎಂದರೆ ತಪ್ಪಾಗಲಾರದಲ್ಲವೇ?

ಮರಣ  ನಮಗೆ ಶತ್ರುವಲ್ಲಜೀವನದಲ್ಲಿ ಅದು ಸಹಜನಮ್ಮ ಅಸ್ತಿತ್ವದ ಒಂದು ಮಜಲು ಮತ್ತು ನಮ್ಮಲ್ಲಿರುವ "ಸತ್"  ವಸ್ತುವು  ಒಂದು ಮಜಲಿಂದ ಇನ್ನೊಂದಕ್ಕೆ  ಬದಲಾಗುವ ಪ್ರಕ್ರಿಯೆ. ಪ್ರತಿ ಶಿಶಿರದಲ್ಲೂ ಗಿಡ ಮರಗಳು ತಮ್ಮ ಎಲೆಗಳನ್ನು ಹೇಗೆ ಉದುರಿಸುತ್ತವೆ. ನಮಗೆ ಅದು ಅಸಹಜವೆನ್ನಿಸುವುದಿಲ್ಲ.  ಹಾಗೆಯೇ ಮೃತ್ಯುವೂ ಸಹ  ಪ್ರಕೃತಿಯ ಸಹಜ ಪ್ರಕ್ರಿಯೆ. ಪ್ರತಿ ರೋಗಿಯೂ ಸತ್ತಾಗಅವರನ್ನು ನೋಡಿಕೊಂಡ ವೈದ್ಯರಾಗಲೀದಾದಿಯರಾಗಲೀ ತಾವು ಆ ವ್ಯಕ್ತಿಯನ್ನು ಬದುಕಿಸಲಾಗಲಿಲ್ಲವೇ ಎಂದು ನೊಂದುಕೊಳ್ಳಬಾರದು. ವಾಸ್ತವವಾಗಿಅನಾರೋಗ್ಯದಿಂದ ಒದ್ದಾಡುತ್ತಿರುವ ಆ ದೇಹದಲ್ಲಿ  ಆ ವ್ಯಕ್ತಿಯನ್ನು ಬದುಕಿಸಲು ಸಾಹಸ ಮಾಡಿ ಆ ವ್ಯಕ್ತಿಯನ್ನು ಮತ್ತಷ್ಟು ದಿನ ಶಿಥಿಲವಾದ ಆ ದೇಹದಲ್ಲಿ ಇರಲು ಒತ್ತಾಯಿಸುವುದಕ್ಕಿಂತಶಾಂತಿಯಿಂದ ಆ ದೇಹವನ್ನು ತೊರೆಯಲು ಬಿಡುವುದೇ ತುಂಬಾ ಸೂಕ್ತ ಅಥವಾ ಸಾವಿನೊಂದಿಗೆ ಹೋರಾಡಿ ಅದನ್ನು ಗೆಲ್ಲುವ ಪ್ರಯತ್ನಕ್ಕಿಂತ ಅದರೊಂದಿಗೆ ಶಾಂತಿಯುತ ಸಂಧಾನ ಮಾಡಿಕೊಳ್ಳುವುದೇ ಉತ್ತಮ.

ಸಾವಿನ ಕ್ಷಣಗಳು ಬಹಳ ನೋವಿನಿಂದ ಅಥವಾ ಕ್ಲೀಷೆಯಿಂದ ಕೂಡಿದ್ದಾಗಿರಬಹುದು. ಆದರೆ ಅದು ತಾತ್ಕಾಲಿಕ. ಆ ಸಮಯದಲ್ಲಿ ಸಾವಿನ ನಂತರ ಹೇಗೆ ಉತ್ತಮಗತಿಯನ್ನು ಪಡೆಯಬಹುದು ಎಂಬ ವಿಚಾರದಲ್ಲಿ ಮಗ್ನರಾಗುವುದು ಲೇಸು.   ನಮ್ಮ ಮನೆಬಂಧು ಬಾಂಧವರುಮತ್ತು ನಾವು ಅಂಟಿಕೊಂಡಿರುವ ಎಲ್ಲದನ್ನೂ ಬಿಟ್ಟು ಹೋಗುವುದು  ಕಷ್ಟವೇ. ಆದರೆ ನಾವು ಈಗಿರುವುದಕ್ಕಿಂತ ಉತ್ತಮವಾದ ಸ್ತಿತಿಗೆ ಹೋಗುವುದಾದರೆ ಏಕೆ ಶೋಕಮತ್ತಷ್ಟು ಉತ್ತಮ ಸ್ಥಿತಿಗೆ ಹೋಗುವುದು ಸಂತೋಷದ ವಿಷಯ ತಾನೇಈ ರೀತಿಯ ಸಂತೋಷ ಸಾವಿನ ಸಂಧರ್ಭದ ನೋವನ್ನು ಸ್ವಲ್ಪವಾದರೂ ಕಡಿಮೆ ಮಾಡೀತು. 

ಆದರೆ ಮೃತ್ಯುವಿನ ಭಯಕ್ಕೆ ಮೂಲ ಕಾರಣವೇನೆಂದರೆನಂತರ ಎಲ್ಲಿಗೆ ಹೋಗುತ್ತೇವೆ ಅಥವಾ ಹೇಗೆ ಇರುತ್ತೇವೆ ಎಂಬುದರ ಅರಿವಿಲ್ಲದೆ ಇರುವುದು. ಹಾಗೆ ಮೃತ್ಯುವಿನ ನಂತರ ಏನಾಗುತ್ತೇವೆ ಅಥವಾ ಎಲ್ಲಿಗೆ ಹೋಗುತ್ತೇವೆ ಎಂದು ತಿಳಿಯದ್ದಿದ್ದರೆಸುಮ್ಮನೆ ವಿಧಿಗೋ ಅಥವಾ ನೀವು ನಂಬಿದ ದೇವರಿಗೋ ಶರಣಾಗುವುದೇ ಲೇಸು. ಏಕೆಂದರೆಹಾಗೆ ಮಾಡಿದಾಗ ಅದು ನಮ್ಮನ್ನು ಇನ್ನಷ್ಟು ಅರಿವು ಮೂಡಿಸುವಲ್ಲಿಗೆ ತೆಗೆದುಕೊಂಡು ಹೋಗಿ ಹಾಕುತ್ತದೆ. ಇಡೀ ಸೃಷ್ಟಿಯೇ ಕರುಣೆಯಿಂದ ಕೂಡಿದೆ. ನಾವು ಈ ಪ್ರಪಂಚದಲ್ಲಿರುವುದು ನಮಗೆ ಸಿಕ್ಕ ಶಿಕ್ಷೆಯೇನಲ್ಲ. ಇಹದ ಅನುಭವ ಮತ್ತು ಇಂದ್ರಿಯ ಸುಖದ ಆಸೆಯೇ ನಮ್ಮನ್ನು ಇಲ್ಲಿಗೆ ತಂದು ಹಾಕಿದೆ. ನಾವು ಯಾರು ಮತ್ತು ನಮ್ಮ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲು ಪ್ರತಿ ಜನ್ಮವೂ ಅವಕಾಶಮಾಡಿಕೊಡುತ್ತದೆ. ಮೃತ್ಯು ಎಂದರೆ ಮಾತ್ರ ವಯಸ್ಸಾಗುವುದುಖಾಯಿಲೆಯಿಂದ ನರಳುವುದು ಮತ್ತು ಸಾಯುವುದಷ್ಟೇ ಅಲ್ಲ. ಪ್ರತಿ ಬಾರಿ ಹುಟ್ಟು ಸಾವಿನ ಚಕ್ರದಲ್ಲಿ ಸುಳಿದಾಗಲೆಲ್ಲಾ ಜೀವನ ಎನಾದೊರೊಂದು ಕಲಿಸಿಯೇ ಕಲಿಸುತ್ತದೆ. ಪ್ರತಿ ಜನ್ಮವೂ  ಪಾಠಶಾಲೆಯ ಒಂದು ತರಗತಿ ಇದ್ದಂತೆ. ಕೆಲವು ಪಾಠಗಳನ್ನು ಕಲಿತು ಅಭ್ಯಾಸಮಾಡಿ ಪರೀಕ್ಷೆಗೆ ಕುಳಿತಂತೆ. ಪ್ರಯತ್ನಪೂರ್ವಕವಾಗಿ ಕಲಿಯಬಹುದು ಅಥವಾ ಹಠಮಾಡಿ ಕಲಿಯದೇ ಇರಬಹುದು. ಒಂದು ವಿಷಯವನ್ನು ಕಲಿಯಲು ಮತ್ತೆ ಮತ್ತೆ ಪ್ರಯತ್ನ ಮಾಡ ಬಹುದು. ಅನುತ್ತೀರ್ಣರಾದರೆ ಚಿಂತೆಯಿಲ್ಲ. ಮತ್ತೊಂದು ಬಾರಿ ಕಲಿಯಲು ಅವಕಾಶವುಂಟು. ಹಾಗಾಗಿ ಸಾವಿನ ಭಯವನ್ನು ಬಿಟ್ಟುವಿಧಿಗೋ ಆ ದೇವರಿಗೋ ಶರಣಾಗಿ ನಾವು ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗುವಂತ ಮಜಲನ್ನು ಮುಟ್ಟಲು ಪ್ರಯತ್ನ ಪಡಬೇಕು. 

ದೇವರಲ್ಲಿ ನಂಬಿಕೆ ನಮ್ಮನ್ನು ಕಷ್ಟಗಳಿಂದ ಪಾರು ಮಾಡುತ್ತದೆ. ಆ ನಂಬಿಕೆ ನಿಮಗೆ ನೀವು ಬಯಸಿದ್ದನ್ನು ಪಡೆಯುವ ಸಾಮರ್ಥ್ಯವನ್ನು ನೀಡುತ್ತದೆ. ನೀವು ಬಯಿಸ್ದ್ದಕ್ಕಿಂತ ಅಧಿಕವಾಗೆ ನಿಮಗೆ ಪ್ರಾಪ್ತವಾಗಬಹುದು.  ಅದೇನೆಂದು ಅರಿಯಲು ಮುಕ್ತ ಮನಸ್ಸಿನಿಂದ ಯೋಚಿಸಬೇಕು. ಅಷ್ಟೇ ಅಲ್ಲ ನಾವು ನಮ್ಮ ದೇಹಗಳನ್ನು ಬಿಡುವ ಸಮಯ ಹತ್ತಿರಾದಂತೆಲ್ಲ ಹೆಚ್ಚು ತಿಳುವಳಿಕೆ ಬರಬಹುದು ಮತ್ತ ಅದು ನಮಗೆ ನಮ್ಮ ಸತ್ಯವಾದ ಅಧ್ಯಾತ್ಮಿಕ ಸ್ವರೂಪವನ್ನು ಅವಲೋಕನ ಮಾಡಿಕೊಳ್ಳುವಲ್ಲಿ ಸಹಾಯವಾಗಬಹುದು. ಹಾಗಾಗಿ ಯಾವ ಅಪೇಕ್ಷೆಯನ್ನೂ ಇಟ್ಟುಕೊಳ್ಳದೆಆ ಪರಮಾತ್ಮನಿಗೆ ಸಮರ್ಪಿಸಿಕೊಂಡು ಅವನು ತೋರುವ ದಾರಿಗಾಗಿ ಕಾಯುವುದೇ ಲೇಸು . 

ವಾಸ್ತವಿಕವಾಗಿ ಪ್ರತಿಯೊಬ್ಬನೂ ಬದುಕನ್ನು ಹೇಗೆ ಅರ್ಥಮಾಡಿಕೊಂಡಿದ್ದಾನೆ ಎಂಬುದನ್ನು ಈ ಮರಣದ ಭಯ ಹೊರಹಾಕುತ್ತದೆ. ಇದು ದೈಹಿಕ ಗುರುತಿನ ಆಚೆ ತನ್ನನ್ನು ತಾನು ಅರಿತಿಕೊಳ್ಳಲು ಸಹಾಯಮಾಡುತ್ತದೆ. ನಾವು ಈ ದೇಹಕ್ಕೆ ಎಷ್ಟು ಅಂಟಿಕೊಂಡಿದ್ದೇವೆ ಅಂದರೆನಮಗೆ ಅಂತಹ ಅರಿವೂ ಬೇಡವೆಂದೆನಿಸುತ್ತದೆ. ಹಾಗಾಗಿ ಒಬ್ಬ ಮನುಷ್ಯ ತನ್ನ ದೈಹಿಕ ಅಸ್ತಿತ್ವದ ಹೊರಗೆ ನೋಡಲಾಗದಿದ್ದರೆಈ ದೇಹವನ್ನು ಕಳೆದುಕೊಳ್ಳುವುದು ಅವನನ್ನು ಅತೀವ ಭಯಕ್ಕೆ ತಳ್ಳಬಹುದು. ಆದರೂ ಹುಟ್ಟಿನಿಂದ ಈ ಜಗತ್ತಿಗೆ ಬಂದು ಮರಣದೊಂದಿಗೆ ಈ ಜಗತ್ತನ್ನು ಬಿದಲೆಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಇದ್ದೂ ಸಹ ತಾನು ಕೇವಲ ಈ ದೇಹವೆಂದು ಹೇಗೆ ಅಂದುಕೊಂಡು ಕುಳಿತುಕೊಳ್ಳಲು ಸಾಧ್ಯ. ನಮ್ಮೆಲ್ಲ ಸ್ವತ್ತುಗಳೂಸಂಬಂಧಗಳೂನಮ್ಮ ನೈಪುನ್ಯತೆಗಳೂ ಸಹ ಎಲ್ಲ ಕೇವಲ ತಾತ್ಕಾಲಿಕ. ಹಾಗಿದ್ದಮೇಲೆ ಈ ದೇಹ ಹೇಗೆ ಶಾಶ್ವತವಾಗಲು  ಸಾಧ್ಯಹಳೆಯ ಅಂಗಿಯನ್ನು ತೆಗೆದು ಬಿಸಾಡಬೇಕಾದರೆ ಭಯವಾಗುತ್ತದೆಯೇ ಇಲ್ಲ ಸಂತೋಷವಾಗುತ್ತದೆಏಕೆಂದರೆ ಹೊಸ ಅಂಗಿ ಬರುತ್ತದೆ ಎಂದು ಮತ್ತ ಹಳೆಯ ಅಂಗಿಯನ್ನು ಮತ್ತೆ ತೊಡಬೇಕಾದ ಅವಶ್ಯಕತೆ ಇಲ್ಲ ಎಂದು. ಹಾಗೆಯೇ ಈ ದೇಹವನ್ನು ಮರನಾವಸ್ತೆಯಲ್ಲಿ ಬಿಡಲು ಭಯವೇಕೆ?
   
ಈ ವಿಷಯದಲ್ಲಿ ಎಲ್ಲ ಭಯ ಮತ್ತು ಭಯದಿಂದ ಉಂಟಾದ ಕ್ಲೇಷೆಗೆಮನಸ್ಸೇ ಕಾರಣ. ಮನಸ್ಸು ತನ್ನ ಅಪೇಕ್ಷಗಳ ಸುಳಿಯಲ್ಲಿ ಹೇಗೆ ಸಿಕ್ಕಿಹಾಕಿಕೊಂಡಿದೆ ಎಂದು ತೋರಲು ಭಯವು ಕೊಟ್ಟ ಕೊಡುಗೆಯೇಈ  ಭಯ ಮತ್ತು ಕ್ಲೇಷೆ. ಮನಸ್ಸು ತನ್ನ ನಿಜ ಸ್ವರೂಪವನ್ನೂ ಮತ್ತು ಅದು ವಸ್ತುಗಳನ್ನು ಹೇಗೆ ಭಾವಿಸುತ್ತದೆ ಎಂಬುದನ್ನು ತೋರುತ್ತದೆ. ವಿಷಯ ವಸ್ತುಗಳು ನಾವು ಬಯಸಿದಂತೆ ಆಗದಿದ್ದರೆ ಅಥವಾ ಇರದಿದ್ದರೆಮನಸ್ಸು ಅದನ್ನು ಒಪ್ಪಿಕೊಳ್ಳದೆಕಷ್ಟಪಡುತ್ತದೆ ಮತ್ತು ನಮ್ಮನ್ನು ಕ್ಲೇಷೆಯಲ್ಲಿ ಮುಳುಗಿಸುತ್ತದೆ. ತತ್ಕಾರಣ ನಾವು ಕೋಪಸಂದೇಹ ಗೊಳ್ಳುತ್ತೇವೆ ಅಥವಾ ಕೋಪಕ್ಕೆ ಬಲಿಯಾಗುತ್ತೇವೆ. ಇವುಗಳಿಂದ ಮುಕ್ತರಾಗಬೇಕಾದರೆ ನಾವು ನಮ್ಮ ಬಂಧನಗಳುಅಹಂಕಾರ ಮತ್ತು ಬಯಕೆಗಳ ಎಲ್ಲೆಯನ್ನು ಮೀರಿ ಬೆಳೆಯಬೇಕು. ಹೀಗೆ ಮರಣವನ್ನು ಅಪ್ಪುವಂತಹ ಪ್ರಜ್ಞೆ ನಮ್ಮಲ್ಲಿ ಈ ತಾತ್ಕಾಲಿಕ ಪ್ರಪಂಚದ ಬಂಧನಗಳನ್ನು  ಮೀರಿ ಬೆಳೆಯುವ ಮತ್ತು ಬೇರೆ ಬೇರೆ ದೇಹಗಳಲ್ಲಿ ವಿವಿಧ ಸ್ಥರದ  ಪ್ರಜ್ಞಾವಷೆಯಲ್ಲಿ ಹಾದುಹೋಗುವ ಸಾಮರ್ಥ್ಯವನ್ನು ಬೆಳೆಸುತ್ತದೆ.
ನಾವೆಲ್ಲಾ ನಶ್ವರರು. ಹಾಗಾಗಿ ನಾವು ಮರಣಕ್ಕೆ ಹೆದರಲೇ ಬೇಕಾಗಿಲ್ಲ. ನಮ್ಮ ಸುತ್ತೆಲ್ಲ ಇರುವ ನಶ್ವರತೆ ನಮಗೆ ಕಾಣುತ್ತದೆ ಅಲ್ಲವೇಪ್ರತೀ ಚಳಿಗಾಲದಲ್ಲೂ ಗಿಡ ಮರಗಳು ಬೋಳಾಗುವಹೊದೆ ಹುಲ್ಲುಗಳು ಒಣಗಿಹೊಗುವುದನ್ನು ನಾವು ನೋಡಿದ್ದೇವೆ. ಮತ್ತೆ ವಸಂತ ಋತುವಿನಲ್ಲಿ ಅವೆಲ್ಲ ಮತ್ತೆ ಚಿಗುರಿ ಹೂ ಕಾಯಿ ಹಣ್ಣುಗಳೊಡನೆ   ನಳನಳಿಸುವುದನ್ನು ನಾವು ನೋಡಿಲ್ಲವೇ?.ಒಂದು ಮರ ಸಂಪೂರ್ಣ ಕಡಿಯಲ್ಪಟ್ಟುಮಣ್ಣಲ್ಲಿ ಮಣ್ಣಾದರೂಅದರ ಪಳೆಯುಳಿಕೆಗಳಿಂದ ಮತ್ತೆ ಚಿಗುರೊಡೆದುಸಸಿಯಾಗಿ ಗಿಡವಾಗಿ ಮರವಾಗುವುದನ್ನು ನಾವು ನೋಡಿಲ್ಲವೇ?  ಒಂದು ಕೊಳದ ನೀರು ಸಂಪೂರ್ಣ ಬತ್ತಿದರೂ ಅದರ ತೊರೆಗಳಲ್ಲಿರುವ ನೀರು ಬಿಸಿಲಿಗೆ ಕಾದು ಆವಿಯಾಗಿ ಮೋಡಗಳಾಗಿ ಮತ್ತೆ ಮಳೆಗೆರೆದು ಮತ್ತೆ ಕೊಳ ತುಂಬುವುದಿಲ್ಲವೇ.?  ಆ ಚೇತನವು ಬೇರೆ ಬೇರೆ ರೂಪಗಳನ್ನು ಧರಿಸುತ್ತಾ ಆ ರೂಪಗಳನ್ನು ಬದಲಾಯಿಸುವುದನ್ನು ನಾವು ಪ್ರತಿ ನಿತ್ಯ ನೋಡುವುದಿಲ್ಲವೇ.?

ಶ್ರೀಮದ್ ಭಗವದ್ಗೀತೆಯಲ್ಲಿ ( ೨-೧೨) ಶ್ರೀ ಕೃಷ್ಣ " ನಾನಿಲ್ಲದ ಸಮಯವಿಲ್ಲನೀನಿಲ್ಲದ ಸಮಯವಿಲ್ಲ ಮತ್ತು ನಾವು ಇಲ್ಲಾದ ಸಮಯವೂ ಮುಂದೆಂದೂ ಇರುವುದಿಲ್ಲ." ಎಂದು ಅರ್ಜುನನಿಗೆ ಹೇಳುತ್ತಾನೆ. ಹಾಗೆಯೇ ಮುಂದುವರೆದು " ಆತ್ಮವು ಯಾವುದೇ ಆಯುಧದಿಂದ ಕತ್ತರಿಸಲ್ಪಡುವುದಿಲ್ಲಬೆಂಕಿಯಿಂದ ಸುಡಲ್ಪಡುವುದಿಲ್ಲ  ಗಾಳಿಯಿಂದ ತೇವಗೊಲಿಸಲಾಗುವುದಿಲ್ಲ. ಒಂದು ಆತ್ಮವು ಮುರಿಯಲಾರದ್ದುಕರಗಲಾರದ್ದುಸುದಲೂ ಆಗದ್ದು ಮತ್ತು ಒಣಗಿಸಲೂ ಆಗದ್ದು. ಆತ್ಮ ನಿರಂತರಸರ್ವವ್ಯಾಪಿಬದಲಾಗದ್ದುಮತ್ತು ಶಾಶ್ವತವಾಗಿ ಇರತಕ್ಕದ್ದು. ಆತ್ಮ ಅಗೋಚರಅಮೇಯಮತ್ತು ಬದಲಾಯಿಸಲಾಗದ್ದು. ಇದನ್ನು ತಿಳಿದೂ ನೀನು ಈ ದೇಹಕ್ಕಾಗಿ ಶೋಕಿಸಬಾರದು. " ( ಭ. ಗೀ. ೨.೨೩-೨೫). ಹೀಗೆ ಆತ್ಮವುಈ ಲೌಕಿಕ ಪ್ರಪಂಚದಲ್ಲಿ ತನ್ನ ಅನುಭವಕ್ಕಾಗಿ ತನಗೆ ಬೇಕಾದ ದೇಹಗಳನ್ನು ಧಾರಣೆ ಮಾಡುತ್ತದೆ. ಆದರೆ ಅದನ್ನು ಕೊಲ್ಲಲ್ಲೂ ಸಾಧ್ಯವಿಲ್ಲ ಮತ್ತು ಅದಕ್ಕೆ ಸಾವೇ ಇಲ್ಲ. ಆದರೆ ತನ್ನು ಉಪಯೋಗಕ್ಕಿಲ್ಲದ ದೇಹಗಳನ್ನು ತೊರೆದು ಹೋಗುತ್ತಿರುತ್ತದೆ ಮತ್ತು ಹೊಸ ಹೊಸ ದೇಹಗಳನ್ನು ಧರಿಸುತ್ತಿರುತ್ತದೆ.

ನಾವು ಈ ವಾಸ್ತವಿಕ ಜೀವನದಲ್ಲಿ ಬದುಕುವಾಗ,  ಮರಣವು ನಮಗೆ ಬಿಡುಗಡೆ ನೀಡುತ್ತದೆ ಸಂಚಿತ ಬಂಧನಗಳಿಂದನಾವು ಅಲಂಕರಿಸಿದ  ಪದವಿಗಳಿಂದ ಮತ್ತು ನಮ್ಮ ಆಸೆ ಅಪೇಕ್ಷೆಗಳಿಂದ ಮುಕ್ತಿ ನೀಡುತ್ತದೆ. ಮರಣವು ತತ್ಯ ಎಂಬುದುನಮಗೆ ನಾವಾರೆಂದು ಅರಿಯಲು ತೊಡಕಾಗುವ ಎಲ್ಲ ವಿಷಯಗಳ ಸೂಕ್ತ ಪರಿಚಯವನ್ನು ಮಾಡಿಕೊಡುತ್ತ್ತದೆ. ವಾಸ್ತವಿಕ ಬದುಕಿನ ಅನುಭವಗಳನ್ನು ಪಡೆಯಲೆಂದೇ ಈ ಜಗತ್ತಿನಲ್ಲಿ ಜನ್ಮಪಡೆದ ನಾವುಇದರ ಅನುಭವ ಪಡೆಯುವಾಗ ಇದರಲ್ಲೇ ಸಿಕ್ಕು ಹಾಕಿಕೊಂಡರೆನಾವು ನಮ್ಮ ಅಧ್ಯಾತ್ಮಿಕ ವ್ಯಕ್ತಿತ್ವವನ್ನು ಮರೆತೇ ಹೋಗುವ ಸಂಭವವಿದೆ. ಈ ರೀತಿ ಮರಣ ನಮಗೆ ಈ ಮಾಯೆಯೊಂದಿಗೆ ಸಂಪರ್ಕವನ್ನು ಕಲ್ಪಿಸುತ್ತದೆ ಮತ್ತು ಅದನ್ನು ಬಿಡುವುದು ಹೇಗೆ ಎಂದೂ ಸಹ ಅರಿವಾಗಿಸುತ್ತದೆ.

ದುರದುಷ್ಟವಶಾತ್ಯಾರಾದರೂ ಅವನ ದೇಹಅಂತಸ್ತುಆಸ್ತಿ ಸಂಬಂಧಗಳು ಮುಂತಾದವುಗಳಿಗೆ ಅತಿಯಾಗಿ ಅಂಟಿ ಕೊಂಡಿದ್ದರೆ  ಆಗ ಮರಣವು ಅತೀ ಅಸಹನೀಯವಾಗುತ್ತದೆ ಮತ್ತು ಅದೊಂದು ಶಿಕ್ಷೆಯಂತೆ ತೋರುತ್ತದೆ. ಆದರೂ ನಮಗೆ ಅದು ಒಂದು ಬಹುಮಾನವೋ ಅಥವಾ ಉಡುಗೊರೆಯಂತೆಯೇ ಅಲ್ಲವೇಎಂದು ನಮಗೆ ನಾವು 'ಆತ್ಮಮತ್ತು ಆತ್ಮಕ್ಕೆ ಮರಣವಿಲ್ಲ ಎಂದು ಸಂಪೂರ್ಣವಾಗಿ ಅರಿವಾಗುತ್ತದೋ ಅಂದು ನಮಗೆ ನಮ್ಮ ದೇಹ ನಾಶವಾದರೂ ನಾವು ಶಾಶ್ವತ ಎಂದು ಅರಿವಾಗುತ್ತದೆ ಮತ್ತು ಭಯ ದೂರವಾಗಿ ಶಾಂತ ರೀತಿಯಲ್ಲಿ ಮರಣದೆಡೆಗೆ ನಡೆಯಬಹುದು.ಅಂತಹ ಅರಿವು ಬಂದಾಗ ಮರಣವೆಂಬುದೆ ಇಲ್ಲಇಂದೊಂದು ಉನ್ನತ ಸ್ಥರಕ್ಕೆ ಏರುವ ಮತ್ತೊಂದು ಮಜಲಷ್ಟೇಎಂದು ಅರಿವಾಗುತ್ತದೆ. ಪಾಠಶಾಲೆಯ ಒಂದು ತರಗತಿಯನ್ನು ತೊರೆದು ಉನ್ನತ ತರಗತಿಗೆ ಹೋಗುವ ಹಾಗೆ. ಪರಮಾತ್ಮನಲ್ಲಿ ಹೆಚ್ಚು ನಂಬಿಕೆ ಮತ್ತು ಅವನ ಮೇಲೆ ಹೆಚ್ಚು ಹೆಚ್ಚು ಅಧಾರಪಡುವಿಕೆಗಳಿಂದ ನಾವು ಈ ಪ್ರಯಾಣವನ್ನು ಸುಲಲಿತವಾಗಿ ಮಾಡಬಹುದು.

ಎಲ್ಲವನ್ನೂ ಕಳೆದುಕೊಳ್ಳುವ ಅಥವಾ ತಾನು  ಆರ್ಜಿಸಿದನ್ನೆಲ್ಲ ಇಲ್ಲೇ ಬಿಟ್ಟು ಹೋಗಬೇಕಲ್ಲ ಎಂದು ಕೊರಗುವವನಿಗೆ " ಸಾವು" ಮೂಳೆ ಮುರಿತದ ಹಿಡಿತವಿದ್ದಹಾಗೆ ಮತ್ತು ದೈವಕ್ಕೆ ಬಲವಂತವಾಗಿ ಶರಣಾದ ಹಾಗೆ. ಆದರೆ ಎಲ್ಲವನ್ನೂ ತೊರೆದು   ತ್ಯಕ್ತ ಭಾವವಿದ್ದವನಿಗೆಆಧ್ಯಾತ್ಮಿಕವಾಗಿ ಮುನ್ನಡೆದವಗೆ, " ಸಾವು" ಆ ಪರಮಾತ್ಮ ಬಂದು ಪ್ರೀತಿಯಿಂದ ಕೈಹಿಡಿದು ಮನೆಗೆ ಕರೆದುಕೊಂಡು ಹೋಗುವ ತಾಯಿಯಂತೆ. ಬೀದಿಯಲ್ಲಿ ಆಟವಾಡುವ ಮಗುವನ್ನು ತಾಯಿ ಬಂದು ಕೈ ಹಿಡಿದು ಮನೆಗೆ ಕರೆದುಕೊಂಡು ಹೋಗುವುದಿಲ್ಲವೇ ಹಾಗೆ. ಪರಮಾತ್ಮ ಸಾಮೀಪ್ಯವನ್ನು ಪಡೆಯಲು ಮರಣ ಒಂದು ಸಾಧನವಾಗುತ್ತದೆ. ತಮ್ಮ ಅಸ್ತಿತ್ವದ ಅರ್ಥ ಇಡೀ ಸೃಷ್ಟಿಯ ಅರ್ಥ ಮತ್ತು ಅಧ್ಯಾತ್ಮಿಕವಾದ ಜ್ಞಾನ ಪಡೆದಾಗ " ಸಾವೆನದರೇನೆಂದು ಅರ್ಥವಾಗುತ್ತದೆ. 

ನಮ್ಮ ಜೀವನವು ಅಸ್ತಿತ್ವಕ್ಕೆ ಬಂದಿರುವುದೇ ದೇಹ ಮನಸ್ಸು ಭುದ್ಧಿ  ಮತ್ತು ಆತ್ಮಗಳ ಸಮ್ಮಿಲನದಿಂದ. ಪೂರ್ವಕರ್ಮಾನುರೂಪದಿಂದ ಆತ್ಮವು ಒಂದು ದೇಹವನ್ನು ಆರಿಸಿಕೊಂಡು ಅದರಲ್ಲಿ ಪ್ರವೇಶಮಾಡಿಮನಸ್ಸು ಬುದ್ಧಿಗಳ ಸಂಸರ್ಗದಲ್ಲಿದ್ದು ತನ್ನ ಕರ್ಮ ಪೂರೈಸಿಕೊಳ್ಳುತ್ತದೆ.   ಎಂದು ಆ ದೇಹ ಇನ್ನು ತನಗೆ ವಾಸಕ್ಕೆ ಸೂಕ್ತವಲ್ಲ ಎಂದು ಆತ್ಮಕ್ಕೆ ಅನಿಸುತ್ತದೋ ಅಂದು ದೇಹವನ್ನು ತೊರೆದು ಮತ್ತೊಂದು ದೇಹವನ್ನು ಅರಸುತ್ತಾ ಹೋಗುತ್ತದೆ. ಸರ್ವ ಸ್ವತಂತ್ರವಾದ ಆತ್ಮ ತನ್ನ ಇಚ್ಚೆಗೆ ಅನುಸಾರವಾಗಿ ದೇಹ ಧಾರಣೆ ಮಾಡುತ್ತದೆ. ನಾವು ಎಲ್ಲಿಯತನಕ " ನಾನು " ಎಂದೇ " ಈ ದೇಹ" ಎಂದು ಅಂದುಕೊಳ್ಳುತ್ತೇವೆಯೋ ಅಲ್ಲಿಯ ತನಕ ನಮಗೆ ಈ ಮೃತ್ಯು ಭಯ ತಪ್ಪಿದಲ್ಲ. ಈ ಭಯದಿಂದ ಮುಕ್ತರಾಗಬೇಕಾದರೆನಾವು ದೇಹ ಮನಸ್ಸು ಬುದ್ಧಿ ಮತ್ತು ಆತ್ಮಗಳ ಪರಸ್ಪರ ಸಂಬಂಧದ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು. ಆ ಅರಿವು ಮೂಡಿದಾಗ, " ನಾನು ಆತ್ಮ" ಎಂಬ ಅರಿವು ಮನದಲ್ಲಿ ದೃಢವಾದಾಗಮೃತ್ಯುವಿನ ಭಯ ತಾನೇ ತಾನಾಗಿ ಓಡಿ ಹೋಗುವುದು.  ಪ್ರತಿ ಮಾನವನೂ ಇಂತಹ ಅರಿವನ್ನು ತಂದುಕೊಳ್ಳಲು ಪ್ರಯತ್ನಪಡಬಹುದು.

ಸರ್ವೇ ಜನಾಃ ಸುಜನಾ ಭವಂತು
ಸರ್ವೇ ಸುಜನಾಃ ಸುಖಿನಃ ಸಂತು

ರವಿ ತಿರುಮಲೈ
೧೪.೭.೨೦೧೨

Wednesday 11 July 2012


ಮನಸ್ಸು- ತರಬೇತಿ  
ಮಾನಸಿಕ ತರಬೇತಿ 
ಮಾನವರೆಲ್ಲರೂ ಹೇಗೆ ಒಂದೇ ರೀತಿಯಲ್ಲಿರುವುದಿಲ್ಲವೋ, ಹಾಗೆಯೇ ಅವರುಗಳ ಮನಸ್ಸೂ ಸಹ. ಕೆಲವರ ಮನಸ್ಸು ಉನ್ನತಮಟ್ಟದಲ್ಲಿ ವಿಕಾಸಗೊಂಡಿದ್ದರೆ, ಮತ್ತೆ ಕೆಲವರದು ವಿಕಾಸದ ಹಾದಿಯಲ್ಲಿರಬಹುದು ಅಥವಾ ತೀರ ಕೆಳಮಟ್ಟದ್ದಾಗಿರಬಹುದು. ಆದರೆ ಪ್ರತಿಯೊಬ್ಬರ  ಮನಸ್ಸೂ  ವಿಕಾಸದ ಯಾವುದೇ ಮಟ್ಟದಲ್ಲಿದ್ದರೂ ನಿರಂತರ ತರಬೇತಿಯಿಂದ, ಮೇಲ್ಮಟ್ಟಕ್ಕೆ ತರಬಹುದು. ಮನಸ್ಸಿಗೆ ಮೂರು ರೀತಿಯ ತರಬೇತಿಯನ್ನು ಕೊಡಬಹುದು. ಮೊದಲನೆಯದು, ವೃತ್ತಿಪರ ತರಬೇತಿ ಮತ್ತು ಸಮನ್ವಯದ (Secular ) ತರಬೇತಿ, ಎರಡನೆಯದು ನೈತಿಕ ಮತ್ತು ಕಲೋಪಾಸಕ ತರಬೇತಿ, ಮೂರನೆಯದು ಆಧ್ಯಾತ್ಮಿಕ ಸಾಧನೆ ಮತ್ತು ಅನುಭವದ ತರಬೇತಿ. 

ವಿಧ್ಯಾಭ್ಯಾಸವೆಂದರೆ ನಾವು ಸಾಮಾನ್ಯವಾಗಿ ತಿಳಿದುಕೊಳ್ಳುವುದೇನೆಂದರೆ, ಶಾಲಾ ಕಾಲೇಜುಗಳಲ್ಲಿ ನೀಡುವ, ವಿಜ್ಞಾನ, ಕಲೆ ಮತ್ತು ವೃತ್ತಿಪರ ವಿಧ್ಯಾಭ್ಯಾಸ. ಆ ರೀತಿಯ ವಿಧ್ಯಾಭ್ಯಾಸಕ್ಕೆ ಎಲ್ಲ ದೇಶಗಳೂ ಮತ್ತು  ಸಮಾಜಗಳೂ ಶಾಲೆಗಳನ್ನು ಕಾಲೇಜುಗಳನ್ನು ಕಟ್ಟಿ ಬೆಳೆಸುತ್ತವೆ. ಈ ನಿಟ್ಟಿನಲ್ಲಿ ಎಲ್ಲ ದೇಶಗಳಲ್ಲೂ ಸಾಕಷ್ಟು ಪ್ರಗತಿಯನ್ನು ನಾವು ಕಾಣುತ್ತೇವೆ. ನೀತಿ ನಿಯಮಗಳ ಆಧಾರದಮೇಲೆ ಮತ್ತು ಕಾನೂನಿನ ಒತ್ತಡದಮೇಲೆಯೂ ಇಂದು ಸಮಾಜ ನೈತಿಕ ಮಟ್ಟದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಹಲವು ವಿಧವಾದ ಅಪರಾಧಗಳಿಗೆ ಕಾನೂನಿನಲ್ಲಿ ವಿಧಿಸುವ ದಂಡನೆಯ ಭಯವೂ ಸಹ ಅಪರಾಧಗಳನ್ನು ತಡೆಯುವಲ್ಲಿ ಮತ್ತು ಒಟ್ಟು ಸಮಾಜದಲ್ಲಿ  ನೈತಿಕತೆಯನ್ನು ಒತ್ತಾಯದಿಂದ ರೂಪಿಸುವಲ್ಲಿ ಸಹಾಯ ಮಾಡುತ್ತದೆ. 

ಇವೆಲ್ಲವೂ ಭಾಹ್ಯ ಒತ್ತಡಗಳಿಂದಾಗುವ ಬದಲಾವಣೆಗಳಾದರೆ, ಅಗೋಚರವಾದ ಮನೋ ವ್ಯಾಪಾರದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲಿಕ್ಕೆ, ಶಾಂತವಾಗಿಸಲಿಕ್ಕೆ , ವಿಶ್ವಾಸವಂತವಾಗಿಸಲಿಕ್ಕೆ, ಸತ್ಯ, ಸ್ವನಿಯಂತ್ರಣ, ದೈನ್ಯತೆ, ಮತ್ತು ಕರುಣೆಗಳಂತಹ   ಸದ್ಗುಣಗಳನ್ನು ಬೆಳೆಸಿಕೊಂಡು ಮನಸನ್ನು ಶುಧ್ಧ ಮತ್ತು  ನಿರ್ಮಲವಾಗಿಸಿಕೊಳ್ಳಬಹುದು. ಆದರೆ ಮನಸ್ಸನ್ನು ಹೆಚ್ಚು ಉತ್ತಮವಾಗಿಸಲಿಕ್ಕೆ ಆಧ್ಯಾತ್ಮ ವಿಧ್ಯೆಯಲ್ಲಿ ತರಬೇತಿ ಕೊಡುವುದೇ ಹೆಚ್ಚು ಸೂಕ್ತವೆಂದರೆ ತಪ್ಪಾಗಲಾರದು. 

ಪ್ರತಿಯೊಬ್ಬರೂ ತಮ್ಮ ನಿಜ ಸ್ವರೂಪವನ್ನು ಮತ್ತು ಮಾನವ ಜನ್ಮದ ಉಧ್ಧ್ಯೇಶವನ್ನು ಅರಿತುಕೊಂಡರೆ ಸಾಕು, ಮನಸ್ಸಿನಲ್ಲಿ ಒಳ್ಳೆಯಗುಣಗಳು ಹುಟ್ಟಿಕೊಳ್ಳುತ್ತವೆ ಮತ್ತು ಪ್ರತಿಯೊಬ್ಬರ ವ್ಯಕ್ತಿತ್ವವೂ ಉತ್ತಮವಾಗುತ್ತದೆ.  

ಮನಸ್ಸಿನ  ಸ್ವಭಾವ 
ಮನಸ್ಸು ಒಂದು ಸೂಕ್ಷ್ಮ ವಸ್ತು, ಕ್ಷಣಾರ್ಧದಲ್ಲಿ ಯಾವುದೇ ಆಕಾರವನ್ನು  ತಳೆಯಬಹುದಾದ, ಒಂದು ಶಕ್ತಿಯ ಸ್ವರೂಪ. ತನ್ನ ಶಕ್ತಿಯನ್ನು ತಾನೇ ವೃಧ್ಧಿಸಿ ಕೊಳ್ಳಬಹುದಾದಂತಹ ಗುಣವುಳ್ಳದ್ದು.  ಆದರೆ, ಅದು ಜಡವಸ್ತು. ತನ್ನ ಕಾರ್ಯಕಲಾಪಗಳಿಗೆ ಜಾಗೃತಿಯ ಬೆಳಕನ್ನು ಎರವಲು ಪಡೆಯಲೇಬೇಕು. ಒಂದು ಯೋಚನೆಯನಾಗಲೀ, ಅನುಭವವನ್ನಗಲೀ ಅಥವಾ ಭಾವುಕತೆಯನ್ನಾಗಲೀ, ಮನಸ್ಸೂ ಸಹ ವಸ್ತು ಮತ್ತು ಚೈತನ್ಯದ ಸಮ್ಮಿಶ್ರವನ್ನಾಗಿಯೇ ಪ್ರಸ್ತುತಪಡಿಸಬೇಕು. ಅಧ್ಯಾತ್ಮಿಕತೆಯ ಅಧಾರದಮೇಲೆಯೇ, ಪ್ರಜ್ಞೆಯ ಅಸ್ತಿತ್ವವಿರುತ್ತದೆ ಮತ್ತು ಆತ್ಮವನ್ನು 
ವಿಷಯಾಸಕ್ತತೆಯಿಂದ ಬೇರ್ಪಡಿಸುವುದೇ ಮಾನವ ಜನ್ಮದ ಮೂಲ ಉಧ್ಧ್ಯೇಶ. ಪ್ರಪಂಚದ ಎಲ್ಲ ಮತಗಳ ಮತ್ತು ಧರ್ಮಗಳ ಬೋಧನೆಯೂ ಇದನ್ನೇ ಹೇಳುತ್ತವೆ. 

ಆದರೆ ಆತ್ಮವನ್ನು ಮನಸ್ಸು ಮತ್ತು ಬುಧ್ಧಿಗಳಿಂದ ಬೇರ್ಪಡಿಸಿ  ನೋಡಬೇಕೆಂದಾಗ, ಮನಸ್ಸಿನ ಮೂಲಕವೇ ನೋಡಲು ಸಾಧ್ಯ. ಮೊದಮೊದಲು ಸ್ನೇಹಭಾವದಿಂದ ಇಲ್ಲದಿದ್ದರೂ ಅಹಂಕಾರದಿಂದ  ಅಸಹಕಾರವನ್ನೇ ಮುಂದೊಡ್ಡಿದರೂ ಮನಸ್ಸನ್ನು ಸ್ವಚ್ಚಗೊಳಿಸುವ ಮೂಲಕವೇ, ನಮಗೆ ಆತ್ಮದ ಅರಿವಾಗಲು ಸಾಧ್ಯ. ಎಲ್ಲಾ ವಸ್ತುಗಳಿಗಿರುವಂತೆಯೇ, ಮನಸ್ಸಿಗೂ ಮೂರು ಗುಣಗಳುಂಟು. ಪ್ರಕೃತಿಯ ಸ್ವಾಭಾವದಲ್ಲಿರುವ, ಸತ್ವ, ರಜಸ್ಸು ಮತ್ತು ತಮಸ್ಸೆಂಬ ಮೂರೂ ಗುಣಗಳಿಂದಾಗಿದೆ  ನಮ್ಮ ಮನಸ್ಸು. 

ಮನಸ್ಸಿನ ಸ್ವಭಾವು ಈ ಮೂರು ಗುಣಗಳ ಪ್ರಮಾಣ ಭೇದದ ಮೇಲೆ ಅವಲಂಬಿಸಿರುತ್ತದೆ. ತಮೋಗುಣವು  ಪ್ರಮಾಣದಲ್ಲಿ ಅಧಿಕವಾಗಿದ್ದರೆ, ಮನಸ್ಸು,  ಮೊದ್ದಾಗಿ, ಮೂರ್ಖವಾಗಿ ಮತ್ತು ಸೋಂಬೇರಿತದಿಂದ   ಪ್ರವರ್ತಿಸುತ್ತದೆ ಮತ್ತು ಮೋಹದ ಜಾಲದಲ್ಲಿ ಮತ್ತು ಜಡತ್ವದಲ್ಲಿ ಸಿಕ್ಕಿಕೊಂಡಿರುತ್ತದೆ. ರಜೋಗುಣವು ಅಧಿಕವಾಗಿದ್ದರೆ ಮನಸ್ಸು ಅತೀ ಚುರುಕಾಗಿ, ಅತ್ಯಾಸೆಯಿಂದ  ಕೂಡಿ ರೋಶಾವಿಷ್ಟವಾಗಿರುತ್ತದೆ. ಅಂತಹ ಮನಸ್ಸಿನ ಸ್ವಭಾವ ಮಾನವನನ್ನು ತಪ್ಪು ದಾರಿಗೆ ದೂಡುವ ಸಾಧ್ಯತೆಗಳಿವೆ. ಅಧೋಗತಿಗೆ ಇಳಿಯುವ ಜಾಲದಲ್ಲಿ ಸಿಕ್ಕಿಕೊಂಡು,ಆಮಿಷಗಳಿಗೊಳಗಾಗಿ, ಕೋಪ, ಲಾಲಸೆ, ಈರ್ಷ್ಯೆ ಮತ್ತು ದ್ವೇಷದ ಹಂದರದಲ್ಲಿ ಸಿಕ್ಕಿಕೊಂಡಿರುತ್ತದೆ. ಸತ್ವ ಗುಣವು ಮಾತ್ರ ಬೆಳಕನ್ನು ತೋರುತ್ತಾ, ಮುಕ್ತಿಯ ಹಾದಿಯಲ್ಲಿ ನಮ್ಮನ್ನು ನಡೆಸುತ್ತದೆ.  ಸತ್ವ ಗುಣವು ಸಂತೋಷ, ಆನಂದ, ಕರುಣೆಯಂತಹ ಉದಾತ್ತ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಯಲನುವು ಮಾಡಿ ಕೊಡುತ್ತದೆ. ಹಾಗಾಗಿ ಮನಸ್ಸಿಗೆ ತರಬೇತಿ ಕೊಡುವುದೆಂದರೆ ನಮ್ಮ ಸ್ವಭಾವ ಮತ್ತು ವ್ಯಕ್ತಿತ್ವದಲ್ಲಿ ಸತ್ವ ಗುಣವನ್ನು ಹೆಚ್ಚಿಸಿಕೊಳ್ಳುವುದು ಎಂದು ಅರ್ಥ.  

ಸಾತ್ವಿಕಗುಣದ  ಮನಸ್ಸು, ಮಾನಸಿಕ ಶಾಂತತೆ, ಇಂದ್ರಿಯ ನಿಗ್ರಹ, ನಿರ್ಭಯತೆ, ತಾಳ್ಮೆ, ಸಹಿಷ್ಣುತೆ, ಸಾರ್ವತ್ರಿಕ ಸ್ನೇಹ, ನಂಬಿಕೆ, ಭಕ್ತಿ, ಕ್ರಿಯಾಶೀಲತೆ, ಸಾಹಸ ಮತ್ತು ಪ್ರಯೋಗಶೀಲತೆಯಂತಹ ಸದ್ಗುಣಗಳಿಂದ ತುಂಬಿರುತ್ತದೆ. 

ಸಾಧಕನು ಸರ್ವಕಾಲದಲ್ಲೂ ಮಾನಸಿಕ ಶಾಂತತೆಯಿಂದಿದ್ದರೆ, ಅದು ಸತ್ವಗುಣತ್ವವನ್ನು ಪ್ರತಿಬಿ೦ಬಿಸುತ್ತದೆ. ಹೀಗೆ ತಮ್ಮ ಜೀವನದಲ್ಲಿ ಸತ್ವಗುಣ ಪ್ರಧಾನವಾದ ಮಾನಸಿಕ ಶಾಂತತೆಯನ್ನು ಕಾಪಾಡಿಕೊಂಡ ಮಹನೀಯರ ದೃಷ್ಟಾಂತ, ನಮಗೆ ಹೇರಳವಾಗಿ ಸಿಗುತ್ತದೆ. ಉದಾಹರಣೆಗೆ, ಮಹಾತ್ಮ ಗಾ೦ಧೀಜಿಯವರನ್ನೇ ತೆಗೆದುಕೊಳ್ಳಿ. ಅತೀ ಕ್ಲಿಷ್ಟ ಸಂಧರ್ಭಗಳಲ್ಲೂ ಶಾಂತ ಮನಸ್ಸಿನಿಂದ ದಿಟ್ಟವಾಗಿ ಹೋರಾಡಿ ಅಹಿಂಸಾತ್ಮಕ ಚಳುವಳಿಯಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವಹಾಗೆ ಮಾಡಲಿಲ್ಲವೇ. ಭಕ್ತಿ ಸಂಗೀತ, ಜಿಜ್ಞಾಸೆ, ಸತ್ಯಶೋಧನೆ ಮತ್ತು ಧ್ಯಾನದಂತಹ ಕಾರ್ಯಗಳಿಂದ ಮಾನಸಿಕ ಶಾಂತತೆಯನ್ನು ಸಾಧಿಸಬಹುದು. 

ಆಧ್ಯಾತ್ಮಿಕ ಸಾಧನೆಯ ಅಥವಾ ಜೀವನದಲ್ಲಿ ಏನನ್ನು ಸಾಧಿಸಬೇಕಾದರೂ ಸಾಧನೆಯ ಮಾರ್ಗದಲ್ಲಿ ಬೇಕಾದ ನೈತಿಕ, ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಇಂದ್ರಿಯ ನಿಗ್ರಹ ದಿಂದಲೇ ವೃದ್ಧಿಸಿಕೊಳ್ಳಬಹುದು. ಇಂದ್ರಯಗಳು ಹೇಳಿದಂತೆ ಕೇಳಿದರೆ ಅಥವಾ ಅವುಗಳನ್ನು ಅತಿಯಾಗಿ ಪ್ರೀತಿಸಿದರೆ ಅವುಗಳ ಬೇಡಿಕೆಗಳನ್ನು ನಾವು ಎಂದಿಗೂ ತೀರಿಸುವುದು ಸಾಧ್ಯವಿಲ್ಲ ಮತ್ತು ಅವುಗಳನ್ನು ಎಂದಿಗೂ ತೃಪ್ತಿಪಡಿಸಲು ಸಾಧ್ಯವೇ  ಇಲ್ಲ, ಹುಚ್ಚು ಕುದುರೆಗಳಂತೆ ಅವು ನಮ್ಮನ್ನು ನಮ್ಮ ಧ್ಯೇಯ ಸಾಧನೆಯ ಮಾರ್ಗದಿಂದ ದೂರ ಎಳೆದುಕೊಂಡು ಹೋಗಿ ಬಿಡುತ್ತವೆ.  ಅವುಗಳ ಸೆಳೆತ, ಕೆಲಸಕ್ಕೆ ಬಾರದ್ದಾದರೂ, ಅತಿ ಜೋರು. ಅವು ನಮ್ಮ ಮಾನಸಿಕ ಸ೦ತುಲನೆಯನ್ನು ಕದಡಿ ಜಿಗುಪ್ಸೆ ಮತ್ತು ಸೋಲಿಗೆ ಕಾರಣವಾಗುತ್ತದೆ. ಹಾಗಾಗಿ, ಇಂದ್ರಿಯಗಳನ್ನು ಖಂಡಿತವಾಗಿ, ಪ್ರಜ್ಞಾಪೂರಕವಾಗಿ ಮತ್ತು ಪ್ರಯತ್ನಪೂರಕವಾಗಿ ನಿಗ್ರಹಿಸಲೇಬೇಕು. ಮಾನಸಿಕ ದೃಡತೆಯನ್ನು ಸಾಧಿಸಿದರೆ ಇಂದ್ರಿಯ ನಿಗ್ರಹ ಸುಲಭ.  

ನಾವು, ನಾವೇ ಆಯ್ದುಕೊಂಡ ದಾರಿಯಲ್ಲಿ ಹೋಗಿ ನಮ್ಮ ಗಮ್ಯವನ್ನು ಮುಟ್ಟಲು, ನಮ್ಮ ನಮ್ಮ ಮನಸ್ಸುಗಳಲ್ಲಿ ಖಂಡಿತವಾಗಿಯೂ ನಿರ್ಭಯತ್ವವನ್ನು ರೂಡಿಸಿಕೊಳ್ಳಬೇಕು. ಸೋಲಿನ ಭಯ, ಪರಿಣಾಮಗಳ ಭಯ, 'ಪರರೇನನ್ನುತ್ತಾರೆಂಬ' ಭಯ ಗಳು ನಮ್ಮ ನಿರ್ಧಾರಿತ ಹಾದಿಯಲ್ಲೂ ಹೋಗಲು ಪಾಲಿಸಬೇಕಾದ ಕಟ್ಟುಪಾಡುಗಳನ್ನು ಪಾಲಿಸದೆ ಇರುವುದಕ್ಕೆ, ಮಾತ್ರ ನೆಪವಾಗಬಹುದು. ದೇಹ ಮತ್ತು ಮನಸ್ಸಿನ ಸಂಬಂಧವೇ ಈ ನಿರ್ಭಯತೆಗೆ ಕಾರಣವಾಗಬಹುದು. ಏಕೆಂದರೆ  ಹೆಚ್ಚು ಹೆಚ್ಚು ನಮ್ಮನ್ನು ನಾವು ಆತ್ಮದೊಂದಿಗೆ ಗುರುತಿಸಿಕೊಂಡಾಗ, ಮನವೂ ಹೆಚ್ಚು ಹೆಚ್ಚು ನಿರ್ಭಯವಾಗುತ್ತಾ ಹೋಗುತ್ತದೆ.  

ತಾಳ್ಮೆ ಮತ್ತು ಸಹಿಷ್ಣುತೆ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ. ಎಲ್ಲ ಸಮಯಗಳಲ್ಲೂ, ಕೆಲಸ ಕಾರ್ಯಗಳನ್ನು ಮಾಡುವಾಗ ತಾಳ್ಮೆಯನ್ನು ಕಳೆದು ಕೊಳ್ಳದೆ, ಕೋಪಗೊಳ್ಳದೆ, ಇರುವುದೇ ಲೇಸು. ನಿಯಮಬಧ್ಧತೆ ಮತ್ತು ಅಂತರ೦ಗದಲ್ಲಿ ಪ್ರಾರ್ಥನೆ ಮುಂತಾದವು ತಾಳ್ಮೆಯನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತವೆ. ಸಹಿಷ್ಣುತೆಯನ್ನು ಬೆಳೆಸಿಕೊಂಡರೆ ಪ್ರಕ್ಷುಬ್ಧ ಪರಿಸ್ಥತಿಗಳನ್ನು, ಮಿತ್ಯಾರೋಪ ಮತ್ತು 
ದೋಷಾರೋಪಣೆಯನ್ನು, ಅನರ್ಥ ಮತ್ತು ಅನಾಹುತಗಳಂತಹ ಸಂದರ್ಭಗಳಲ್ಲಿ ಶಾ೦ತವಾಗಿ  ಎದುರಿಸಲು ಮಾನಸಿಕ ಸ್ಥೈರ್ಯ ಇರುತ್ತದೆ. ಮನಸ್ಸಿನಲ್ಲಿ,  ನಮಗೆ ಅಪಕರಿಸಿದವರನ್ನೂ ಕ್ಷಮಿಸುವಂತ ಸಮಭಾವವನ್ನು ಬೆಳೆಸಿಕೊಂಡರೆ, ತಾಳ್ಮೆ ಮತ್ತು ಸಹಿಷ್ಣುತೆ ಖಂಡಿತ ಬೆಳೆಯುತ್ತದೆ.      

ಸ್ನೇಹಭಾವವೆಂದರೆ ಎಲ್ಲ ಜೀವಿಗಳಲ್ಲಿ ಪ್ರೇಮ ಮತ್ತು ಕರುಣೆಯಿಂದಿರುವುದು. ನಾವು ನಮ್ಮ ಹತ್ತಿರದವರನ್ನು ಪ್ರೀತಿಸುತ್ತೇವೆ. ನಮ್ಮ ಹೆಂಡತಿ ಮಕ್ಕಳಿಗಾಗಿ ಯಾವ ರೀತಿಯ ತ್ಯಾಗವನ್ನಾದರೂ ಮಾಡಲು ಸಿದ್ಧರಿರುತ್ತೇವೆ. ನಮ್ಮ ಬಂಧುಗಳಲ್ಲಿ ನಮಗೆ ಪ್ರೀತಿ ಮತ್ತು ಸಹಾಯ ಮಾಡುವ ಪ್ರವೃತ್ತಿ ಇದೆ. ಸ್ನೇಹವೆಂದರೆ ಈ ರೀತಿಯ ಪ್ರೀತಿಯ, ಬಂಧುತ್ವದ, ಕರುಣೆಯ, ತ್ಯಾಗದ, ಸಹಾಯದ ಭಾವಗಳ ಪರಿಧಿಯನ್ನು ಪ್ರಯತ್ನಪೂರ್ವಕವಾಗಿ ಹೆಚ್ಚಿಸಿಕೊಳ್ಳುವುದು. ಭೇಧ ಭಾವವಿಲ್ಲದೆ ಎಲ್ಲರನ್ನೂ ನಮ್ಮ ಪ್ರೇಮದ,  ಪ್ರೀತಿಯ ವೃತ್ತದೊಳಕ್ಕೆ ಸೆಳೆದುಕೊಳ್ಳುವುದು  ಅವಶ್ಯಕ. ಏಕೆಂದರೆ ಆಧ್ಯಾತ್ಮಿಕ ಸ್ನೇಹವು ಲಾಭ - ನಷ್ಟಗಳ ಲೆಕ್ಕಾಚಾರವನ್ನು ಮೀರಿ ಎಲ್ಲರಲ್ಲೂ ಆ ಪರಮಾತ್ಮ ವಾಸವಾಗಿದ್ದಾನೆ ಮತ್ತು ಪರಮಾತ್ಮನಲ್ಲಿ ಎಲ್ಲವೂ ವಾಸವಾಗಿದೆಯೆಂಬ ಏಕೈಕ ತತ್ವವನ್ನು ಅವಲಂಬಿಸಿರುತ್ತದೆ. ವಿಶಾಲ ಮನೋಭಾವದ ತರಬೇತಿ ನಮ್ಮ ಮನಸ್ಸಿಗೆ ಕೊಟ್ಟರೆ, ಆಧ್ಯಾತ್ಮಿಕವಾಗಿ ನಾವು ಬೆಳೆಯಬಹುದು ಅಥವಾ ಆಧ್ಯಾತ್ಮಿಕ ಬೆಳವಣಿಗೆಗೆ ವಿಶಾಲ ಮನೋಭಾವ ಅವಶ್ಯಕ.  

ಮನಸ್ಸಿಗೆ ನಂಬಿಕೆ ಮತ್ತು ಜ್ಞಾನ ಅತೀ ಮುಖ್ಯವಾದದ್ದು. ಆದರೆ ನಂಬಿಕೆ ಇದ್ದದ್ದರಿಂದ ಜ್ಞಾನ ಬೆಳೆಯುವುದೋ ಅಥವಾ ಜ್ಞಾನವಿದೆ ಆದುದರಿಂದ  ನಂಬಿಕೆ ಬೆಳೆಯಿತೋ ಎನ್ನುವುದು ಒಂದು ಪ್ರಶ್ನೆ. ಆದರೆ ಸಾಧುವೆಂದು ತೋರಿದ ಮತ್ತು ಸಾರ್ವತ್ರಿಕವಾಗಿ ಒಪ್ಪಿಕೊಂಡ, ಮಹಾತ್ಮರ ಜೀವನ ಮತ್ತು ಭೋಧನೆ ಮತ್ತು ಅದರಲ್ಲಿಡಗಿರುವ ಜ್ಞಾನವನ್ನು ನಂಬಿದರೆ ಸಾಕು. ಅದಕ್ಕೆ ಉದಾಹರಣೆಯಾಗಿ ಶ್ರೀ ರಾಮಕೃಷ್ಣ ಪರಮಹಂಸರಿಲ್ಲವೇ? ಅವರ ಜೀವನ ಮತ್ತು ಭೋಧನೆಗಳಲ್ಲಿ ನಂಬಿಕೆಯನ್ನಿಟ್ಟುಕೊಂಡು ನಮ್ಮ ಜೀವನವನ್ನೂ ಸುಧಾರಿಸಿಕೊಳ್ಳಬಹುದಲ್ಲವೇ? ಈ ರೀತಿಯ ನಂಬಿಕೆಯನ್ನೇ ನಿಷ್ಠೆಯನ್ನುತ್ತಾರೆ. 

ನಂಬಿಕೆ ಆರಾಧನೆಗೆ, ಆರಾಧನೆ ಭಕ್ತಿಗೆ ಮಾರ್ಗವಾಗುತ್ತದೆ. ಆತ್ಮಜ್ಞಾನವಿರುವ ಯಾರನ್ನಾದರೂ ನಂಬುವುದರಲ್ಲಿ ತಪ್ಪೇನೂ ಇಲ್ಲ. ಸಂತನನ್ನು ಮತ್ತು ದೇವ ದೂತನನ್ನು ಅಧ್ಯಾತ್ಮಿಕ ವಿಜ್ಞಾನಿಯೆಂದೇ ಅರಿಯಬೇಕು. ನಾವು ಆರಿಸಿಕೊಂಡ ತತ್ವದಲ್ಲಿ ನಿಷ್ಟೆಯಿಂದಿದ್ದಾಗ ನಮಗೆ ಅದರಲ್ಲಿ ಪ್ರೀತಿ ಉಂಟಾಗುತ್ತದೆ. 

ಕೊನೆಯದಾಗಿ ನಾವು ಸಮನ್ವಯಿಗಳಾಗಬೇಕು. ಅಂದರೆ ಜಾತಿ ಮತ ಪಂಥಗಳ ಭೇದವಿಲ್ಲದೆ ಇದ್ದರೆ ಅಧ್ಯ್ಯಾತ್ಮಿಕ ಪ್ರಯಾಣದಲ್ಲಿ ಜಯ. ನಾವೇನನ್ನು ಓದುತ್ತೇವೆಯೋ, ಕೇಳುತ್ತೇವೆಯೋ, ಎಲ್ಲವೂ ನ್ಯೂನತೆಯಿಂದ ಕೂಡಿದ ಜ್ಞಾನಾರ್ಜನೆಯ ಸಾಧನಗಳು. ಹಾಗಾಗಿ ಎಚ್ಚೆತ್ತ ಸಾಧಕನು ತಾನು ಕೇಳಿದ ಮತ್ತು  ಓದಿದ ಎಲ್ಲವನ್ನೂ ಅಂತರ೦ಗದಲ್ಲಿ ಸತ್ಯದ ಓರಗೆ ಹಚ್ಚಿ ತನ್ನದೇ ರೀತಿಯಲ್ಲಿ ಸದ್ವಸ್ತುವನ್ನು ಅರಿಯಲು ಪ್ರಯತ್ನ ಪಡಬೇಕು. 

ಹೀಗೆ ಸತ್ವಗುಣದ ಅಂಗಗಳಾದ,  ಮಾನಸಿಕ ಶಾಂತತೆ, ಇಂದ್ರಿಯ ನಿಗ್ರಹ, ನಿರ್ಭಯತೆ, ತಾಳ್ಮೆ, ಸಹಿಷ್ಣುತೆ, ಸಾರ್ವತ್ರಿಕ ಸ್ನೇಹ, ನಂಬಿಕೆ, ಭಕ್ತಿ, ಕ್ರಿಯಾಶೀಲತೆ, ಸಾಹಸ ಮತ್ತು ಪ್ರಯೋಗಶೀಲತೆಗಳನ್ನು ಬೆಳೆಸಿಕೊಂಡರೆ ನಾವು ಶುಧ್ಧ ಮನಸ್ಕರಾಗಿ ಆಧ್ಯಾತ್ಮಿಕ ಚಿಂತನೆ ಮತ್ತು ಪ್ರಯೋಗಗಳನ್ನು ಮಾಡುತ್ತಾ ಔನ್ನತ್ಯವನ್ನು ಪಡೆಯುವುದರಲ್ಲಿ ಸಂದೇಹವೇ ಇಲ್ಲ. 

ಸರ್ವೇ ಜನಾಃ ಸುಜನಾಃ ಭವಂತು 
ಸರ್ವೇ  ಸುಜನಾಃ  ಸುಖಿನಃ ಸಂತು 


ರವಿ ತಿರುಮಲೈ 
2 .6. 2011
9632246255

Friday 25 May 2012


ಮೂಲವ ಸೇರುವ  ಪರದಾಟ 



ಹರಿದಾಡುವಂಥಾ ಮನವನಿತ್ತು 
ಧ್ಯಾನಿಸೆಂದರೆ ಹೇಗೋ ದೇವಾ 

ಬಗೆ ಬಗೆಯ ಚಿತ್ರ ವಿಚಿತ್ರವನಿಟ್ಟು    
ಆಸೆಯ  ಬಿಡೆಂದರೆ ಹೇಗೋ ದೇವಾ 

ಕಾಯವ ಕೊಟ್ಟು ಆಸೆಯನಿಟ್ಟು    
ಮೋಹವ ಬಿಡೆಂದರೆ ಹೇಗೋ ದೇವಾ 

ಎಲ್ಲವಕೊಟ್ಟು,  ಕಣ್ಣನೂ  ಕೊಟ್ಟು 
ನೋಡಬೇವೆಂದರೆ ಹೇಗೋ ದೇವಾ 

"ನಾನು" ತನವನಿತ್ತು ನೀ ದೂರ ಕುಳಿತು 
ನಿನ್ನನು ಸೇರೆಂದರೆ ಹೇಗೋ ದೇವಾ 

ಅರಿವನು ಇತ್ತು ಮೂರ್ಖತೆಯನೂ ಕೊಟ್ಟು 
ಮುಕ್ತನಾಗೆಂದರೆ ಹೇಗೋ ದೇವಾ 

ದಾರಿಯಕೊಟ್ಟು  ಮಾರ್ಗವ ತೋರಿ 
ಮುಕ್ತನಾಗಿಸಲು ಬೇಗ ಬಾರೋ ದೇವಾ 

Saturday 21 April 2012

   ಆ ಭಾವ 

( ಇಂದು ಅಭಾವ) 


ಅಂದೆಂದೋ ಕಂಡಿದ್ದೆ 

ನೀ ಎನ್ನ ಮೊದಲಬಾರಿಗೆ 

ಇಂದು ಕೂಡ ಆ ಭಾವ 

ಜೀವಂತ ನನ್ನ ಮನದೊಳಗೆ 


ಇಂದೂ ಸಹ ಮೂಡುವುದು 

ಕಿರುನಗೆ ನನ್ನದರಗಳಲ್ಲಿ 

ದೂರದಿಂದ  ನೀ ನಕ್ಕಾಗ 

ಅಂದು ಕೆಲಕ್ಷಣ ಎನ್ನ ಕಂಡು 


ನಿನ್ನ ಮೊದಲ ಸ್ಪರ್ಶ 

ನನ್ನಲ್ಲಿ ನೆನೆಪಾದಾಗ 

ಇಂದೂ ಸಹ ಬಡಿಯುವುದು 

ವೇಗದಿ ಎನ್ನ ಹೃದಯ 


ನೀನಿಂದು ಸನಿಹದಲಿ 

ಇಲ್ಲದಿದ್ದರೆ ಏನಾಯ್ತು 

ಇನ್ನೂ ಸಹ ಜೀವಂತ 

ನಿನ್ನ ಭಾವವೆನ್ನ ಹೃದಯದಲಿ.   


 ರವಿ ತಿರುಮಲೈ 

Thursday 19 April 2012

ನಲ್ಲೆ















ಪ್ರೇಮ   ಸಮಾನತೆ  

ನಲ್ಲೆ ನಿನಗೆ ಚಂದಿರನೊಲು 
ವದನವನು ಇತ್ತವನು
ಮನದಲೆನ್ನೊಳು ಪ್ರಣಯ 
ಭಾವವನು ಬಿತ್ತಿಹನು                 "ನಲ್ಲೆ ನಿನಗೆ  ಚಂದಿರನೊಲು  " 

ನಲ್ಲೆ   ಕೋಗಿಲೆಯೊಲು 
ಕಂಠ ನಿನಗಿತ್ತವನು   
ಕೇಳಿ ಆನಂದಿಸುವ 
ಮನಸೆನಗೆ ಇತ್ತಿಹನು                     "ನಲ್ಲೆ ನಿನಗೆ  ಚಂದಿರನೊಲು  " 

ನಲ್ಲೆ ನಿನಗೆ  ಲಾವಣ್ಯ 
ರೂಪವನು  ಕೊಟ್ಟವನು 
ಅದನಾರಾಧಿಸುವ 
ಹೃದಯವೆನಗಿತ್ತಿಹನು                       "ನಲ್ಲೆ ನಿನಗೆ  ಚಂದಿರನೊಲು  "    

ಎನಗು ನಿನಗೂ ನಡುವಿನಲಿ 
ಅಂತರವನಿಟ್ಟವನು
ಅಂತರಂಗದಲಿ ನಿನ್ನ 
ನೆನವ ಮನವಿನಿತ್ತಿಹನು                       "ನಲ್ಲೆ ನಿನಗೆ  ಚಂದಿರನೊಲು  " 

ನಲ್ಲೆ ದೂರದೂರಿನಲಿ 
ನಿನ್ನನಿಂದು ಬಿಟ್ಟವನು 
ಮಿಲನೋತ್ಸವಕೆ  ಕಾಯ್ವ 
ತಾಳ್ಮೆಯನು ಕೊಟ್ಟಿಹನು                    "ನಲ್ಲೆ ನಿನಗೆ  ಚಂದಿರನೊಲು  " 

ರವಿ ತಿರುಮಲೈ