Friday 5 April 2019

ಸಂತೋಷ ಮತ್ತು ನೋವು

ಸಂತೋಷವೆನ್ನುವುದು ಒಂದು  ಮಾನಸಿಕ ಸ್ಥಿತಿ. ಅದೊಂದು ಉನ್ಮಾದದ ಸ್ಥಿತಿ. ನಮಗೆ, ಬದುಕಿನ ಮೇಲಿನ ಪ್ರೀತಿ ಸಂತೋಷವನ್ನು ಮತ್ತು ನೋವನ್ನು ತರುತ್ತದೆ. ಸಂತೋಷವಾದಾಗ ಮನಸ್ಸು ಗರಿಗೆದರುತ್ತದೆ ಮತ್ತು ನೋವಿನಲ್ಲಿ  ಮುದುಡುತ್ತದೆ.  ಆದರೆ ನೋವು ಮತ್ತು ಸಂತಸ ಎರಡೂ ಮನಸ್ಸಿಗೆ ಸಂಬಂಧಿಸಿದ ಸ್ಥಿತಿ.  ವಾಸ್ತವವಾಗಿ ನೋವು ಮತ್ತು ನಲಿವುಗಳು ಇರುವುದಿಲ್ಲ. ಅಕಸ್ಮಾತ್ ಒಬ್ಬ ವ್ಯಕ್ತಿ ನೋವು ಅಥವಾ ನಲಿವನ್ನು ಅನುಭವಿಸಿದರೆ ಅದು ತಾತ್ಕಾಲಿಕ ಅನುಭವವಾಗುತ್ತದೆ ಹೊರತು, ಮನಸ್ಸಿನ ಶಾಶ್ವತ ಸ್ಥಿತಿಯಲ್ಲ. ಇಂದು ಸಂತಸಕ್ಕೆ ಕಾರಣವಾದ ವಸ್ತು, ವ್ಯಕ್ತಿ ಅಥವಾ ವಿಷಯ, ನಾಳೆ ನಮ್ಮ ನೋವಿಗೆ ಕಾರಣವಾಗಬಹುದು.  ಒಬ್ಬ ವ್ಯಕ್ತಿಯ ಸಂತೋಷಕ್ಕೆ ಕಾರಣವಾದ ವಸ್ತು, ವ್ಯಕ್ತಿ ಅಥವಾ ವಿಷಯ ಮತ್ತೊಬ್ಬ ವ್ಯಕ್ತಿಯ ನೋವಿಗೆ ಕಾರಣವಾಗಬಹುದು. ಹಾಲಿನ ಮೊದಲೆರಡು ಲೋಟಗಳು ಸಮಾನವಾದ ಸಂತೋಷವನ್ನು ನೀಡಿದರೂ ಮೂರನೆಯದು  ಇಷ್ಟವಾಗದೇ, ನಾಲ್ಕನೆಯದು ವಾಕರಿಕೆ ತರಿಸಬಹುದು. ಹಾಗಾಗಿ ಜಗತ್ತಿನ ಯಾವುದೇ ವಸ್ತು, ವಿಷಯ ಅಥವಾ ವ್ಯಕ್ತಿ ಸತ್ಯವಾದ, ನಿರಂತರವಾದ ಸಂತಸವನ್ನಾಗಲೀ ಅಥವಾ ನೋವನ್ನಾಗಲೀ ನೀಡಲಾರದು.  

ನೋವು ಮತ್ತು ನಲಿವುಗಳಿಗೆ ತಮ್ಮದೇ ಆದ ಅಸ್ಥಿತ್ವವಿಲ್ಲ. ಅವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.  ಅವು ಪರಸ್ಪರ ವಿರೋಧ ಭಾವಗಳು. ಅವು ಕೇವಲ ವ್ಯಕ್ತಿನಿಷ್ಠ ಭಾವಗಳ ಮತ್ತು ದೃಢ ನಿಶ್ಚಯದಿಂದ ನಮ್ಮ ಅಂತರಂಗದ ಭಾವವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು.  ಇಂದು ಅಸಹನೀಯವಾದದ್ದು ಮುಂದೆಂದಾರೂ ಒಂದು ದಿನ ಬಹಳ ಪ್ರಿಯವಾಗಬಹುದು. ಕಾಲಾನುಕಾಲಕ್ಕೆ ನಮ್ಮ ಅಭಿರುಚಿಗಳು ಆಸಕ್ತಿಗಳು ಬದಲಾಗುತ್ತಾ ಹೋದಂತೆ ನಮ್ಮ ಅಭಿರುಚಿಗಳೂ ಸಹ ಬದಲಾಗುತ್ತಾ ಹೋಗುತ್ತವೆ. ಹೊರಗಿನ ವಿಚಾರಗಳು ನಮ್ಮೊಳಕ್ಕೆ ನುಗ್ಗಿ ನಮ್ಮಲ್ಲಿ ತರುವ ಬದಲಾವಣೆಗಳೇ ನಮ್ಮ ಮನೋಭಾವದ ಬದಲಾವಣೆಗೆ ಕಾರಣ. 

ಭಾವನೆಗಳ ಬದಲಾವಣೆ 

ನಮ್ಮ ಭಾವನೆಗಳನ್ನು ನಮ್ಮನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವುದು ಹೇಗೆ? ನಮ್ಮ ಈ ನೋವು ಮತ್ತು ನಲಿವುಗಳಲ್ಲಿ ಏರುಪೇರಾಗುತ್ತಿರುತ್ತದೆ. ಸದಾಕಾಲ ನೋವಾಗಲೀ ನಲಿವಾಗಲಿ ಒಂದೇ ಸಮ ಇರುವುದಿಲ್ಲ.  ಮನಸ್ಸೂ ಸಹ ಸದಾ ನೋವಿನಲ್ಲಾಗಲೀ ಅಥವಾ ನಲಿವಿನಲ್ಲಾಗಲೀ ಇರಲು ಸಾಧ್ಯವಿಲ್ಲ. ಒಂದೇ ಸಮನೆ ನೋವಿನ ಸ್ಥಿತಿಯಲ್ಲಿ ಮನುಷ್ಯನಿಗೆ ಕೆಲವು ದಿನಗಳು ಬದುಕುವುದೂ ಸಾಧ್ಯವಿಲ್ಲ.  ಇದು ಮನುಷ್ಯನಿಗೆ ಪರಮಾತ್ಮನಿತ್ತಂತ ಬಹು ದೊಡ್ಡ 'ವರ'. ಜಗತ್ತಿನ ಭಿನ್ನಭಿನ್ನ  ವಸ್ತುಗಳು ಮಾನವರ ಮನ ಪರಿವರ್ತನೆಗೆ ಸಹಾಯಮಾಡುತ್ತವೆ.  

ನಮ್ಮ ಎಲ್ಲ ರೀತಿಯ ಸಂತೋಷಗಳ ನಡುವೆ ಭಯ, ಮುಂದಾಲೋಚನೆ, ಗಮನ ಮತ್ತು ಚಿಂತೆಗಳು ನಮ್ಮ ಸಂತೋಷವನ್ನು ಮಂಕಾಗಿಸಿ ನೋವನ್ನು ನೀಡುತ್ತವೆ. ಹತ್ತು ನಿಮಿಷ ಸಂತಸದ ಅಲೆಯಲ್ಲಿ ಕಳೆದರೆ ಮುಂದಿನ ಹತ್ತು ನಿಮಿಷ ನೋವಿನ ಬಲೆಯಲ್ಲಿ ನರಳಬೇಕಾಗುತ್ತದೆ. ಈ ರೀತಿಯ ಲಯ ಬದುಕಿನುದ್ದಕ್ಕೂ ನಾವು ನೋಡಬಹುದು. ಅಂತರ್ಮಂಥನದಿಂದ ಅಥವಾ ಆತ್ಮಾವಲೋಕನದಿಂದ ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನೋಡಬೇಕು. ಆಗ ನಮಗೆ ಬದುಕು,  ನೋವು ಮತ್ತು ನಲಿವುಗಳ ಮಿಶ್ರಭಾವನೆಗಳಿಂದ ಕೂಡಿದ ಹಂದರ ಎಂದು ಅರ್ಥವಾಗುತ್ತದೆ. ಈ ಭಾವನೆಗಳನ್ನು ಸಂಸ್ಕಾರಗೊಳಿಸುವ ಕಾರ್ಯ ಆಧ್ಯಾತ್ಮಿಕ ಸಾಧನೆಯಲ್ಲಿ ಮಾತ್ರ ಸಾಧ್ಯ. ತನ್ನ ಭಾವನೆಗಳ ಮೇಲೆ ಹತೋಟಿಯಿಲ್ಲದ ವ್ಯಕ್ತಿ ಬಿರುಗಾಳಿಯಲ್ಲಿ ತೂರಿಬಿಟ್ಟ ತರಗೆಲೆಯಂತೆ ಆಗುತ್ತಾನೆ. ಆಧ್ಯಾತ್ಮಿಕ ಸಾಧನೆಯಿಂದ ಆತ್ಮ ನಿಯಂತ್ರಣ ಮತ್ತು ಆತ್ಮಾವಲೋಕನಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಚಿಕ್ಕ ಚಿಕ್ಕ ಏಳಿಗೆಗಳು ನಮ್ಮ ತಲೆಗೆ ಏರಿ ಅಹಂಕಾರಪಡುವಂತಾಗಬಾರದು ಮತ್ತು ಹಾಗೆಯೇ ಸಣ್ಣ ಸಣ್ಣ ಸೋಲುಗಳೂ ಸಹ ನಮ್ಮನ್ನು ಖಿನ್ನರನ್ನಾಗಿಸಿ ಭಗ್ನ ಹೃದಯಿಗಳನ್ನಾಗಿಸಬಾರದು.

ಬಹಳಷ್ಟು ಮಾನಸಿಕ ಖಿನ್ನತೆ ಅಜ್ಞಾನದಿಂದಲೇ ಉಂಟಾಗುತ್ತದೆ.  ಇದಕ್ಕೆ ಕಾರಣ ನಮ್ಮನ್ನು ನಾವು ನಮ್ಮ ದೇಹ ಮತ್ತು ಮನಸ್ಸಿನೊಂದಿಗೆ ಮತ್ತು ಅದಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ಮಾತ್ರ ಗುರುತಿಸಿಕೊಳ್ಳುವುದು. ಈ ರೀತಿಯ ತಪ್ಪು ಗ್ರಹಿಕೆ ನಮ್ಮಲ್ಲಿ ಮಾಯವಾದರೆ ಮಾತ್ರ ನಾವು ಮಾನಸಿಕ ನೋವು ಮತ್ತು ಖಿನ್ನತೆಯಿಂದ ಮುಕ್ತರಾಗಿ ನಮ್ಮನ್ನು ನಾವು ನಾಮ ಮತ್ತು ರೂಪರಹಿತ ಅನಂತ ಸತ್ಯದೊಡನೆ ಗುರುತಿಸಿಕೊಳ್ಳಲು ಸಾಧ್ಯ.  ಗಾಢ ನಿದ್ರೆಯೆಲ್ಲಿರುವಾಗ ನಮಗೆ ನೋವಿನ ಅನುಭವವಾಗುವುದಿಲ್ಲ. ಏಕೆಂದರೆ ನಿದ್ರೆಯಲ್ಲಿ ದೇಹಾನುಭವವಿರುವುದಿಲ್ಲ. ಬೇರೆ ಯಾರದೋ ಮನೆಯಲ್ಲಿ ಸಾವು ಸಂಭವಿಸಿದರೆ ನಮಗೆ ನೋವಾಗುವುದಿಲ್ಲ. ಆದರೆ ನಮ್ಮ ರಕ್ತ ಸಂಬಂಧಿಗಳಲ್ಲಿ ಯಾರಾದರೂ ಮರಣಹೊಂದಿದರೆ ನಮಗೆ ಖಂಡಿತ ನೋವಾಗುತ್ತದೆ. ಇದೇ ದೇಹಕ್ಕೂ ನೋವಿಗೂ ಇರುವ ಸಂಬಂಧ. 

ಋಣಾತ್ಮಕ ಸಂವೇದನೆಗಳನ್ನು ನಮ್ಮ ತಲೆಗೆ ತಂದುಕೊಳ್ಳುವುದರಿಂದ ನಮಗೆ ನೋವುಂಟಾಗುತ್ತದೆ.  ಬೆಳಕಿನ ಅಭಾವವೇ ಕತ್ತಲು. ಆದರೆ ವಾಸ್ತವದಲ್ಲಿ ಕತ್ತಲಿರುವುದಿಲ್ಲ. ಏಕೆಂದರೆ ಕತ್ತಲು ಎನ್ನುವುದರ ಋಣಾತ್ಮಕ ಅಸ್ಥಿಸ್ತ್ವವಿರುತ್ತದೆ.  ಅದೇ ರೀತಿಯೇ ಮಾಯೆಯ ಅಸ್ತಿತ್ವವೂ ಸಹ.  ಬೆಳಕನ್ನು ತಂದಾಗ, ಕತ್ತಲು ಮಾಯವಾಗುತ್ತದೆ. ಹಾಗೆಯೇ ಸಂತಸ ಅಥವಾ ಆನಂದದ ಅಭಾವವೇ ನೋವು. ನೋವಿರುವುದೇ ಸಂತಸದ ಗರ್ಭದಲ್ಲಿ. ವಸ್ತು, ವ್ಯಕ್ತಿ ಅಥವಾ ವಿಷಯಗಳ ಸಂಸರ್ಗದಲ್ಲಿ ನಮಗೆ ಸಿಗುವ ಆನಂದವೇ  ನೋವಿನ ಜನ್ಮಸ್ಥಾನ. ಅವಕ್ಕೆ ಒಂದು ಆದಿ ಮತ್ತು ಅಂತ್ಯವುಂಟು. ಜ್ಞಾನಿಗಳು ಅಥವಾ ಅರಿವುಳ್ಳವರು ಜಗತ್ತಿನ ವಸ್ತು, ವಿಷಯ ಅಥವಾ ವ್ಯಕ್ತಿಗಳ ಸಂಸರ್ಗದಿಂದ ಉಂಟಾಗುವ ಆನಂದದಿಂದ ' ಸಂತಸ ' ಪಡುವುದಿಲ್ಲ ಅಥವಾ ಅವುಗಳು ಲುಪ್ತವಾದಾಗ ದುಃಖಪಡುವುದೂ ಇಲ್ಲ. ಅವರಲ್ಲಿ ಬೇರೂರಿರುವ ಆಧ್ಯಾತ್ಮದ ಅರಿವಿನಿಂದಾಗಿ ಅವರುಗಳು ಜಗತ್ತಿನ ವಸ್ತು, ವಿಷಯ ಮತ್ತು ವಸ್ತುಗಳು ನೀಡುವ ನೋವು ಮತ್ತು ನಲಿವುಗಳಿಂದ ಮುಕ್ತರಾಗಿ, ಸತ್ಯವಾದ ಮತ್ತು ನಿತ್ಯವಾದ ಆನಂದದಲ್ಲಿ ತೇಲುತ್ತಿರುತ್ತಾರೆ.   

ವೈರುಧ್ಯವಿರುವ ಜೋಡಿಗಳು. 

ಒಂದರ ನಂತರ ಮತ್ತೊಂದು ಬರುವ ಮತ್ತು ಒಂದಕ್ಕೊಂದು ವಿರುದ್ಧವಾಗಿರುವ ಎರಡು ಸ್ಥಿತಿಗಳನಡುವೆ ನಾವು ಸಂಪೂರ್ಣ ಆನಂದವನ್ನು ಪಡೆಯಲು ಅಥವಾ ಅನುಭವಿಸಲು ಸಾಧ್ಯವೇ ಇಲ್ಲ.  ಬದುಕಿನ ಹಿಂದೆಯೇ ಮರಣವೂ ಬರುತ್ತದೆ. ಹಗಲಿನ ಹಿಂದೆಯೇ ಇರುಳು ಬರುತ್ತದೆ. ಬೆಳಕಿನ ಹಿಂದೆಯೇ ಕತ್ತಲು ಬರುವುದು. ನೋವೂ ಸಹ ನಲಿವಿನ ಹಿಂದೆಯೇ ಇರುತ್ತದೆ. ನಮಗೆ ದೈವ ಸಾಕ್ಷಾತ್ಕಾರವಾಗಬೇಕಾದರೆ ವಸ್ತು, ವಿಷಯ ಮತ್ತು ವ್ಯಕ್ತಿಗಳಿಂದ ಸಿಗುವ ಸಂತೋಷ ಮತ್ತು ಆನಂದದ ಬಯಕೆಯನ್ನು ತೊರೆದು,  ಆ ಹಂತದಿಂದ ಮೇಲೇರಬೇಕು. ದೈಹಿಕಾನಂದವನ್ನು ಸಂಪೂರ್ಣವಾಗಿ ತೊರೆಯಬೇಕು. ಒಂದೇ ಸಮಯದಲ್ಲಿ,  ದೈವ ಮತ್ತು ದೇಹ, ಇವೆರಡರಿಂದ ಸಿಗುವ ಆನಂದ ಅಥವಾ ಸಂತೋಷವನ್ನು ಪಡೆಯಲಾಗುವುದಿಲ್ಲ. ಕೇವಲ ಬಲಹೀನರು ಮತ್ತು ಕಪಟವೇಷಕರು ಮಾತ್ರ ದಿನದ ಸ್ವಲ್ಪ ಸಮಯ ಸಾಧನೆ ಮಾಡಿ ನಿಜವಾದ ಸಂತೋಷ ಅಥವಾ ಆನಂದವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ದೈವಾನುಭವ ಅಷ್ಟು ಸುಲಭ ಸಾಧ್ಯವಲ್ಲ. 


ಶಾಂತ ಮನೋಭಾವದಿಂದ ಸಂತೋಷ ದೊರೆಯುತ್ತದೆ. ಮಾನಸಿಕ ಶಾಂತಿ,  ಪ್ರಾಪಂಚಿಕ ಆಸೆಗಳನ್ನು ತೊರೆದ ಮತ್ತು ಸಂತೋಷದ ವಸ್ತುಗಳಿಂದ ಸಿಗುತ್ತದೆ ಎನ್ನುವ ಮನೋಭಾವವನ್ನು ತೊರೆದಾಗ ಮಾತ್ರ ಸಾಧ್ಯ. ನಾವು ಸಾಂತಿಯ ಪರಿಧಿಯನ್ನು ಪ್ರವೇಶಿಸುವ ಮುನ್ನವೇ ಸಂವೇದಾತ್ಮಕ ಆನಂದದ ಅಥವಾ ಸಂತೋಷದ  ವಿಚಾರಗಳು ನಮ್ಮಲ್ಲಿ ಮಾಯವಾಗುತ್ತವೆ. ಆನಂದ ಸತ್ವದಲ್ಲಡಗಿದೆ ಮತ್ತು ಸತ್ವಕ್ಕೂ ಮಿಗಿಲಾಗಿದೆ. ಆತ್ಮದ ಗುಣವೇ ಆನಂದ ಅದು ಧ್ಯಾನದಲ್ಲಿ ನಿಂತಿದೆ. "ಆನಂದೋ ಬ್ರಹ್ಮತೀವ್ಯಜಾನಾತ್" ಎನ್ನುತ್ತದೆ ತೈತ್ತರೀಯ ಉಪನಿಷತ್ತು. ಹಾಗಾಗಿ ಆನಂದದ ನೆಲೆ ನಾವು ನಮ್ಮ ಮನಸ್ಸನ್ನು ಬ್ರಹ್ಮನಲ್ಲಿ ಲೀನವಾಗಿಸಿದರೆ ದೊರೆಯುತ್ತದೆ. 

ಮಾನಸಿಕ ತುಮುಲ ಮತ್ತು ನೋವಿಂದ ಮುಕ್ತರಾಗಬೇಕಾದರೆ ಇರುವುದೊಂದೇ ಮಾರ್ಗ. ನೋವಿಗೆ ಕಾರಣವಾದ ವಿಷಯಗಳಿಂದ ಮನಸ್ಸನ್ನು ವಿಮುಖವನ್ನಾಗಿಸಿ ಅಥವಾ ವಸ್ತು, ವಿಷಯ ಮತ್ತು ವ್ಯಕ್ತಿಗಳ ಭಾವದಿಂದ ಹಿಂಸೆಳೆದು, ಅನಂತ, ಗುಣಾತೀತ, ನಾಮ ಮತ್ತು ರೂಪಾತೀತ, ವಾಂಛೆಯಿಲ್ಲದ, ಮೃತ್ಯುವಿಲ್ಲದ, ನಿತ್ಯಾನಂದದ ಆಗರವಾದ, ಅನುಪಮ ಮತ್ತು ಅದ್ವಿತೀಯವಾದ ' ಆತ್ಮ ' ನಲ್ಲಿ ನಿರಂತವಾಗಿ ನಿಲ್ಲಿಸಿಕೊಂಡಾಗ,  ದೇಹಾನುಭಾವದಿಂದ ಮುಕ್ತರಾಗಿ ಮಾನಸಿಕ ದೃಢತೆಯನ್ನು ಬೆಳೆಸಿಕೊಳ್ಳುವುದು.  - ತತ್ವಮಸಿ 

ನಮಸ್ಕಾರ 

ರವಿ ತಿರುಮಲೈ




Saturday 1 December 2018

ಶರಣಾಗತಿ



ಜನನ ಮರಣಗಳ ಭಯದಿಂದ  ಮುಕ್ತರಾಗಬೇಕಾದರೆ ಇರುವುದು ಒಂದೇ ಮಾರ್ಗ, ಪರಮಾತ್ಮನಲ್ಲಿ ಸಂಪೂರ್ಣ ಶರಣಾಗತಿ. ಅನ್ಯ ದಾರಿಯೇ ಇಲ್ಲ. ಬದುಕಿನ ಭವಣೆಯ ಅನುಭವದಿಂದ ಮುಕ್ತರಾಗಬೇಕಾದರೆ ಪರತತ್ವಕ್ಕೆ ಶರಣಾಗಬೇಕು.  ಅದನ್ನು ಆಧ್ಯಾತ್ಮದ ಹಾದಿಯಲ್ಲಿ ತಪಸ್ಸಿನ ಮತ್ತು ವೈರಾಗ್ಯದ ಸಾಧನೆಯಿಂದ ಮಾತ್ರ ಸಾಧಿಸಬಹುದಾಗಿದೆ.  

ಮಾತ್ರವಲ್ಲ ದೇವರನ್ನು ಪಡೆಯಲು ಅಡ್ಡದಾರಿಗಳಿಲ್ಲ. ದಾರಿಯಲ್ಲಿ ಸಂಪೂರ್ಣ ಪ್ರಯಾಣವಾಗಲೇಬೇಕು. ನಡುವಿನ ಅಂತರವನ್ನು ಸವೆಸಲೇಬೇಕು. ಆದರೆ ಅದು ಬಹಳ ಕಷ್ಟತರವಾದದ್ದು. ಬಹಳ ಸಮಯಬೇಕಾಗುತ್ತದೆ. ಅದೆಷ್ಟು ಕಷ್ಟತರವಾದದ್ದು ಎಂದರೆ ಹಾದಿಯಲ್ಲಿನ ಸಂಕಟ ಮತ್ತು ನೋವುಗಳು, ನಾವು ನಂಪೂರ್ಣವಾಗಿ ಅರಿಯಲಾಗದ ಆ 'ಪರಮಾತ್ಮ' ನನ್ನು ಅರಿಯಲು ಪ್ರಯತ್ನಪಟ್ಟು ವಿಫಲರಾದಾಗ 'ನಮಗಿದೆಲ್ಲಾ ಬೇಕೇ' ಎನ್ನುವ ಭಾವ ಮೂಡಿಸುತ್ತದೆ.  ಅವುಗಳನ್ನು, ಸಾಧಕನಿಗೆ ಪರಮಾತ್ಮ ಒಡ್ಡುವ ಒಂದು ಪರೀಕ್ಷೆಯೆಂದೇ ಅರಿಯಬೇಕು.  ಸಾಧಕ ಎದುರಿಸಬೇಕಾದ ಪರೀಕ್ಷೆಯಲ್ಲಿನ ಪ್ರಶ್ನೆಗಳಿಗೆ ಅವನೇ ಉತ್ತರಿಸಬೇಕು. ಅವನ ಹೊರೆಯನ್ನು ಅವನೇ ಹೊರಬೇಕು, ಮತ್ಯಾರ ಸಹಾಯವನ್ನೂ ಬಯಸುವ ಹಾಗಿಲ್ಲ ಅಥವಾ ಪಡೆಯುವ ಹಾಗೂ ಇಲ್ಲ. ಈ ವಿಷಯದಲ್ಲಿ ದೈವವೂ ಸಹ ನಮಗೊದಗುವುದಿಲ್ಲ. ಈ ಮಾತನ್ನು ಸನ್ಮಾನ್ಯ ಡಿ. ವಿ. ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ :

ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ
ಸನ್ನಾಹ ಸಾಗೀತೆದೈವವೊಪ್ಪೀತೆ ।।
ಮನ್ನಿಸಲಿ ವಿಧಿ ನಿನ್ನ ಬೇಡಿಕೆಯಭಿನ್ನಿಸಲಿ
ನಿನ್ನ ಬಲವನ್ನು ಮೆರೆಸೋ - ಮಂಕುತಿಮ್ಮ ।।

ನಮ್ಮ ಬಲವೃದ್ಧಿಯಾದರೆ ಆಗ ನಮ್ಮ ಬಲದಿಂದಲೇ ನಮ್ಮ ಕೊರತೆ ಅಥವಾ ಅಪರಿಪೂರ್ಣತೆಗಳನ್ನು ನೀಗಿಕೊಂಡು ಶುದ್ಧರಾಗಿ, ಪರಿಪೂರ್ಣನಾದ ಪರಮಾತ್ಮನನ್ನು ಅರಿಯಬಹುದು, ಅರಿತರೆ ಪಡೆಯಬಹುದು. ಪ್ರತಿಯೊಬ್ಬರ ಹೊರೆಯ ರೂಪವೂ ಭಿನ್ನ ಭಿನ್ನ. ಒಬ್ಬರ ನೋವು ಮತ್ತು ಸಂಕಟ ಮತ್ತೊಬ್ಬರದಂತಿಲ್ಲ.  ನಮ್ಮ ನೋವು ಮತ್ತು ಸಂಕಟವನ್ನು ನಾವೇ ಅನುಭವಿಸಬೇಕು,  ಅನ್ಯರ ಹೆಗಲಿಗೆ ಅದನ್ನು ಹೊರಿಸುವಂತಿಲ್ಲ . ಸಾಧಕ ಪರೀಕ್ಷೆಗೆ ಒಳಪಡುವುದು ಇಲ್ಲೇ. "ಓಹೋ!!! ನನ್ನಲ್ಲಿ ಎಲ್ಲಾ ಸುಗುಣಗಳಿವೆ, ನನ್ನಲ್ಲಿ ಆಧ್ಯಾತ್ಮದ ಬೆಳಕಿದೆ, ಕೇವಲ ಒಂದೇ ಒಂದು ಕೊರತೆಯನ್ನು ಹೊರತು, ಎಂದು ನಮ್ಮನ್ನು ನಾವು ಸಮಾಧಾನಪಟ್ಟುಕೊಳ್ಳುವಂತಿಲ್ಲ. ಏಕೆಂದರೆ ಒಂದೇ ಒಂದು ಸಣ್ಣ ಕೊರತೆ ಅಥವಾ ನ್ಯೂನತೆಯಿದ್ದರೂ ಸಾಕು, ಸಕಲ ಗುಣ ಸಂಪನ್ನವಾದ, ಕೊರತೆಗಳೇ ಇಲ್ಲದ,  ಪರಿಪೂರ್ಣತೆಯಿಂದ ಕೂಡಿದ ಪರಮಾತ್ಮ ಅಥವಾ ಪರತತ್ವ ನಮ್ಮಿಂದ ದೂರವೇ ಉಳಿಯುತ್ತದೆ.  ಹಾಗಾಗಿ ಯಾವುದೇ ರೀತಿಯ ಕೊರತೆ ಅಥವಾ ನ್ಯೂನತೆಗಳಿಲ್ಲದ ಸ್ಥಿತಿಗೆ ತಲುಪುವುದೇ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಮಾರ್ಗ.    

ನಮ್ಮಲ್ಲಿ ಒಂದೇ ಒಂದು ಐಬು ಅಥವಾ ನ್ಯೂನತೆಯಿದ್ದರೂ ಪರಮಾತ್ಮ ಸಾಕ್ಷಾತ್ಕಾರದಿಂದ ಮತ್ತು ಆತ್ಮ ಸಾಕ್ಷಾತ್ಕಾರದಿಂದ  ನಾವು,  ದೂರವೆಂದರಿಯಬೇಕು.  ಪರಮಾತ್ಮ ನಮ್ಮನ್ನು ಪರೀಕ್ಷೆಗೊಡ್ಡುತ್ತಾನೆ. ಬಾರಿ ಬಾರಿ ಪರೀಕ್ಷೆಗೊಡ್ಡುತ್ತಾನೆ. ನಮಗಿರುವ ಯಾವುದೋ ಒಂದು ಕೊರತೆಯಲ್ಲೇ ನಮ್ಮನ್ನು ಪರೀಕ್ಷೆಗೊಡ್ಡುತ್ತಾನೆ. ಒಂದು ವೇಳೆ ನಮಗೆ 'ಅಸಹಿಷ್ಣುತೆ' ಯ ಕೊರತೆ ಇದ್ದರೆ, ಮತ್ತೆ ಮತ್ತೆ ತಾಳ್ಮೆಗೆಡುವ ಸಂದರ್ಭಗಳು ಒದಗಿಸಿ ನಮ್ಮನ್ನು ಮತ್ತೆ ಮತ್ತೆ ಪರೀಕ್ಷಿಸುತ್ತಾನೆ. ಒಂದು ವೇಳೆ ನಮಗೆ ಸ್ತ್ರೀ ಬಲಹೀನತೆಯಿದೆ ಎಂದಿಟ್ಟುಕೊಳ್ಳಿ, ಹತ್ತಾರು ಸುಂದರ ಸ್ತ್ರೀಯರು ನಮ್ಮ ಸುತ್ತ ಮುತ್ತ ಸುಳಿಯುವಂತೆ ಮಾಡಿ,  ನಮ್ಮ ಬಲಹೀನತೆಯ ಪರೀಕ್ಷೆ ನಡೆಸುತ್ತಾನೆ.    

ಈ ಮಾಯೆಯಂಬುದು ಹೇಗೆ ಕೆಲಸಮಾಡುತ್ತದೆ ಎಂದು ನೋಡುವ. ಅಕಸ್ಮಾತ್ ನಮಗೆ ಸಣ್ಣ ಸಣ್ಣ ಪ್ರಲೋಭನೆಗಳಿಗೆ ಈಡಾಗುವಂತಹ ಮನೋಭಾವವಿದ್ದರೆ, ಒಂದು ಸಣ್ಣ ವಸ್ತುವೂ ಸಾಕು ನಮ್ಮನ್ನು ಪತನವಾಗಿಸಲು. ಆಗ ಮಾಯೆ ತನ್ನ ಕೆಲಸ ಸುಲಭವಾಗುವುದರಿಂದ ನಮಗೆ ಸಣ್ಣ ಸಣ್ಣ ಆಸೆಗಳನ್ನು ತೋರಿಸುತ್ತಿರುತ್ತದೆ.  ಆದರೆ ನಾವು ನೈತಿಕ ಮತ್ತು ಮಾನಸಿಕವಾಗಿ ಪ್ರಭಲರಾಗಿದ್ದರೆ ಆಗ ಮಾಯೆ, ವಿಶ್ವಾಮಿತ್ರನ ತಪೋಭಂಗಮಾಡಲು ದೇವಲೋಕದ ಅಪ್ಸರೆ ಮೇನಕೆಯನ್ನು ಕಳುಹಿಸಿದಂತೆ,  ಬಹಳ ದೊಡ್ಡದಾದ ಪ್ರಲೋಭನೆಗಳನ್ನೇ ನಮ್ಮ ಮುಂದಿಟ್ಟು ನಮ್ಮನ್ನು ನಮ್ಮ ನೈತಿಕ ನೆಲಗಟ್ಟಿನಿಂದ ಅಲುಗಾಡಿಸಲು ಪ್ರಯತ್ನಿಸುತ್ತದೆ.  ನಾವು ಸಣ್ಣ ಅಥವಾ ದೊಡ್ಡ, ಹೀಗೆ ಯಾವುದೇ ರೀತಿಯ 
ಪ್ರಲೋಭನೆಗಳಿಗೆ ಬಾಗದೆ ನಮ್ಮ ನೈತಿಕತೆಯನ್ನು ಭಧ್ರವಾಗಿ ಕಾಪಾಡಿಕೊಂಡರೆ ಮಾತ್ರ ನಮ್ಮ ಆಧ್ಯಾತ್ಮ ಸಾಧನೆ ಕಲುಷಿತವಾಗದೆ  ಇರುತ್ತದೆ.  

ಈ ರೀತಿ ಆಧ್ಯಾತ್ಮ ಸಾಧಕನನ್ನು ಮಾಯೆ ಪದೇ ಪದೇ ತೀವ್ರವಾಗಿ ಪರೀಕ್ಷೆಗಳಿಗೆ ಒಡ್ಡುತ್ತದೆ, ಕಾಡುತ್ತದೆ ಮತ್ತು ಸಾಧಕನನ್ನು ದಣಿಸುತ್ತದೆ. ಪ್ರತಿಯೊಬ್ಬ ಸಾಧಕನೂ ಈ ರೀತಿಯ ಪರೀಕ್ಷೆಗಳ ಹಂತವನ್ನು ದಾಟಲೇಬೇಕು. ಇದು ಸಾಧಕ ಪಾವನವಾಗುವ ಮಾರ್ಗ. ಕುಲುಮೆಯಲ್ಲಿ ಕಾಯಿಸಿದ ಕಬ್ಬಿಣದಂತೆ. ಹಂತದಲ್ಲಿ ಸಾಧಕನಿಗೆ, 'ಜಗತ್ತಿನ ವಿಷಯಗಳು ನೀಡುವ ಹಿಂಸೆ ಬಾಣಲಿಯಲ್ಲಿ ಬೇಯುತ್ತಿದ್ದಂತೆ ಇದ್ದರೆ, ಆಧ್ಯಾತ್ಮ ಸಾಧನೆಯ ಪರೀಕ್ಷೆಗಳು ಬಾಣಲಿಯಿಂದ ಬೆಂಕಿಯೊಳಕ್ಕೆ ಹಾಕಿದಂತಿದೆಎಂದು ಎನಿಸದೇ ಇರದುಅವನು  ' ಸಾಧನೆಗೆ ಬೇರೆ ದಾರಿಯೇ ಇಲ್ಲವೇ? ' ಎಂದು ಬೆರಗುಗೊಳ್ಳುತ್ತಾನೆ. ಸಾಧಕನ ಮನಸ್ಸು ಬಲಹೀನವಾದರೆ ' ಹೇ! ದೇವರೇ ನನಗೇಕೆ ರೀತಿಯ ಹಿಂಸೆ ನೀಡುತ್ತಿದ್ದೀಯೆ?' ಎಂದು ತನ್ನ ಅಸಹಾಯಕತೆಯಿಂದ   ದೇವರನ್ನೇ ಬಯ್ಯುವ ಅಧಿಕಪ್ರಸಂಗವನ್ನೂ ಮಾಡಬಹುದು. ಅಂತಹ ಸ್ಥಿತಿಯಲ್ಲಿ ಸಾಧಕನಿಗೆ ತನ್ನ ಬಲಹೀನತೆ ಮತ್ತು  ಅಸಹಾಯಕತೆ ಒಂದು ಕಡೆ ಮತ್ತು ಪರಮಾತ್ಮನ ಸರ್ವ ವ್ಯಾಪಕತ್ವ ಮತ್ತು ಸರ್ವಶಕ್ತಿ ಎರಡರ ಅರಿವೂ ಆಗುತ್ತದೆ. ಆಗ ಅವನು ತನ್ನ ಪ್ರಯತ್ನಗಳನ್ನು ಬದಿಗಿಟ್ಟು ತನ್ನ ಅಹಂಕಾರವನ್ನು ತೊಡೆದುಹಾಕಿ ಪರತತ್ವಕ್ಕೆ ಸಂಪೂರ್ಣವಾಗಿ ಶರಣಾಗುತ್ತಾನೆ. ಇದೇ ಶರಣಾಗತಿ ಮತ್ತು ಇದು ಅನಿರ್ಬಂಧಿತ, ಅಡೆತಡೆಯಿಲ್ಲದೆ ಶುದ್ಧ ಶರಣಾಗತಿ. ಹೀಗೆ ಶರಣಾದಾಗ ಪರಮಾತ್ಮನ ಅನುಗ್ರಹ ಅವನೆಡೆಗೆ ಹರಿದು ಬರುತ್ತದೆ, ಸಾಧಕನಲ್ಲಿ ಜ್ಞಾನವುಂಟಾಗಿ ಅವನ ಅಂತರಂಗದಲ್ಲಿ ಶಾಂತಿ ನೆಲೆಸುತ್ತದೆ. ಶರಣಾಗತಿ ಅವನನ್ನು  ಶಾಂತ ಮತ್ತು ಜ್ಞಾನದ ನೆಲೆಯಲ್ಲಿ ಸ್ಥಿರವಾಗಿಸಿ ಸಾಧಕನ ಆತ್ಮೋದ್ಧಾರಕ್ಕೆ ನಾಂದಿ ಹಾಡುತ್ತದೆ.    ಹಾಗಾಗಿ ಶಾಂತಿಯ, ಜ್ಞಾನದ ಮತ್ತು ನಿಜವಾದ ಆನಂದದ ಸ್ಥಿತಿಗೆ ' ಶರಣಾಗತಿ'ಯೊಂದೇ ಮಾರ್ಗ

ಓಂ ತತ್ಸತ್ 

ನಮಸ್ಕಾರ 

ದೇವರು-ಪ್ರಗತಿಪರನ ಚಿಂತನೆ





ಋಗ್ವೇದದ ಮಂತ್ರಗಳು ದೇವರ ಕುರಿತಾದ ಸತ್ಯವಾದ ಮತ್ತು ವೈಜ್ಞಾನಿಕವಾದ ಒಂದು ಸಂಕ್ಷಿಪ್ತ ವಿವರಣೆಯನ್ನು ನೀಡುತ್ತದೆ. ವೇದಮಂತ್ರಗಳು ಅನಂತವಾದ ಇಡೀ ಜಗತ್ತನ್ನು ಆವರಿಸಿಕೊಂಡಿರುವ ಒಂದು ಆಧ್ಯಾತ್ಮಿಕ ವಸ್ತುವೇ ' ದೇವರು ' ಎಂದು ಘೋಷಿಸುತ್ತವೆ. ದೇವರು ಸರ್ವ ವ್ಯಾಪಕನಾಗಿರುವನು ಮತ್ತು ಜಗತ್ತಿನ ಪ್ರತಿಯೊಂದು ವಸ್ತುವೂ ದೇವರಲ್ಲಿಯೇ ಇದ್ದು, ದೇವರಿಂದಲೇ ಮಾಡಲ್ಪಟ್ಟಿದೆ. 'ಸರ್ವವ್ಯಾಪಕ ' ಮತ್ತು  'ವ್ಯಾಪ್ತ '  ಎನ್ನುವ  ಪದಗಳು ಇದನ್ನು ಸೂಚಿಸುತ್ತದೆ.    

ಕಪ್ಪು ಹಲಗೆಯ ಮೇಲೆ ಬರೆಯಲುಪಯೋಗಿಸುವ ' ಸೀಮೆ ಸುಣ್ಣ' ಒಂದು ತುಂಡನ್ನು ಒಂದು ನೀರಿರುವ ಲೋಟದಲ್ಲಿ ಹಾಕಿದರೆ, ಸೀಮೆ  ಸುಣ್ಣದ ತುಂಡು ನೀರನ್ನು ಹೀರಿಕೊಳ್ಳುತ್ತದೆ ಮತ್ತು  ಲೋಟದಲ್ಲಿನ ನೀರು   ಸೀಮೆ ಸುಣ್ಣದ ತುಂಡಿನೊಳಕ್ಕೆಲ್ಲಾ ಸೇರಿಕೊಳ್ಳುತ್ತದೆ. ಎಂದರೆ  ಸೀಮೆ ಸುಣ್ಣದ ತುಂಡು ನೀರಿನೊಳಕ್ಕೆ ಇದ್ದು ತುಂಡಿನೊಳಕ್ಕೆ ನೀರು ತುಂಬಿಕೊಂಡಿರುತ್ತದೆ. ಇದೇ ರೀತಿ ಪರಮಾತ್ಮ ಅಥವಾ ಪರತತ್ವವೆನ್ನುವುದು ಲೋಟದ ನೀರಿದ್ದಂತೆ ಮತ್ತು ಜಗತ್ತಿನ ವಸ್ತುಗಳೆಲ್ಲಾ ನೀರಲ್ಲಿ ಬಿದ್ದ ಸೀಮೆ ಸುಣ್ಣದಂತೆ. ಹೇಗೆ ಸೀಮೆ ಸುಣ್ಣ ತಾನು ನೀರೊಳಗೆ ಇದ್ದರೂ ತನ್ನೊಳಕ್ಕೂ ನೀರನ್ನು ತುಂಬಿಕೊಂಡಂತೆ ಜಗತ್ತಿನ ವಸ್ತುಗಳೆಲ್ಲಾ ಪರಮಾತ್ಮನಲ್ಲಿದ್ದರೂ ಅವನನ್ನೇ ಒಳಗೂ ತುಂಬಿಕೊಂಡಿರುತ್ತವೆ. ಎಂದರೆ ಪರಮಾತ್ಮ ನಮ್ಮೊಳಗೂ ಮತ್ತು ನಮ್ಮ ಹೊರಗೂ ಇದ್ದಾನೆ ಎಂದು ಅರ್ಥ.  

ಋಗ್ವೇದ ಮತ್ತು ಅಥರ್ವವೇದಗಳು ' ದೇವರ ' ನ್ನು ಜಗತ್ತನ್ನೆಲ್ಲಾ ಅವರಿಸಿಕೊಂಡಿರುವಂತಹ ಒಂದು ಸೂಕ್ಷ್ಮ ಶಕ್ತಿಯೆಂದು ವಿವರಿಸುತ್ತವೆ. ಅನಂತ ವಿಶ್ವದಲ್ಲಿರುವ ಮೂರು ' ಅಸ್ಥಿತ್ವ ' ಗಳ ಬಗ್ಗೆ ಹೇಳುತ್ತಾಇಲ್ಲಿರುವುದು ಕೇವಲ ) ಆಕಾಶ, ವಾಯು, ಅಗ್ನಿ, ಜಲ ಮತ್ತು ಭೂಮಿ ಎಂಬ  ಪಂಚಭೂತಗಳಿಂದಾದ 'ಜಡ ಅಥವಾ ಸ್ಥೂಲ' ವಸ್ತು, ) ಅಣು ಚೈತನ್ಯ ಸ್ವರೂಪದಲ್ಲಿ ಜಗತ್ತಿನಲ್ಲಿರುವ ಅನಂತ ಆತ್ಮಗಳು ಮತ್ತು ) ನಿತ್ಯವಾದ, ಸತ್ಯವಾದ, ಭೃಹತ್ ಚೈತನ್ಯವಾಗಿ ಸಕಲ ಚರಾಚರಗಳ ಅಸ್ಥಿತ್ವಕ್ಕೆ ಕಾರಣೀಭೂತವಾದ ' ದೇವರು ' ಎಂದು ಕರೆಯಲ್ಪಡುವ ' ಭೃಹತ್ ಚೈತನ್ಯ.  

ಜಡವಸ್ತುವಿಗಿಂತ ' ಆತ್ಮ' ವು ಸೂಕ್ಷ್ಮ. ಆತ್ಮಕ್ಕಿಂತ ಸೂಕ್ಷ್ಮ 'ಪರಮಾತ್ಮ'. ಜಡವಸ್ತುವುಎಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್ ಮತ್ತು ಪೋಸಿಟ್ರಾನ್ ಎಂಬ ಕಣಗಳಿಂದ ಆಗಮಾಡಲ್ಪಟ್ಟಿದೆ. ಆತ್ಮವು ಜಡವಸ್ತುವಿಗಿಂತ ಸೂಕ್ಷ್ಮವಾದ್ದರಿಂದ ಅದು ತನ್ನ ರೂಪ ಮತ್ತು ಸ್ಥಳವನ್ನು ಬದಲಾಯಿಸಿಕೊಳ್ಳುತ್ತದೆ. ಆದರೆ ದೇವರು ಅಥವಾ ಪರಮಾತ್ಮ, ಜಡ ಮತ್ತು ಆತ್ಮಕ್ಕಿಂತ  ಸೂಕ್ಷ್ಮಾತಿಸೂಕ್ಷ್ಮವಾದ್ದರಿಂದ ಜಡ ಮತ್ತು ಚೇತನಗಳ ಮೇಲೆ ಸಂಪೂರ್ಣ ಸ್ವಾಮಿತ್ವವನ್ನು ಸ್ವಾಭಾವಿಕವಾಗಿಯೇ ಹೊಂದಿರುತ್ತದೆ. ಪರಮಾತ್ಮಅಣುಚೈತನ್ಯಕ್ಕೆ ಒಂದು ದೇಹ ಅಥವಾ ರೂಪ ಅಥವಾ ಕಾಯವನ್ನು ಕೊಟ್ಟು ದೇಹದ ಮೂಲಕ ತನ್ನನ್ನು ತಾನು ಸುಧಾರಿಸಿಕೊಳ್ಳಲು ಮತ್ತು ಜ್ಞಾನಪಡೆಯಲು ಒಂದು ಸೂಕ್ತ ಮಾರ್ಗವನ್ನು ಕಲ್ಪಿಸುತ್ತದೆ. ಹಾಗೆ ಪಡೆದ ಜ್ಞಾನದ ಮೂಲಕ ಆತ್ಮವು ಮುಕ್ತವಾಗುತ್ತದೆ. ಸುಧಾರಣೆಯೆನ್ನುವುದು ಆತ್ಮ ದೇಹಧಾರಣೆಯನ್ನು ಮಾಡಿ, ಜನನ, ಜೀವನ, ವೃದ್ದಾಪ್ಯ ಮತ್ತು ಮರಣಗಳ, ಅವ್ಯಾಹತ ತಿರುಗುತ್ತಿರುವ ಚಕ್ರದಿಂದಲೇ ಪಡೆಯಬೇಕಾಗುತ್ತದೆ.  

ಪರಮಾತ್ಮನನ್ನು ಸಕಾಲಕ್ಕೂ ಒಡೆಯನೆಂದು, ಅನಂತನೆಂದು, ಇಡೀ ವಿಶ್ವವನ್ನೇ ಆವರಿಸಿಕೊಂಡಿರುವವನೆಂದೂ ಅರ್ಥಮಾಡಿಕೊಂಡರೆ, ಜಡ ಮತ್ತು ಜೀವರ ಮೇಲಿನ ಅವನ ಸಾರ್ವಭೌಮತ್ವ  ನಿಚ್ಚಳವಾಗುತ್ತದೆ. ಹಾಗಾದಾಗ ಪರಮಾತ್ಮನನ್ನು, ವೈಜ್ಞಾನಿಕವಾಗಿ ಅರ್ಥಮಾಡಿಳ್ಳುವುದರಿಂದ, ಮೂಢನಂಬಿಕೆಯಿಂದ ಪೂಜಿಸಬೇಕಾದ ಪೂಜೆಯ ವಸ್ತುವೆಂದು ಪರಿಗಣಿಸಬೇಕಾಗಿಲ್ಲ. ಸಂಪ್ರದಾಯಬದ್ಧ ನಂಬಿಕೆ ವೈಜ್ಞಾನಿಕ ವೈಚಾರಿಕತೆಗೆ ಮತ್ತು ಕೌತುಕಕ್ಕೆ ಎಡೆಮಾಡಿಕೊಡುತ್ತದೆ. ಅಂತಹ ಸ್ಥಿತಿಯಲ್ಲಿ ನಮ್ಮ ಮತ್ತು ಪರಮಾತ್ಮನ ನೇರ ಸಂಪರ್ಕವಾಗಿ ನಿಜವಾದ ' ಪೂಜೆ ' ಎಂದೆನಿಸಿಕೊಳ್ಳುವ ಅವನ ಅನಂತ ಕಲ್ಯಾಣಗುಣಗಳ ಮತ್ತು ಅವುಗಳ ಜ್ಞಾನದ ಕಿರಣಗಳು ನಮ್ಮ ಒಳಕ್ಕೆ ನುಗ್ಗುತ್ತವೆ.

ಜೀವಕ್ಕೆ ಅಥವಾ ಆತ್ಮಕ್ಕೆ ಅರ್ಥಮಾಡಿಕೊಳ್ಳುವ ಮತ್ತು ಬುದ್ಧಿವಂತಿಕೆಯ ಜ್ಞಾನ ಒಂದು ಮಿತಿಯಲ್ಲಿರುತ್ತದ್ದೆ, ಎಂದು ವೇದಗಳು ಸಾರುತ್ತವೆ. ಆದರೆ ಪರಮಾತ್ಮನೆಂಬುವನು ಸರ್ವಾಂತರ್ಯಾಮಿಯಾದ್ದರಿಂದ ಅದರ ಜ್ಞಾನಕ್ಕೆ ಮಿತಿಯೇ ಇಲ್ಲ. ದೇಹಗಳನ್ನು ಧಾರಣೆಮಾಡಿದ ಜೀವಗಳು ಆಯಾಯಾ ದೇಹಗಳ ದೈಹಿಕ ಮಿತಿಗಳ ಪರಿಧಿಯಲ್ಲೇ ಜಗತ್ತನ್ನು ಅರ್ಥಮಾಡಿಕೊಳ್ಳಬಲ್ಲ ಮಿತವಾದ ಜ್ಞಾನವನ್ನು ಹೊಂದಿವೆಅಜ್ಞಾನದಿಂದ, ದೇವರ ನಿಜ ಸ್ವರೂಪವನ್ನು ಅರಿಯದೆ ಚಿಹ್ನೆಗಳನ್ನು, ಚಿತ್ರಗಳನ್ನು, ಮೂರ್ತಿಗಳನ್ನು ಮತ್ತು ವಸ್ತುಗಳನ್ನು ದೇವರೆಂದು ಲೋಕದ ಜನರು ಪೂಜಿಸುತ್ತಾರೆ. ಅದೂ ಸಹ ಬೆಳವಣಿಗೆಯ ಒಂದು ಹಂತವೆಂದು ಪರಿಗಣಿಸಿದರೂಇದರಿಂದ ಮೂಲತತ್ವಕ್ಕೆ ದೂರವಾದ ಮತ್ತು ಸತ್ಯಕ್ಕೆ ದೂರವಾದ ಹಲವಾರು ಭಿನ್ನಭಿನ್ನ ಮತಗಳು ಮತ್ತು ಧರ್ಮಗಳು ಹುಟ್ಟಿಕೊಂಡಿವೆ. ಇದೇ ಕಾರಣದಿಂದ ಜಗತ್ತಿನಲ್ಲಿ ಧರ್ಮದ ಹೆಸರಿನಲ್ಲಿ ಇಷ್ಟೊಂದು ಭೇದಗಳು, ಒಳ ಜಗಳಗಳು, ತಿಕ್ಕಾಟಗಳು ಮತ್ತು ಘೋರವಾದ ಯುದ್ಧಗಳು ನಡೆದಿವೆ ಮತ್ತು ನಡೆಯುತ್ತಿವೆ.   

ನಾವು ವೇದಗಳು ಪ್ರತಿಪಾದಿಸಿದ ಸರಳ ಆಧ್ಯಾತ್ಮಿಕ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಟ್ಟರೆ ಜಗತ್ತಿನಲ್ಲಿ ಧರ್ಮದ ವಿಷಯದಲ್ಲಿ ಮತ್ತು ಮತಗಳ ವಿಷಯದಲ್ಲಿ ಏಕೀಭಾವ ಬಂದರೆ  ' ದೇವರು ' ಮತ್ತು ದೈವಕ್ಕೂ ಜಗತ್ತಿಗೂ ಇರುವ ಸಂಬಂಧವನ್ನು ಒಂದು ಸಮಾನ ರೀತಿಯಲ್ಲಿ ಅರ್ಥೈಸುವ ಸಾಧ್ಯತೆ ಖಂಡಿತ ಇದೆ. ಹಾಗಾದಾಗ ಜಗತ್ತಿನಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸಹಿಷ್ಣುತೆಗಳು ನೆಲೆಗೊಳ್ಳಲು ಸಾಧ್ಯವಾಗುತ್ತದೆ ಮತ್ತು ನಮ್ಮ ಪೃಥ್ವಿ ಎಲ್ಲ ಜೀವಿಗಳಿಗೂ ವಾಸಿಸಲು ಒಂದು ಸುಂದರ ತಾಣವಾಗಿ, ಮಾನವನ ದೈಹಿಕ, ಭೌದ್ಧಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ವಿಕಾಸಕ್ಕೆ ದಾರಿಯಾಗಿ ಮಾನವರನ್ನು ಮುಕ್ತಿಯ ಮಾರ್ಗದಲ್ಲಿ ನಾಡಿಸುವುದರಲ್ಲಿ ಸಂದೇಹವೇ ಇಲ್ಲಅಂತಹ ಸತ್ಯವನ್ನು ಅರಿತುಕೊಳ್ಳುವ ಪ್ರಯತ್ನವನ್ನು ನಾವೆಲ್ಲಾ ಮಾಡಬೇಕು

ರವಿ ತಿರುಮಲೈ