Thursday 25 January 2018

ಬಯಕೆಗಳ ಜಪಮಾಲೆ


ಈಗ ಇರುವ ಸ್ಥಿತಿಗಿಂತ ಇನ್ನೂ ಉತ್ತಮ ಸ್ಥಿತಿ ಇದೆ ಮತ್ತು ಅಂತಹ ಒಳಿತಾದ ಸ್ಥಿತಿಯನ್ನು ಪಡೆಯಬಹುದು. "ಅದಕ್ಕಾಗಿ ನಾನು ಸಾಹಸ ಮಾಡುತ್ತೇನೆ" ಎನ್ನುವುದೇ ಮನುಷ್ಯ ಬುದ್ಧಿ. ರೀತಿ ಹೊಮ್ಮುವ ಬುದ್ಧಿಯ ಬುಗ್ಗೆಗಳೇ ಪ್ರಗತಿಗೆ ಹಾದಿ. ರೀತಿಯ ಯೋಚನೆಗಳು ಬುಗ್ಗೆ ಬುಗ್ಗೆಯಾಗಿ, ಅಲೆ ಅಲೆಯಾಗಿ ಎಲ್ಲರಲ್ಲೂ ಸಹಜವಾಗೇ ಇರುತ್ತದೆ.   

ಕ್ರಿಯಾಶೀಲತೆಯೇ ಮನುಷ್ಯನ ಗುಣ. ಕ್ರಿಯಾಶೀಲತೆಯೇ ಇವನನ್ನು ಆದಿಮಾನವನ ದೆಶೆಯಿಂದ ಇಂದಿನ ನಾಗರೀಕ ಮಾನವನನ್ನಾಗಿಸಿದೆ. ಮನುಷ್ಯನ   ಸಕ್ರಿಯವಾದ ಮನಸ್ಸು ಬುದ್ಧಿಗಳೇ,  ಜಗತ್ತಿನಾದ್ಯಂತ ಹಲವು ರೀತಿಯ ಪ್ರಗತಿಗಳಿಗೆ ಕಾರಣವಾಗಿವೆ. ವೈಜ್ಞಾನಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಗತಿಗೆ ಕ್ರಿಯಾಶೀಲತೆಯೇ ಕಾರಣವಲ್ಲವೇ? ಇಂದು ನಾವಿರುವ ಸ್ಥಿತಿಗಿಂತ ಇನ್ನೂ ಉತ್ತಮವಾದ ಸ್ಥಿತಿಯನ್ನು ಹೊಂದುವ ನಿರಂತರ ಪ್ರಯತ್ನ ಜಗತ್ತಿನಲ್ಲಿ ಎಲ್ಲ ಕಡೆಯೂ, ಎಲ್ಲ ಮಾನವರ ಮನಸ್ಸುಗಳಲ್ಲಿ ನಡೆದೇ ಇರುತ್ತದೆ ಮತ್ತು ಅದಕ್ಕೆ ಪೂರಕವಾಗಿ ಅವನ ಬುದ್ಧಿ ಕೆಲಸ ಮಾಡುತ್ತಲೇ ಇರುತ್ತದೆ. ಇದು ಅವನ ಸಹಜ ಗುಣದ ಮೇಲೆ ಹೇರಿಕೊಂಡ ಕೃತಕ ಗುಣವಾದ್ದರಿಂದ ಇದೂ ಕೂಡ ಸಹಜತೆಯಿಂದ ಉದ್ಭವವಾದ ಕೃತಕ ಬುದ್ಧಿಯೇ  ಅಲ್ಲವೇ?

ಮನುಷ್ಯನ ಬುದ್ಧಿ ಪ್ರಗತಿ ಪಥದಲ್ಲಿ ಯೋಚಿಸುತ್ತದೆ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಪ್ರಗತಿಯ ಫಲ ಕೇವಲ ಸಜ್ಜನರ ಕೈಯಲ್ಲಿಯೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ದೌರ್ಭಾಗ್ಯವಶಾತ್ ಅದು ದುಷ್ಟಜನರ ಕೈಗೂ ಸೇರಿ ಅವರಿಗೆ ತಮ್ಮ ದುಷ್ಟತನದ ಕೆಲಸಗಳನ್ನು ಸಮರ್ಪಕವಾಗಿ ಮಾಡಲು ಸೂಕ್ತ ಸಾಧನಗಳನ್ನು ಮತ್ತು ಅನ್ಯರ ನಾಶಕ್ಕೆ ಸೂಕ್ತ ಆಯುಧಗಳನ್ನೂ ಕೊಟ್ಟಂತಾಗಿದೆ ಅಲ್ಲವೇ? ಇದೆ ವಿಪರ್ಯಾಸ. ವಿಜ್ಞಾನದ ಪ್ರಗತಿ, ರಾಜಕೀಯ ಪ್ರಗತಿ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ

ಮನುಷ್ಯರ ಹೃದಯಗಳಲ್ಲಿ  ಮಿತಿಯಿಲ್ಲದ ಸುಖಗಳ  ಆಸೆಯ ಒರತೆ ಅಥವಾ ಊಟೆ ಬತ್ತುವುದೇ ಇಲ್ಲ. ಸದಾಕಾಲ ಮನಸ್ಸು  "ಅದು ಬೇಕು ಇದು ಬೇಕು ಮತ್ತೊಂದು ಬೇಕು" ಎಂದು ಮತ್ತು  ಅದು "ಎಲ್ಲಿ ಸಿಗುತ್ತದೆ" ಎಂದು ಹುಡುಕಾಡುತ್ತಲೇ ಇರುತ್ತದೆ.  ಎಂದಿಗೂ, ಸದಾಕಾಲ ಆನಂದದಿಂದ ಇರಬೇಕೆನ್ನುವುದೇ ಮನುಷ್ಯನ ಆಸೆ.  ಆದರೆ ಆನಂದವೆಂದರೇನು ಎನ್ನುವುದು ಯಾರಿಗೂ ಅರ್ಥವಾಗಿಲ್ಲ. ಯಾವುದರಿಂದ ತನಗೆ ಆನಂದ ಸಿಗುತ್ತದೆ ಎಂದೂ ಅರಿತಿಲ್ಲ. ಇದರೊಳಗೋ, ಅದರೊಳಗೋ, ಮತ್ಯಾವುದರೊಳಗೋ ಗೊತ್ತಿಲ್ಲ. ಇಡೀ ಲೋಕದ ಜನ ಸೊಗಸು, ಆನಂದಕ್ಕೆ ಕಾರಣವಾದ ವಸ್ತು ಎಲ್ಲಿದೆ ಎಂದು ಹುಡುಕುತ್ತಲೇ ಇರುತ್ತಾರೆ. 

ಒಂದು ವಸ್ತುವನ್ನೋ ವಿಷಯವನ್ನೋ ಅಥವಾ ವ್ಯಕ್ತಿಯನ್ನೂ ಕಂಡಾಗ ಮೇಲ್ನೋಟಕ್ಕೆ ಪರಿಚಯವಾದಾಗ, ಅದರ ಸಂಗ ಮಾಡುವ ಬಯಕೆ ಉಂಟಾಗಬಹುದು. ಬಯಕೆ ಹೃದಯಾಂತರಾಳದಲಿ ಒಸರುತ್ತದೆ. ಹಾಗೆ ಬಯಸಿದ್ದನ್ನು ಪಡೆಯಲು ಪ್ರಯತ್ನ ನಡೆಯುತ್ತದೆ.  ಪ್ರಯತ್ನ ಫಲಕಾರಿಯಾದರೆ " ಹಾ ಇದರಿಂದ ನನಗೆ ಆನಂದ" ಎನ್ನುವ ಭಾವ ಮನದಲ್ಲಿ ಮೂಡುತ್ತದೆ. ಹಾಗೆ ಮೂಡಿದ ಭಾವ ಕ್ಷಣಕಾಲ ಇದ್ದು ಮಾಯವಾಗುತ್ತದೆ. ಮತ್ತೆ ಮತ್ತೊಂದು ಬಯಕೆ ಒಸರುತ್ತದೆ,  ಮತ್ತದೇ ಪ್ರಯತ್ನ. ಮಿತಿಯೇ ಇಲ್ಲದ ಬಯಕೆಗಳ ಸರಮಾಲೆಯನ್ನು ಹೊತ್ತು ಜೀವನ ಸಾಗಿಸುವ   ನರಪ್ರಾಣಿಯ ಬಯಕೆಗಳು ತೀರುವುದೆಂತು

ಬಯಕೆಗಳಿಂದ ವಾಂಛೆ ತೀರಬಹುದು, ಆದರೆ ಸತ್ಯವಾದ ಆನಂದ ಎಂದಿಗೂ ಸಿಗುವುದಿಲ್ಲ. ಮನುಷ್ಯನಿಗೆ ಎಂದು ಸತ್ಯವಾಗಿ ಅರ್ಥವಾಗುತ್ತದೆಯೋ, ಹಾಗೆ ಅರ್ಥವಾದ ವಿಷಯ,  ಎಂದು ದೃಢವಾಗಿ ಮನದಲ್ಲಿ ಬೇರೂರುತ್ತದೆಯೋ, ಹಾಗೆ ಬೇರೂರಿದ ವಿಷಯವನ್ನು ಮನುಷ್ಯ ಎಂದು ತನ್ನ ಸ್ವಾಭಾವವಾಗಿಸಿಕೊಳ್ಳುತ್ತಾನೋ, ಅಂದು ಅವನು ಬಯಕೆಗಳ ಜಪಮಣಿಮಾಲೆಯನ್ನು ಕಿತ್ತೊಗೆದು, ಸತ್ಯವಾದ, ನಿಜವಾದ ಮತ್ತು ಶಾಶ್ವತವಾದ ಆನಂದವನ್ನು ಪಡೆಯುತ್ತಾನೆ.


ಜಗನ್ನಾಟಕ



ಇಡೀ ಬ್ರಹ್ಮಾಂಡವೇ ಒಂದು ರಂಗಸ್ಥಳ. ಈ ರಂಗಸ್ಥಳದಲ್ಲಿ ನಡೆಯುವ ನಾಟಕವನ್ನು ನೋಡಿದರೆ ನಮಗೆ ಕಾಣುವುದು ಚಿತ್ರ ವಿಚಿತ್ರ ಪಾತ್ರಗಳ ಧರಿಸಿ ಕೋಟಿ ಕೋಟಿ ನಟರು ತಮ್ಮ ತಮ್ಮ ಪಾತ್ರಗಳ ಧರಿಸಿದ್ದಾರೆ. ಈ ನಾಟಕದ ಕಥೆಗೆ ಮತ್ತು ಇಲ್ಲಿ ನಡೆಯುವ ಪ್ರತಿಯೊಂದೂ ಅಂಕಕ್ಕೂ, ಮೊದಲಿಲ್ಲ, ಕೊನೆಯಿಲ್ಲ. ಎಲ್ಲರೂ ಪಾತ್ರಧಾರಿಗಳಾಗಿಯೂ ಪ್ರೇಕ್ಷಕರಾಗಿಯೂ ಮತ್ತು ಪಾತ್ರಧಾರಿಗಳಾಗಿಯೂ ಇದ್ದಾರೆ. ಪ್ರತಿಯೊಂದು ಪಾತ್ರಕ್ಕೂ ಅದರದೇ ಆದಂತಹ ಹಾವ, ಭಾವ, ಮಾತು ಮತ್ತು ನಟನೆ. ಅಂತಹ ಕೋಟಿ ಕೋಟಿ  ಪಾತ್ರಧಾರಿಗಳಿಂದ ತುಂಬಿರುವುದೇ ಈ ಜಗತ್ತು.  


ಈ ಜಗತ್ತೇ ಒಂದು ನಾಟಕ ಮಂದಿರ. ಇಲ್ಲಿರುವ ಎಲ್ಲರೂ ಕೇವಲ ಪಾತ್ರಧಾರಿಗಳು. ಇದು  ಕೇವಲ  ಮನುಷ್ಯರಿಗೆ  ಮಾತ್ರವೇ  ಅನ್ವಯಿಸುವುದಿಲ್ಲ. ಪರಮಾತ್ಮನ ಸೃಷ್ಟಿಯ ಸಕಲ ಜೀವರಾಶಿಗಳಿಗೂ ಅನ್ವಯಿಸುತ್ತದೆ. ಎಲ್ಲ ಜೀವಿಗಳಿಗೂ ಒಂದೊಂದು ಪಾತ್ರ ವಿಧಿತ. ಪ್ರತೀ ಜೀವಿಯೂ ಒಂದೊಂದು ವೇಷ (ರೂಪ) ಧರಿಸಿ ಈ ಜಗನ್ನಾಟಕದಲ್ಲಿ ನಟನೆ ಮಾಡುತ್ತಿರಬೇಕು. ಇಲ್ಲಿನ ಭಾಷೆ ಮತ್ತು ಸಂಭಾಷಣೆಗಳೆಲ್ಲವೂ  ಪೂರ್ವ ಲಿಖಿತ ಮತ್ತು ಪೂರ್ವ ನಿರ್ಧಾರಿತ. ಇಲ್ಲಿ ನಡೆಯುವ ನಾಟಕ ಎಂದು ಶುರುವಾಯಿತೋ ಗೊತ್ತಿಲ್ಲ ಮತ್ತು ಎಂದು ಕೊನೆಯಾಗುವುದೋ ಗೊತ್ತಿಲ್ಲ. ಎಲ್ಲ ಪಾತ್ರಧಾರಿಗಳೂ ತಾವು ಹಿಂದಿನಿಂದ ಹೊತ್ತು ತಂದ ಪಾತ್ರವನ್ನು, ಗುಣ ಮತ್ತು ಸ್ವಭಾವ ಜನ್ಯವಾದ ಮಾತುಗಳನ್ನು ಆಡುತ್ತಾ ನಟನೆಯನ್ನು ಮಾಡುತ್ತಾ ನಟಿಸುತ್ತಾ ನಟಿಸುತ್ತಾ ನೇಪತ್ಯಕ್ಕೆ ಸರಿದು ಹೋಗಿ ಮತ್ತೆ ಮತ್ತೊಂದು ರೂಪಧರಿಸಿ ರಂಗ ಪ್ರವೇಶ ಮಾಡುತ್ತಾರೆ.

ಇದು ನಾಟಕವಾದರೆ, ಈ ನಾಟಕವನ್ನು ನೋಡುವವರು ಯಾರು? ಎಲ್ಲರೂ ಪಾತ್ರಧಾರಿಗಳಾದರೆ ಪ್ರೇಕ್ಷಕರಾರು ಎನ್ನುವ ಪ್ರಶ್ನೆ ಸಾಮಾನ್ಯವಾಗಿಯೇ ಉದ್ಭವಿಸುತ್ತದೆ. ಆ ನೋಡುವವರೂ ಇಲ್ಲಿ ಪಾತ್ರಮಾಡುತ್ತಿರುವ ನಟರೆ ಅಲ್ಲವೇ? ಇಲ್ಲಿ ಪ್ರದರ್ಶಿಸಲ್ಪಡುವ ನಾಟಕವನ್ನು ನೋಡಿ, ಅದರಲ್ಲಿ ತಾವೂ ಸಹ ತಮ್ಮ ತಮ್ಮ ಪಾತ್ರಗಳನ್ನೂ ವಹಿಸಿ, ಇದನ್ನೇ ನಿಜವೆಂದು ನಂಬಿರುವವರು ಇಲ್ಲಿನ ಪಾತ್ರಧಾರಿಗಳು. ಈ ನಾಟಕಕ್ಕೆ ಅತೀತವಾಗಿ ನಿಂತು ಈ ನಾಟಕವನ್ನು ಜಗನ್ನಾಟಕದ ಸೂತ್ರಧಾರಿಯಾದ ಆ ಪರಮಾತ್ಮನೂ ಮತ್ತು ಅವನ ಪ್ರತಿನಿಧಿಯಾದ ಆತ್ಮನು  ಕೇವಲ ಸಾಕ್ಷಿಗಳಂತೆ ನೋಡುತ್ತಾರೆ.

ಇಲ್ಲಿನ ವಿಚಿತ್ರವೇನೆಂದರೆ ಪಾತ್ರಧಾರಿ ಮೊದಲೊಂದು ಮುಗ್ದ ಪಾತ್ರವಾಗಿ, ಇದೇ ರಂಗದಲ್ಲೇ ತಾಲೀಮು ಪಡೆದು ಏನೇನನ್ನೋ ಕಲಿತು, ಅರಿತು ಬೆಳೆದು ಒಬ್ಬ ಪ್ರೌಢ ಪಾತ್ರವಾಗಿ ಹಾಗೆ ಕಲಿತು ಅರಿತದ್ದನ್ನೆಲ್ಲಾ ಇಲ್ಲಿಯೇ ಪ್ರದರ್ಶಿಸಿ ಜಗದ ಮೆಚ್ಚುಗೆಗೋ, ತಾಟಸ್ಥ್ಯಕ್ಕೋ, ನಿಂದೆಗೋ, ಅಪವಾದಕ್ಕೂ ಅಥವಾ ಅಪನಿಂದೆಗೋ ಗುರಿಯಾಗಿ, ತಾನು ಕಲಿತದ್ದನ್ನು ಅನ್ಯರಿಗೆ ಕಲಿಸಿ, ತಾನು ಕಲಿತದ್ದನ್ನೆಲ್ಲಾ ಜರಡಿಯಾಡಿಸಿ, ಸಾರವನ್ನು ಹೊತ್ತುಕೊಂಡು ಮತ್ತೊಂದು ಪ್ರದರ್ಶನಕ್ಕೆ ಅಣಿಯಾಗಿ ಮತ್ತೆ ರಂಗ ಪ್ರವೇಶ ಮಾಡುತ್ತಾನೆ. ಇಷ್ಟೆಲ್ಲಾ ಪಾತ್ರಗಳನ್ನೂ ಧರಿಸಿದರೂ ಇವನಿಗೆ ಇದು ಒಂದು ಕೊನೆಮೊದಲಿಲ್ಲದ ನಾಟಕ ಎಂದು ಅರ್ಥವಾಗುವುದೇ ಇಲ್ಲ.

ಹೀಗೆ ಹಲವಾರು ಪಾತ್ರಗಳ ಧರಿಸಿ, ಪ್ರತೀ ಪ್ರವೇಶದಲ್ಲೂ "ತಾನೊಂದು ಪಾತ್ರ, ನನ್ನ ಜೀವನವೆನ್ನುವುದು ಕೇವಲ ನಾಟಕ. ಇದು ನನ್ನ ಮನೆಯಲ್ಲ, ನಾನು  ಸ್ವಸ್ಥಾನ ಸೇರಬೇಕಾದರೆ ಈ ನಾಟಕದಿಂದ ಶಾಶ್ವತವಾಗಿ ನೇಪತ್ಯಕ್ಕೆ ಸರಿಯಬೇಕು " ಎಂದು ಅರಿತಾಗ ಕ್ರಮೇಣ ಸಂಪೂರ್ಣವಾಗಿ ಭಾವಗಳು ನಶಿಸಿ, ಮಾತುಗಳ ಮರೆತು, ಧರಿಸಿದ ದಿರಿಸ ತೆಗೆದು, ಬಣ್ಣ ಕಳಚಿ  ಈ ನಾಟಕದಿಂದ ಮುಕ್ತಿ ಪಡೆಯಬಹುದು. ಅದು ಈ ಜೀವನದ ಪಾತ್ರವನ್ನು ಹೊತ್ತಿರುವಾಗಲೇ ಈ ನಾಟಕದ ಮೂಲಕವೇ, ಈ ನಾಟಕದಲ್ಲಿದ್ದರೂ ಇದರಿಂದ ಶಾಶ್ವತವಾಗಿ ನಿರ್ಗಮಿಸುವ ಪ್ರಯತ್ನವಾಗಬೇಕು. 

Friday 19 January 2018

ಜಗತ್ತೆಂಬ ಆಶ್ವತ್ಥವೃಕ್ಷ


ನಾವು ಜೀವಿಸುವ ಈ ಜಗತ್ತು ಒಂದು ವಿಶಾಲವಾದ ಮರವಾದರೆ ನಾವು ಆ ಮರದಲ್ಲಿರುವ ಒಂದು ರೆಂಬೆ, ಕೊಂಬೆ, ಹೂ ಅಥವಾ ಹಣ್ಣೆಂದು ಭಾವಿಸಬೇಕು.  ಒಂದು ಸಣ್ಣ ಅರಳೀ ಸಸಿಯನ್ನು ತಂದು, ಭೂಮಿಯಲ್ಲಿ ಗುಣಿ ತೋಡಿ, ಸಸಿ ನೆಟ್ಟು, ಪ್ರತಿನಿತ್ಯ ಬೊಗಸೆ ಬೊಗಸೆಯಲ್ಲಿ ನೀರನ್ನು ಎರೆದು, ಕಳೆ ತೆಗೆದು ಅದನ್ನು  ಕಾಪಾಡಿದರೆ  ಅದೊಂದು ಬೃಹತ್ ಅಶ್ವತ್ಥ ವೃಕ್ಷವಾಗಿ  ನೂರಾರು ವರ್ಷ ತನ್ನ ತಂಪಾದ ನೆರಳನ್ನು ಮತ್ತು ಶುದ್ಧ ಗಾಳಿಯನ್ನು ಜಗತ್ತಿಗೆ ನೀಡುವಂತೆಯೇ, ನಾವೂ ಸಹ ಈ ಜಗತ್ತಿನಲ್ಲಿ ಜಗದ ಸೇವೆಗೆ ನಿಲ್ಲುವುದೇ ಧರ್ಮ ಎಂದು ಅರಿಯಬೇಕು.

ನಮ್ಮ  ತಾಯ  ಗರ್ಭದಲ್ಲಿ  ಬೀಜಾಂಕುರವಾಗಿ, ನಾವು ಈ ಭುವಿಗೆ ಒಂದು ಸಣ್ಣ  ಶಿಶುವಾಗಿ  ಬರುತ್ತೇವೆ.  ಹಾಗೆ ಬಂದ ನಾವೇ ಒಂದು ಮರದಂತೆ ಬೆಳೆದು ನಮ್ಮ ವಂಶದ ಶಾಖೆಗ
ಳಂತೆ ಹರಡಿ ಕೊಳ್ಳುತ್ತೇವೆ. ಇಲ್ಲಿ ನಾವು ಮರವಾದರೆ ನಮ್ಮಿಂದ ಹೊರಡುವುದೆಲ್ಲ ನಮ್ಮ ಶಾಖೆಗಳು ಅಥವಾ ಕೊಂಬೆಗಳಲ್ಲವೇ? ಹಾಗೆ ನಾವೂ ಸಹ ಯಾವುದೋ ಮರದ ಕೊಂಬೆಗಳಾಗಿರುತ್ತೇವೆ.  ಹೀಗೆ ಎಲ್ಲ  ಕೊಂಬೆಗಳಿಂದಾದ  ಈ ಜಗತ್ತೇ ಒಂದು ವೃಕ್ಷದಂತೆ ಅಲ್ಲವೇ? ಈ ವೃಕ್ಷವನ್ನು ನಾವು ಸಂರಕ್ಷಿಸಬೇಕು, ಬೆಳೆಸಬೇಕು, ಕಳೆ ಕೀಳಬೇಕು ಮತ್ತು ಇದರ ಸೇವೆ ಮಾಡಬೇಕು.

ಇಡೀ ಮನುಕುಲವೇ ಒಂದು ಬೃಹತ್ ವೃಕ್ಷ. ಈ ಭೂಮಿಯಮೇಲೆ ಮಾನವನ ಅಸ್ತಿತ್ವದ ಇತಿಹಾಸದ ಮೂಲಕ್ಕೆ ಹೋದರೆ. ಒಂದೇ ಒಂದು ಬೀಜದಿಂದ ಬೆಳೆದ ಒಂದು ಬೃಹತ್ ವೃಕ್ಷದಂತೆ, ಒಂದೇ ಮೂಲದಿಂದ ಹೊರಟ ಮಾನವ  ಹಲವಾರು ದಿಕ್ಕುಗಳಿಗೆ, ಗುಂಪು ಗುಂಪಾಗಿ ತೆರಳಿ,  ಇಡೀ ಭೂಮಂಡಲದಲ್ಲೆಲ್ಲಾ ವ್ಯಾಪಿಸಿಕೊಂಡಿರುವ ಒಂದು ಮಹಾನ್ ಮಾನವ ಸಮೂಹದ ವೃಕ್ಷದಂತೆ ಬೆಳೆದುಕೊಂಡಿದ್ದಾನೆ.

ಬೇರೆ ಬೇರೆ ದಿಕ್ಕುಗಳಲ್ಲಿ  ಹೊರಟ ಒಂದೊಂದು ಸಮೂಹವೂ ಈ ಮಾನವ ಸಮೂಹದ ವೃಕ್ಷದ ಒಂದೊಂದು ಕೊಂಬೆಯಂತೆ ಗೋಚರವಾಗುತ್ತದೆ. ಮೂಲದಲ್ಲಿದ್ದ ಗುಣಗಳು ಸಂಸ್ಕಾರಗಳು ಸಂಸ್ಕೃತಿಗಳು ಬದಲಾಗುತ್ತಾ, ಇವನ ಭಾಷೆ, ವೇಷ, ಅಚಾರ ವಿಚಾರಗಳು, ಕಾಲ ಬದಲಾದಂತೆ, ಸ್ಥಳ ಬದಲಾದಂತೆ ಬದಲಾಗುತ್ತಾ ಬೇರೆಯದೇ ರೂಪವನ್ನು ತಳೆದುಕೊಳ್ಳುತ್ತಾ ಹೋಗಿದೆ. ಮನುಷ್ಯ ಹೋದ ಕಡೆಯಲ್ಲ ಒಂದು ಹೊಸ ಸಂಸ್ಕೃತಿ ಕಲೆ ಸಾಹಿತ್ಯಗಳ ಉಗಮವಾಯಿತು. ಕಾಲಾನುಕಾಲಕ್ಕೆ ಮೂಲವನ್ನು ಮರೆತು, ಹೊಸದಾಗಿ ತನ್ನದಾಗಿಸಿಕೊಂಡ  ಸ್ವಂತಿಕೆಯಿಂದಲೇ ಮೆರೆಯಲು ಶುರುವಾಯಿತು. ಹೀಗೆ ಹಲವಾರು ರೀತಿಯ ಭಾಷೆಗಳು, ಕಲೆ ಸಾಹಿತ್ಯಗಳು, ಉಡುಗೆ ತೊಡುಗೆಗಳು, ಆಹಾರ ಪದ್ದತಿಗಳು, ಸಾಮಾಜಿಕ ಮೌಲ್ಯಗಳು ಇತ್ಯಾದಿಯಾಗಿ,  ಒಂದೊಂದು ಶಾಖೆಯೂ  ವಿಶಾಲವಾಗಿ ಹರಡಿ ನಿಂತಿದೆ ಮನುಕುಲವೆಂಬ  ಈ ಜಗದ್ವೃಕ್ಷದಲ್ಲಿ.

ನಾವುಗಳು ಅಂತಹ   ಜಗದ್ವೃಕ್ಷದ ಒಂದು ಶಾಖೆಯ ಒಂದು ಕೊಂಬೆಯಾಗಿಯೋ, ರೆಂಬೆಯಾಗಿಯೂ, ಎಲೆಯಾಗಿಯೋ, ಹೂ,  ಕಾಯಿ, ಹಣ್ಣಾಗಿಯೋ ಇದ್ದೇವೆ.  ನಾವು ಈ ವೃಕ್ಷದ ಅಂದವನ್ನು ಹೆಚ್ಚಿಸಲು, ಇದರ ಸತ್ವಯುತ ಮೌಲ್ಯಗಳನ್ನು, ಕಾಪಾಡುತ್ತಾ, ಇಲ್ಲಿರುವ ದುರಾಚಾರದ ಕಳೆಯನ್ನು ಕಿತ್ತೊಗೆಯುತ್ತಾ, ಕೊಳೆತು ನಾರುತ್ತಾ, ಇಡೀ ವೃಕ್ಷಕ್ಕೆ ಹಾನಿ ಉಂಟುಮಾಡಬಹುದಾದ ಭಾಗಗಳನ್ನು  ಕತ್ತರಿಸಿ ಬಿಸುಡುತ್ತಾ, ಹೊಸ ಚಿಗುರಿನಿಂದ ನಳನಳಿಸುತ್ತಾ ಈ ಜಗತ್ ವೃಕ್ಷದ ಅನ್ಯ ಶಾಖೆಗಳೊಂದಿಗೆ ಸೌಹಾರ್ದಯುತವಾದ ಬಾಳು ಬಾಳುತ್ತಾ, ಇದರ ಸೌಂದರ್ಯಕ್ಕೆ ಚ್ಯುತಿ ಬಾರದಂತಹ  ಕೆಲಸವನ್ನು ಸೇವಾರೂಪದಲ್ಲಿ ಮಾಡಬೇಕಾಗಿರುವುದೇ ನಮ್ಮ ಇಂದಿನ ಧರ್ಮವೆಂದು ಅರಿಯಬೇಕು. 

ಆದರೆ ಪ್ರಸಕ್ತ ವಸ್ತು ಸ್ಥಿತಿಯೇ  ಬೇರೆ ಇದೆ. ಅಂತಃಕರಣವಿರುವ ಪ್ರತಿಯೊಬ್ಬನಿಗೂ ಖೇದವಾಗುವಂಥಾ, ಈ ಜಗತ್ತಿನ ಮೇಲೆ ಜಿಗುಪ್ಸೆ ಬರುವಂಥಾ ಸ್ಥಿತಿ ಉಂಟಾಗಿದೆ. ಸ್ವಾರ್ಥ, ದ್ವೇಷ, ಅಸೂಯೆಯ ಕಾರಣ, ದೇಶ, ಜಾತಿ, ಧರ್ಮ ಭಾಷೆಗಳನ್ನೂ ಮುಂದಿಟ್ಟುಕೊಂಡು ಇಡೀ ಜಗತ್ತಿನ ಜನರು ಪರಸ್ಪರ ಹೊಡೆದಾಡುವುದನ್ನು ನೋಡಿದರೆ ಮನುಕುಲದ ನಾಶವೇ ಆಗಿಬಿಡುವುದೇನೋ ಎನ್ನುವ ಭಯವುಂಟಾಗುತ್ತದೆ. ಇದನ್ನು ಸರಿಪಡಿಸಲು ಪ್ರಯತ್ನ ಪಡಬೇಕಾದುದೇ ನಮ್ಮ ಇಂದಿನ ಧರ್ಮ.  ನಾವೂ ಸಹ ನಮ್ಮ ನಮ್ಮ ವೃತ್ತಗಳಲ್ಲಿ, ಈ  ಜಗತ್ತೆಂಬ ವೃಕ್ಷದ ಸುಂದರತೆಯನ್ನು ಕಾಪಾಡಲು  ಅಧಿಕವಾಗಿಸಲು ನಮ್ಮ ಕೈಲಾದ ಪ್ರಯತ್ನವನ್ನು ಮಾಡಬೇಕು. 


Monday 15 January 2018

'ಋತ ಮತ್ತು ಸತ್ಯ’


  
ಸತ್ಯವೆಂದರೆ ಏನು?  ಎಂದರೆ,  'ಸತ್ಯ' ವೇ ಸತ್ಯ. ಯಾವುದೇ ವ್ಯಕ್ತಿ, ವಸ್ತು ಅಥವಾ ವಿಷಯಕ್ಕೆ ಎರಡು ಸತ್ಯಗಳಿರಲು ಸಾಧ್ಯವಿಲ್ಲ. ಆದರೆ ಅವಕ್ಕೆ ಸಂಬಂಧಿಸಿದಂತೆ ಜನರು ನೀಡುವ ಪರಿಭಾಷೆ ಭಿನ್ನಭಿನ್ನವಾಗಿರುತ್ತದೆ. ಆ ಭಿನ್ನತೆ,  ಅದನ್ನು ನೋಡುವ ಮತ್ತು ವಿಶ್ಲೇಷಿಸುವ ವ್ಯಕ್ತಿಯ ಪರಿಮಿತ ಜ್ಞಾನದಲ್ಲಿರುತ್ತದೆಯೇ ಹೊರತು ಆ ವಸ್ತು ವ್ಯಕ್ತಿ ಅಥವಾ ವಿಷಯದಲ್ಲಿರುವುದಿಲ್ಲ. ಉಪನಿಷತ್ತು ' ಋತಂ ಚ ಸ್ವಾಧ್ಯಾಯ ಪ್ರವಚನೇ ಚ,  ಸತ್ಯಂಚ ಸ್ವಾಧ್ಯಾಯ ಪ್ರವಚನೇ ಚ ' ಎನ್ನುತ್ತದೆ. ಇಲ್ಲಿ  'ಋತ' ವೆಂದರೆ ಮನಸ್ಸಿನ ಭಾವ ಮತ್ತು ಆ ಭಾವ ತನ್ನ ಸ್ವರೂಪವನ್ನು ಕಳೆದುಕೊಳ್ಳದೆ ಯಥಾವತ್ ಪ್ರಕಟವಾದರೆ ಅದು ' ಸತ್ಯ ' ವಾಗುತ್ತದೆ.  ನಮಗೆ ಕಾಣುವ ವಸ್ತು, ವಿಷಯ ಅಥವಾ ವ್ಯಕ್ತಿಗಳನ್ನು,  ನಾವು ಕಾಣುವ ರೀತಿ ನಮಗೆ ಸತ್ಯ. ಅದು ಅನ್ಯರಿಗೆ ಬೇರೆಯ ರೀತಿಯಲ್ಲಿ ಕಂಡರೆ ಅದು ಅವರು ಕಂಡ ಸತ್ಯವಾಗುತ್ತದೆ. ಆದರೆ ಆ ವಸ್ತು, ವ್ಯಕ್ತಿ ಅಥವಾ ವಿಷಯದ ' ನೈಜ ' ಸ್ವರೂಪದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.  ಹಾಗಾಗಿ ಸತ್ಯ ಎಂದಿಗೂ ಬದಲಾಗುವುದಿಲ್ಲ, ನೋಡುವವರ ನೋಟದ ಪರಿಭಾಷೆ ಬದಲಾಗುತ್ತದೆ ಅಷ್ಟೇ.  ಇದಕ್ಕೆ ರಾಮಾಯಣದಲ್ಲಿ ಬರುವ ಒಂದು ದೃಷ್ಟಾಂತವನ್ನೇ ನೋಡಿ.  ಸೀತೆಯನ್ನು ನೋಡಿ ರಾವಣನಿಗೆ ಅವಳನ್ನು ಪಡೆಯಬೇಕೆಂಬ ಚಪಲವಾಯ್ತು. ಆದರೆ ಸೀತೆಗೆ ಬಂಗಾರದ ಜಿಂಕೆಯನ್ನು ನೋಡಿ ಅದನ್ನು ಪಡೆಯಬೇಕೆಂಬ ಚಪಲವಾಯ್ತು. ಇಬ್ಬರಿಗೂ ಆದದ್ದು ಚಪಲ ಅಥವಾ ಬಯಕೆಯೇ ಆದರೂ ಜನರು ಸೀತೆಗೆ ಕನಿಕರ ತೋರುತ್ತಾರೆ ಮತ್ತು ರಾವಣನನ್ನು ದುಷ್ಟನೆಂದು ಜರಿಯುತ್ತಾರೆ. ಹಾಗೆ ಭಿನ್ನವಾಗಿ ಅಭಿಪ್ರಾಯಪಡುವ ಜನರು, ನಮ್ಮ  ಅಥವಾ ಇತರರ ಮನವ

ನ್ನು ಸರಿಯಾಗಿ ಅರಿಯದೆ ಮಾತನಾಡುತ್ತಾರೆ. ಇಲ್ಲಿ ಸೀತೆಯೂ ಚಪಲ ಚಿತ್ತದಿಂದ ಇಚ್ಛೆ ಪಟ್ಟಳು ಮತ್ತು ರಾವಣನೂ ಅದೇ ಚಪಲ ಚಿತ್ತದಿಂದ ಸೀತೆಯನ್ನು ಬಯಸಿದ. ಇಬ್ಬರ ಮನೋಭಾವವೂ ಒಂದೇ ಆಗಿತ್ತಲ್ಲವೆ?  ಆದರೆ ಜನರು ರಾವಣನನ್ನು ದುಷ್ಟನೆಂದು ಜರಿಯುತ್ತಾರೆ ಮತ್ತು ಸೀತೆಯನ್ನು ಕನಿಕರಿಸುತ್ತಾರೆ.

ಸೀತೆಯ ಮತ್ತು ರಾವಣನ ಮನಸ್ಸಿನ ಭಾವವೆರಡೂ ಒಂದೇ ಆಗಿದ್ದರೂ ಜನರು ಆ 'ಸತ್ಯ' ವನ್ನು ನೋಡುವುದು ಭಿನ್ನ ರೀತಿಯಲ್ಲಿ ಅಲ್ಲವೇಇಂದು ನಮಗೆ ಸತ್ಯವಾಗಿ ಕಂಡದ್ದು ನಾಳೆ ಅಸತ್ಯವಾಗಿ ಕಾಣಬಹುದು ಮತ್ತು ವಿರುದ್ಧವಾಗಿಯೂ ಆಗಬಹುದು. ಜನರಿಗೆ ಒಂದು ಅಭಿಪ್ರಾಯವನ್ನು ವಹಿಸಲು ಅವರವರದೇ ಕಾರಣಗಳಿರುತ್ತದೆ. ಸತ್ಯವರಿತರೆ ನಾವು ಪಕ್ಷ ವಹಿಸುವ ಪ್ರಶ್ನೆ ಬರುವುದಿಲ್ಲ. ಹಾಗಾಗಿ ನಾವು ಸತ್ಯವರಿಯದೆ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ತಪ್ಪು ಮತ್ತು ಸದಾ ನಮ್ಮ ಪ್ರಯತ್ನ ಸತ್ಯವನ್ನಿರಿಯುವುದೇ ಆಗಿರಬೇಕು. 


ಹೀಗೆ ಒಂದೇ ಸತ್ಯವನ್ನು ಭಿನ್ನವಾಗಿ ಕಾಣಲು ಕಾರಣಗಳು ಹಲವಾರು. ಅದರಲ್ಲಿ ಬಹು ಮುಖ್ಯವಾದದ್ದು ನಮ್ಮ ಮೋಹದಿಂದ ಕೂಡಿದ 'ಪೂರ್ವಾಗ್ರಹ'  ಮತ್ತು ಎರಡನೆಯದು, ನಮ್ಮ 'ಅಜ್ಞಾನ'. ನಾವು ನಮ್ಮ ಮೋಹವನ್ನು ಬಿಟ್ಟರೆ,  ಆಗ ನಾವು ಯಾವುದಾದರೂ ಪಕ್ಷ ವಹಿಸಿ ಸತ್ಯದಿಂದ ದೂರಾಗುವುದು ತಪ್ಪುತ್ತದೆ ಮತ್ತು ಅಜ್ಞಾನವನ್ನು ತೊರೆದು ಸತ್ಯವನ್ನರಿತು ನಡೆದುಕೊಂಡರೆ ಕ್ಲೇಶ ತಪ್ಪುತ್ತದೆ. ನಾವು ನುಡಿಯುತ್ತಿರುವುದು ಸತ್ಯವೋ ಅಸತ್ಯವೋ ಎನ್ನುವ ಮಂಥನ ಸದಾಕಾಲ ನಡೆಯುತ್ತಲೇ ಇರಬೇಕು. ಸತ್ಯವನ್ನೇ ನುಡಿಯುವ ನಿರ್ಧಾರ ಮಾಡಬೇಕು.   

ಋತವು, ಬದಲಾಗದೆ ಹಾಗೇ ಹೊರಬಂದರೆ ಸತ್ಯವನ್ನೇ ನುಡಿದಂತಾಗುತ್ತದೆ.  ಸತ್ಯವನ್ನು ನುಡಿದರೆ ಮನಸ್ಸಿಗೆ ನಿರಾಳ. ಸತ್ಯವನ್ನು ನುಡಿದರೆ ನಮ್ಮ ಅಂತರಂಗ ಶುದ್ಧವಾಗಿರುತ್ತದೆ.  

ಜಗತ್ಸೌಂದರ್ಯ


ನಾವಿರುವ ಜಗತ್ತು ಬಹಳ ಸುಂದರ. ಯಾವುದರಲ್ಲೂ ಯಾವುದೇ ರೀತಿಯ ಕೊರತೆಗಳಿಲ್ಲ. ಸೌಂದರ್ಯವನ್ನು ನೋಡುವ ಮನಸಿರಬೇಕು. ಕಂಡದ್ದನ್ನು ' ಸುಂದರ ಎಂದು ಅರಿತುಕೊಳ್ಳುವ ಜ್ಞಾನವಿರಬೇಕು. ಕಂಡ ಸೌಂದರ್ಯವನ್ನು ಆಸ್ವಾದಿಸುವ ಸಂಸ್ಕಾರವಿರಬೇಕು.  ಕಡಲಂಚಿನಲ್ಲಿ ಕಾಣುವ ನೇರ ನೇರವಾದ ಗೆರೆ ಹೇಗೆ ಕಡಲಲ್ಲಿ ತೆರೆಯೆದ್ದಾಗ ಒಂದು ಬಾರಿ ಬಳುಕಿ ನೋಡುಗರಿಗೆ ಆನಂದವನ್ನು ನೀಡುತ್ತದೋ, ಹೇಗೆ ರಾಗದ ಜೊತೆ ತಾಳ ಸೇರಿ ಲಯವಾಗಿ ನಾಟ್ಯಧಾಟಿಯಿಂದ ಮನವನ್ನು ರಂಜಿಸುತ್ತದೆಯೋ, ಪ್ರತಿಯೊಂದೂ, ಉರಿವ ಅಗ್ನಿ ಗೋಳಗಳಾಗಿದ್ದರೂ,  ಆಗಸದ ಪಟಲದಲ್ಲಿ ಉದ್ದಕ್ಕೂ ಹರಡಿ ನಕ್ಷತ್ರಗಳು, ಒಂದು ಸುಂದರ ಚಿತ್ತಾರವನ್ನು ಮೂಡಿಸಿದೆಯೋ, ಹಾಗೆ ವಿಲಕ್ಷಣವಾದ ಪ್ರತಿಯೊಂದೂ ಜಗತ್ತನ್ನು ಸುಂದರವಾಗಿಸಲು ಇಂಬು ನೀಡುತ್ತಿವೆ. ವಿಲಕ್ಷಣವೆನ್ನುವುದು ನಮ್ಮ ಭಾವವೇ ಹೊರತು ವಸ್ತುವಿನ ನಿಜಸ್ಥಿತಿಯಲ್ಲ. ಏಕೆಂದರೆ ಪರಮಾತ್ಮನ ಸೃಷ್ಟಿಯ ಎಲ್ಲವೂ ಪರಿಪೂರ್ಣ ಮತ್ತು ಸುಂದರ.   

ಇಲ್ಲಿ ವಿಲಕ್ಷಣವೆಂದರೆ ವಿವಿಧ ಲಕ್ಷಣಗಳನ್ನು ಹೊಂದಿರುವ ಅನೇಕಾನೇಕ ವಸ್ತುಗಳು ಒಂದ್ಕೊಂದಕ್ಕೆ ಹೇಗೆ ಪೂರಕವಾಗಿವೆ ಎನ್ನುವುದೇ ಅರ್ಥ.  ಸೃಷ್ಟಿಯ ಪ್ರತಿಯೊಂದೂ ಮತ್ತೊಂದರೊಡನೆ ಸಂಪರ್ಕಕ್ಕೆ ಬಂದಾಗ ಉಂಟಾಗುವ ಸುಂದರತೆಯೇ ಸೃಷ್ಟಿಯ ವಿಶೇಷ . ಭೂಮಿಯ, ಸೂರ್ಯನ, ನೀರಿನ ಸಂಪರ್ಕಕ್ಕೆ ಬಂದಾಗ ಒಂದು ಬೀಜ ಸಸಿಯಾಗಿ, ಗಿಡವಾಗಿ, ಮರವಾಗಿ ಬಣ್ಣ ಬಣ್ಣದ    ಸುಗಂಧಭರಿತ ಹೂಗಳಿಂದ, ರುಚಿ ರುಚಿಯಾದ ಹಣ್ಣುಗಳಿಂದ ಸುಂದರವಾಗಿ ಎಲ್ಲರಿಗೂ ಆನಂದವನ್ನು ನೀಡುತ್ತದೆಯಲ್ಲವೇ? ಹಾಗೆಯೇ ಸಕಲ ಜೀವರಾಶಿಗಳೂ ಮತ್ತೆಲ್ಲ ಅನ್ಯ ಜೀವರಾಶಿಗಳಿಗೂ ಆನಂದವನ್ನು ಕೊಡುತ್ತವೆ. ಹಾಗೆ ಆನಂದವನ್ನು ನೀಡುವುದೇ ಸೃಷ್ಟಿಯ ಪ್ರತಿಯೊಂದರ ಬದುಕಿನ ಸಾರ್ಥಕತೆ.

ಮಕ್ಕಳಿಗೆ ಪಾಠ ಹೇಳಿಕೊಡುವ ಉಪಾಧ್ಯಾಯ, ಹಾಡಲು ಕಲಿತ ಗಾಯಕ, ನೃತ್ಯಮಾಡುವ ಕಲಾವಿದ, ಚಿತ್ರ ಬಿಡಿಸುವ ಕಲೆಗಾರ, ಶಿಲ್ಪಗಳನ್ನು ಕೆತ್ತುವ ಶಿಲ್ಪಿ, ಅನ್ಯರ ದುಃಖಕ್ಕೆ ಮಿಡಿಯುವ ಸಹೃದಯಿ, ದೇಹದಂಡನೆಯಿಂದ ಬದುಕ ಕಟ್ಟಿಕೊಳ್ಳುವ ಕಾರ್ಮಿಕ, ಕಾರ್ಮಿಕರಿಗೆ ಒಂದು ಜೀವನೋಪಾದಿಯನ್ನು ಕಲ್ಪಿಸುವ ಬಂಡವಾಳಶಾಹಿ, ಹೀಗೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಅನ್ಯರಿಗೆ ಒದಗುತ್ತಾ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾನಲ್ಲವೇ. ಉದ್ದೇಶದಿಂದಲೋ ಅನುದ್ದೇಶವಾಗಿಯೋ ಪ್ರತಿಯೊಬ್ಬರೂ ಅನ್ಯರಿಗೆ ಒದಗುತ್ತಾ ತಾವೂ ಬದುಕುತ್ತಾರೆ ಅಲ್ಲವೇ?

ನಮ್ಮ ನಮ್ಮ ಜೀವನದಲ್ಲೂ ಅಂತಹ ಮಧುರವಾದ ವಿಷಯಗಳನ್ನು ನಾವು ಎಲ್ಲ ಕಡೆಯೂ ನೋಡಬಹುದು. ನೋಡುವ ಮನಸ್ಸಿರಬೇಕು ಅಷ್ಟೇ!! ಹಾರುವ ಹಕ್ಕಿ, ಬೀಸುವ ಗಾಳಿ, ಹೂ-ಹಣ್ಣು, ಗಿಡ-ಮರ, ನದಿ-ಝರಿ, ಕಾಡು-ಮೇಡು, ಪ್ರಾಣಿ, ಕೀಟ, ಕ್ರಿಮಿಗಳಂತಹ ವಸ್ತುಗಳು, ಮನುಷ್ಯರ ನಡುವಿನ ಪರಸ್ಪರ ಪ್ರೀತಿ, ಪ್ರೇಮ, ಸಹನೆ, ಭಕ್ತಿಯಂತ ಮದುರ ಭಾವಗಳು, ಸಕ್ರಿಯತೆಗೆ ಇಂಬು ನೀಡುವ  ದ್ವೇಷ, ಅಸೂಯೆ, ಕೋಪ, ಮುಂತಾದ ನಕಾರಾತ್ಮಕ ಭಾವಗಳೂ ಸಹಃ ಜಗತ್ತಿನ ಆನಂದವನ್ನು ಹೆಚ್ಚಿಸಲು ಇಂಬು ನೀಡುತ್ತವೆ.    

ಜಗತ್ತಿನ ಸೃಷ್ಟಿಯ ಹಿಂದಿರುವ ಪರಮ ಚೇತನವೂ ಸುಂದರ, ಸುಂದರತೆಯಿಂದ ಸೃಷ್ಟಿಸಲ್ಪಟ್ಟ ಸಕಲವೂ ಸುಂದರ. ನೋಡುವ ಮನಸ್ಸು ಇರಬೇಕು, ಅನುಭವಿಸಲು ಹೃದಯಬೇಕು. ಪಡೆದ ಆನಂದವನ್ನು ಪರರಿಗೆ ಹಂಚುವ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಹಾಗಾದರೆ ನಾವು ಸೌಂದರ್ಯೋಪಾಸನೆಯನ್ನು ಯತೇಚ್ಚವಾಗಿ ಮಾಡಬಹುದು. ನಾವೂ ಸಹ ಜಗತ್ತಿನ ಎಲ್ಲಾ ಸುಂದರತೆಯಲ್ಲೂ ನಮ್ಮ ಪಾತ್ರವನ್ನು ಸಮರ್ಪಕವಾಗಿ ವಹಿಸುತ್ತಾ, ನಾವೂ ಸಂತೋಷಪಡುತ್ತಾ ಅನ್ಯರಿಗೆ ನಾವು ಪಟ್ಟ ಸಂತೋಷವನ್ನು ಹಂಚುತ್ತಾ ಬದುಕಿದರೆ ಜೀವನ ಸುಂದರವಾಗಿ ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ. ಒಟ್ಟಿನಲ್ಲಿ ಸೌಂದರ್ಯವನ್ನು ಕಾಣುವ, ಆಸ್ವಾಧಿಸುವ, ಆನಂದಿಸುವ ಮತ್ತು ಅದನ್ನು ಅನ್ಯರೊಡನೆ ಹಂಚಿಕೊಳ್ಳುವ ಬುದ್ಧಿ ನಮ್ಮದಾದರೆ ನಾವೇ ಧನ್ಯರೆಂದುಕೊಳ್ಳಬೇಕು.