Tuesday 3 July 2018

'ಸ್ಥಾವರ- ಜಂಗಮ'


ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ

ಎನ್ನ ಕಾಲೇ ಕಂಬವಯ್ಯಾ
ಎನ್ನಾ ದೇಹವೆ  ದೇಗುಲವಯ್ಯ
ಎನ್ನ ಶಿರವೇ ಹೊನ್ನ ಕಳಸವಯ್ಯಾ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಕೂಡಲ ಸಮಾಗಮ ದೇವಾ

ಇದು ಜಗಜ್ಜ್ಯೋತಿ ಬಸವೇಶ್ವರರ ಒಂದು ವಚನ.  


ಈ ವಚನದ ಕಡೆಯ ಪಾದದಲ್ಲಿ ಉಲ್ಲೇಖಗೊಂಡಿರುವ 'ಸ್ಥಾವರ' ಎಂದರೆ static, ಜಂಗಮ ಎಂದರೆ dynamic. ಸ್ಥಾವರವೆಂದರೆ, ಯಾವುದರಲ್ಲಿ ಚೈತನ್ಯವಿಲ್ಲವೋ ಅದು ಸ್ಥಾವರ. ಯಾವುದು ಆ ಸ್ಥಾವರಕ್ಕೆ ಚಲನೆಯನ್ನು ನೀಡುವ ಚೈತನ್ಯವೋ ಅದು ಜಂಗಮ. ಯಾವುದಕ್ಕೆ ಚಲನೆಯಿದೆಯೋ ಅದು ಜಂಗಮ. ಇಡೀ ಜಗತ್ತು ಆಗಿರುವುದು ' ಚಿತ್ ಮತ್ತು ಅಚಿತ್ ' ಗಳಿಂದ, ಎಂದರೆ matter ಮತ್ತು energy ಈ ಅಚಿತ್ತಿನೊಳಕ್ಕೆ ಚೈತನ್ಯ ಹೊಕ್ಕು ನಡೆಸುವುದೇ ಈ ಜಗದ್ವ್ಯಾಪಾರ. ಹಾಗಾಗಿ ಈ ಜಗತ್ತಿನಲ್ಲಿ ನಡೆದಾಡುವ, ಹಾರಾಡುವ, ಈಜಾಡುವ(ಪ್ರಾಣಿವರ್ಗ) ಮತ್ತು ಬೆಳೆಯುವ (ಸಸ್ಯವರ್ಗ) ಎಲ್ಲವೂ ಮೂಲಸ್ವರೂಪದಲ್ಲಿ ಸ್ಥಾವರವೇ ಎಂದರೆ matter. ಅದಕ್ಕೆ ಚಲನೆಯನ್ನು ನೀಡುವುದೇ energy  ಎಂದರೆ ಚೈತನ್ಯ. ಸ್ಥಾವರಕ್ಕೆ ರೂಪವುಂಟು ಆದರೆ ಜಂಗಮಕ್ಕೆ ರೂಪವಿಲ್ಲ. ಒಟ್ಟಾರೆ ಹೇಳಬೇಕೆಂದರೆ ಸ್ಥಾವರವೆಂದರೆ ದೇಹ ಮತ್ತು ಜಂಗಮವೆಂದರೆ ಆ ದೇಹದೊಳಗಿನ ಪ್ರಾಣ ಅಥವಾ ಆತ್ಮ. ಇವೆರಡನ್ನೂ ಸೃಷ್ಟಿಸಿದವನೇ \
ಪರಮಾತ್ಮ ಅಥವಾ ಪರಮ ಪುರುಷ.

ಈ ಚೈತನ್ಯ ಧರಿಸಿರುವ ದೇಹಗಳಿಗೆ ರೂಪವಿದೆ. ಆ ರೂಪಗಳು ಬದಲಾಗುತ್ತವೆ ಮತ್ತು ಒಂದು ಕಾಲಘಟ್ಟಕ್ಕೆ ಇಲ್ಲವಾಗುತ್ತವೆ. ಇಲ್ಲವಾಗುತ್ತವೆ ಎಂದರೆ ರೂಪವಿಲ್ಲವಾಗುತ್ತದೆ. ಏಕೆಂದರೆ, ಕಾಲಕ್ರಮೇಣ ರೂಪ ಬದಲಾಗುತ್ತದೆ.  ಬೀಜ, ಮೊಳಕೆಯಾಗುತ್ತದೆ, ಮೊಳಕೆ ಸಸಿಯಾಗುತ್ತದೆ, ಸಸಿ ಗಿಡವಾಗುತ್ತದೆ, ಗಿಡ ಮರವಾಗುತ್ತದೆ, ಮರ ಸೌದೆಯಾಗುತ್ತದೆ, ಸೌದೆ ಬೆಂಕಿಯಾಗುತ್ತದೆ, ಬೆಂಕಿ ಬೂದಿಯಾಗುತ್ತದೆ, ಬೂದಿ ಧೂಳಿನ ಕಣವಾಗುತ್ತದೆ. ಹಾಗಾಗಿ ಸ್ಥಾವರ, ಎಂದರೆ matter ಗೆ ರೂಪದ ಅಳಿವಿದೆ,  ಅಂದರೆ ನಾಶವುಂಟು.  ಆದರೆ  ಜಂಗಮ ಎಂದರೆ, ಚೈತನ್ಯ ಅಥವಾ energy  ಗೆ ರೂಪವಿಲ್ಲ ಹಾಗಾಗಿ ಅದಕ್ಕೆ ನಾಶವೂ ಇಲ್ಲ.

ಇಲ್ಲಿ ಒಂದು ವಿಷಯವನ್ನು ತಿಳಿಯಬೇಕು. ಈ ಜಗತ್ತಿನಲ್ಲಿರುವುದು ಮೂರೇ ವಸ್ತುಗಳು. ಒಂದು, ಬೃಹತ್ ಚೈತನ್ಯ ಎಂದರೆ  ಪರಮಾತ್ಮ,  ಅಣುಚೈತನ್ಯ ಎಂದರೆ,  ಜೀವಾತ್ಮ ಮತ್ತು ಅಚಿತ್, ಎಂದರೆ ಜಡ ವಸ್ತುಗಳು,  ರೂಪಗಳಿರುವ  ವಸ್ತುಗಳು. ಇವು ಮೂರೂ ಅನಾದಿ ಮತ್ತು ಅನಂತ.  ಎಂದರೆ ಇದಕ್ಕೆ ಆದಿಯೂ ಇಲ್ಲ,  ಅಂತ್ಯವೂ ಇಲ್ಲ.
  
ಸುಮ್ಮಂಒಬ್ಬಂಟಿಯಂತಿಹುದು, ಬೇಸರವಹುದು
ಹೊಮ್ಮುವೆನು ಕೋಟಿರೂಪದಲಿ ನಾನೆಂದು
ಬೊಮ್ಮನೆಳಸಿದನಂತೆ, ಆ ಯಳಸಿಕೆಯೆ ಮಾಯೆ
ನಮ್ಮಿರವು ಮಾಯೆಯಲಿ - ಮಂಕುತಿಮ್ಮ

 ಎಂದು ಸನ್ಮಾನ್ಯ ಡಿ ವಿ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳುವಂತೆ, ಬೃಹತ್ ಚೈತನ್ಯನಾದ ಪರಮಾತ್ಮ ತನ್ನೊಳಗಿಂದಲೇ ಇಡೀ ಜಗತ್ತನ್ನು ಸೃಷ್ಟಿಸಿ ಸ್ಥಾವರದೊಳಕ್ಕೆ ಜಂಗಮವನ್ನು ಇರಿಸಿ, ಈ ಜಗದ್ವ್ಯಾಪಾರವನ್ನು ನಡೆಸುತ್ತಿದ್ದಾನೆ.  

ಹೇಗೆ ದೇಹ ನಾಶವಾದರೂ ಆತ್ಮ ನಾಶವಾಗುವುದಿಲ್ಲವೋ ಹಾಗೆಯೇ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ. ಎಂದರೆ ಜಗತ್ತಿನ ರೂಪಗಳಲ್ಲಾ ನಾಶವಾದರೂ ಆ ರೂಪಗಳನ್ನು ಹೊತ್ತ ಆತ್ಮ ಅಥವಾ ಚೈತನ್ಯಕ್ಕೆ ನಾಶವಿಲ್ಲ ಎನ್ನುವ ಅರ್ಥದಲ್ಲಿ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದಿದ್ದಾರೆ ಜಗಜ್ಜ್ಯೋತಿ ಬಸವೇಶ್ವರರು.
 
ಇಲ್ಲಿ ದೇಹವೆಂಬುದು ಕೇವಲ ಸಾಂಕೇತಿಕ. It refers to the matter in general. ಸ್ಥಾವರ ಎಂದರೆ, ಈ ಜಗತ್ತು ಮತ್ತ ಅದರಲ್ಲಿನ ಎಲ್ಲ ವಸ್ತುಗಳು ನೋಡಿ ಆ ಹಾಡಿನಲ್ಲಿ ' ಎನ್ನ ' ಎಂಬ ಪ್ರಯೋಗವಿದೆ. ಎನ್ನ ಎನ್ನುವುದು possessive case ಅಲ್ಲವೇ? ಹಾಗಾಗಿ ಈ ದೇಹವನ್ನು ಹೊಂದಿರುವುದು ಎಂದು ಅರ್ಥ. ಈ ದೇಹವನ್ನು ಧಾರಣೆ ಮಾಡಿರುವುದು, ಆತ್ಮ. ಹಾಗಾಗಿ ಸ್ಥಾವರವೆಂದರೆ ದೇಹ ಮತ್ತು 
ಜಂಗಮವೆಂದರೆ ಆತ್ಮ. ದೇಹಕ್ಕೆ ಅಳಿವುಂಟು ಆತ್ಮಕ್ಕೆ ಆಳಿವಿಲ್ಲ.

ಹಾಗಾಗಿ ರೂಪಕ್ಕೆ ಅಥವಾ ನಾಶವಾಗುವ ದೇಹಕ್ಕಿಂತ ಅವಿನಾಶಿಯಾದ ಆತ್ಮಕ್ಕೆ ಪ್ರಾಧಾನ್ಯನೀಡಿ ಆತ್ಮ ಜ್ಞಾನವನ್ನು ಪಡೆದು ' ನಾನು ಅಳಿದುಹೋಗುವ ಈ ದೇಹವಲ್ಲ, ನಾನು ನಿತ್ಯ ನೂತನವಾದ ಚೈತನ್ಯ ಅಥವಾ ಆತ್ಮ ಎಂದು ಅರಿತು, ಸ್ಥಾವರ-ದೊಟ್ಟಿಗಿನ ಅಂಟನ್ನು ಬಿಡಿಸಿಕೊಂಡು ಜಂಗಮವಾದ ಚೈತನ್ಯದ ಅನುಸಂಧಾನಮಾಡಿದಾಗ ನಮ್ಮಲ್ಲಿ ನಿತ್ಯ ಮತ್ತು ಸತ್ಯವಾದ ಆನಂದವುಂಟಾಗುತ್ತದೆ. ಅಂತಹ ಆನಂದವನ್ನು ಪಡೆಯುವ ಪ್ರಯತ್ನವನ್ನು ಮಾಡಬೇಕು ಎನ್ನುವುದನ್ನು ಸೂಚ್ಯವಾಗಿ ' ಬಸವಣ್ಣ ' ನವರು ನಮಗೆ ಅರುಹುತ್ತಾರೆ. 



No comments:

Post a Comment