Friday 19 December 2014

'ವೃತ್ತಿ ' ಕ್ಷೇತ್ರದಲ್ಲಿ ಭಗವದ್ಗೀತೆ

'ಭಗವದ್ಗೀತೆ'  ವಿಶ್ವತತ್ವವನ್ನು ಪ್ರತಿಪಾದಿಸುತ್ತದೆ. ಅಲ್ಲಿ ಪ್ರತಿಪಾದಿಸಲ್ಪಟ್ಟ ತತ್ವಗಳು ಸರ್ವಕಾಲಿಕ ಮತ್ತು ಸರ್ವ ಪ್ರಭಾವಕ. ಕೇವಲ ಮುದುಕರಾದಮೇಲೆ ಓದಬೇಕಾದದ್ದು ಎಂದು ಹಣೆಪಟ್ಟಿ ಕಟ್ಟುವಂತಹುದ್ದಲ್ಲ. ದೇಶ, ಜನಾಂಗ, ವಯೋಮಾನ, ಕಾಲ ಮುಂತಾದವುಗಳ ಬೇಧವಿಲ್ಲದ ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯವಾಗುವುದೇ ಭಗವದ್ಗೀತೆಯ ತತ್ವಗಳು. ಇಲ್ಲಿ ನಾವು ಭಗವದ್ಗೀತೆ ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರ 'ಕಾರ್ಯಕ್ಷೇತ್ರ' ದಲ್ಲಿ ಹೇಗೆ ಅನ್ವಯವಾಗುತ್ತದೆಂದು ವಿಚಾರಮಾಡಲು ಪ್ರಯತ್ನ ಮಾಡಿದ್ದೇವೆ.    


'ಶ್ರೀಮದ್ಭಗವದ್ಗೀತೆ' ಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ' ನಿನ್ನ ಕಾರ್ಯವನ್ನು ಮಾಡುವುದಕ್ಕಷ್ಟೇ  ನಿನಗೆ ಅಧಿಕಾರ, ಆ ಕಾರ್ಯದ ಫಲದಮೇಲೆ ಅಲ್ಲ" (कर्मण्येवा अधिकारस्ते मा फलेषु कदाचन) ಎಂದು ಹೇಳುತ್ತಾ ನಿನ್ನ ಕಾರ್ಯಕ್ಷೇತ್ರದಲ್ಲಿ ದಕ್ಷತೆಯಿಂದ ಕೆಲಸಮಾಡು ' ಎಂದಷ್ಟೇ ಹೇಳುತ್ತಾನೆ ಅಲ್ಲವೇ? ಅದೇ ಗೀತೆ,  'नियतं कुरु कर्म त्वम् '( अध्याय 3-8) ಎಂದು ಹೇಳಿ, ನಿನಗೆ ನಿಯಮಿಸಿದ ಕರ್ಮವನ್ನು ಮಾಡು ಎಂದು ಹೇಳುತ್ತಾ, ನಾವು ನಮ್ಮ ನಮ್ಮ ಕಾರ್ಯಕ್ಷೇತ್ರದಲ್ಲಿ 'ದಕ್ಷತೆ'ಯಿಂದ ಹೇಗೆ ಕೆಲಸಮಾಡಬೇಕು ಎಂದೂ  ಸಹ ಹೇಳುತ್ತಾನೆ. ಏಕೆಂದರೆ ಗೀತೆ 'ಕರ್ಮ' ಸಿದ್ಧಾಂತದ ವಿಜ್ಞಾನ. ಕರ್ಮವೆಂದರೆ ನಾವು  ಮಾಡುವ ಕೆಲಸ,  ಕಾರ್ಯ. ಹಾಗಾಗಿ ಇಂದಿಗೂ ನಾವು ಕೆಲಸ ಮಾಡುವ ಪ್ರತಿಯೊಂದು ಸ್ಥಳಕ್ಕೂ ' ಗೀತೆ' ಯ ಉಪದೇಶಗಳು ಹೆಚ್ಚು ಪ್ರಸ್ತುತ, ಸೂಕ್ತ, ಮತ್ತು ಅನ್ವಯ. 


ಬದುಕಿನಲ್ಲಿ ನಾವು ಹಲವಾರು ಪಾತ್ರಗಳನ್ನು ಧರಿಸಬೇಕಾಗುತ್ತದೆ. ಮನೆಯಲ್ಲಿ ತಂದೆತಾಯಿಗಳಿಗೆ ಮಗ(ಳು), ಹೆಂಡತಿಗೆ ಗಂಡ(ನಿಗೆ ಹೆಂಡತಿ), ಮಕ್ಕಳಿಗೆ ತಂದೆ,ತಾಯಿ, ಹೀಗೆ ಹಲವಾರು ಪಾತ್ರಗಳು. ಅಂತಹ ವಿವಿಧ ಪಾತ್ರಗಳಲ್ಲಿ ಕಚೇರಿಯಲ್ಲಿ 'ಕರ್ಮಚಾರಿ' ಯ ಪಾತ್ರವೂ ಒಂದು. ಯಾರೇ ಆಗಲಿ ಯಾವುದೇ ಸಮಯದಲ್ಲೇ ಆಗಲಿ, ಯಾವುದಾದರೂ ಒಂದು ಪಾತ್ರವನ್ನು ಮಾತ್ರ ಧರಿಸಬಹುದು. ಒಂದೇ ಸಮಯದಲ್ಲಿ ಎರಡು ಪಾತ್ರಗಳನ್ನೂ ಧರಿಸಲಾಗದು. ನಾವು ಯಾವ ಸಮಯದಲ್ಲಿ ಯಾವ ಪಾತ್ರ ಧರಿಸಿದ್ದರೆ ಆ ಪಾತ್ರದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಹಾಗಾದರೆ ಮಾತ್ರ ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ. ಇದನ್ನೇ ' ವ್ಯವಸಾಯ ಬುದ್ಧಿ' ಎನ್ನುತ್ತಾರೆ. ಗೀತೆ ಅದನ್ನು' ಸಮರ್ಪಣೆ, ನಿಷ್ಠೆ ' ಎನ್ನುತ್ತದೆ. ಯಾವುದೇ ಪಾತ್ರದ ಮೂಲಕ ಯಾವುದೇ ಕೆಲಸವನ್ನು ಮಾಡುತ್ತಿದ್ದರೂ ಅದರಲ್ಲಿ ನಾವು ನಮ್ಮ ವ್ಯವಸಾಯ ಬುದ್ಧಿ, ಸಮರ್ಪಣೆ, ನಿಷ್ಠೆ ಮತ್ತು ನಿಮಗ್ನತೆ ತೋರಿದರೆ ಅದೇ ನಮ್ಮ 'ಕ್ಷಮತೆ' ಯಾಗುತ್ತದೆ. 


ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನದು 'ಯೋಧ'ನ ಪಾತ್ರ. ಅವನ ಕರ್ತವ್ಯ, ತನ್ನ ಸಂಪೂರ್ಣ ಶಕ್ತಿ ಮತ್ತು ಯುಕ್ತಿಯನ್ನು ಉಪಯೋಗಿಸಿ, ಆ ಪಾತ್ರಕ್ಕೆ ನ್ಯಾಯ ಒದಗಿಸುವಂತೆ, ಕೇವಲ ಯುದ್ಧಮಾಡುವುದಾಗಿತ್ತು. ಹಾಗೆ ಅವನು ಯುದ್ಧಮಾಡುವಾಗ, ಅವನು ಬೇರೆಡೆ ಧರಿಸುವ ಅಣ್ಣ, ತಮ್ಮ,ಶಿಷ್ಯ ಮೊಮ್ಮಗ,ಮಿತ್ರ,ಅಳಿಯ, ಮುಂತಾದ ಯಾವುದೇ ಪಾತ್ರಗಳ ಭಾವಗಳನ್ನು ತೋರದೆ ಯುದ್ಧಮಾಡಬೇಕಾಗಿತ್ತು. ಹಾಗೆ ಮಾಡದ್ದಿದ್ದರೆ ಅವನ ವ್ಯವಸಾಯ ಬುದ್ಧಿ ಮತ್ತು ಕ್ಷಮತೆ ದುರ್ಬಲವಾಗುತ್ತಿತ್ತು. ಯುದ್ಧ ಮಾಡುವಾಗ ಕೇವಲ ಯೋದ್ಧನಾಗಿರಬೇಕು. ಹಾಗೆ ನಾವು ನಮ್ಮ ಕಾರ್ಯಕ್ಷೇತ್ರಗಳಲ್ಲಿ ' ಕರ್ಮಚಾರಿಯ' ಪಾತ್ರ ವಹಿಸಿದಾಗ ಕೇವಲ ಅದೇ ಪಾತ್ರದಲ್ಲಿ ರಾಜಿಸಿದರೆ ಆ ಪಾತ್ರವನ್ನು ಸಂಪೂರ್ಣ ಸಮರ್ಪಕತೆಯಿಂದ ನಿರ್ವಹಿಸಿದಂತಾಗುತ್ತದೆ. ಇದನ್ನೇ ' ಗೀತೆ' ನಮಗೆ ಬೋಧಿಸುವುದು.  

ದುರ್ಬಲ ಮನಸ್ಸುಗಳು ತಾವು ವಹಿಸುವ ಪಾತ್ರದಲ್ಲಿ ಸಂಪೂರ್ಣತಯಾ ತೊಡಗಿಸಿಕೊಳ್ಳಲಾಗುವುದಿಲ್ಲ, ಅಲ್ಲವೇ? ಅದೇ ಸಮಸ್ಯೆ 'ಅರ್ಜುನ'ನದೂ ಆಗಿತ್ತು. ಹಾಗಾಗಿಯೇ 'ಗೀತೆ' ಯನ್ನು ಹೇಳಿ ಅವನ ಮನಸ್ಸನ್ನು ಕೃಷ್ಣ ಬಲಗೊಳಿಸಿದ್ದು. ಹಾಗಾಗಿ ನಾವು ಕೆಲಸಮಾಡುವ ಸ್ಥಳದಲ್ಲಿ ನಮ್ಮ ಕ್ಷಮತೆ ಹೆಚ್ಚಿಸಿಕೊಳ್ಳಬೇಕಾದರೆ, ಮಾನಸಿಕ ಧೃಢತೆಯನ್ನು ಹೆಚ್ಚಿಸಿಕೊಳ್ಳಬೇಕು. ನಾವು ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷೆಯಿಲ್ಲದೆ ಇರುವುದು ಪ್ರಾಪಂಚಿಕ ಬದುಕಿಗೆ ಸರಿಹೊಂದುವ ವಿಚಾರವಲ್ಲ, ಅಲ್ಲವೇ?  ನಿಸ್ಪೃಹತೆ ಮತ್ತು ಕ್ಷಮತೆಯಿಂದ ಕೆಲಸಮಾಡುವುದಕ್ಕೆ 'ಫಲ' ವೇ ಒಂದು ಆಧಾರ.  ಕ್ಷಮತೆ ಅಧಿಕವಾದಷ್ಟೂ ಫಲವೂ ಅಧಿಕ ಮತ್ತು ಫಲವು ಅಧಿಕವಾದರೆ ಕ್ಷಮತೆಯೂ ಅಧಿಕವಾಗಬೇಕು. ಒಂದಕ್ಕೊಂದು ಪೂರಕವಲ್ಲವೇ? 

ಆದರೆ, ನಾವು ಪ್ರತಿಫಲಕ್ಕೆ ಹೆಚ್ಚು ಮಹತ್ವ ನೀಡಿದಾಗ, ಕೆಲಸದಲ್ಲಿ ನಮ್ಮ ಗಮನ ಮತ್ತು ಏಕಾಗ್ರತೆ ಕುಂಠಿತವಾಗುತ್ತದೆ ಮತ್ತು ನಮ್ಮ ಕೆಲಸಕ್ಕೆ, ನಾವು ಹೊತ್ತ ಜವಾಬ್ದಾರಿಗೆ ಸಂಪೂರ್ಣತಯಾ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. 'ಪ್ರತಿಫಲಾಪೇಕ್ಷೆ'ಯ ಒತ್ತಡದ ಭಾರ ನಮ್ಮ ಕರ್ತವ್ಯದ ನಿರ್ವಹಣೆಗೆ ಮಾರಕವಾಗುತ್ತದೆ. ' ನನ್ನ ಮಕ್ಕಳು ಬೆಳೆದು ದೊಡ್ಡವರಾದಮೇಲೆ ತನ್ನನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೋ ಇಲ್ಲವೋ, ಪ್ರೀತಿಸುತ್ತಾರೋ ಇಲ್ಲವೋ'  ಎಂದು ಸಂದೇಹವಿರುವ ತಾಯಿ ಇಂದು ತನ್ನ ಮಕ್ಕಳಿಗೆ ತಾಯಿ ತೋರಬೇಕಾದ ಸಂಪೂರ್ಣ ಮಮತೆ ಮತ್ತು ಪ್ರೀತಿಯನ್ನು ಎರೆಯಲಾರಳು ಅಲ್ಲವೇ? ಅವಳು ತೋರಬೇಕಾದ ವ್ಯವಸಾಯಬುದ್ಧಿಯು ಲೋಪವಾಗುತ್ತದೆ. 

ಒಬ್ಬ ರೈತ ವ್ಯವಸಾಯ ಮಾಡುವಾಗ ಉತ್ತು  ಬಿತ್ತಿದೊಡನೆಯೇ ಫಸಲಿನ ಲೆಕ್ಕಾಚಾರ ಹಾಕುತ್ತಾ ಇದ್ದುಬಿಟ್ಟರೆ, ನೀರು ಹಾಯಿಸಬೇಕಾದಾಗ, ಕಳೆ ಕೀಳಬೇಕಾದಾಗ ನಿರ್ಲಕ್ಷ್ಯ ತೋರಿ ಬೆಳೆ ಸರಿಯಾಗಿ ಬೆಳೆಯುವುದಿಲ್ಲ, ಅಲ್ಲವೇ? ನಿರೀಕ್ಷಿಸಿದ ಫಸಲು ಸಿಗುವುದಿಲ್ಲ ಅಲ್ಲವೇ?.  ಕೇವಲ  ಸಂಬಳದ ಲೆಕ್ಕಾಚಾರವನ್ನೋ ಅಥವಾ ಮೇಲಧಿಕಾರಿಯ ಮೆಚ್ಚುಗೆಯನ್ನೋ ಅಥವಾ ಸಹೋದ್ಯೋಗಿಗಳಿಗಿಂತ ಅಧಿಕ ಸಾಧನೆ ತೋರುವ ಆತುರವನ್ನೋ ಮನಸ್ಸಿನಲ್ಲಿಟ್ಟುಕೊಂಡಿರುವ ಯಾವುದೇ ಕಾರ್ಮಿಕ ಅಥವಾ ಕರ್ಮಚಾರಿಗೆ ನಿಯಮಿಸಿದ ಕೆಲಸ ಸಮರ್ಪಕವಾಗಿ ಮಾಡಲು ಆಗುವುದೇ ಇಲ್ಲ. ಹಾಗಾಗಿ ಕೆಲಸಕ್ಕೆ ಆದ್ಯ ಪ್ರಾಮುಖ್ಯತೆ ನೀಡಬೇಕು, ಫಲಕ್ಕಲ್ಲ ಎನ್ನುವುದು ತತ್ವ.  

ಗೀತೆಯಲ್ಲಿ ನಮಗೆ ಇಂದಿಗೂ ಅನ್ವಯವಾಗುವಂತೆ ಶ್ರೀ ಕೃಷ್ಣ, "ಫಲದ ಆಸೆಯನ್ನು ತೊರೆದು ನಿನ್ನ ಕೆಲಸದಲ್ಲಿ ನಿಮಗ್ನನಾಗು. ಶ್ರದ್ಧೆಯಿಂದ, ತನ್ಮಯತೆಯಿಂದ ನಿನಗೆ ಸಂದ ಕೆಲಸವನ್ನು, ಪ್ರೀತಿಸಿ, ಸಂತೋಷದಿಂದ, ನಿನಗೆ ತೃಪ್ತಿಯಾಗುವಂತೆ  ಮಾಡು. ಫಲಾಫಲಗಳು ತಾನೇ ತಾನಾಗಿ ಬರುತ್ತವೆ. ಸಂಬಳಕ್ಕೆ ಕೆಲಸ ಮಾಡುವಾಗಲೂ ಅದಕ್ಕೂ ಮೀರಿ ನಿಲ್ಲು,  ಅದರ ಯೋಚನೆಯ ಭಾರ ನಿನ್ನನ್ನು ಕೆಳಗೆಳೆಯದೆ ಇರಲಿ"  ಎನ್ನುವಂತಹ ಬುದ್ಧಿವಾದವನ್ನು ಮಾಡುತ್ತಿದ್ದಾನೆಂದು, ತಿಳಿಯಬೇಕು.  
  
ಯಾವುದೇ ಕೆಲಸಕ್ಕಿಳಿಯುವ ಮುನ್ನ  ವಿಚಾರ ಮಾಡಬೇಕು. ಒಂದು ಬಾರಿ ಧುಮಿಕಿಯಾದಮೇಲೆ ' ಈಸಬೇಕು ಈಸಿ ಜಯಿಸಬೇಕು'  ಎನ್ನುವ ತತ್ವಕ್ಕೆ ಬದ್ಧರಾಗಿರಬೇಕು.  ಲಾಭ ನಷ್ಟಗಳ ಅಥವಾ ಜಯಾಪಜಯಗಳ ಚಿಂತೆ ನಮ್ಮನ್ನು ನಮ್ಮ ಮಾರ್ಗದಿಂದ ವಿಚಲಿತಗೊಳಿಸಬಾರದು. 'ಆಟ'ವಾಡುವುದು ಮುಖ್ಯವಾಗಬೇಕು, ಸೋಲುಗೆಲುವುಗಳಲ್ಲ. 'ಫಲ'ದ ಚಿಂತೆಯಿಲ್ಲದೆ  ನಮ್ಮ ಧ್ಯೇಯ ದೃಢವಾಗಿರಬೇಕು ಮತ್ತು ಉತ್ಸಾಹ ಕುಗ್ಗದಂತಿರಬೇಕು.  

ಇಂದಿನ ವಸ್ತುಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ನಾವು ಕೆಲಸಮಾಡುವುದು  ಆ ಕೆಲಸವನ್ನು ' ಸಮರ್ಪಕ' ವಾಗಿ ಮಾಡಬೇಕು ಎನ್ನುವುದನ್ನು ಹೊರತು ಅನ್ಯ ಕಾರಣಗಳಿಗಾಗಿಯೇ ಅಲ್ಲವೇ? ಹೆಚ್ಚಿನ ಹಣಕ್ಕಾಗಿ, ಬಡ್ತಿಗಾಗಿ, ಲಂಚಕ್ಕಾಗಿ, ಯಾರನ್ನೋ ಮೆಚ್ಚಿಸಲಿಕ್ಕಾಗಿ, ಯಾರದೋ ಮೇಲಿನ ಮಮತೆಗಾಗಿ, ಹೀಗೆಯೇ ಇನ್ನೂ ಹಲವಾರು ಕಾರಣಗಳಿಗಾಗಿ ನಮ್ಮ ಕೆಲಸವನ್ನು ಮಾಡುತ್ತೇವೆ.

ನಮ್ಮ ಕೆಲಸದ ಸ್ಥಳದಲ್ಲಿ ನಮ್ಮ ಮೇಲಧಿಕಾರಿಗಳನ್ನು ಮೆಚ್ಚಿಸಲಿಕ್ಕಾಗಿಯೇ ನಾವು ಕೆಲಸಮಾಡಿದರೆ, ನಮ್ಮ ಕಾರ್ಯವನ್ನು ನಾವು ಸಮರ್ಪಣಾ ಭಾವದಿಂದ ಮಾಡಲಾಗದು. ನಾವು ನಮ್ಮ ಆಫೀಸಿನ ಮೇಲಧಿಕಾರಿಗಲ್ಲದೆ ನಮ್ಮ ಅಂತರನಗದೊಳಗಿನ  ಮೇಲಧಿಕಾರಿಯಾದ ನಮ್ಮ 'ಆತ್ಮಸಾಕ್ಷಿ' ಗೆ ನಿಷ್ಠೆಯಿಂದ ಕೆಲಸಮಾಡಿದರೆ ಅಂತಹ ಕೆಲಸವೂ ಸುಸೂತ್ರವಾಗಿ ನಡೆದು ಒಳಗಿನ ಮತ್ತು ಹೊರಗಿನ ಮೆಚ್ಚುಗೆ ಸಿಗುತ್ತದೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ " ನೀನು ನನ್ನನ್ನು ಮನದಲ್ಲಿಟ್ಟುಕೊಂಡು ಕೆಲಸಮಾಡು, ನಿನ್ನ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ" ಎನ್ನುತ್ತಾನೆ.   

ನಾವು ಶ್ರದ್ಧೆಯಿಂದ, ನಮ್ಮ ಅಂತರಂಗಕ್ಕೆ ಮೆಚ್ಚುಗೆಯಾಗುವ ಹಾಗೆ ಕೆಲಸಮಾಡಿದರೆ, ಆ ಪ್ರಯತ್ನಕ್ಕೆ ಸೂಕ್ತವಾದ ಫಲ ನಮಗೆ ಖಂಡಿತವಾಗಿ ದಕ್ಕುತ್ತದೆ.  ಪ್ರಯತ್ನ ಮತ್ತು ಪ್ರಯೋಗ ಎರಡೂ ಶುದ್ಧವಾಗಿರಬೇಕು. ಇದು ಕೆಲಸವನ್ನು ಮಾಡುವವರಿಗೆ ಮತ್ತು ಆ ಕೆಲಸವನ್ನು ಮಾಡಿಸಿಕೊಳ್ಳುವವರಿಗೂ ಸಮನಾಗಿ ಅನ್ವಯವಾಗುತ್ತದೆ.   


ರವಿ ತಿರುಮಲೈ 
೨೦. ೧೨. ೨೦೧೪

Sunday 16 November 2014

ಅನುಸರಣೀಯ ವೇದಾಂತ


     
ವೇದಾಂತವು ವಿಚಾರಮಾಡುವುದನ್ನೋ ಅಥವಾ ವಾಸ್ತವವಾದವನ್ನೋ ಅಲ್ಲಗೆಳೆಯುವುದಿಲ್ಲ   ಅದು ಎಲ್ಲರನ್ನೂ ' ತನ್ನಂತೆ' ಬಗೆ , ಎನ್ನುವ ತಾರ್ಕಿಕ ನೆಲೆಗಟ್ಟಿನಲ್ಲಿ ನಿಲ್ಲುತ್ತದೆ . ವೇದಾಂತವು , ನಮ್ಮ ಅವಗಾಹನೆಗೆ ಬರುವುದೆಲ್ಲವೂ ದೈವೀಕ, ಹಾಗಾಗಿ ಆತ್ಮ ಮತ್ತೊಂದು ಆತ್ಮವನ್ನು ಶೋಷಿಸುವುದನ್ನುವಿರೋಧಿಸುತ್ತದೆ! 
ಇದು ಕೇವಲ ಕಲ್ಪನೆಯಲ್ಲ. ನಾವು ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದ ಔನ್ನತ್ಯವನ್ನು ಪಡೆದಾಗ  ನಮಗೆ ಸೃಷ್ಟಿಯ ಎಲ್ಲವೂ ದೈವೀಕವಾಗಿ ಕಾಣುವುದು.  ಸಕಲ ಸೃಷ್ಟಿಯಲ್ಲಿ ಪ್ರೇಮ ಮತ್ತು ಪೂಜನೀಯ ಭಾವಗಳ ಅವಿನಾಭಾವ ಸಂಬಂಧದಿಂದ ಸ್ವಾಭಾವಿಕವಾಗಿ ಇಡೀ ಜಗತ್ತೇ ಒಂದು ಸುಂದರ ತಾಣವಾಗಿ ಮಾರ್ಪಾಡಾಗುತ್ತದೆ  
೧೮೯೬ ರ ಚಳಿಗಾಲದಲ್ಲಿ ಲಂಡನ್ ನಗರದಲ್ಲಿ ' ಸ್ವಾಮೀ ವಿವೇಕಾನಂದರು' ಅನುಸರಣೀಯ ವೇದಾಂತ' ಎನ್ನುವ ವಿಷಯದಲ್ಲಿ ನಾಲ್ಕು ಸರಣಿ ಪ್ರವಚನವನ್ನು ನೀಡಿದರು. ಅಲ್ಲಿ ಅವರು ಶ್ರೀಮತಿ ಮಾರ್ಗರೆಟ್ ನೋಬಲ್ ಎಂಬ ಸ್ತ್ರೀಯನ್ನು ಭೇಟಿಮಾಡಿದರು. ಆಕೆ ವಿವೇಕಾನಂದರ ವಿಚಾರಧಾರೆಗೆ ಮನಸೋತು ಅವರ ಶಿಷ್ಯತ್ವವನ್ನು ಸೀಕರಿಸಿದಳು. ನಂತರದ ದಿನಗಳಲ್ಲಿ ಆಕೆ ಸಿಸ್ಟರ್ ನಿವೇದಿತ ಎಂದು ಕರೆಯಲ್ಪಟ್ಟು ಭಾರತಕ್ಕೆ ಬಂದು ಹೆಣ್ಣು ಮಕ್ಕಳಿಗಾಗಿ ಶಾಲಾ ಕಾಲೇಜುಗಳನ್ನು ತೆರೆದಳು. ಸ್ವಾಮೀ ವಿವೇಕಾನಂದರ ಪ್ರಕಾರ  'ಅನುಸರಣೀಯ ವೇದಾಂತ' ವೆಂದರೆ ಏನು ಎಂಬುದಾಗಿ ಈ ಕೆಳಗೆ ಸೂಕ್ಷ್ಮವಾಗಿ ವಿವರಿಸಲು ಪ್ರಯತ್ನಿಸಲಾಗಿದೆ.

'ಪ್ರತೀ ಆತ್ಮವೂ ದೈವೀಕ' ಎಂಬ ತತ್ವದ ಆವಿಷ್ಕಾರವೇ ಭಾರತೀಯ ಋಷಿ ಮುನಿಗಳ ಕೊಡುಗೆ. ಆ 'ಪರಿಪೂರ್ಣ ಸತ್ಯ' ವೇ, ಭಿನ್ನ ಭಿನ್ನವಾದ ಆಲೋಚನೆಗಳಿಂದ, ಪ್ರತಿಯೊಬ್ಬರಿಗೂ ಬೇರೆ ಬೇರೆ ರೀತಿಯಿಂದ ತೋರುವುದು. ದೇಹ ಮತ್ತು ಮನಸ್ಸುಗಳ ಮಿತಿಯೊಳಗೆ ನಾವು ಯೋಚಿಸುತ್ತೇವಾದ್ದರಿಂದ, ನಮಗೆ ಕೆಲವು ಅನುಕೂಲವಾಗಿರುವಂತೆಯೂ ಮತ್ತೆ ಕೆಲವು ಪ್ರತಿಕೂಲವಾಗಿರುವಂತೆಯೂ ಕಾಣುತ್ತದೆ. ನಮ್ಮಲ್ಲಿರುವ 'ದೈವೀಕ ಪ್ರಜ್ಞೆ' ಯ ಪರಿಚಯ ನಮಗೆ ಆಗುತ್ತಿದ್ದಂತೆಯೇ, ನಾವು ಜಗತ್ತನ್ನು ನೋಡುವ ಬಗೆ ಗುಣಾತ್ಮಕವಾಗಿ ಬದಲಾಗುತ್ತದೆ. ಹಾಗಾದಾಗ, ಭಯ ಮತ್ತು ಒಂಟಿತನದ ಭಾವ ಹೋಗಿ ಪ್ರೀತಿ ಮತ್ತು ಸಮಗ್ರತೆಯ ಭಾವ ಉಂಟಾಗುತ್ತದೆ. ನಮ್ಮ ದೈವೀ ಸ್ವಭಾವವನ್ನು ಅರಿತುಕೊಳ್ಳುವುದು ಮತ್ತು ಪ್ರದರ್ಶಿಸುವುದು 'ಸಮಗ್ರತೆಯಲ್ಲಿ ಏಕತೆ' ಯನ್ನು ಕಾಣಲು ಪ್ರಯತ್ನಪಡುವುದು, ಅನಾಸಕ್ತಿ ಮತ್ತು ದ್ವೇಷವನ್ನು ತೊರೆದು ಸಕಲ ಜೀವರಾಶಿಗಳಲ್ಲಿ ಪ್ರೇಮವನ್ನು ತೋರುವುದೇ 'ಅನುಸರಣೀಯ ವೇದಾಂತ' ದ ತಿರುಳು. ಇದೇ ಧರ್ಮ

ಬಹು ಕ್ಲಿಷ್ಟವಾದ ಆತ್ಮಾನುಸಂಧಾನದ ಹಾದಿಯಲ್ಲಿ ನಮಗೆ ಕೆಲವು ನಿಯಮಗಳು ಮತ್ತು ವಿಧಾನಗಳು ಸಹಾಯಮಾಡುತ್ತವೆ. ಈಗಾಗಲೇ ಆ ಸ್ಥರವನ್ನು ತಲುಪಿರುವ ಒಬ್ಬ ಯೋಗ್ಯ 
''ಗುರು''ವಿನ ಅನುಗ್ರಹದಿಂದ ನಮ್ಮಲ್ಲಿ 'ನಂಬಿಕೆ' ಉಂಟಾಗಿ ನಮ್ಮ ಅಧ್ಯಾತ್ಮಿಕ ಪ್ರಯಾಣ ತ್ವರಿತವಾಗುತ್ತದೆ. ಆ 'ಗುರು' ನಮಗೆ ಒಂದು ಮಂತ್ರವನ್ನೋ ಅಥವಾ ಒಂದು ಆದರ್ಶವನ್ನೋ ನೀಡುತ್ತಾನೆ. ಇಂತಹ ಪ್ರಾರಂಭಿಕ ವಿಧಾನವನ್ನು ನಂಬಿಕೆ ಮತ್ತು ಭಕ್ತಿಯಿಂದ ಪಾಲಿಸಬೇಕು. ಅಂತಹ ಮಾರ್ಗವನ್ನು ನಂಬಿಕೆ ಮತ್ತು ಭಕ್ತಿಯೋಗದ ಮಾರ್ಗವೆನ್ನುತ್ತಾರೆ. 

ಹಾಗಿಲ್ಲದಿದ್ದರೆ ನಿಸ್ವಾರ್ಥಭಾವದಿಂದ ಸಕಲರ ಒಳಿತಿಗಾಗಿನ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅನ್ಯರ ನೋವಿನ ನಿವಾರಣೆಗಾಗಿಯೋ ಅಥವಾ ನೈಸರ್ಗಿಕ ಅಸಮತೋಲನೆಯನ್ನು ಸರಿಪಡಿಸುವುದು ಇತ್ಯಾದಿ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬಹುದು. ಅಂತಹ ನಿಸ್ವಾರ್ಥ ಕರ್ಮಗಳು ನಮ್ಮ 'ಅಹಂಕಾರ' ವನ್ನು ತಿದ್ದಿಕೊಳ್ಳಲು ಸಹಾಯಮಾಡುತ್ತದೆ ಮತ್ತು ಸಾಧಕನಿಗೆ ಅದೇ ಕರ್ಮಯೋಗವೆನಿಸಿಕೊಳ್ಳುತ್ತದೆ. 

ಮೇಲೆ ಉಲ್ಲೇಖಿಸಿದ ಸಾಧನೆಯ ಎರಡೂ ವಿಧಾನಗಳಿಂದ,  ಅತ್ಯುತ್ತಮ ಫಲಿತಾಂಶಕ್ಕಾಗಿ ಸಾಧಕನು ಸತ್ಯ ಮತ್ತು ಅಸತ್ಯ, ಅನಂತ ಮತ್ತು ತಾತ್ಕಾಲಿಕಗಳ ನಡುವೆ ಇರುವ ವ್ಯತ್ಯಾಸವನ್ನು ಅರಿಯುವ ಪ್ರಯತ್ನವನ್ನು ಮಾಡಬೇಕು. ಈ ವಿಧಾನದಿಂದ ನಿಧಾನವಾಗಿ ಸತ್ಯದ ಉಪಾಸನೆ ಮಾಡುತ್ತಾ ಅಸತ್ಯವನ್ನು ತೊರೆಯಬೇಕು. ಇದು ಜ್ಞಾನ ಯೋಗ. 

ಪ್ರಾಪಂಚಿಕ ವಿಷಯಗಳ ಸೆಳೆತದಿಂದ 'ಸತ್ಯ'ದಲ್ಲಿ ಮತ್ತು 'ಜ್ಞಾನ'ದಲ್ಲಿ ಸ್ಥಿರವಾಗಿ ನಿಲ್ಲಲು ಇಚ್ಚಿಸದ ಚಂಚಲ ಮನಸ್ಸನ್ನು ಒಂದೆಡೆ ಸ್ಥಿರವಾಗಿಸಲು ಸಾಧಕನು ಜಪ, ಧ್ಯಾನ ಮತ್ತು ಯೋಗವನ್ನು ಅಭ್ಯಸಿಸಬೇಕು. ಇದು ರಾಜ ಯೋಗ. 
  
ಹೀಗೆ ' ಅನುಸರಣೀಯ ವೇದಾಂತ' ವು ಆತ್ಮಜ್ಞಾನವನ್ನು ಪಡೆಯಲು ಮತ್ತು ಆತ್ಮಾನುಸಂಧಾನ ಮಾಡಲು ಉಪಯುಕ್ತವಾದ ಜೀವನಕ್ರಮವನ್ನು ನಡೆಸಲು ಒಂದು ಪ್ರಾಮಾಣಿಕ ಪ್ರಯತ್ನ ಮಾಡಿಸುತ್ತದೆ. ಇಂತಹ ಜೀವನ ಕ್ರಮದಲ್ಲಿ ಗೋಪ್ಯವಾಗಲೀ, ಗೂಢತೆಯಾಗಲೀ ಇರುವುದಿಲ್ಲ. ವೇದಾಂತವು ಅಸಂಬದ್ಧವೆಂದೋ ಅಥವಾ ಅಪ್ರಾಯೋಗಿಕವೆಂದೋ,ಎಂದು ಹೇಳುವುದು, ಕೇವಲ ಇಂದ್ರಿಯ ಸುಖಗಳಲ್ಲಿ ನಿರತರಾಗಿರುವವರ ವ್ಯರ್ಥ ಪ್ರಲಾಪವಷ್ಟೇ!!! ಇಂದ್ರಿಯ ಸುಖಗಳಲ್ಲೇ ಮುಳುಗಿರುವವರು, ತಮ್ಮ ಭೋಗಲಾಲಸೆಯ ಅನ್ವೇಷಣೆಯ ಮಾರ್ಗದಲ್ಲಿ ಬರುವ ಅಡ್ಡಿ ಆತಂಕಗಳ ಕಾರಣ, ಉತ್ತಮ ಮಾರ್ಗಗಳಿಂದ, ಉನ್ನತ ಸತ್ಯಗಳನ್ನು ಅರಿಯಲು ಪ್ರಯತ್ನ ಮಾಡುವವರ ಮೇಲೆ ಹರಿಹಾಯುತ್ತಾರೆ. 

ಹಿಂದಿನ ರೋಮ್ ಸಾಮ್ರಾಜ್ಯದ ಅಥೆನ್ಸ್ ನಗರದ ಘನತೆವೆತ್ತವರು, ಸೋಕ್ರಾಟೀಸ್ ಮಹಾಪುರುಷನಿಗೆ ವಿಷವುಣಿಸಿದರು, ಕಾಪರ್ನಿಕಸ್ ಮತ್ತು ಗೆಲಿಲಿಯೋರನ್ನು ಬಹಳ ಹೀನಾಯವಾಗಿ ನಡೆಸಿಕೊಂಡರು. ಅಂತಹ ಹೀನ ನಡವಳಿಕೆ ಕೇವಲ ಅಜ್ಞಾನ ಜನಿತಾದದ್ದು. ವ್ಯಕ್ತಿಗತ ಅಜ್ಞಾನವನ್ನು ತೊಳೆಯುವುದಲ್ಲದೆ, 'ಅನುಸರಣೀಯ ವೇದಾಂತ'ವು ಸಾಮಾಜಿಕ ಸುಪರಿವರ್ತನೆಗೆ ಹಾದಿ ಸುಗಮವಾಗಿಸಬೇಕು. ಅಷ್ಟೇ ಅಲ್ಲದೆ ಪ್ರತಿಯೊಬ್ಬರ ಮನಗಳಲ್ಲಿ 'ನಿಸ್ವಾರ್ಥ'ಭಾವದ ಬೀಜಗಳನ್ನು ಬಿತ್ತಲು ಬಹಳ ತೀವ್ರವಾಗಿ ಶ್ರಮಪಡಬೇಕು.  ಹಾಗಾಗಿ ವೇದಾಂತದ ವಿಷಯಗಳನ್ನು ಪ್ರಸರಿಸುವ ಕೆಲಸವೂ ಒಂದು ' ಸಾಧನೆ' ಯಾಗುತ್ತದೆ. ಮಾನವ ಸಮಾಜವನ್ನು ಗತ ವೈಭವದಿಂದ ವಂಚಿಸುವ ಅಪವಿತ್ರವಾದ ಅಜ್ಞಾನ ಮತ್ತು ಸ್ವಾರ್ಥದ ಅಡಿಪಾಯಗಳನ್ನು ಅಲುಗಿಸುವ ಕಾಯಕವನ್ನು ಮಾಡುವುದೇ ' ಅನುಸರಣೀಯ ವೇದಾಂತ'.   

ಬದುಕಿನ ಮೌಲ್ಯಾಧಾರಿತ ಅಭಿವ್ಯಕ್ತಿ, ಒಂದು ವಿಕಸಿತ ವ್ಯಕ್ತಿತ್ವವನ್ನು ವೇದಾಂತವನ್ನು ಅಭ್ಯಸಿಸುವವರಲ್ಲಿ ಕಾಣಸಿಗುತ್ತದೆ. ಹಾಗಾಗಿ ಮಾನವ ಜನಾಂಗದ ಒಳಿತಿಗಾಗಿ ವೇದಾಂತದ ಅಭ್ಯಾಸ ಉಪಯುಕ್ತವೆಂದು ಪರಿಗಣಿಸಬೇಕು. ವೇದಾಂತಕ್ಕೆ ಎದುರಾಗುವ ಶಕ್ತಿಯುತ 'ವಿರೋಧ' ದಿಂದ, ನಿಜವಾದ ವೇದಾಂತಿಗಳು ತಮ್ಮ ಪ್ರಯತ್ನಗಳಿಂದ ಹಿಂಜರಿಯುವುದಿಲ್ಲ. ಬದಲಾಗಿ, 'ಬೆಳಕು ಮತ್ತು ಕತ್ತಲೆ' ಯ ನಡುವಿನ ನಿರಂತರ ಹೋರಾಟದಿಂದ ವಿಜಯಿಗಳಾಗಿ ಹೊರಹೊಮ್ಮಿ, ಎಲ್ಲರನ್ನೂ 'ಕತ್ತಲೆಯಿಂದ ಬೆಳಕಿನೆಡೆಗೆ' 'ಅಸತ್ಯದಿಂದ ಸತ್ಯದೆಡೆಗೆ' ಮತ್ತು ' ಮೃತ್ಯುವಿನಿಂದ ಅಮರತ್ವದೆಡೆಗೆ'ನಡೆಸುತ್ತಾರೆ.  
 
"ನಾವೆಲ್ಲಾ ಯಾವ ಸ್ಥಿತಿಗೆ ಹೋಗಬೇಕೆಂದರೆ, ನಮ್ಮೊಡನಿರುವ ಪ್ರತಿಯೊಬ್ಬರೂ, ಕಡೆಗೆ ಅತೀ ಮುಗ್ಧ ಮನುಷ್ಯನೂ ಸಹ ಆತ್ಮ ಜ್ಞಾನಿಯಾಗಬೇಕು ಅಂತಹ ಮುಗ್ಧರನ್ನು ಹೀಯಾಳಿಸುವುದರ ಬದಲು, ಅವನಿಗೆ 'ಎದ್ದೇಳು ಓ ಮುಗ್ಧನೇ, ಎದ್ದೇಳು ಓ ಸದಾ ಶುದ್ಧನೇ, ಜನ್ಮ ಮೃತ್ಯು ರಹಿತನೆ, ಓ ದೇವನೇ ನೀನು ನಿನ್ನ ನಿಜ ರೂಪವನ್ನು ಧರಿಸು. ಅನ್ಯ ರೂಪಗಳು ನಿನಗೆ ಸೂಕ್ತವಲ್ಲ' ಎನ್ನಬೇಕು. ಇದೇ ಅದ್ವೈತ ಸಿದ್ಧಾಂತ ಬೋಧಿಸುವ ಅತ್ಯುನ್ನತ ಪ್ರಾರ್ಥನೆ" ಎನ್ನುತ್ತಾರೆ ಸ್ವಾಮೀ ವಿವೇಕಾನಂದ.   

ವಿಜ್ಞಾನದ ಕೊರತೆಗಳು 

 'ವಿಜ್ಞಾನ'  ನಮ್ಮನ್ನು ಬಂಧನದಿಂದ ಬಿಡುಗಡೆ ಮಾಡುವ ಒಂದು ಜ್ಞಾನ ಎಂದು ಪ್ರತಿಪಾದಿಸುವವರಿದ್ದಾರೆ. ಅದು ಭಾಗಶಃ ಸತ್ಯ!  'ಮೂಢ ನಂಬಿಕೆ ಮತ್ತು ವಂಚನೆ' ಯನ್ನು ವಿರೋಧಿಸುವ ಸಾಧನದಂತೆ, ಸಂಸ್ಕೃತಿಯಂತೆ 'ವಿಚಾರ ಮತ್ತು ವಾಸ್ತವಿಕತೆ' ಯನ್ನು ನಿರೂಪಿಸುವ ಪ್ರಯತ್ನವನ್ನು ವಿಜ್ಞಾನದಿಂದ ಮಾಡಲ್ಪಟ್ಟಿತು. ಆದರೆ ಈ ಪ್ರಯತ್ನದಲ್ಲಿ ವಿಜ್ಞಾನಿಗಳಿಗೆ ಭಾಗಶಃ ಯಶಸ್ಸು ದೊರಯಿತು. ವೈಜ್ಞಾನಿಕ ವಿಚಾರಧಾರೆಯನ್ನು ಪ್ರತಿಪಾದಿಸಿದವರು ತಾವು ನಿರೂಪಿಸಿದ ವೈಜ್ಞಾನಿಕ ಮತ್ತು ತಾಂತ್ರಿಕ ಸಿದ್ಧಾಂತಗಳ ಕಾರಣ ತಾವು ಮಿಕ್ಕವರಿಗಿಂತ 'ಉತ್ತಮ'ರೆಂದು ಹೇಳಿಕೊಂಡು ಅನ್ಯರನ್ನು 'ಶೋಷಣೆ ಮತ್ತು ತುಳಿತ' ಕ್ಕೆ ಒಳಗಾಗಿಸಿದರು. ಕೋಟ್ಯಾಂತರ ಪ್ರಾಮಾಣಿಕ ಜನರ ನೋವು ಕೆಲವೇ ವಶೀಲಿತ ಮತ್ತು ಸಿರಿವಂತ ಜನರ ದಬ್ಬಾಳಿಕೆಯಡಿ ತುಳಿಯಲ್ಪಡುವುದಕ್ಕೆ ವೈಜ್ಞಾನಿಕ ಸಂಸ್ಕೃತಿ ಪೂರಕವಾಗಿ ಕೆಲಸಮಾಡಿದೆ. 

ಈ ರೀತಿಯ ವೈಜ್ಞಾನಿಕ ಆವಿಷ್ಕಾರಗಳ ದುರ್ಬಳಕೆ ಸತ್ಯವಾದ ವೈಜ್ಞಾನಿಕತೆಯನ್ನು ಪ್ರತಿಪಾದಿಸುವವರನ್ನು ಧ್ರುತಿಗೆಡಿಸಿತು. ಕಾರಣ? ಕಾರಣವೇನೆಂದರೆ ಅವರು 
'ಸಕಲ ಆತ್ಮಗಳೂ ದೈವೀಕ'  ಎಂಬ  ತತ್ವವನ್ನು 
ಮರೆತಿದ್ದರು. ವೈಜ್ಞಾನಿಕ ಪ್ರಗತಿ 'ಅಭಿವೃದ್ಧಿ' ಎನ್ನುವ ಅವರ ನಂಬಿಕೆ 'ಹುಸಿ' ಎಂದು ಅರಿವಾಯಿತು. ನಮ್ಮ ಅಸ್ತಿತ್ವ ಕೇವಲ 'ದೇಹ ಮತ್ತು ಮನಸ್ಸು' ಎಂಬ ಸಂಕೀರ್ಣತೆಗೆ ಸೀಮಿತಗೊಳಿಸಿಕೊಂಡಾಗ, ಪ್ರಗತಿ ಕೇವಲ ಇಂದ್ರಿಯ ಲಾಲಸೆಯನ್ನು ತೃಪ್ತಿಪಡಿಸುವ ಸಾಧನವಾಗಿಬಿಡುತ್ತದೆ. ವೈಜ್ಞಾನಿಕ ಪ್ರಗತಿ ಮತ್ತು ಅಭಿವೃದ್ಧಿಯು ಕೇವಲ ಕೆಲವೇ ಜನರ ಅಹಂಕಾರವನ್ನು ತಣಿಸುವ ಸಾಧನವಾಗಿ, ಬಡವರು, ಧನವಿಹೀನರು ಮತ್ತು ಅಸಹಾಯಕರ ಶೋಷಣೆಗೆ ಒಂದು ಸಾಧನವಾಗಿಬಿಡುತ್ತದೆ. 

ವೇದಾಂತವು ವಿಚಾರಮಾಡುವುದನ್ನೋ ಅಥವಾ ವಾಸ್ತವವಾದವನ್ನೋ ಅಲ್ಲಗೆಳೆಯುವುದಿಲ್ಲ   ಅದು ಎಲ್ಲರನ್ನೂ ' ತನ್ನಂತೆ' ಬಗೆ , ಎನ್ನುವ ತಾರ್ಕಿಕ ನೆಲೆಗಟ್ಟಿನಲ್ಲಿ ನಿಲ್ಲುತ್ತದೆ . ವೇದಾಂತವು, ನಮ್ಮ ಅವಗಾಹನೆಗೆ ಬರುವುದೆಲ್ಲವೂ ದೈವೀಕ ಎಂದು ಪರಿಗಣಿಸಿ 'ಆತ್ಮ ಮತ್ತೊಂದು ಆತ್ಮವನ್ನು'  ಶೋಷಿಸುವುದನ್ನು ವಿರೋಧಿಸುತ್ತದೆ !  ಇದು ಕೇವಲ ಕಲ್ಪನೆಯಲ್ಲ. ನಾವು ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದ ಔನ್ನತ್ಯವನ್ನು ಪಡೆದಾಗ  ನಮಗೆ ಸೃಷ್ಟಿಯ ಎಲ್ಲವೂ ದೈವೀಕವಾಗಿ ಕಂಡು, ಸಕಲ ಸೃಷ್ಟಿಯಲ್ಲಿ ಪ್ರೇಮ ಮತ್ತು ಪೂಜನೀಯ ಭಾವಗಳ ಅವಿನಾಭಾವ ಸಂಬಂಧದ ಅರಿವಾಗಿ, ಸ್ವಾಭಾವಿಕವಾಗಿ, ಇಡೀ ಜಗತ್ತೇ ಒಂದು ಸುಂದರ ತಾಣವಾಗಿ ಮಾರ್ಪಾಡಾಗುತ್ತದೆ. 

ರವಿ ತಿರುಮಲೈ 
೧೨. ೧೧.೨೦೧೪

(Bhavan's Journal ನಲ್ಲಿ ಮಾನ್ಯ S.C. SHAH ರವರ Practical Vedanta ಎಂಬ ಲೇಖನದ 'ತರ್ಜುಮೆ' )     

Thursday 13 November 2014

ಕ್ಷಮಯಾ ಧರಿತ್ರಿ


ನಿನ್ನ ಮೌನವೆನಗೆ ಕಂಡಿತಂದು
ಕೇವಲ ನಿನ್ನ ಬಲಹೀನತೆಯೆಂದು
ಕೋಪಗೊಂಡು ಅರಚಿದೆ 
ಕ್ರೋಧದಿಂದ ಕ್ಷುದ್ರನಾಗಿ ಕನಲಿದೆ


ಪದಗಳನಾಡಿದೆ,ವಾದಗಳ ಮಂಡಿಸಿದೆ
ಮಾತುಗಳ ಕತ್ತಿಯಲಗಿನಂತೆ ಬಳಸಿದೆ
ಎನ್ನ ಮತವೆಂದೆಂದಿಗೂ ಸರಿಯೆಂದು
ನೀ ಸರಿಯಾಗಲು ಸಾಧ್ಯವಿಲ್ಲೆಂದು

ಅಂದಿನಿಂದ ಇಂದಿನವರೆಗೆ, ನಾ
ಆಡಿದ ಮಾತಿನಾ ಭಾರದಲಿ, ನಾ
ಕುಗ್ಗಿಹೆ, ಬಗ್ಗಿಹೆ, ಕುಬ್ಜನಾಗಿಹೆ, ಅರಿತು
ಎನ್ನ ನುಡಿಗಳು ಕಿವಿಗೆ ಇಂಪಾದ ಹಾಡಲ್ಲವೆಂದು

ಬಳಲಿ ಬೆಂಡಾಗಿ, ಎನ್ನ ಅಹಮಡಗಿ,
ಒರಗಲೊಂದು ಆಸರೆಯೊಂದ
ಹುಡುಕುತ್ತಿರೆ, ಕಳೆದ ದಿನಗಳ
ನೆನೆದು,ಒರಗಿ ಕಣ್ಣೀರಿಡಲೆಂದು

ನೀ ತೆರೆದ ತೋಳ್ಗಳಿಂದ, ಬಾ
ಎಂದು ಕರೆದಾಗ, ನಾ ಕುಸಿದು
ಧರೆಗಿಳಿದು ಮೌನದಲಿ ಕೂಗಿದೆ,
ಕ್ಷಮಯಾ ಧರಿತ್ರಿ ಕ್ಷಮಯಾ ಧರಿತ್ರಿ

ರವಿ ತಿರುಮಲೈ

Sunday 2 November 2014

ನಾನೊಂದು ಆದಿ
ನಾನೊಂದು ಅಂತ್ಯ
ನಾನೇ ಜಗತ್ತು
ನಾನೇ ಶೂನ್ಯ
ನಾನೊಂದು ಕಡಲ ಜಲದ ಹನಿ
ಆದ್ಯಂತರಹಿತ ಕಡಲೇ ನಾನು

ಏಕಾಂತ ನನ್ನ ಮಿತಿ
ಒಂದು ಕ್ಷಣಕ್ಕೆ ನಾ ಸ್ಥಬ್ಧ
ನನಗಾಗಿ ನನ್ನದೇ ವ್ಯರ್ಥ ಹುಡುಕಾಟ
ನಾನಿಲ್ಲ ನಾನಿರುವೆಗಳ ನಡುವೆ
ಕಣ್ಣ ಮುಚ್ಚಾಲೆಯಾಟ
ಮೂಲೆಮೂಲೆಯಲ್ಲೂ ನನ್ನನ್ನೇ
ತುಂಬಿಕೊಳ್ಳಲು ಪರದಾಟ

ಅಸ್ಪಷ್ಟ ನೀತಿ ನಿಯಮಗಳ ನಡುವೆ
ನನ್ನ ಯೋಚನೆಗಳು ಜೀರ್ಣವಾಗದೆ
ನಿರಂತರ ಪ್ರಶ್ನೆಗಳ ಸುರಿಮಳೆ
ನಿರುತ್ತರದ ಸ್ಥಿತಿಯಲ್ಲಿ ತಲೆಬಾಗುವೆ
ನಾನಾ ಪರವಸ್ತುವಿಗೆ

ಎನ್ನ ಪದಗಳಿಂದ ನಾನಮರ
ಗೋರಿಗಳಿಂದೆದ್ದು ಕೂಗುವ
ಎನ್ನ ಪೂರ್ವಜರ ಕರೆಗಳಿಂದ,
ಬರೆಯುವುದೆನ್ನ ಹಕ್ಕು, ಧರ್ಮ

ಅಣಕವಾಡುವವರು, ಅಣಕಿಸಲಿ
ಹೊಗಳುವವರ ಗುಣಗಾನವಿರಲಿ
ವಿದ್ವಜ್ಜನರೊಪ್ಪಿಕೊಳ್ಳಲಿ, ಸೂರ್ಯನ
ಕಡೆ ಮುಖಮಾಡಿ ನಾಯಿ ಬೊಗುಳಲಿ


ನಾನೊಂದು ಆದಿ ನಾನೊಂದು ಅಂತ್ಯ



ರವಿ ತಿರುಮಲೈ 
೧. ೧೧. ೨೦೧೪

Saturday 14 June 2014

ಜೂನ್ ೫ ನೇ  ತಾರೀಖಿನಂದು ಬೆಂಗಳೂರಿನಿಂದ ಪ್ರಕಟಗೊಳ್ಳುವ " ಉದಯವಾಣಿ
" ಪತ್ರಿಕೆಯಲ್ಲಿ ಕಗ್ಗ ರಸಧಾರೆ-ಸಂಪುಟ ೨ ನ್ನು ಕುರಿತು ಪುಸ್ತಕ ವಿಮರ್ಶಾ ಲೇಖನ ಪ್ರಕಟವಾಗಿತ್ತು



ತಾರೀಕು ೭.೬.೨೦೧೪
ರ ಹೊಸ ದಿಗಂತ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಕಗ್ಗ ರಸಧಾರೆ ಪುಸ್ತಕದ ಸುಧೀರ್ಘ ವಿಮರ್ಶೆ 





ವಿಜಯ ಕರ್ನಾಟಕದ ಸಾಪ್ತಾಹಿಕ ಪತ್ರಿಕೆ " ಭೋಧಿವೃಕ್ಷ" ದಲ್ಲಿ ಕಗ್ಗ ರಸಧಾರೆ ಸಂಪುಟ ಎರಡರ ಪುಸ್ತಕ ಪರಿಚಯ

ಪ್ರಕಟಣಾ ದಿನಾಂಕ ೧೪.೬.೨೦೧೪  

Monday 24 March 2014

ಹರಸಿರೆನ್ನನು

ನನ್ನ ಹುಟ್ಟುಹಬ್ಬದಂದು ನನ್ನ ಮಿತ್ರರಲ್ಲಿ 'ಹರಸಿ' ರೆಂದು ಬೇಡಿದ ಪರಿ ಹೀಗಿತ್ತು 


=============================
ಹರಸಿರೆನ್ನನು 
=============================


ಹರಸಿರೆನ್ನನು ಇಂದು 

ನೂರ್ಕಾಲ ಬಾಳೆಂದು

ಆ ನಿಮ್ಮ ಹರಕೆಯೆಲ್ಲವು

ಸಫಲವಾಗಲೆಂದು. 



ಸವೆಸಿ ಬಂದಿಹೆ ನಾನು 

೫೯  ವಸಂತಗಳನು 

ಶೇಷವೆಷ್ಟೋ ನಾ ಅರಿಯೆ 

ಕ್ಲೇಶವೆಷ್ಟೋ ಅದ ಸವೆಯೆ 



ಕಷ್ಟಸುಖಗಳ ಮಿಶ್ರಣದಿಂ ಕಳೆದೆ 

ಅನುಭವದ ಸಾರದಿಂ ನಾ ಬೆಳೆದೆ 

ಏರು ತಗ್ಗುಗಳ ನಾ ದಾಟಿ ಬಂದೆ 

ಸೋಲುಗೆಲುವುಗಳ ನಾ ಮೆಟ್ಟಿನಿಂದೆ 



ಪ್ರೀತಿ ಪ್ರೇಮಗಳನೆಷ್ಟು ಸವಿದೆನೋ 

ದ್ವೇಷಾಸೂಯೆಗಳನೆಷ್ಟು ಸಹಿಸಿದೆನೋ 

ಗತವೆನೆಲ್ಲವ ಮರೆತು ಬಾಳಬೇಕೆಂದಿಹೆನು 

ಇಂದೇ ನಿಜ ಇದುವೇ ಸುಖ ಎಂದು ನಂಬಿಹೆನು 



ನಿಮ್ಮೊಲವು ಪ್ರೀತಿಯೇ ಜೀವಸತ್ವವು ಎನಗೆ 

ನಿಮ್ಮಂತರಂಗದಲಿ ತಾವು ಕೊಡಿರೆನಗೆ

ಮಾಸದಿರಲಿ ನೆನಪೆನ್ನ ನಿಮ್ಮ ನೆನಪಿನೊಳಗೆ 

ನಾ ನಿಮ್ಮ ದಾಸ ಎನ್ನ ಕೊನೆಯುಸಿರಿನವರೆಗೆ   


ರವಿ ತಿರುಮಲೈ 
೨೧.03.೨೦೧೪

ದುರಿತಗಳಾ ಹರಿಸೋ


ದುರಿತಗಳಾ ಹರಿಸೋ ಶ್ರೀ ಹರಿ 
ಅರಿಯದಾಗಿಹೆ ದಾರಿ ನಾ \ ದುರಿತ\

ಆವ ಕರ್ಮದಿ ಆವ ಪಾಪವೋ
ಆವ ಕರ್ಮದಿ ಆವ ಪುಣ್ಯವೋ
ಪರಿಯನರಿಯದೆ ಪರಿತಪಿಸಿಹೆ
ದಾರಿತೊರೋ ಅರಿಗಳರಿಯೇ \ ದುರಿತ\

ಸುರರಿಗಮೃತವ ಸುರಿದು ಪೊರೆಯುತ
ನರೆಯನೆರೆದಿಹೆ ನರರಿಗೇತಕೋ
ಚರದಿ ಮೆರೆಸುವ ಹರಿವನಿರಿಸಿದೆ
ಸ್ಥಿರವ ಮರೆಸುವ ಪರಿಯಿದೇತಕೋ \ದುರಿತ\

ಮೂರು ಜನುಮದಿ ದ್ವಾರಪಾಲರ
ವೈರಿಯಂದದಿ ಹರಿದೆ ಶಾಪವ
ಶಿರದಿಯಿರಿಸುತ ಚರಣಕಮಲವ
ಪೊರೆದೆ ಬಲಿಯನು ವರವ ಕರುಣಿಸಿ \ದುರಿತ\

ಅರಳಿ ನಿಲ್ಲೋ ಹರಿಯೆ ಹೃದಯದಿ
ಅರಿವನಿರಿಸೋ ಗರುವ ಮುರಿಯುತ 

ಮರಳಿ ಜನನವು ಬಾರದಿರುವಾ

ಪರಮಪದವನು ತೋರಿ ಹರಸೋ \ ದುರಿತ\
 


ಸಾಗರದ ಶ್ರೀ ನಂಜುಂಡ ಭಟ್ಟರ ಕೃಪೆಯಿಂದ 
ರವಿ ತಿರುಮಲೈ