Wednesday 7 March 2018

ಆಧ್ಯಾತ್ಮದ ಹಾದಿಯಲ್ಲಿನ ಪಯಣ


ನಿರಂತರ ಒತ್ತಡದ ಜೀವನ,  ಜನರನ್ನು ಶಾಂತಿ ಮತ್ತು ನೆಮ್ಮದಿಯನ್ನು ಹುಡುಕಿಕೊಂಡು ಹಲವಾರು ದಿಕ್ಕುಗಳಿಗೆ ಹೋಗುವಂತೆ ಮಾಡುತ್ತದೆ.  ನಮ್ಮಲ್ಲಿ ಬಹಳಷ್ಟು ಜನರ ಬದುಕೊಂದು ಸುಖ ಮತ್ತು ದುಃಖಗಳ, ಉತ್ಸಾಹ ಮತ್ತು ಖಿನ್ನತೆಗಳ, ನಲಿವು ಮತ್ತು ನೋವಿನ, ಸ್ವಾಭಾವಿಕ ಚಕ್ರವೆಂದು ಒಪ್ಪಿಕೊಂಡೂ ಬಿಡುತ್ತೇವೆ. ಬದುಕಿನ ಇಂತಹ ಎಲ್ಲಾ ವಿಷಮ ಪರಿಸ್ಥಿತಿಗಳನ್ನೂ ನಾವು ಒಗ್ಗಿಕೊಂಡು ಬಿಡುತ್ತೇವೆ. ಬದುಕಿನ ಮತ್ತು ಸಂಸಾರದ ಅನ್ಯ ಜವಾಬ್ದಾರಿಗಳೊಂದಿಗೆ ಬದುಕುವಾಗ, ಎಲ್ಲ ರೀತಿಯ ವಿರೋಧಾಭಾಸಗಳೊಂದಿಗೆ ಜೀವಿಸುವುದು ಅನಿವಾರ್ಯ ಕರ್ತವ್ಯ ಅಥವಾ ನಮ್ಮ ಜವಾಬ್ದಾರಿಯನ್ನುವಂತೆ ಜೀವಿಸುತ್ತೇವೆ. ಯಾರೂ ಬದುಕಿನ  ಸಂಕಷ್ಟಗಳಿಂದಾಗಲೀ ಅಥವಾ ಕರ್ತವ್ಯಗಳಿಂದಾಗಲೀ ಪಲಾಯನ ಮಾಡಲಾಗುವುದಿಲ್ಲ. ನಾವೆಲ್ಲಾ ' ತನ್ನ ಮೂಗಿಗೆ ಮುಳ್ಳು ಚುಚ್ಚಿ ರಕ್ತ ಸುರಿದರೂ ಅದೇ  ಮುಳ್ಳಗಿಡದ ಎಲೆಗಳನ್ನು ತಿನ್ನುವಂತಹ ಒಂಟೆಯಂತೆ' ಬದುಕುತ್ತೇವೆ.  

ಮತ್ತೆ ಹಲವರು, ಮುಖ್ಯವಾಗಿ ಯುವಜನರು ಬದುಕಿನ ಒತ್ತಡಗಳಿಂದ ಹೊರಬರಲು, ಧೂಮಪಾನ, ಸುರಾಪಾನ, ಜೂಜು, ಅತಿಯಾಗಿ ಟಿ ವಿ ನೋಡುವಿಕೆಯಲ್ಲಿ ಮುಳುಗುವುದು ಇತ್ಯಾದಿ ವ್ಯಸನಗಳಿಗೆ ಸುಲಭವಾಗಿ ಬಲಿಯಾಗುತ್ತಾರೆ. ಕೆಲವರಂತೂ ಮಧ್ಯಪಾನ ಮತ್ತು ಮಾದಕ ದ್ರವ್ಯಗಳ ವ್ಯಸನಿಗಳಾಗಿ ಅಧೋಗತಿಗೆ ಇಳಿಯುತ್ತಾರೆ. ಇನ್ನು ಮೂರನೆಯ ಗುಂಪಿನ ಜನರಿದ್ದಾರೆ. ಅವರಿಗೆ ಜೀವನದ ಅಥವಾ ಬದುಕಿನ ಒತ್ತಡಗಳನ್ನು ಸಮರ್ಪಕವಾದ ರೀತಿಯಲ್ಲಿ ನಿಭಾಯಿಸಲಾಗದೆ ಮಾನಸಿಕ ಒತ್ತಡ, ಖಿನ್ನತೆ ಮತ್ತು ನರದೌರ್ಬಲ್ಯ ಮುಂತಾದ ರೋಗಗಳಿಗೆ ತುತ್ತಾಗುತ್ತಿದ್ದಾರೆ ಅಥವಾ ಆತ್ಮಹತ್ಯೆಗೆ ಶರಣಾಗುತ್ತಾರೆ.   

ಬೆರಳೆಣಿಕೆಯಷ್ಟು ಅದೃಷ್ಟಶಾಲಿಗಳು ಬದುಕಿನ ದುರಂತಗಳನ್ನು ಅನುಭವಿಸಿ, ನೊಂದು, ಬದುಕಿನ ಹಿಂಜರಿತಗಳನ್ನು ಅನುಭವಿಸಿ ಹೋರಾಟದ ವ್ಯರ್ಥತೆಯನ್ನು ಮನಗಂಡು ಆಧ್ಯಾತ್ಮದ ಹಾದಿಯಲ್ಲಿ  ನಡೆಯಲುದ್ಯುಕ್ತರಾಗುತ್ತಾರೆ. ಈ ಅವಕಾಶವನ್ನು ಅವರುಗಳು ಪ್ರಾಪಂಚಿಕ ಬಂಧನಗಳಿಂದ ಬಿಡುಗಡೆಯ ಮತ್ತು ಆತ್ಮಜ್ಞಾನಕ್ಕೆ ಸೂಕ್ತಮಾರ್ಗವೆಂದು ಅರಿತು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ.  ಅಂತಹ ಭಾವಗಳು ಒಬ್ಬ ವ್ಯಕ್ತಿಯನ್ನು, ತನ್ನ  ವೈಯಕ್ತಿಕ ಸಮಸ್ಯೆಗಳಿಂದ ಮುಕ್ತಿಯನ್ನು ನೀಡುವ ಯಾವುದಾದರೂ ಆಶ್ರಮದ ಬಾಗಿಲಿಗೋ ಅಥವಾ ಯಾರಾದರೂ ಸದ್ಗುರುವಿನ ಪಾದತಲಕ್ಕೋ ಕೊಂಡೊಯ್ಯುತ್ತದೆ. ಆದರೆ ಬಹಳಷ್ಟು ಬಾರಿ ಇದು ಸಂಸಾರದಿಂದ ತಾತ್ಕಾಲಿಕ ವಿಮುಖತೆಯಾಗುತ್ತದೆ.  ಒಂದು ಬಾರಿ ತನ್ನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದರೆ ಶ್ರೀ ರಾಮಕೃಷ್ಣ ಪರಮಹಂಸರು ' ಚಿನ್ನದ ಲಾಲಸೆ ' ಎಂದು ಯಾವುದನ್ನು ಕರೆದರೋ ಹಾಗೆ ಆ ವ್ಯಕ್ತಿ ಮತ್ತೆ ಸಾಂಸಾರಿಕ ಬಂಧನಗಳಲ್ಲಿ ತಾನೇ ಬಂದು ಸಿಲುಕಿಕೊಳ್ಳುತ್ತಾನೆ.  ಹೀಗೆ ಸಾಂಸಾರಿಕ ಸುಳಿಯಲ್ಲಿ ಸಿಲುಕಿಕೊಂಡ ಮನುಷ್ಯ ' ಆತ್ಮದ ಕರೆ ' ಯನ್ನೂ ಮರೆಯುತ್ತಾನೆ ಮತ್ತು ಆ ಸಾಧು ಸತ್ಪುರುಷರ ವಾಣಿಯನ್ನೂ ಸಹ ಮರೆಯುತ್ತಾನೆ.  

ಒಂದು ಕಡೆ ಗುಮಾಸ್ತೆಯ ಕೆಲಸ ಮಾಡುತ್ತಿದ್ದ ಒಬ್ಬ ಜೀವನದ ಜಂಜಾಟದಿಂದ ಜಿಗುಪ್ಸೆಗೊಂಡು ತನ್ನ ಕೆಲಸವನ್ನುಬಿಟ್ಟುಬಿಟ್ಟು ತಾನೆಲ್ಲವನ್ನೂ ತೊರೆದಿದ್ದೇನೆ ಎಂದು ಹೇಳುತ್ತಾ ಸನ್ಯಾಸಿಯಾಗಬೇಕೆಂದು 'ಕಾಶಿ ' ಗೆ ಬಂದು ಸೇರಿದವನ ಕಥೆಯನ್ನು ' ಶ್ರೀ ರಾಮಕೃಷ್ಣ ಪರಮಹಂಸ' ರು ಹೇಳುತ್ತಿದ್ದರು. ಆದರೆ ಅಲ್ಲಿ ಅವನಿಗೆ ಹೆಚ್ಚಿನ ಸಂಬಳದ  ಹೊಸ ಕೆಲಸ ಸಿಕ್ಕೊಡನೆಯೇ ' ಸನ್ಯಾಸಿ'  ಯಾಗುವ ತನ್ನ ಬಯಕೆ ಮತ್ತು ನಿರ್ಧಾರಕ್ಕೆ ತಿಲಾಂಜಲಿ ಕೊಟ್ಟನಂತೆ. ಇದು ತಾತ್ಕಾಲಿಕ ವೈರಾಗ್ಯ. ಸಾಮಾನ್ಯವಾಗಿ ಸತ್ಯವಾಗಿ ವೈರಾಗ್ಯ ಬಂದರೆ ಅದರಿಂದ ಯಾರೂ ವಿಮುಖರಾಗುವುದಿಲ್ಲ. ಆದರೆ ಯಾವುದೋ ಒಂದು ಕಾರಣಕ್ಕೆ ವೈರಾಗ್ಯಬಂದರೆ ಆ ಕಾರಣ ನಿವಾರಣೆಯಾದಕೂಡಲೇ ಆ ವೈರಾಗ್ಯವೂ ಮಾಯವಾಗಿಬಿಡುತ್ತದೆ. ಈ ರೀತಿಯ ವೈರಾಗ್ಯಗಳಲ್ಲಿ ಹಲವಾರು ವಿಧಗಳಿವೆ. ಉದಾ: ಸ್ಮಶಾನ ವೈರಾಗ್ಯ, ಎಂದರೆ ಯಾರಾದರೂ ಸತ್ತಾಗ ' ಆಯ್ಯೋ ಜೀವನವೆಂದರೆ ಇಷ್ಟೆಯೇ? ಸಾವು ಎಲ್ಲಕ್ಕೂ ಒಂದು ಅಂತ್ಯವಲ್ಲವೇ? ಈ ಬದುಕು ಎಷ್ಟೊಂದು ವ್ಯರ್ಥ, ... ಹೀಗೆ ಹಾಲವಾರು ರೀತಿಯ ವೈರಾಗ್ಯದ ಭಾವಗಳು ಬರುತ್ತವೆ. ಆದರೆ ಸತ್ತ ವ್ಯಕ್ತಿಯನ್ನು ಸ್ಮಶಾನದಲ್ಲಿ ಶವಸಂಸ್ಕಾರಮಾಡಿ ಮನೆಗೆ ಬಂದೊಡನೆಯೇ ಅಲ್ಲಿ ಉಂಟಾದ ಎಲ್ಲಾ ವೈರಾಗ್ಯದ ಭಾವಗಳೂ ಮಾಯವಾಗಿಬಿಡುತ್ತವೆ. ಇದೇ ರೀತಿ ಪ್ರಸವ ವೈರಾಗ್ಯ, ಅಭಾವ ವೈರಾಗ್ಯ,  ಕ್ಲಿಷ್ಟತೆಯಲ್ಲಿ ವೈರಾಗ್ಯ, ಇತ್ಯಾದಿ. ಇದು ಕಠೋಪನಿಷತ್ತಿನಲ್ಲಿ ಹೇಳಿದಂತೆ ' ಕತ್ತಿಯ ಮೇಲಿನ ಸಾಮು' 

ಹಾಗಾದರೆ ಪರತತ್ವವನ್ನು ಅರಿಯುವ ಹಾದಿಯಲ್ಲಿರುವ ಕ್ಲಿಷ್ಟತೆಗಳನ್ನು, ಅರಿಯಬೇಕೆಂದು ಬಯಸುವವರಿಗೆ ಏಕಾಗಿ ತಿಳಿಸುವುದಿಲ್ಲ? ಪ್ರಯತ್ನಿಸಿದ ಲಕ್ಷಾಂತರ ಜನರಲ್ಲಿ ಯಾರೋ ಒಬ್ಬರಿಗೆ ಯಶಸ್ಸು ಸಿಗುತ್ತದೆ ಮತ್ತು ಮಿಕ್ಕವರೆಲ್ಲರೂ ಗುರಿಗೆ ಬಹಳ ದೂರವಾಗಿಯೇ ಉಳಿಯುತ್ತಾರೆ ಎನ್ನುವುದಾದರೆ, ಏಕಾಗಿ ಪ್ರತಿಯೊಬ್ಬರನ್ನೂ ಆಧ್ಯಾತ್ಮದ ಸಾಧನೆಯನ್ನು ಮಾಡಲು ಹೇಳುತ್ತಾರೆ? ಇಂತಹ ಪ್ರಶ್ನೆಗಳು ಸಾಧಕನನ್ನು ಆಧ್ಯಾತ್ಮದ ಸಾಧನೆಯ ಆರಂಭದ ದಿನಗಳಲ್ಲಿ ಕಾಡುತ್ತವೆ. ಅವನಿಗೆ ಸಾಧನೆಯ ಅಂತಿಮ ಗುರಿಯೇ ಪರಮಾತ್ಮಾನುಭವ ಮತ್ತು ಆತ್ಮನೆದುರು ನಿಲ್ಲುವುದು ಎಂದೆಲ್ಲಾ ಹೇಳಲಾಗುತ್ತದೆ. ಇದು ಬಹಳ ಸರಳವಾಗಿ ಕಂಡರೂ ಅರ್ಥೈಸಿಕೊಳ್ಳಲು ಮತ್ತು ಸಾಧಿಸಲು ಬಹಳವೇ ಕಷ್ಟತರವಾದ ವಿಷಯ. ಇಂತಹ ಸೂಚನೆಗಳ ಆಂತರ್ಯವನ್ನು ಚಿಂತಿಸುವುದು ಮತ್ತು ಅರಿಯುವುದು ಬಹಳ ಕ್ಲಿಷ್ಟತೆಯಿಂದ ಕೂಡಿರುತ್ತದೆ.  
 
ಆಧ್ಯಾತ್ಮದ ಹಾದಿಯಲ್ಲಿರುವ ಬಹಳಷ್ಟು ಜನರ ಮನೋಭಾವ ಹೇಗಿರುತ್ತದೆಂದರೆ, ವಿಫುಲವಾದ ವ್ಯಾಸಂಗವಿಲ್ಲದೆ, ಆಧ್ಯಾತ್ಮದ ವಿಷಯಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ಮಹಾನ್ ಸಾಧು ಮತ್ತು ಸಿದ್ಧರೊಡನೆ ಪೈಪೋಟಿಗೆ ನಿಂತಂತೆ ಮಾತನಾಡುತ್ತಾರೆ. ಅವರ ಅಹಂಕಾರ ಉಬ್ಬಿ 'ಆತ್ಮನಿಗೆ ಜಯ' 'ಪರಮಾತ್ಮಾನುಭವ' ಮುಂತಾದ ಪದಗಳನ್ನು ಬಳಸುತ್ತಾ ಆ ವಿಚಾರದಲ್ಲಿ ಉಪನ್ಯಾಸಗಳನ್ನೂ ಕೊಡುತ್ತಾ ಆ ವಿಷಯಗಳಲ್ಲಿ ಲೇಖನವನ್ನೂ ಬರೆಯುತ್ತಿರುತ್ತಾರೆ.   

ಆದರೆ ಸಾಧಕನ ಸಾಧನೆಯ ಪ್ರಯಾಣ ಮುಂದುವರೆಯುತ್ತದೆ. ಅದು ಕಷ್ಟಗಳಿಂದ ಕೂಡಿ, ನಯವಾಗಿ ಸಾಗುತ್ತಾ, ಆಗಾಗ ಹೊಸಹೊಸ ಹೊಳಹುಗಳು ಮಿಂಚಿನಂತೆ ಬರುತ್ತಾ, ಮತ್ತೆ ಕತ್ತಲಾವರಿಸಿದಂತೆ ಆಗುತ್ತಾ ಮುಂದುವರೆಯುತ್ತದೆ. ಅಸಂಖ್ಯಾತ ಆಧ್ಯಾತ್ಮಿಕ ವಿಚಾರಗಳಲ್ಲಿ, ಜ್ಞಾನ, ಭಕ್ತಿ, ಕರ್ಮ ಮತ್ತು ರಾಜಯೋಗಕ್ಕೆ ಸಂಬಂಧಿಸಿದ ಯಾವುದಾದರೊಂದು ವಿಚಾರ ಭಾಗಶಃ ಹೊಳೆಯಬಹುದು. 

ಇದು ಸಾಧಕನಿಗೆ ಹೊಸ ಹೊಸ ಆಯಾಮಗಳ ಪರಿಚಯವನ್ನು ಮಾಡಿಸುತ್ತದೆ. ಇಲ್ಲಿ ಸಾಧಕನು, ಸತ್ಯವನ್ನರಿಯುವುದು ಮತ್ತು ಅಸತ್ಯವನ್ನು ತೊರೆಯುವ ಪ್ರವೃತ್ತಿಯಲ್ಲಿ ತೊಡುಗುತ್ತಾನೆ. ಅನ್ಯರು ಕೇವಲ ' ಪೂಜೆ ಅಥವಾ ಭಕ್ತಿ' ಅಥವಾ 'ಸಮಾಜಸೇವೆ' ಅಥವಾ ' ಮನೋನಿಗ್ರಹ' ಮುಂತಾದ  ಏಕಮುಖ ವಿಷಯಗಳಲ್ಲಿ ನಿರತರಾಗಿ ಪರಮಾತ್ಮ ಅಥವಾ ಪರತತ್ವವನ್ನು ಅರಿಯುವ ವಿಷಯಗಳಲ್ಲಿ ಬೇರೆ ಬೇರೆ ರೀತಿಯ ಅಭಿಪ್ರಾಯಗಳಿದ್ದರೂ ಗುರಿಮಾತ್ರ ಒಂದೇ ಆಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಸಾಧಕ ವಿಶಾಲಮನೋಭಾವವನ್ನು ಬೆಳೆಸಿಕೊಂಡು ಆಧ್ಯಾತ್ಮದ ಅಭ್ಯಾಸದಲ್ಲಿ ತೊಡಗಿರುವವರನ್ನೆಲ್ಲರನ್ನೂ ತನ್ನ ಸಹವಾಸಿಗಳೆಂದು ಭಾವಿಸುತ್ತಾನೆ. ಆತ್ಮಜ್ಞಾನವನ್ನು ಪಡೆಯುವ ಪ್ರಯತ್ನದಲ್ಲಿ  ಅವನು ನಾಲ್ಕೂ 'ಯೋಗ ಮಾರ್ಗ' ಗಳನ್ನೂ ಒಳಗೊಂಡಂತಹ ಮಾರ್ಗವನ್ನು ಅನುಸರಿಸುತ್ತಾನೆ. ಅವನ ಹೃದಯದಲ್ಲಿ ' ಮಹಾಯೋಗ ' ದ ಭಾವ ಸ್ಫುರಿಸುತ್ತದೆ. ಇದು ಆಧ್ಯಾತ್ಮಿಕತೆಯನ್ನು ಅರಸುವವನ ಬದುಕಿನಲ್ಲಿ ಒಂದು ಮುಖ್ಯ ಮುಂಹೆಜ್ಜೆಯಾಗುತ್ತದೆ. ಈ ದಿಕ್ಕಿನ ಉಪಕ್ರಮದಲ್ಲಿ ಇರುವ ಅಪಾಯಗಳನ್ನು ಮತ್ತು ಮುಂದೆ ಬರಬಹುದಾದ ಮತ್ತಷ್ಟು ಎಡರು ತೊಡರುಗಳನ್ನು ಎದುರಿಸಲು ಮತ್ತು ಅವುಗಳನ್ನು ದಾಟಿ ಮುನ್ನಡೆಯಲು ಬೇಕಾದ ಶಕ್ತಿಯನ್ನು ಸಾಧಕ ಪಡೆದುಕೊಳ್ಳುತ್ತಾನೆ.  

ಈ  ಸ್ಥಿತಿಯಲ್ಲಿ ಸಾಧಕ ತಾತ್ವಿಕವಾಗಿ 'ಅದ್ವೈತ ವೇದಾಂತ' ದ ತತ್ವವನ್ನು ಅರಿಯಲು ಉಪಕ್ರಮಿಸುತ್ತಾನೆ. ಅಲ್ಪಸ್ವಲ್ಪ ಸಂಶಯಗಳಿದ್ದರೂ ಸರ್ವವ್ಯಾಪಕವಾದ ಪರಮ ಚೈತನ್ಯವನ್ನು ಏಕಮೇವಾದ್ವಿತೀಯವೆಂದು ಒಪ್ಪಿಕೊಳ್ಳಲು ಮುಂದಾಗುತ್ತಾನೆ. ಸಾಧನೆಯ ಈ ಸಮಯದಲ್ಲಿ ಸಾಧಕನಿಗೆ  ಶಾಸ್ತ್ರ ಮತ್ತು ಗುರುವಿನ ಭೋದನೆಯಲ್ಲಿ  ನಂಬಿಕೆ ಮತ್ತು ಶ್ರದ್ಧೆಯ ಮಹತ್ವದ ಅರಿವಾಗುತ್ತದೆ. ಆತ್ಮವನ್ನು ಜ್ಞಾನದ, ಅಸ್ತಿತ್ವದ ಮತ್ತು ಆನಂದದ ಸ್ವರೂಪವೆಂದು ಒಪ್ಪಿಕೊಳ್ಳುತ್ತಾನೆ. ತನ್ನಲ್ಲಿರುವ ಅಜ್ಞಾನವೇ, ಆತ್ಮದ ನಿಜಸ್ವರೂಪವನ್ನು ಅರ್ಥಮಾಡಿಕೊಳ್ಳಲು ತನಗೆ ಅಡ್ಡಿಯಾಗಿದೆ ಎಂದು ಒಪ್ಪಿಕೊಳ್ಳುತ್ತಾನೆ.  ಮನಸ್ಸು ಬುದ್ಧಿಗಳ ಸಂಕೀರ್ಣತೆಗಳ ನಡುವೆ,  ಕೆಲಬಾರಿ ಚೈತನ್ಯವು ತನ್ನ ಸ್ವ-ರೂಪವನ್ನು ಮರೆಮಾಚಿಕೊಳ್ಳುತ್ತದೆ ಎಂದು ಅರಿತುಕೊಳ್ಳುತ್ತಾನೆ.  ಇಂದ್ರಿಯಾನುಭವಗಳೇ ಸತ್ಯ ಎನ್ನುವಂತಹ ಭಾವ ಕೇವಲ ಮಾಯಾ ಜನ್ಯವೆಂದು ಸಾಧಕ ಅರಿತುಕೊಳ್ಳುತ್ತಾನೆ.  

 
ಇಲ್ಲಿಯೂ ಸಹ ದ್ವಂದ್ವಗಳ ಕಾರಣವಾಗಿ ಸಾಧನೆಯ ಕೊರತೆಯಿಂದ ಸೃಷ್ಟಿಯ ಮಾಯೆ ಒಡ್ಡುವ ತಡೆಗಳ ನಡುವೆ ಸಾಧಕ ಸಂಪೂರ್ಣವಾಗಿ ಮಾಯೆಯ ಪರದೆಯನ್ನು ದಾಟಿ ಸತ್ಯವನ್ನು ಅರಿಯಲು ಅಸಮರ್ಥನಾಗುತ್ತಾನೆ. ಅಂತಹ ಸ್ಥಿತಿಯಲ್ಲಿ ಸಾಧಕ ಹೋರಾಡುತ್ತಾ ಸೋಲುತ್ತಾ, ಬೀಳುತ್ತಾ ಮತ್ತೆ ಏಳುತ್ತಾ ಮುಂದೆ ಸಾಗುತ್ತಾನೆ. ಈ ದಿಶೆಯಲ್ಲಿನ ಮುನ್ನಡೆ ಅವನಿಗೆ ಸಾಂತ್ವನ ನೀಡುತ್ತದೆ. ಕಡೆಯವರೆಗೂ ಇರುವ ದ್ವಂದ್ವಗಳ ನಡುವೆಯೂ, ಗುರುವಾಣಿ ಮತ್ತು ನಾಮಜಪದ ಬಲದಿಂದ ಮುನ್ನಡೆಯುವ ಶಕ್ತಿಯನ್ನು ಪಡೆದುಕೊಳ್ಳುತ್ತಾನೆ.  ನಿರಂತರ ಸಾಧನೆಯಿಂದ ಸಾಧಕ ಶಾಂತನಾಗುತ್ತಾನೆ. ಅವನ ಮನಸ್ಸು ಬುದ್ಧಿಗಳು ಸಂಶಯಗಳ ಸುಳಿಯಿಂದ ಹೊರಬಂದು, ಶುದ್ಧ ಆತ್ಮಜ್ಞಾನವನ್ನು ಪಡೆದಿಲ್ಲವಾದರೂ ತಾತ್ವಿಕವಾಗಿ ವೇದಾಂತದ ಸೂತ್ರಗಳಿಂದ ದೊರೆತ ಸಾಂತ್ವನದ ಕಾರಣ ಶಾಂತನಾಗುತ್ತಾನೆ. ಅವನ ಈ ಸ್ಥಿತಿಯೇ ಅವನನ್ನು ಆ ಹಾದಿಯಲ್ಲಿ ಮುನ್ನಡೆಸುತ್ತದೆ.  

ಕೆಲ ಸಾಧಕರು ಈ ಘಟ್ಟದಲ್ಲಿ 'ವೇದಾಂತ' ದ ಪಾಂಡಿತ್ಯದ ಸ್ಥರದಲ್ಲಿ ಸ್ಥಗಿತವಾಗಿ ನಿಂತುಬಿಡುತ್ತಾರೆ. ಬೇರೆ ಯಾವುದೇ ವಿಷಯದ ಅಧ್ಯಾಪಕರಂತೆ ಅವರೂ ಸಹ, ತಮ್ಮ ಸುತ್ತುಮುತ್ತಲಿನ ಜನರಿಗೆ ವೇದಾಂತದ ವಿಷಯಗಳ ಭೋದನೆಯನ್ನು ಮಾಡುತ್ತಾರೆ. ಹಾಗಾದಾಗ ಅವರ ವೈಯಕ್ತಿಕ ಸಾಧನೆ ಸ್ಥಗಿತವಾಗುತ್ತದೆ ಅಥವಾ ಹಿನ್ನಡೆಯನ್ನು ಪಡೆಯುತ್ತದೆ. ಕೆಲವರು ಶೀಘ್ರ ಆಧ್ಯಾತ್ಮಿಕ ಸಾಧನೆಗಾಗಿ ಅಥವಾ ರಕ್ತದೊತ್ತಡ, ಮದುಮೇಹ ಅಥವಾ ಮಾನಸಿಕ ಖಿನ್ನತೆಯಂತಹ ಖಾಯಿಲೆಗಳ ಉಪಶಮನಕ್ಕಾಗಿ ' ಯೋಗ' ದ  ಶಾಲೆಯನ್ನು ಆರಂಭಿಸುತ್ತಾರೆ. ಇಲ್ಲಿ ಅವರ ಆಧ್ಯಾತ್ಮಿಕ ಸಾಧನೆ ನಿಂತುಹೋಗುತ್ತದೆ ಮತ್ತು ಅವರುಗಳು ತಮ್ಮ ಸಾಧನೆಯ ಗುರಿಯ ಪಥದಿಂದ ಸರಿದು ಹೋಗುತ್ತಾರೆ.  

ಕೇವಲ ಕೆಲವೇ ಪುಣ್ಯವಂತರು ಪುಸ್ತಕದ ಕಲಿಕೆ ಮತ್ತು ಪ್ರವಚನಗಳಿಗಿಂತ, ಶಾಂತ ಸಾಧನೆಯ ಮಹತ್ವವನ್ನು ಅರಿತುಕೊಳ್ಳುತ್ತಾರೆ. ಅಂತಹವರು ತಮ್ಮ ನಂಬಿಕೆ, ಶ್ರದ್ಧೆ ಮತ್ತು ಪ್ರಯತ್ನವನ್ನು ಶಾಸ್ತ್ರ ಮತ್ತು ಗುರುವಿನ ಭೋದನೆಯ ಮೂಲಕ ಆತ್ಮಜ್ಞಾನವನ್ನು ಪಡೆಯಲು ವಿನಿಯೋಗಿಸುತ್ತಾರೆ.  ಅಂತಹ ಸಾಧಕರು  ಸಂಯಮ, ತ್ಯಾಗ, ಮನೋ ನಿಗ್ರಹ ಮತ್ತು ಸ್ವಾರ್ಥರಹಿತ ಸೇವೆಯಿಂದಾಗಿ ಆತ್ಮಾನಂದವನ್ನು ಅನುಭವಿಸುತ್ತಾ ತಾವೂ ಸಹ ' ಶುದ್ಧಾತ್ಮ ' ರಾಗುತ್ತಾರೆ.   ಸಾಧನೆಯ ಹಾದಿ ಬಹಳ ಕಠಿಣವಾದದ್ದು. ಆದರೆ ಒಂದುಬಾರಿ ಆ ದಾರಿಯಲ್ಲಿ ನಡೆದು ಅದರ ಅನುಭವಾಮೃತವನ್ನು ಸವಿದವರಿಗೆ ಈ ಜಗತ್ತಿನ ಅನ್ಯವಿಷಯಗಳಲ್ಲಿ ಕಿಂಚಿತ ಆಸಕ್ತಿಯೂ ಇಲ್ಲದೆ ಅವರು ಈ ಭಾವ ಬಂಧನದಿಂದ ಮುಕ್ತರಾಗುತ್ತಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. 
 

ರವಿ ತಿರುಮಲೈ