Monday 2 July 2018

ಅತೀ ಕಕ್ಕುಲತೆ - ದುಃಖಕ್ಕೆ ದಾರಿ




ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಮಾಡುವುದು ತಂದೆ ತಾಯಿಯರಿಗೆ ಸ್ವಾಭಾವಿಕ ಮತ್ತು ಅವಶ್ಯವೂ ಹೌದು. ತಮ್ಮ ಮಕ್ಕಳು  ಹೀಗಾಗಬೇಕು ಅಥವಾ ಹಾಗಾಗಬೇಕು ಎಂದು ಬಯಸುವ ತಂದೆತಾಯಿಗಳು ನಮಗೆ ಹೆಜ್ಜೆ ಹೆಜ್ಜೆಗೂ ಸಿಗುತ್ತಾರೆ. ಕೇವಲ  ಹತ್ತು ಪ್ರತಿಶತ ಅಂತಹ ಪೋಷಕರ ಬಯಕೆಗಳು ಈಡೇರುತ್ತವೆ. ಬಹುಶಃ ಮಿಕ್ಕವರ ಎಣಿಕೆ ತಪ್ಪಾಗಿರುತ್ತದೆ ಅಥವಾ ವಿಧಿಯ ವಿನ್ಯಾಸವೇ ಬೇರೆಯಾಗಿರುತ್ತದೆ. ಪುರಾಣೇತಿಹಾಸಗಳಲ್ಲಿ ನಮಗೆ ಇದರ ಹೇರಳ ದೃಷ್ಟಾಂತಗಳು ಸಿಗುತ್ತವೆ. ಹಿರಣ್ಯ ಕಶಿಪುವಿಗೆ ಮಗನಮೇಲೆ ಅತೀವ ಅಕ್ಕರೆ ಮತ್ತು ಪ್ರೀತಿ. ತನ್ನ ಮಾತನ್ನು ಕೇಳಲಿಲ್ಲ ಎನ್ನುವ ಕಾರಣ ಅವನ ಮೇಲೆ ಕೋಪ. ಅವನು ಬಯಸಿದ್ದೇ ಬೇರೆ ಪ್ರಹ್ಲಾದನಾಗಿದ್ದೇ ಬೇರೆ, ಅಲ್ಲವೇ? ಕೌರವರಿಗೂ ಪಾಂಡವರಿಗೂ ಕಡೆಯವರೆಗೂ ರಾಜ್ಯ ಸುಖ ಸಿಗಲೇ ಇಲ್ಲ. ಅವರವರು ಪಡೆದುಕೊಂಡು ಬಂದ ಭಾಗ್ಯ ಅವರವರಿಗೆ ಜಗತ್ತಿನಲ್ಲಿ ಖಂಡಿತ ಸಿಗುತ್ತದೆ. ಹಾಗಾಗಿ, ಮಕ್ಕಳ ಭವಿಷ್ಯದ ಕುರಿತು ಅತಿಯಾದ ಅಕ್ಕರೆ, ಅಪೇಕ್ಷೆ  ಪಡುವುದು ಸೂಕ್ತವಲ್ಲ. ಅವರವರ ದಿಕ್ಕು ಅವರವರಿಗೆ ಇರುತ್ತದೆ ಎಂದು ಅರಿತು ಅವರ ಪ್ರತಿ ಮಾಡಬೇಕಾದ ಕರ್ತವ್ಯವನ್ನು ಮಾಡಿದರೆ ಸಾಕು. ಹಾಗಲ್ಲದೆ ನಮ್ಮ ಅಪೇಕ್ಷೆಗಳಿಗೆ ಅಂಟಿಕೊಂಡು ಅದನ್ನು ಸಾಧಿಸಲು ಹಠ ಮಾಡಿದರೆ ನಮಗೆ ಬಹುತೇಕ ನಿರಾಸೆಯೇ ಕಟ್ಟಿಟ್ಟ ಬುತ್ತಿ.  


ತಾಯಿ ತಂದೆಯರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮತ್ತು ಆಲೋಚನೆ ಮಾಡುವುದು ಸಹಜ. ಆದರೆ ಬಹಳಷ್ಟು ಉದಾಹರಣೆಗಳಲ್ಲಿ ಬಯಸಿದ್ದು ಆಗದೆ ಬೇರೇನೋ ಆಗುತ್ತದೆ. ಆದರೆ ಸಾಮಾನ್ಯವಾಗಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ತಾಯಿ ತಂದೆಯರು ಸ್ವಲ್ಪ ಅಧಿಕವಾಗೇ ಚಿಂತೆ ಅಥವಾ ಯೋಚನೆ ಮಾಡುತ್ತಾರೆ. ಅದು ಪ್ರೀತಿಯಿಂದ ಆಗಬಹುದು ಅಥವಾ ಕಕ್ಕುಲತೆಯಿಂದ ಆಗಬಹುದು. ಅಂತಹ ಅಂಧ ಕಕ್ಕುಲತೆಯನ್ನೇ ಅಲ್ಲವೇ ಕುರುಡ ದೃತರಾಷ್ಟ್ರನೂ ಕೂಡ ತೋರಿದ್ದು. ಅವನಂತೆಯೇ ಮಕ್ಕಳ ಬಗ್ಗೆ ಅತೀವ ಕಕ್ಕುಲತೆಯಿಂದ ವರ್ತಿಸುವ ತಂದೆತಾಯಂದಿರೂ ಸಹ ನಿರಾಸೆ ಹೊಂದುವುದರಲ್ಲಿ ಸಂದೇಹವೇ ಇಲ್ಲ

ಅಂತಹ ಕುರುಡು ಪ್ರೀತಿಯ ತಂದೆ ತಾಯಿಯರು ಹೇರಳವಾಗಿ ಸಿಗುತ್ತಾರೆ. ಗಣಿತದ ಗಂಧವೇ ಇಲ್ಲದವನನ್ನು ' ಇಂಜಿನಿಯರ್ ' ಮಾಡಿಸಲೇಬೇಕು ಎಂದು ಹಠ ಹಿಡಿದರೆ ಇಬ್ಬರಿಗೂ ಒತ್ತಡ ಮಾತ್ರ ಜಾಸ್ತಿ, ಫಲ ಶೂನ್ಯ.  ಕಲೆಯಲ್ಲೋ ಸಂಗೀತದಲ್ಲೋ ಆಸಕ್ತಿಯಿರುವವರನ್ನು ಅದರ ಬಳಿಯೂ ಸುಳಿಯಲು ಬಿಡದೆ ನಾವಂದುಕೊಂಡ ಡಾಕ್ಟರೋ ಎಂಜಿನಿಯರೋ ಆಗಬೇಕೆಂದು ಹಠತೊಟ್ಟರೆ ಅದು ಶುದ್ಧ ಮೂರ್ಖತನವಷ್ಟೇ.  ನಾವೇನೇ ಆಸೆ ಪಟ್ಟರೂ, ಪಡದೆ ಇದ್ದರೂ, ನಡುವುದೆಲ್ಲ ನಡೆದೇ ನಡೆಯುತ್ತದೆ. ಯಾವುದನ್ನೂ ತಡೆಯುವುದಕ್ಕಾಗುವುದಿಲ್ಲ. ಹಾಗೆಂದು  ತೀರ ತಟಸ್ಥರಾಗಿಬಿಟ್ಟರೆ, ಜೀವನದಲ್ಲಿ ಸ್ವಾರಸ್ಯವಿರುವುದಿಲ್ಲ. ಹಾಗಾಗಿ ಮಕ್ಕಳ ಇಚ್ಛೆ, ಅಭಿರುಚಿ ಮತ್ತು ಅವರ ಕ್ಷಮತೆಗಳನ್ನು ಸರಿಯಾಗಿ ಗುರುತಿಸಿ ಅವರ ಯೋಗ್ಯತೆಗಳನ್ನು ಪರೀಕ್ಷಿಸಿ ಅವರ ಪುರೋಗಮನಕ್ಕೆ ಒತ್ತಾಸೆ ನೀಡಿ  ಮತ್ತು ದೈವ ಬಲದಿಂದ ಅವರು ಆ ದಿಕ್ಕಿನಲ್ಲೇ ಅಭಿವೃದ್ಧಿಹೊಂದಿದರೆ ತೃಪ್ತಿಯಾಗುತ್ತದೆ.    


ಸಮಾಜದಲ್ಲಿ ಬದುಕಬೇಕಾದರೆ ಅವಶ್ಯವಿರುವ ಮೂಲಭೂತ ಗುಣಗಳನ್ನು ಅವರಿಗೆ ಕಲಿಸಿ, ಅವರವರ ಅಭಿರುಚಿ ಮತ್ತು ಕ್ಷಮತೆಗನುಸಾರವಾಗಿ ಸರಿಯಾದ ಮಾರ್ಗದಲ್ಲಿ ಮಕ್ಕಳನ್ನು ಕೊಂಡುಹೋಗುವ ಶುದ್ಧ ಪ್ರಯತ್ನ ನಮ್ಮದಾಗಬೇಕು. ಅವರು ತಪ್ಪು ಮಾಡಿದಾಗ ಪ್ರೀತಿಯಿಂದ ದಂಡಿಸಿ ಸರಿಯಾಗುವ ಮಾರ್ಗವನ್ನು ತೋರಿ, ಅದರಲ್ಲಿ ನಡೆಯುವ ಕ್ಷಮತೆಯನ್ನು ಬೆಳೆಸಬೇಕು ಅಷ್ಟು ಮಾಡಿದರೆ ಅವರವರು ಪಡೆದು ಬಂದ ಭಾಗ್ಯಕ್ಕನುಸಾರವಾಗಿ ಅವರು ರೂಪುಗೊಳ್ಳುತ್ತಾರೆ. ಅತೀ ಕಕ್ಕುಲತೆ, ಅತೀ ಪ್ರೀತಿ ಮತ್ತು ಅತೀ ಅಪೇಕ್ಷೆಗಳು ನಮ್ಮನ್ನು ನಿರಾಸೆ ಮತ್ತು ದುಃಖಕ್ಕೆ ತಳ್ಳುತ್ತದೆ. ಹಾಗಾಗಿ ತಂದೆತಾಯಿಯರು ತಮ್ಮ ಮಕ್ಕಳ ಭವಿಷ್ಯವನ್ನು ಸೂಕ್ತವಾಗಿ ರೂಪಿಸುವವರಾಗಬೇಕೇ ವಿನಃ ನಿರ್ಧರಿಸುವವರಾಗಬಾರದು.  

No comments:

Post a Comment