Thursday 21 June 2018

ಪ್ರಾರ್ಥನೆ ಮತ್ತು ಪೂಜೆ




ಪ್ರಾರ್ಥನೆ 

ಮೂಲತತ್ವದಲ್ಲಿ ಪ್ರಾರ್ಥನೆಯೆಂದರೆ, ನಮಗಿಂತ ಉನ್ನತ ಅಥವಾ ಹೆಚ್ಚಿನ ಶಕ್ತಿಯಿಂದ ಅಥವಾ ಶಕ್ತಿಯಿರುವ ವ್ಯಕ್ತಿಯಿಂದ ಏನನ್ನಾದರೂ ಬೇಡುವುದು ಅಥವಾ ಬಯಸುವುದು ಮತ್ತು ಪೂಜೆಯೆಂದರೆ, ಅಂತ ಉನ್ನತ ಶಕ್ತಿಗೆ ನಾವು ಏನನ್ನಾದರೂ ನೀಡುವುದು ಅಥವಾ ಸಮರ್ಪಿಸಿಕೊಳ್ಳುವುದು. ಇಲ್ಲಿ ನಾವು ಪರಮಾತ್ಮ ಅಥವಾ ಪರತತ್ವವನ್ನು ಅಂತಹ ಉನ್ನತ ಶಕ್ತಿಯೆಂದು ಪರಿಗಣಿಸಬೇಕು.  ಹಾಗಾಗಿ ನಾವು ಇಲ್ಲಿ ಕೇವಲ ಪ್ರಾರ್ಥನೆ ಮತ್ತು ಪೂಜೆಯ ಆಧ್ಯಾತ್ಮಿಕ ಆಯಾಮವನ್ನು ಮಾತ್ರ ವಿಚಾರಮಾಡಬೇಕಾಗಿದೆ.   

ಬದುಕಿನ ಸಂಕಷ್ಟದ ಸಮಯದಲ್ಲಿ, ಪರಿಹಾರದ ಎಲ್ಲಾ ಬಾಗಿಲುಗಳೂ ಮುಚ್ಚಿಹೋಗಿವೆ ಎಂದೆನಿಸುವಾಗ, ದೈವದ ಸಹಾಯದಿಂದ ಅಂತಹ ಸಂಕಷ್ಟಗಳಿಂದ ಪಾರಾಗಲು ಬಯಸಿ, ಪ್ರತಿಯೊಬ್ಬರೂ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಹಾಗಾಗಿ ಪ್ರಾರ್ಥನೆಗೆ ಮೂಲ ಕಾರಣ ನಮ್ಮ ಬೇಡಿಕೆಗಳು ಮತ್ತು ಅಸಹಾಯಕತೆ.  ನಮ್ಮ ಮೂಲ ಸ್ವಭಾವದ, ಅಜ್ಞಾನ ಅಥವಾ ಅರಿವಿನ ಕೊರತೆಯಿಂದ ನಮ್ಮ ಮನಸ್ಸುಗಳಲ್ಲಿ ಪ್ರಾರ್ಥನೆ ಹೊರಹೊಮ್ಮುತ್ತದೆ ಮತ್ತು ನಮ್ಮನ್ನು ನಾವು ತಪ್ಪುತಪ್ಪಾಗಿ ನಮ್ಮ ಈ ದೇಹ ಮತ್ತು ಮನಸ್ಸುಗಳೊಂದಿಗೆ ಗುರುತಿಸಿಕೊಳ್ಳುವುದರಿಂದ ನಮಗೆ ಅಸಹಾಯಕತೆಯ ಅನುಭವವಾಗುತ್ತದೆ.  ನಾವು ಪ್ರಾರ್ಥನೆಯನ್ನು ಮಾಡುವ  ರೀತಿ ನಮ್ಮ ಅರಿವಿನ ಮಟ್ಟವನ್ನು ತೋರುತ್ತದೆ. " ಓ! ದೇವರೇ ಈ ನೋವಿನಿಂದ ಮುಕ್ತಿಯನ್ನು ನೀಡು" ಎಂದು ಬೇಡಿದರೆ, ನಮ್ಮ ದೇಹದೊಟ್ಟಿಗಿನ ಅಂಟನ್ನು ತೋರುತ್ತದೆ.  " ಓ! ದೇವರೇ ನಾ ಬರೆಯುತ್ತಿರುವ  ಕಾದಂಬರಿ ಅಥವಾ ನಾ ಚಿತ್ರಿಸುತ್ತಿರುವ ಚಿತ್ರ ಅಥವಾ ಕೆತ್ತುತ್ತಿರುವ ಮೂರ್ತಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಶಕ್ತಿಯನ್ನು ನೀಡು" ಎಂದು ಬೇಡಿದರೆ, ಅದು ನಮ್ಮ ಮನಸ್ಸಿನೊಂದಿಗಿನ ಅಂಟನ್ನು ತೋರುತ್ತದೆ.   ಇಲ್ಲಿ ಎರಡನೆಯ ಪ್ರಾರ್ಥನೆ ಮೊದಲೆನಯದಕ್ಕಿಂತ ಉತ್ತಮವಾದರೂ, ಎರಡೂ ಸಂದರ್ಭಗಳಲ್ಲಿ , ಬೇಡುವುದು ವೈಯಕ್ತಿಕ ಲಾಭಕ್ಕಾಗಿ ಎಂದು ತಿಳಿಯುತ್ತದೆ. ಹಾಗಾಗಿ ಇಂತಹ ಪ್ರಾರ್ಥನೆಗಳು ನಮ್ಮ ಆಧ್ಯಾತ್ಮಿಕ  ಹಾದಿಯ ಆರಂಭಿಕ ಸ್ಥರದ ಪ್ರಾರ್ಥನೆಗಳಾಗುತ್ತವೆ.  



ಒಬ್ಬ ವ್ಯಕ್ತಿ ಆಧ್ಯಾತ್ಮಿಕವಾಗಿ ಬೆಳೆಯುತ್ತಿರುವಾಗ ಅವನ ಪ್ರಾರ್ಥನೆಯ ಸ್ವರೂಪವೂ ಬದಲಾಗುತ್ತಾ ಹೋಗುತ್ತದೆ.  ಉದಾಹರಣೆಗೆ, ಹಣದ ವ್ಯವಹಾರದಲ್ಲಿ ಸುಳ್ಳು ಆರೋಪಕ್ಕೆ ಬಲಿಯಾದ ನೆರೆಮನೆಯಾತನ ಕಷ್ಟಕ್ಕೆ ಸ್ಪಂದಿಸಿ " ಓ! ದೇವರೇ ನಮ್ಮ ನೆರೆಮನೆಯಾತ ಬಹಳ ನಿಷ್ಠಾವಂತ ಮತ್ತು ಪ್ರಾಮಾಣಿಕ, ಅವನಿಗಿರುವ ಪೊಲೀಸರ ತೊಂದರೆಯಿಂದ ಅವನನ್ನು ಪಾರುಮಾಡು ತಂದೇ "  ಎಂದು ಪ್ರಾರ್ಥನೆ ಮಾಡಿದರೆ ಅಥವಾ ಯುವಕನೊಬ್ಬ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಾಗ  "ಓ ! ಪರಮಾತ್ಮ ಆ ಮಗುವನ್ನು ಕಾಪಾಡು,  ಅವನಿನ್ನೂ ಚಿಕ್ಕವನು" ಎಂದು ಪ್ರಾರ್ಥಿಸಿದರೆ, ನಮ್ಮ ಪ್ರಾರ್ಥನೆ ಪರರಿಗಾಗಿ ಆಗಿ, ಅದರ  ಸ್ವರೂಪ ಬದಲಾಗುತ್ತದೆ ಮತ್ತು ಪ್ರಾರ್ಥನೆಯ ಸ್ವರೂಪ ವಿಶಾಲವಾಗುತ್ತದೆ. ನಮ್ಮ ಪ್ರಾರ್ಥನೆಯ ಕಾರಣವನ್ನು ಮತ್ತಷ್ಟು ವಿಶಾಲಗೊಳಿಸಿಕೊಂಡರೆ ನಾವು ಯುದ್ಧ ಅಥವಾ ಪ್ರಕೃತಿಯ ವಿಕೋಪದ ಸಮಯದಲ್ಲಿ ಇಂತಹ ಸಾಮೂಹಿಕ ಪ್ರಾರ್ಥನೆಯನ್ನು ಮಾಡುವುದನ್ನು ಕಾಣುತ್ತೇವೆ.  ಹೀಗೆ, ನಾವು ಮಾಡುವ ಪ್ರಾರ್ಥನೆ , ಸ್ವಾರ್ಥದಿಂದ ಪರಾರ್ಥದೆಡೆಗಿನ ಬೆಳವಣಿಗೆಯ ಮಟ್ಟವನ್ನು ತೋರುತ್ತದೆ. ಎಲ್ಲರ ಒಳಿತನ್ನು ಬಯಸುವ ಪ್ರಾರ್ಥನೆಯೇ ಉತ್ತಮವಾದ ಪ್ರಾರ್ಥನೆ.   


ಮೂರನೆಯದಾಗಿ,  ವ್ಯಕ್ತಿ ಪ್ರಾರ್ಥನೆಯಿಂದ ಹಂತ ಹಂತವಾಗಿ ತನ್ನಂತರಂಗದಲ್ಲಿ ಬೆಳೆಯಬಹುದು. ಒಬ್ಬ ವ್ಯಕ್ತಿ ಖಾಯಿಲೆ ಬಂದಾಗ, ಪ್ರಾರ್ಥನೆಯನ್ನು ಮಾಡದೆ, ವೈದ್ಯರಲ್ಲಿ ಹೋಗಿ ಶುಶ್ರೂಷೆ ಪಡೆಯುತ್ತಾನೆ. ಪರ್ಯಾಯ ಮಾರ್ಗಗಳಿರುವಾಗ ಅವನು ಪರಿಹಾರಕ್ಕಾಗಿ ದೇವರಲ್ಲಿ ಪ್ರಾರ್ಥನೆಯನ್ನು ಮಾಡುವುದಿಲ್ಲ. ನಾಲ್ಕನೆಯದಾಗಿ ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ವಿವೇಕ ಬೆಳೆದಂತೆಲ್ಲಾ, ಅವನಿಗೆ, ಎಂದಾದರೂ ನಾಶವಾಗುವ ಈ ದೇಹಕ್ಕೆ ಸಂಬಂಧಿಸಿದ, ಆರೋಗ್ಯ, ಸಂಪತ್ತು ಮತ್ತು ಅಧಿಕಾರಗಳನ್ನು ಪರಮಾತ್ಮನಲ್ಲಿ ಬೇಡುವುದು  ತೀರಾ ಕ್ಷುಲ್ಲಕವೆನಿಸುತ್ತದೆ.  ಸೂಕ್ತಾಸೂಕ್ತತೆಗಳ ತರತಮ ಜ್ಞಾನದಿಂದ ಪ್ರಾರ್ಥನೆಯ ಹೊಸ ಆಯಾಮಗಳು ಗೋಚರವಾಗಿ,  ಸಾಧಕ ಪರಮಾತ್ಮನಲ್ಲಿ 'ಶಾಶ್ವಥ' ವಾದದ್ದನ್ನೇನಾದರೂ ಬೇಡುತ್ತಾನೆ.   " ಓ! ದೇವರೇ ಧನ ಕನಕಗಳು ಬೇಡ, ನಿನ್ನಲ್ಲಿ ಭಕ್ತಿಯನ್ನು ನೀಡು " ಎಂದು ಬೇಡಲುದ್ಯುಕ್ತನಾಗುತ್ತಾನೆ. ಅಂತಹ ಪ್ರಾರ್ಥನೆಯೇ ನಿಜವಾದ ಆಧ್ಯಾತ್ಮಿಕ ಪ್ರಾರ್ಥನೆಯಾಗುತ್ತದೆ. 

ಇಲ್ಲಿ ಸ್ವಾಮಿ ವಿವೇಕಾನಂದರ ಬದುಕಿನ ಒಂದು ದೃಷ್ಟಾಂತವನ್ನು ನೀಡುವುದು ಅವಶ್ಯವೆನಿಸುತ್ತದೆ. ಸ್ವಾಮೀ ವಿವೇಕಾನಂದರು ಬಹಳ ಸಣ್ಣವರಾಗಿದ್ದಾಗಲೇ ಅವರ ತಂದೆ  ಸಂಸಾರವನ್ನು ಸಾಲ ಮತ್ತು ಸಂಕಟದಲ್ಲಿ ಬಿಟ್ಟು, ತೀರಿಕೊಂಡರು. ಆ  ಸಂದರ್ಭದಲ್ಲಿ ಅವರ ಬಂಧುಗಳೆಲ್ಲಾ, ನರೇಂದ್ರನಿಗೆ ಸಹಾಯಮಾಡುವುದನ್ನು ಬಿಟ್ಟು, ತಮಗೆ  ದಕ್ಕಬೇಕಾದ್ದನ್ನು ಬಾಚಿಕೊಂಡು, ನರೇಂದ್ರನ ಕುಟುಂಬವನ್ನು ನಿರ್ಗತಿಕರನ್ನಾಗಿಸಿ, ದೂರಾದರು. ತನ್ನ ಕುಟುಂಬವನ್ನು ಪೋಷಿಸಲು ನರೇಂದ್ರನಿಗೆ ಯಾವುದೇ ಉದ್ಯೋಗವೂ ದೊರೆಯಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನರೇಂದ್ರನು ತನ್ನ ಗುರುವಾದ ಶ್ರೀ ರಾಮಕೃಷ್ಣ ಪರಮಹಂಸರಲ್ಲಿ ಹೋಗಿ, " ಸ್ವಾಮೀ, ತಾವು ದಯಮಾಡಿ, ನಮ್ಮ ಮನೆಗೆ ಬೇಕಾಗುವಷ್ಟು ಬಟ್ಟೆಬರೆ ಮತ್ತು ದವಸ ಧಾನ್ಯವನ್ನು ಅನುಗ್ರಹಿಸುವಂತೆ, ಆ ' ತಾಯಿ' ಯಲ್ಲಿ ನನಗಾಗಿ ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆಯನ್ನು ಆ ತಾಯಿ ಖಂಡಿತ ಮನ್ನಿಸುವಳೆಂದು ನನಗೆ ಸಂಪೂರ್ಣ ಭರವಸೆಯಿದೆ" ಎಂದು ಬೇಡಿದನಂತೆ.  

ಆದರೆ ರಾಮಕೃಷ್ಣರ ಮನದಲ್ಲಿ ಬೇರೆಯೇ ಯೋಜನೆಯಿದ್ದಿರಬಹುದು. ಅವರು ನರೇಂದ್ರನನನ್ನು ಕುರಿತು, " ಮಗೂ, ನಾನು ನನ್ನ ಎಲ್ಲವನ್ನೂ ಆ ತಾಯಿಗೆ ಸಮರ್ಪಿಸಿಬಿಟ್ಟಿದ್ದೇನೆ. ಒಮ್ಮೆ ಕೊಟ್ಟದ್ದನ್ನು ಮತ್ತೆ ಹಿಂತಿರುಗಿ ಬೇಡುವುದು ಹೇಗೆ ಸಾಧ್ಯ? ಆದರೆ ಒಂದು ಮಾತನ್ನು ಹೇಳಬಲ್ಲೆ, ನೀನೆ ಏಕೆ ಆ ತಾಯಿಯ ಮುಂದೆ ಹೋಗಿ ನಿನ್ನ ಅವಶ್ಯಕತೆಗಳನ್ನು ನೀಡೆಂದು ಬೇಡಬಾರದು? ನನ್ನ ತಾಯಿ ಬಹಳ ದಯಾಳು. ನಿನಗೆ ನಿರಾಶೆಯಾಗದು ಎಂದು ನನಗನ್ನಿಸುತ್ತದೆ." ಎಂದರಂತೆ.  

ಹೀಗೆ ಸ್ವಾಮೀ ವಿವೇಕಾನಂದರಿಗೆ ಆ ತಾಯಿಯಲ್ಲಿ ತನಗೆ ಬೇಕಾದುದನ್ನು ಬೇಡುವ ಪರಿಸ್ಥಿತಿಗೆ ಬಲವಂತದಿಂದ ದೂಡಲಾಯಿತು. ಅಂದು ರಾತ್ರಿ ' ಕಾಳಿ ದೇವಾಲಯ' ದಲ್ಲಿ ರಾಮಕೃಷ್ಣರು  ಮತ್ತು  ವಿವೇಕಾನಂದರು, ಇಬ್ಬರೇ ಇದ್ದರು. ವಿವೇಕಾನಂದರು ತನ್ನ ತುರ್ತು ಅವಶ್ಯಕತೆಗಳನ್ನು ಬೇಡುವ ಸಲುವಾಗಿ ತಾಯಿಯ ದೇವಾಲಯದೊಳಕ್ಕೆ ಹೋದರು. ಆದರೆ ದೇವಾಲಯದೊಳಕ್ಕೆ ಕಾಲಿಟ್ಟೊಡನೆಯೇ "ಓ!! ಮಾತೆ ನನಗೆ 'ಜ್ಞಾನ ಮತ್ತು ಭಕ್ತಿ ' ನೀಡು ಎಂದಷ್ಟೇ ಪ್ರಾರ್ಥನೆ ಸಲ್ಲಿಸಿ ರಾಮಕೃಷ್ಣರು ಇದ್ದಲ್ಲಿಗೆ ಬಂದು ಸೇರಿದರಂತೆ.  ಗುರುವು " ನರೇಂದ್ರ, ನಿನ್ನ ಕುಟುಂಬಕ್ಕೆ ಬೇಕಾದ ಆಹಾರ ಮತ್ತು ಹಣವನ್ನು ತಾಯಿಯಲ್ಲಿ ಬೇಡಿದೆಯೇನು" ಎಂದರಂತೆ. ತನ್ನ ವರ್ತನೆಯಿಂದ ಚಕಿತನಾದ ನರೇಂದ್ರ " ಇಲ್ಲ ಗುರುಗಳೇ ನಾನು ಕೇವಲ ಜ್ಞಾನ ಮತ್ತು ಭಕ್ತಿ ' ಯನ್ನು ಮಾತ್ರ ಬೇಡಲಾಯಿತು." ಎಂದರಂತೆ.  

"ಅಯ್ಯೋ ಪೆದ್ದ ! " ಗುರುಗಳಂದರಂತೆ " ಹೋಗು, ಮತ್ತೆ ಹೋಗಿ ಆ ತಾಯಿಯಲ್ಲಿ ನಿನಗೇನು ಬೇಕೋ ಅದನ್ನು ನೀಡೆಂದು ಪ್ರಾರ್ಥನೆ ಮಾಡು " ಎಂದರಂತೆ. ನರೇಂದ್ರ ಮೂರುಬಾರಿ ಆ ತಾಯಿಯ ದೇವಾಲಕ್ಕೆ ಹೋದಾಗಲೂ, ತನ್ನ ಕುಟುಂಬಕ್ಕೆ ಬೇಕಾದ ದುಡ್ಡು, ಬಟ್ಟೆ ಮತ್ತು ಆಹಾರಗಳನ್ನು ಬೇಡದೆ ಕೇವಲ ' ಜ್ಞಾನ ಮತ್ತು  ಭಕ್ತಿ ' ಮಾತ್ರ ಬೇಡಿ ಹೊರಬಂದರಂತೆ. 


ಸ್ವಾಮಿ ವಿವೇಕಾನಂದರು ಆ ದೇವಾಲಯದೊಳಗೆ ಪ್ರವೇಶಿಸುತ್ತಿದ್ದಂತೆ ಅವರಿಗೆ ಒಂದು ರೀತಿಯ ಉನ್ನತ ಪ್ರಜ್ಞೆ ಜಾಗೃತವಾಗಿ , ಈ ಜಗತ್ತು ಮತ್ತು ಈ ಜಗತ್ತಿನ ವಸ್ತುಗಳಾದ ಹಣ, ಭೌತಿಕ ಐಷಾರಾಮಗಳು, ಆಹಾರ ಮುಂತಾದವುಗಳೆಲ್ಲ ಗೌಣವಾಗಿ ಕಂಡು, ಆ ತಾಯಿ ಕಾಳಿಕಾದೇವಿ, ತನ್ನ ದೈವೀ ಕೃಪೆಯನ್ನು ತೋರುತ್ತಾ ಇವರಿಗೆ ಜ್ಞಾನ ಮತ್ತು ಭಕ್ತಿಯನ್ನು ದಯಪಾಲಿಸಲು ಸಿದ್ಧಳಾಗಿ  ನಿಂತಂತೆ ಕಾಣುತ್ತಿದ್ದಳು. ಜ್ಞಾನವನ್ನು ದಯಪಾಲಿಸಲು ಸಿದ್ಧಳಾದ ಆ ಕರುಣಾಮಯಿ ತಾಯಿಯೆದುರು ಯಾವ ಮೂರ್ಖನಾದರೂ ಈ ಜಗತ್ತಿನ ನಶ್ವರವಾದ ವಸ್ತುಗಳನ್ನು ಬೇಡುತ್ತಾನೆಯೇ? ಮುತ್ತುರತ್ನಗಳನ್ನು ನೀಡಲು ಸಿದ್ಧನಾದವನ ಬಳಿ ಯಾರಾದರೂ ಗಾಜಿನ ಗೋಲಿಗಳನ್ನು ಬೇಡುತ್ತಾರೆಯೇ? ಇಡೀ ಸಾಮ್ರಾಜ್ಯವನ್ನೇ ನೀಡಲು ತಯಾರಿರುವ ರಾಜನ ಬಳಿ ಯಾರಾದರೂ ಹಣ್ಣು ತರಕಾರಿಗಳನ್ನು ಬೇಡುತ್ತಾರೆಯೇ?  


ಪ್ರಾರ್ಥನೆಯ ವಿಕಾಸ  

ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ. ನನ್ನಲ್ಲಿ ನಾಲ್ಕು ವಿಧವಾದ ಜನರ ಬೇಡುತ್ತಾರೆ. ೧) ಸಂಕಷ್ಟದಲ್ಲಿರುವವರು ೨) ಅವಶ್ಯಕತೆಗಳಿರುವವರು ೩) ಕುತೂಹಲಿಗಳು ಮತ್ತು ೪) ಜ್ಞಾನಿಗಳು. ಇವರಲ್ಲಿ ಮೊದಲನೆಯ ಗುಂಪಿನವರು, ಕೇವಲ ಸಂಕಷ್ಟ ಮತ್ತು ಅಸಹಾಯಕತೆಯಿಂದ ಬೇಡುತ್ತಾರೆ, ಇವರನ್ನು ಕ್ಷಮಿಸಬಹುದು. ಇನ್ನು ಎರಡನೆಯ ಗುಂಪಿನವರು ತಮ್ಮ ಬಯಕಗಳು ಈಡೇರದಿರುವಾಗ " ಹೇ! ಪ್ರಭು ನನ್ನ ಬಳಿ ನನ್ನ ಕುಟುಂಬದ ಪೋಷಣೆಗೆ ಸಾಕಷ್ಟು ಹಣವಿಲ್ಲ, ಹಾಗಾಗಿ ನನ್ನ ಸಂಬಳ ಹೆಚ್ಚುವಂತೆ ಅಥವಾ ನನಗೆ ಬಡ್ತಿಯನ್ನು ದಯಪಾಲಿಸು" ಎಂದು ಬೇಡುತ್ತಾರೆ ಇವರನ್ನೂ ಕ್ಷಮಿಸಿಬಿಡಬಹುದು.  ಮೂರು ಮತ್ತು ನಾಲ್ಕನೆಯ ಗುಂಪಿಗೆ ಸೇರಿದವರ ' ಅಪೇಕ್ಷೆ ' ನಿಸ್ವಾರ್ಥದಿಂದ ಕೂಡಿರುತ್ತದೆ.  ಮೂರನೆಯ ವಿಧದವರು ಉದಾ: ವಿಜ್ಞಾನಿ, ಕುತೂಹಲದಿಂದ ಜಗತ್ತನ್ನು ಕುರಿತು ಸಂಶೋಧನೆ ನಡೆಸುತ್ತಿರುತ್ತಾನೆ. ಸೃಷ್ಟಿಯ ನಿಗೂಢತೆಯನ್ನು ಅರಿಯಲು ಪ್ರಯತ್ನಪಡುತ್ತಾನೆ. ಕ್ಲಿಷ್ಟ ಪರಿಸ್ಥಿತಿಯಲ್ಲಿ ಅವನು " ಹೇ! ದೇವರೇ ಸೂರ್ಯ ಚಂದ್ರರ, ಭೂಮಿಯ, ಕಷ್ಟ ಸುಖಗಳ, ನೋವು ನಲಿವುಗಳ  ಮತ್ತು ಇಡೀ ಸೃಷ್ಟಿಯ ನಿಗೂಢತೆಯ ಮರ್ಮವೆನಗೆ ಅರಿಯುವಂತೆ ಕರುಣಿಸು " ಎಂದು ಬೇಡುತ್ತಾನೆ.   ಆದರೆ ಆತ್ಮ ಜ್ಞಾನವುಂಟಾದ, ನಾಲ್ಕನೆಯವನಾದ ನಮ್ಮ ಜ್ಞಾನಿ ಬೇಡುವುದೇ ಭಿನ್ನವಾಗಿರುತ್ತದೆ. ಅವನು" ಹೇ ದೇವ, ನೀನು ಸಕಲ ಜಗತ್ತಿನಲ್ಲಿ ಸರ್ವಾಂತರ್ಯಾಮಿ ಎಂದು,  ನಿನ್ನ ಮಹಿಮೆ ಎನಗೆ ಅರ್ಥವಾಗಿದೆ, ನೀನೇ ಪರಮಾತ್ಮ, ನಿನಗೆ ಅಸಾಧ್ಯವಾದುದಾವುದೂ ಇಲ್ಲ. ನಾನು ನಿನ್ನಲ್ಲಿ, ಸಕಲ ಜಗದ ಹಿತವನ್ನು ಮಾತ್ರ ಬೇಡುತ್ತೇನೆ, ಕರುಣಿಸು. ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು, ಅಜ್ಞಾನದಿಂದ ಜ್ಞಾನದೆಡೆಗೆ ನಡೆಸು,  ಮೃತ್ಯುವಿನಿಂದ ಅಮೃತತ್ವದೆಡೆಗೆ ನನ್ನ ನಡೆಸು " ಎಂದು ಬೇಡುತ್ತಾನೆ. ಜ್ಞಾನಿ ಸಕಲ ಜಗತ್ತಿನ ಒಳಿತನ್ನೇ ಬೇಡುತ್ತಾನಾದ್ದರಿಂದ, ನಮ್ಮ ಸನಾತನದ ಜ್ಞಾನಿಗಳು, ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾ, ಸರ್ವೇ ಭಧ್ರಾಣಿ ಪಶ್ಯಂತು, ಮಾ ಕಶ್ಚಿದುಃಖಮಾಗ್ಭವೇತ್ , ಎನ್ನುವಂತಹ ಲೋಕೋಕಲ್ಯಾಣದ ಪ್ರಾರ್ಥನೆಯನ್ನು ಮಾತ್ರ ಸಲ್ಲಿಸಿದರು.    


ಪರಮಾತ್ಮ ಎಲ್ಲರ ಮೊರೆಯನ್ನೂ ಕೇಳುತ್ತಾನಾದರೂ ಸಾಮಾನ್ಯವಾಗಿ ಜ್ಞಾನಿಯ ಮೊರೆಗೆ ಅಧಿಕ ಮಹತ್ವ ಸಿಗುತ್ತದೆ. ಏಕೆಂದರೆ ಜ್ಞಾನಿಯ ಪ್ರಾರ್ಥನೆ ಸದಾಕಾಲ  ಪರಮಾತ್ಮನ ಸೃಷ್ಟಿಯಾದ ಈ ಜಗತ್ತಿನ ಕಲ್ಯಾಣಕ್ಕಾಗಿಯೇ ಆಗಿರುತ್ತದೆ.  ಜ್ಞಾನದಲ್ಲಿ , ಪ್ರಾರ್ಥನೆಯ ಮತ್ತು ಪೂಜೆಯ ಸತ್ಯವಾದ ಸಮನ್ವಯ ಕಾಣುತ್ತದೆ. ಜ್ಞಾನದಲ್ಲಿ, ಪರಮಾತ್ಮನನ್ನು ಕುರಿತು ಸಾಧಕನ ಕೋಪ ಮತ್ತು ಪ್ರೀತಿ ಎರಡೂ ಕಾಣುತ್ತದೆ. ಆದರೆ ಅತ್ಯುನ್ನತ ಮಟ್ಟದ ಪ್ರಾರ್ಥನೆ ' ಅದ್ವೈತ ' ತತ್ವದಲ್ಲಿ ಸಿಗುತ್ತದೆ. ಸಾಧಕನಿಗೆ ' ನಾನು ಕೇವಲ ಆತ್ಮ ' ಎನ್ನುವ ಆತ್ಮಜ್ಞಾನ ಉಂಟಾದಾಗ, 'ತನ್ನನ್ನು ತಾನು'  ಸತ್ಯವಾಗಿ ಅರಿತಾಗ ಎಲ್ಲಾ ರೀತಿಯ ಪ್ರಾರ್ಥನೆಗಳೂ ಸ್ತಬ್ಧವಾಗುತ್ತವೆ. ಅಂತಹ ಸ್ಥಿತಿಯಲ್ಲಿ ಸಾಧಕ ಮೂಕಸ್ಮಿತನಾಗಿ ನಿಲ್ಲುತ್ತಾನೆ. ಜಗತ್ತಿನ ಎಲ್ಲವೂ ಒಂದೇ ಆದಾಗ ' ಯಾರಲ್ಲಿ ಯಾರು ಏನನ್ನು ಬೇಡುವುದು?' ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.  ನಮ್ಮನ್ನು ನಾವು ಆ ಪರತತ್ವದೊಂದಿಗೆ ಲೀನವಾಗಿಸಿಕೊಂಡಾಗ, ಅಖಂಡವಾದ ಪರಮಾತ್ಮನನ್ನು ನೋಡಲು ಸಾಧ್ಯವಾದಾಗ, ಮಾತು ನಿಲ್ಲುತ್ತದೆ ಮತ್ತು ಮೌನವಾಗಿ ಪರತತ್ವದಲ್ಲಿ ಲೀನವಾದಂತಹ ಅನುಭವವಾಗುತ್ತದೆ.  ಅಂತಹ ಸಾಧಕ ಲೌಕಿಕ ಜಗತ್ತಿನಲ್ಲಿ ಇದ್ದರೂ, ಅವನ ಅಲೌಕಿಕ ಪರಮಾತ್ಮಾನುಭವ ಸ್ಥಿರವಾಗಿ ಇದ್ದು ಅವನ ಪ್ರಾರ್ಥನೆ, ಕರುಣಾಪೂರಿತವಾಗಿ ಜಗತ್ತಿನ ಒಳಿತಿಗಾಗಿ ಆಗುತ್ತದೆ.  ಹಾಗಾಗಿ ಲೌಕಿಕತೆಗೆ ಅಂಟಿಕೊಂಡ ಬೇಡಿಕೆಗಳನ್ನು ಬೇಡುವ ಹಂತದಿಂದ, ಇಡೀ ಜಗತ್ತನ್ನು ಬಾಚಿ ತಬ್ಬಿಕೊಂಡು ಲೋಕಕಲ್ಯಾಣದ ಬೇಡಿಕೆಗಳನ್ನು ಮಾತ್ರ ಪರಮಾತ್ಮನ ಮುಂದಿಡುವ ಮಟ್ಟಕ್ಕೆ ನಾವು ಏರಬೇಕು.  


ಪೂಜೆಯ ಕುರಿತು ಒಂದು ಮಾತು


ತಾನು ಕೇಳಿ ಪಡೆದದ್ದಕ್ಕೋ ಅಥವಾ ಬಯಸದೆ ಪಡೆದುಕೊಂಡದ್ದಕ್ಕೋ, ಹಿಂತಿರುಗಿ ಏನನ್ನಾದರೂ ಕೊಡಬೇಕೆಂದು ಬಯಸುವುದು ಸಾಮಾನ್ಯವಾಗಿ ಮನುಷ್ಯನ ಸ್ವಭಾವ.  ಈ ಸ್ವಭಾವವೇ ಇವನನ್ನು ತನ್ನ ಪ್ರಾರ್ಥನೆಯನ್ನು ಮನ್ನಿಸಿದ್ದಕ್ಕಾಗಿ ಅಥವಾ ಮುಂದೆ ಈಡೇರಿಸುತ್ತಾನೆ ಎನ್ನುವ ಭರವಸೆಯಿಂದ ಆ ' ದೇವರಿ' ಗೂ ಏನನ್ನಾದರೂ ನೀಡುವಂತೆ ಮಾಡುತ್ತದೆ.  ಬಹಳಷ್ಟು ಜನ ತಮ್ಮ ಬಯಕೆ ಈಡೇರುವುದಕ್ಕೂ ಮುಂಚಿತವಾಗಿಯೇ " ಓ! ದೇವರೇ ನೀನು ನನಗೆ ಇದನ್ನು ಮಾಡಿದರೆ ನಾನು ನಿನಗೆ ಇದನ್ನು ನೀಡುವೆ " ಎನ್ನುವಂತೆ ವಾಗ್ದಾನ ಮಾಡುತ್ತಾರೆ.  ಹಾಗಾಗಿ ಪ್ರಾರ್ಥನೆ ತಾನೇ ತಾನಾಗಿ 'ಪೂಜೆ' ಯ ರೂಪವನ್ನೂ ಧರಿಸುತ್ತದೆ. ನಾವು ಸಮರ್ಪಿಸಿದ ಯಾವುದನ್ನೂ ಆ ದೇವರು ನೇರವಾಗಿ ಸ್ವೀಕರಿಸುವುದಿಲ್ಲವಾದರೂ, ನಮ್ಮ ಪ್ರಾರ್ಥನೆಯೊಟ್ಟಿಗೆ ಸಮರ್ಪಿಸಿದ ನಮಗೆ, ಒಂದು ರೀತಿಯ ತೃಪ್ತಿ ಸಿಗುತ್ತದೆ.  ಅಷ್ಟೇ ಅಲ್ಲ, ನಾವು ಸಮರ್ಪಿಸಿದ ನೈವೇದ್ಯ ಅಲ್ಲೇ ಇದ್ದರೂ ಅದನ್ನು ಪರಮಾತ್ಮ ಸೂಕ್ಷ್ಮ ರೂಪದಲ್ಲಿ ಸ್ವೀಕರಿಸುತ್ತಾನೆ, ಎನ್ನುವುದು ನಮ್ಮ ದೃಢ ನಂಬಿಕೆಯಾಗುತ್ತದೆ. 

ಇದಕ್ಕೆ ನಮ್ಮ ಗುರುಗಳು ಹೇಳಿದ ಒಂದು ಸಣ್ಣ ಕಥೆಯನ್ನು ಹೇಳಬೇಕು. ಒಬ್ಬ ಗುರುವಿನ ಬಳಿ ಶಿಷ್ಯ ಕೇಳುತ್ತಾನೆ " ಗುರುಗಳೇ, ನಾವು ಕೊಟ್ಟ ನೈವೇದ್ಯವನ್ನು ಆ ದೇವರು ತಿನ್ನುತ್ತಾನೇನು? ನನಗಂತೂ ಒಂದು ದಿನವೂ ಅವನು ತಿಂದಂತೆ ಕಾಣಲಿಲ್ಲ. ನಾವು ಅವನಿಗೆ ಇತ್ತಂತೆ ಮಾಡಿ ನಾವೇ ತಿನ್ನುತ್ತೇವಲ್ಲವೇ? ಅವನು ಹಾಗೆ ತಿನ್ನದಿದ್ದ ಮೇಲೆ ಆ ನೈವೇದ್ಯವೆನ್ನು ಏಕಿಡಬೇಕು?" ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಗುರುಗಳು ಉತ್ತರವನ್ನು ನೀಡದೆ ಅಂದಿನ ಪಾಠ ಮುಂದುವರೆಸಿದರು. ಈಶಾವಾಸ್ಯೋಪನಿಷತ್ತಿನ ಪಾಠ ಮುಗಿದು, ಆ ಪ್ರಶ್ನೆ ಕೇಳಿದ ಶಿಷ್ಯನನ್ನು ಆ ಉಪನಿಷತ್ತಿನ ಮೊದಲ ನಾಲ್ಕು ಋಕ್ಕುಗಳನ್ನು ಹೇಳುವಂತೆ ಹೇಳಿದರು. ಆ ಶಿಷ್ಯ ಒಂದಿನಿತೂ ತಪ್ಪದೆ ನಿರರ್ಗಳವಾಗಿ ಅದನ್ನು ಹೇಳಿ ಒಪ್ಪಿಸಿದ. ಗುರುಗಳು "ನೀ ಹೇಳಿದ ಋಕ್ಕುಗಳು ನೀ ಅದನ್ನು ಪಡೆದುಕೊಂಡು ಹೇಳಿದಮೇಲೂ ಪುಸ್ತಕದಲ್ಲಿ ಹಾಗೇ ಇವೆಯಲ್ಲ,  ಅದು ಹೇಗೆ? " ಎಂದರು. ಹುಡುಗ ತಬ್ಬಿಬ್ಬಾದ. ಆಗ ಗುರುಗಳು " ನೋಡು ಪುಸ್ತಕದಲ್ಲಿ ಆ ಪದಗಳು ಸ್ಥೂಲ ಸ್ಥಿತಿಯಲ್ಲಿವೆ. ನಿನಗೆ ಅದು ಕಂಠಸ್ಥವಾದಾಗ ಅದು ನಿನ್ನಲ್ಲಿ ಸೂಕ್ಷ್ಮ ಸ್ಥಿತಿಯಲ್ಲಿ  ಬಂದು ಸೇರಿದೆ. ಹಾಗೆಯೇ ಪರಮಾತ್ಮನೂ ಸಹ ನೀನು ಸ್ಥೂಲ ರೂಪದಲ್ಲಿ ಸಮರ್ಪಿಸಿದ ನೈವೇದ್ಯವನ್ನು ಸೂಕ್ಷ್ಮರೂಪದಲ್ಲಿ ಸ್ವೀಕರಿಸುತ್ತಾನೆ" ಎಂದಾಗ ಆ ಶಿಷ್ಯನಿಗೆ ವಸ್ತು ಸ್ಥಿತಿ ಅರಿವಾಯಿತು.

ಶ್ರೀ ಕೃಷ್ಣ ಭಾಗವದ್ಗೀತೆಯಲ್ಲಿ, ಅರ್ಜುನನಿಗೆ ' ಪುಷ್ಪಮ್, ಪತ್ರಂ, ಫಲಂ, ತೋಯಂ," ಎಂದು ಹೇಳುತ್ತಾ "ನೀನು ಶ್ರದ್ಧೆಯಿಂದ ಹೀಗೆ ಏನನ್ನಾದರೂ ಸಮರ್ಪಿಸು. ನೀ ಭಕ್ತಿಯಿಂದ ಏನನ್ನು ನೀಡಿದರೂ ನನಗೆ ತೃಪ್ತಿಯಾಗುತ್ತದೆ" ಎನ್ನುತ್ತಾನೆ.  ಆದ್ದರಿಂದಲೇ ಪ್ರತಿನಿತ್ಯ ಪ್ರಾರ್ಥನಾ ವೇಳೆಯಲ್ಲಿ, ಪೂಜಾ ವಿಧಿಯನುಸಾರ ಏನನ್ನಾದರೂ ನೈವೇದ್ಯ ಮಾಡುವುದು ನಮ್ಮಲ್ಲಿ ವಾಡಿಕೆ. ನಾವು ಪರಮಾತ್ಮನಲ್ಲಿ ಆ ಸಮಯಕ್ಕೆ ಏನೂ ಬೇಡದಿದ್ದರೂ ಅಥವಾ ಪ್ರಸ್ತುತಕ್ಕೆ ನಮಗೇನೂ ಬೇಕಿಲ್ಲದಿದ್ದರೂ ನೈವೇದ್ಯ ಮಾಡುವುದು ವಾಡಿಕೆ. ಉನ್ನತ ಪ್ರಾರ್ಥನಾ ಸ್ಥರಗಳಲ್ಲಿ ಈ ನೈವೇದ್ಯ ಮಾಡುವಾಗೆ ' ಹೇ ! ಪರಮಾತ್ಮ ಸಕಲ ಜೀವರಾಶಿಗಳ ಜೀವನಾಧಾರವಾದ ನಿನಗೆ ನಾನು ನನ್ನ ಕೈಲಾದ ಇದನ್ನು ಸಮರ್ಪಿಸುತ್ತಿದ್ದೇನೆ. ಸಕಲರಿಗೂ ಒಳಿತಾಗಿಸು ಎಂದು ಬೇಡಿದಂತಾಗುತ್ತದೆ. ಜ್ಞಾನದ ಉನ್ನತ ಮಟ್ಟದಲ್ಲಿ, ತನಗಾಗಿ ಏನನ್ನೂ ಬೇಡದಿದ್ದರೂ, ಸಾಧಕ ' ಸರ್ವಹಿತ' ಕ್ಕಾಗಿ ಆ ಪರಮಾತ್ಮನಲ್ಲಿ ಬೇಡುತ್ತಾನೆ.  

ಉಪಸಂಹಾರ 


ಯಾರದೇ ಅಥವಾ ಯಾವುದೇ ರೀತಿಯ ಪ್ರಾರ್ಥನೆಯನ್ನು, ಅದೆಷ್ಟೇ ಕೆಳಮಟ್ಟದ್ದಾಗಲೀ, ಕೇವಲ ಸ್ವಾರ್ಥದ್ದಾಗಲೀ, ಅದನ್ನು ಹೀಗೆಳೆಯುವುದಾಗಲೀ ಅಥವಾ ತಿರಸ್ಕರಿಸುವುದಾಗಲೀ ಮಾಡಬಾರದು. ಏಕೆಂದರೆ ಪ್ರತೀ ಪ್ರಾಥನೆಯೂ ಮುಖ್ಯವಾಗಿ 'ಪರಮಾತ್ಮ'ನ  ಔನ್ನತ್ಯವನ್ನು ಒಪ್ಪಿಕೊಂಡಿರುತ್ತದೆ. ಪ್ರತಿಯೊಬ್ಬರ ಪ್ರಾರ್ಥನೆಯೂ, ಆ ಪ್ರಾರ್ಥನೆ ಮಾಡುವ ಸಮಯಕ್ಕೆ ಪರಮಾತ್ಮನ ಔನ್ನತ್ಯವನ್ನು ಒಪ್ಪಿಕೊಂಡು ನಂತರ ' ತಾನು' ಎಂಬ 'ಅಹಂ' ಕಾರವಿರುತ್ತದೆ. ಕಾಲಕ್ರಮೇಣ, ಆ ವ್ಯಕ್ತಿ ಬೆಳೆದಂತೆಲ್ಲಾ 'ಅಹಂ'ಕಾರ ನಶಿಸಿ ಪರಮಾತ್ಮ ತತ್ವ ಸ್ಥಿರವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರ ಪ್ರಾರ್ಥನೆಗೂ ಅದರದೇ ಆದ ಮೌಲ್ಯವಿರುತ್ತದೆ.    


ಆದರೆ ಪ್ರಶ್ನೆಯೇನೆಂದರೆ ' ಪ್ರಾರ್ಥನೆ ' ಹೇಗೆ ತನ್ನ ಪರಿಣಾಮವನ್ನು ಬೀರುತ್ತದೆ.? ಇದೊಂದು ವಿಚಿತ್ರ ಪ್ರಶ್ನೆ. ಪ್ರಾರ್ಥನೆ ಮನಸ್ಸಿನಲ್ಲಿ ಆಗುತ್ತದೆ. ಮನಸ್ಸು ಉನ್ನತ ವಿಶ್ವಶಕ್ತಿಯನ್ನು ಕುರಿತು ಪ್ರಾರ್ಥಿಸುತ್ತದೆ. ಅಂತಹ ಉನ್ನತ ಅನಂತ ವಿಶ್ವದ ಸ್ಥರದಲ್ಲಿ ಎಲ್ಲರ ಮನಸ್ಸೂ ಬೇಧಗಳನ್ನು ಮೀರಿದ ಸ್ಥಿತಿಯಲ್ಲಿದ್ದು, ಸಮಾನ ರೂಪದಲ್ಲಿರುತ್ತದೆ. ಹಾಗಾಗಿ ಒಬ್ಬರ ಪ್ರಾರ್ಥನೆ ಮತ್ತೊಬ್ಬರ ಸುಪ್ತ ಮನಸ್ಸಿನ ಮೇಲೂ ಒಂದು ಹಂತಕ್ಕೆ ಪರಿಣಾಮ ಬೀರುತ್ತದೆ.  ಮತ್ತೊಂದು ಆಯಾಮವೆಂದರೆ, ನಾವು ಮಾಡುವ ಪ್ರಾರ್ಥನೆಯಿಂದ ನಮ್ಮ ಮನಸ್ಸು ಪ್ರಫುಲ್ಲವಾಗಿ ನಿಷ್ಕಲ್ಮಷವಾಗಿ, ಅದರಿಂದ ಪ್ರೇರಿತವಾಗಿ ನಾವು ಮಾಡುವ ಕೆಲಸಗಳಲ್ಲಿ ಕ್ಷಮತೆ ಕಂಡು, ಅಂತಹ ಕ್ಷಮತೆಯಿಂದ ಕೂಡಿದ ಕಾರ್ಯಗಳಿಂದ ಉತ್ತಮ ಫಲಗಳು ಲಭಿಸುತ್ತವೆ. ಮೂಲತಃ ನಾವು ಮಾಡುವ ಪ್ರಾರ್ಥನೆ ನಮ್ಮನ್ನು ನಾವು 'ಶುದ್ಧೀಕರಿಸಿಕೊಳ್ಳುವ' ಪ್ರಕ್ರಿಯೆ. ಇಲ್ಲಿ ನಾವು ' ಗಾಯತ್ರಿ' ಮಂತ್ರವನ್ನು ನೋಡುವ. ಗಾಯತ್ರಿ ಮಂತ್ರದಲ್ಲಿ ' ಭರ್ಗೋದೇವಸ್ಯ ಧೀಮಹಿ ಧೀಯೋ ಯೋ ನಃ ಪ್ರಚೋದಯಾತ್ ' ಎಂದು ಹೇಳುತ್ತೆವೆ. ಹಾಗೆಂದರೆ 'ಹೇ! ಸವಿತು ವರೇಣ್ಯನಾದ ಸೂರ್ಯನೇ, ನಿನ್ನಲ್ಲಿರುವ ಆ ದೇವತೆಗಳ ತೇಜಸ್ಸಿಗೆ ನಾನು ಶರಣಾಗುತ್ತೇನೆ. (ಹಾಗೆ ಶರಣಾಗುವುದರಿಂದ) ನನ್ನ ಬುದ್ಧಿಯು ಮತ್ತಷ್ಟು ಪ್ರಚೋದಿಸಲ್ಪಡಲಿ" ಎಂದು ಬೇಡುತ್ತೇವೆ. ಅಂತಹ ಪ್ರಾರ್ಥನೆಯಲ್ಲಿ ' ಜ್ಞಾನ ' ವೇ ಪ್ರಧಾನವಾಗುತ್ತದೆ. ಇದು ಜ್ಞಾನದ ಮಾರ್ಗ. ಯಾರಿಗೆ ಏನು ಬೇಕೋ ಅದನ್ನು ಬೇಡಲು ಸಂಪೂರ್ಣ ಸ್ವಾತಂತ್ರ್ಯವಿದೆ, ಅಲ್ಲವೇ?  ತೀವ್ರ ಮನಸ್ಸಿನಿಂದ ಮಾಡಿದ ಪ್ರಾರ್ಥನೆಯಿಂದ ಹೊರಡುವ ತರಂಗಗಳು ಆ ವ್ಯಕ್ತಿಗೆ ಮತ್ತು ಅವನ ಪ್ರಾರ್ಥನೆಯ ವಿಷಯಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ಮೇಲೂ ಪರಿಣಾಮ ಬೀರಿ ಫಲಪ್ರದವಾಗುತ್ತದೆ ಎನ್ನುವುದು ಸಾಮಾನ್ಯ ಅನುಭೂತಿ.   

ಪ್ರಾರ್ಥನೆಯ ಮಾರ್ಗದಲ್ಲಿ ಇದ್ದು, ಹಂತಹಂತವಾಗಿ ಬೆಳೆದು ಜಗತ್ತಿನ ವಸ್ತುಗಳನ್ನಲ್ಲದೆ ಜಗತ್ಕಾರಕನನ್ನು ಸಂಪೂರ್ಣವಾಗಿ ಅರಿತುಕೊಳ್ಳುವ, ಅವನಲ್ಲಿ ಶರಣಾಗತರಾಗಿ ಅವನನ್ನು ಪಡೆಯುವ ಮತ್ತು ಅವನಲ್ಲಿ ಲೀನವಾಗುವಂತಹ ಪ್ರಾರ್ಥನೆಯನ್ನು ಮಾಡಿದರೆ ಮತ್ತು ತತ್ಫಲವಾಗಿ ಜಗತ್ತಿನ ' ಅಂಟ ' ನ್ನು ಬಿಡಿಸಿಕೊಂಡು, ಜಗತ್ಕಾರಕನ 'ನಂಟ ' ನ್ನು ಬೆಳೆಸಿಕೊಂಡು ಮುಕ್ತರಾಗಿ ಆನಂದಾಮೃತವನ್ನು ಸವಿಯಬಹುದು. ಪ್ರಯತ್ನ ನಮ್ಮದು ತೀವ್ರವಾದರೆ ಫಲವೂ ಸವಿಯಾಗಿರುತ್ತದೆ. 


 

Sunday 17 June 2018

ಶ್ರಮದ ಫಲ


ಕೋಗಿಲೆಯನ್ನು ' ಪರಪುಟ್ಟ ' ಎನ್ನುತ್ತಾರೆ. ಪರಪುಟ್ಟ ಎಂದರೆ ಪರರ ಮೇಲೆ ಆಧಾರಪಡುವ ಎಂದು ಅರ್ಥ. ಕೋಗಿಲೆ ತನ್ನ ಮೊಟ್ಟೆಗಳನ್ನು ಕಾಗೆಯ ಗೂಡಿನಲ್ಲಿ ಇಟ್ಟು ಅವುಗಳಿಗೆ ಕಾವು ಕೊಟ್ಟು ಮರಿಮಾಡುವ ಕೆಲಸವನ್ನು ಕಾಗೆಯ ತಲೆಗೆ ಕಟ್ಟಿ ಬಿಡುತ್ತದೆ. ಪಾಪ ಕಾಗೆ ತನ್ನ ಮೊಟ್ಟೆ ಯಾವುದು, ಯಾವುದಲ್ಲ ಎಂದು ಅರಿಯಲಾಗದೆ,  ಆ ಕೋಗಿಲೆಯ ಮೊಟ್ಟೆಗಳನ್ನೂ ಸಹ ಕಾವು ಕೊಟ್ಟು ಮರಿಮಾಡುತ್ತದೆ.  ಅದೇ ರೀತಿ ಇರುವೆಗಳು ಮಣ್ಣ ಕಣ ಕಣವನ್ನು ನಿರಂತರವಾಗಿ ಹೊತ್ತು ತಂದು ಬಹಳ ಶ್ರಮ ಪಟ್ಟು ಗೂಡನ್ನು ಕಟ್ಟುತ್ತವೆ. ಆದರೆ ಅದರೊಳಕ್ಕೆ ಒಂದು ಹಾವು ಬಂದು ವಾಸಿಸುತ್ತದೆ. ಇರುವೆಗಳ ಶ್ರಮ ಅವುಗಳ ಮಟ್ಟಿಗೆ ಸಂಪೂರ್ಣ ವ್ಯರ್ಥವಾಗುತ್ತದೆ. ಹಾಗೆಯೇ ಮನುಷ್ಯರು ನಿರಂತರ ಶ್ರಮಪಟ್ಟು ಕೆಲಸಮಾಡಿದ  ನಂತರ, ಆ ಕೆಲಸದ ಫಲವನ್ನು ಪರರು ಕಸಿದುಕೊಂಡು ಬಿಡುತ್ತಾರೆ ಎಂಬುವುದು ಒಂದು ಜಗತ್ಸತ್ಯ.  

ಜಗತ್ತಿನಲ್ಲಿ ಎಲ್ಲರೂ ಯಾವುದಾದರೊಂದು ಕೆಲಸ ಮಾಡುತ್ತಲೇ ಇರಬೇಕು. ಇದು ಧರ್ಮ. ನಮ್ಮ ಮನೆಯವರಿಗಾಗಿ ನಾವು ದುಡಿಯುತ್ತೇವೆ. ಹಾಗೆ ಮಾಡುವ ಕೆಲಸಕ್ಕೆ ಒಂದು ಫಲ ಇರುತ್ತದೆ. ಆದರೆ ಆ ಕೆಲಸ ಮಾಡುವವರು ತಾವು ಮಾಡಿದ ಕೆಲಸದ ಸಂಪೂರ್ಣ ಫಲವನ್ನು ತಾವೇ ಅನುಭವಿಸಲು ಸಾಧ್ಯವೇ ಇಲ್ಲ. ಆ ಫಲ ಹಣದ ರೂಪದಲ್ಲಿರಬಹುದು, ಸಂತೋಷದ ರೂಪದಲ್ಲಿರಬಹುದು, ಪುಣ್ಯದ ರೂಪದಲ್ಲಿರಬಹುದು ಅಥವಾ ಪಾಪದ ರೂಪದಲ್ಲಿಯೂ ಇರಬಹುದು. ನಾವು ಮಾಡಿದ ಕೆಲಸದಿಂದ ಬಂದ ಪುಣ್ಯವನ್ನು ಹಂಚಿಕೊಳ್ಳಲು ಎಲ್ಲರೂ ಇರುತ್ತಾರೆ. ಆದರೆ ನಮ್ಮ ಕೆಲಸದ ಪರಿಣಾಮವಾಗಿ ಏನಾದರೂ ಪಾಪವುಂಟಾದರೆ, ಹಂಚಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಇಲ್ಲಿ ಅಂಗುಲಿಮಾಲನ
ಕಥೆಯ ದೃಷ್ಟಾಂತವನ್ನು ಓದುಗರು ನೆನಪಿಸಿಕೊಳ್ಳಬೇಕು.   


ಎಷ್ಟೋಬಾರಿ ನಾವು ಕಷ್ಟಪಟ್ಟು ಒಂದು ಕೆಲಸವನ್ನು ಮಾಡಿ ಮುಗಿಸುತ್ತೇವೆ. ಆ ಕೆಲಸದಿಂದ ನಮಗೆ ದಕ್ಕಬೇಕಾದ ಫಲದ ಅಪೇಕ್ಷೆಯಿಂದ ಆ ಕೆಲಸವನ್ನು ಮಾಡುತ್ತೇವೆ. ಆ ಕೆಲಸ ಸಂಪೂರ್ಣವಾಗಿ ಅದರಿಂದ ಅಪೇಕ್ಷಿತ ಫಲ ದೊರೆತಾಗ ಅದನ್ನು ಹೇಗೆ ವಿತರಣೆ ಮಾಡಬೇಕು ಎಂದು ಮೊದಲೇ ಯೋಚನೆಮಾಡಿ ಲೆಕ್ಕಾಚಾರ ಹಾಕಿಟ್ಟುರುತ್ತೇವೆ. ಆದರೆ ಬಹಳಷ್ಟು ಬಾರಿ ನಾವು ನಿರೀಕ್ಷಿಸಿದ ಫಲ ನಮಗೆ ಸಿಗುವುದೇ ಇಲ್ಲ. ಆ ಸಂದರ್ಭದಲ್ಲಿ, ದಕ್ಕಿದ ಫಲವನ್ನು ವಿತರಣೆಮಾಡುವಲ್ಲಿ ತೀವ್ರತಮ ಗೊಂದಲವುಂಟಾಗುತ್ತದೆ.  ವ್ಯವಸಾಯಮಾಡುವ ರೈತರ ಬಾಳನ್ನು ನೋಡಿದರೆ ನಮಗಿದು ಅರ್ಥವಾಗುತ್ತದೆ. ಇನ್ನೂ ಫಲ ನಮ್ಮ ಕೈ ಸೇರುವ ಮುನ್ನವೇ ಯಾರೋ ಅದರ ಶ್ರೇಯಸ್ಸನ್ನು ಬಾಚಿಕೊಂಡುಬಿಡುತ್ತಾರೆ. ಇದು ಬಹುಶಃ  ಸಾಹಿತ್ಯ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಸರ್ವೇ ಸಾಮಾನ್ಯ. ಯಾರೋ ಒಬ್ಬರು ಕಷ್ಟಪಟ್ಟು ಸಾಧಿಸಿದ ಸಾಧನೆಯ ಫಲವನ್ನು ಯಾರೋ ಕದ್ದು ಬಿಡುವುದನ್ನು ನಾವೆಲ್ಲಾ ನೋಡಿಲ್ಲವೇ?  

ಒಬ್ಬರ ಶ್ರಮದ ಫಲವನ್ನು ಮತ್ತೊಬ್ಬರು ಕಸಿದುಕೊಳ್ಳುವುದು ಸರ್ವೇ ಸಾಮಾನ್ಯವಾಗಿರುವ ಈ ಕಾಲದಲ್ಲಿ ನಾವು ನಮ್ಮ ಜಾಗರೂಕತೆಯಲ್ಲಿ ಇದ್ದರೆ ಒಳ್ಳೆಯದು. ಏಕೆಂದರೆ 'ಸತ್ಯವಂತರಿಗಿದು ಕಾಲವಲ್ಲ, ದುಷ್ಟಜನರಿಗೆ ಇದು ಸುಭಿಕ್ಷಕಾಲ' ಎಂದು ನಮ್ಮ ಪುರಂದರ ದಾಸರು ಎಂದೋ ಹೇಳಿಲ್ಲವೇ. ಅವರು ಅಂದು ಹಾಗೆ ಹಾಡಿದ್ದಾರೆ, ಆದರೆ ಅಂದಿನ 'ಪುರಂದರ ದಾಸರು' ಇಂದು ಏನು ಹೇಳುತ್ತಿದ್ದರೋ? ಹಾಗಾಗಿ ಎಚ್ಚರವಾಗಿರಬೇಕು. ನಮ್ಮಿಂದ ನಮ್ಮ ಶ್ರಮದ ಫಲವನ್ನು ಯಾರೂ ಕಸಿದುಕೊಳ್ಳದಂತೆ ಎಚ್ಚರವಾಗಿರಬೇಕು. ಹಾಗೆ ಯಾರಾದರೂ ನಮ್ಮ ಶ್ರಮದ ಫಲವನ್ನು ಕಸಿದುಕೊಳ್ಳಲು ಪ್ರಯತ್ನಿಸಿದರೆ ಅಥವಾ ಕಸಿದುಕೊಂಡರೆ ನಮಗೆ ತೀವ್ರ ನೋವಾಗುತ್ತದೆ, ಕೋಪ ಬರುತ್ತದೆ ಮತ್ತು ನಮ್ಮ ಹಕ್ಕನ್ನು ಪಡೆದುಕೊಳ್ಳಲು ನಮ್ಮಿಂದ ಪ್ರಯತ್ನವೂ ನಡೆಯುತ್ತದೆ. ಆ ಪ್ರಯತ್ನದಲ್ಲಿ ನಮಗೆ ಯಶಸ್ಸು ಸಿಗಬಹುದು ಅಥವಾ ನಾವು ಸೋಲಬಹುದು. ನಾವು ವಿಹ್ವಲರಾಗುತ್ತೇವೆ, ಪರಿತಪಿಸುತ್ತೇವೆ ಮತ್ತು ಪರದಾಡುತ್ತೇವೆ. 

ಆದರೆ ನಮ್ಮೆಲ್ಲಾ ಪ್ರಯತ್ನಗಳೆಲ್ಲಾ ಮುಗಿದ ಮೇಲೂ ನಾವು ಬಯಸಿದ್ದು ನಮಗೆ ಸಿಗದಿದ್ದರೆ, ಶಾಂತರಾಗಬೇಕು, ನಮಗೆ ಎಷ್ಟು ಪ್ರಾಪ್ತಿಯೋ ಅಷ್ಟು ಸಿಕ್ಕಿದೆ, ಸಿಕ್ಕದಿದ್ದದ್ದು ನಮ್ಮ ಪ್ರಾಪ್ತಿಯೊಳಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕು. ಶಾಂತವಾಗಿ 'ಪರಮಾತ್ಮ ನನಗೆ ದಕ್ಕಿದ್ದು ನಿನ್ನ ಪ್ರಸಾದ'  ಎಂದು ಒಪ್ಪಿಕೊಂಡು ತೃಪ್ತಿಪಟ್ಟರೆ, ನೆಮ್ಮದಿಯಾಗಿರಬಹುದು ಹಾಗೆ ತೃಪ್ತಿ ಪಡದ ಪಕ್ಷದಲ್ಲಿ ನಮಗೆ ಮಾನಸಿಕ ಕ್ಷೋಭೆ ತಪ್ಪಿದ್ದಲ್ಲ. ಆಯ್ಕೆ ನಮ್ಮದೇ ಅಲ್ಲವೇ?  


ಚರಿಸು ನೀನಾಳಾಗಿ



ನಾವೆಲ್ಲಾ ಈ ಲೋಕದಲ್ಲಿನ ಕಾರ್ಮಿಕರು. ಕರ್ಮ, ಎಂದರೆ ಕೆಲಸ ಮಾಡುತ್ತಲೇ ಇರಬೇಕಾದ್ದು ನಮ್ಮ ಕರ್ತವ್ಯ. ಅಯ್ಯೋ ಎಂದಾದರೂ ಒಂದು ದಿನ ಕೊನೆಯಾಗಲೇಬೇಕಾದ ಈ ಬದುಕಿನಲ್ಲಿ ಕೆಲಸ ಮಾಡಿದರೆಷ್ಟು ಬಿಟ್ಟರೆಷ್ಟು ಎಂದು ಇರುವಂತಿಲ್ಲ.  ರೋಗಿ ಇನ್ನೇನು ಸಾಯುವ ಸ್ಥಿತಿಯಲ್ಲಿದ್ದಾನೆ ಎಂದು ಅರಿತ ವೈದ್ಯನುಆ ರೋಗಿಯಲ್ಲಿ ಪ್ರಾಣವಿರುವ ತನಕಔಷಧಿಗಳನ್ನು ಇತ್ತು ಪರಿಚರ್ಯೆ ಮಾಡುವ ರೀತಿಯಲ್ಲಿ, ಸ್ಥಿರವಲ್ಲದ ಈ ಲೋಕದಲ್ಲಿ ನಮ್ಮೊಳಗೆ ಪ್ರಾಣವಿರುವ ತನಕ ಒಂದು ಆಳಿನಂತೆ ಕೆಲಸಮಾಡುತ್ತಲೇ ಇರಬೇಕು. 'ಬಡಿತವಿರವನಕ ಬಡಿವಾರವಿರಬೇಕುಎಂದು ಹೇಳಿದ ಸ್ನೇಹಿತರ ಮಾತು ಜ್ಞಾಪಕಕ್ಕೆ ಬರುತ್ತದೆ. 

ಈ ಜಗತ್ತಿನಲ್ಲಿ ಇದ್ದಮೇಲೆಬದುಕಬೇಕು. ಇಲ್ಲಿನ ಕಷ್ಟಗಳ ಸರಮಾಲೆಯನ್ನು ಹೊತ್ತು, 'ಈ ಜೀವನ ಎಂದಾದರೂ ಒಂದು ದಿನ ಕೊನೆಯಾಗುತ್ತದೆ ಅಥವಾ ನಶ್ವರವಾದ ಈ ಬದುಕಿನಿಂದ ಏನಾಗಬೇಕುಎಂದು ಹೇಳುವವರಿಗೇನೂ ಕಡಿಮೆ ಇಲ್ಲ. ಅದು ಒಣ ವೇದಾಂತ. ರೋಗಿ ಸಾಯುವತನಕ ವೈದ್ಯರು ಶುಶ್ರೂಷೆ ಮಾಡುವುದಿಲ್ಲವೇಹಾಗೆಈ ಜೀವ ಮತ್ತು ದೇಹದ ಸಂಬಂಧವಿರುವ ತನಕಬದುಕಲೇ ಬೇಕು. ಅನಾಸಕ್ತಿಯಿಂದ  ಬದುಕುವುದಕ್ಕಿಂತ ಸಾಯುವುದೇ ಲೇಸು. 

ತನ್ನ ಕರ್ಮಶೇಷವನ್ನು ಕಳೆಯಲು ಜೀವ ದೇಹಧಾರಣೆ ಮಾಡುತ್ತದೆ. ಕಷ್ಟ ಅಥವಾ ಸುಖಗಳನ್ನು ಅನುಭವಿಸುವ ಮೂಲಕವೇ ಕರ್ಮ ಶೇಷವನ್ನು ಕಳೆಯಲು ಸಾಧ್ಯ. ಅಸಹನೀಯ ಕಷ್ಟಗಳನ್ನು ಅನುಭವಿಸುವಾಗ" ಅಯ್ಯೋ ಈ ಜೀವನ ಸಾಕು ಸಾಕಾಗಿದೆ" ಎಂದು ಬದುಕುವುದನ್ನು ಮತ್ತು ಬದುಕಿನ ಜಂಜಾಟವನ್ನು ಅನುಭವಿಸುವುದನ್ನು ಬಿಟ್ಟರೆ ಕರ್ಮ ಕಳೆಯುವುದೆಂತು? ನಮಗದು ಇಷ್ಟವೋ ಇಲ್ಲವೋ, ಅದರಿಂದ ನಮಗೆ ಸುಖವೋ- ದುಃಖವೋ, ನಮಗದು ಒಳಿತೋ-ಕೆಡುಕೋ, ಎಂಬ ಯೋಚನೆಯನ್ನು ಮಾಡಿ ಸೂಕ್ತವಾದುದನ್ನೇ ಮಾಡಬಹುದಾದರೂ ಏನನ್ನೂ ಮಾಡದೇ ಇರುವುದು ಸಾಧ್ಯವೇ ಇಲ್ಲ. ಕಾಯಕವನ್ನು ಮಾಡುತ್ತಲೇ ಇರಬೇಕು. ಕಾಯಕವನ್ನು ಮಾಡುತ್ತ ಬದುಕಲೇ ಬೇಕು. ಪ್ರಾಣವಿರುವ ತನಕ ಬದುಕಲೇಬೇಕು. ಈ ದೇಹಕ್ಕೆ ಅವಶ್ಯಕ ಉಪಚಾರವನ್ನು ಮಾಡುತ್ತಾಅದನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡುಜೀವನ ಪ್ರಯಾಣವನ್ನು ಸುಗಮವಾಗಿಸಬೇಕು.  

ಆದರೆ ಹಾಗೆ ಬದುಕುವಾಗಮಾನ್ಯ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ " ಸ್ಥಿರವಲ್ಲವೀ ಲೋಕವಾದೊಡಮದುಳ್ಳನಕ - ಚರಿಸು ನೀನಾಳಾಗಿ " ಎಂದು  ಹೇಳುತ್ತಾರೆ. ಅಂದರೆ ನೀನೊಬ್ಬ ಆಳು. ಒಬ್ಬ ಆಳು ಅಥವಾ ಸೇವಕ ತನ್ನ ಯಜಮಾನ ನಿಗದಿಸಿದ ಕೆಲಸವನ್ನು ಆಸಕ್ತಿಯಿಂದ ಮಾಡಿದರೂ ಅದರ ಫಲಾಫಲಗಳನ್ನು ಆ ಯಜಮಾನನಿಗೇ  ಸಮರ್ಪಿಸುವ ಹಾಗೆ ನಮ್ಮ ಬದುಕಿನಲ್ಲಿ ನಮಗೆ ಸಂದ ಕೆಲಸವನ್ನು ಪರಮಾತ್ಮ ನಿಗಧಿಪಡಿಸಿದ ಕರ್ತವ್ಯವೆಂದು ಬಗೆದು,  ಒಂದು ನಿರ್ಲಿಪ್ತ ಭಾವದಿಂದ ಆ ಕರ್ತವ್ಯಗಳನ್ನು ಮಾಡುತ್ತಾ, ಜಗತ್ತಿಗೆ ಅಂಟೀ  ಅಂಟದ  ಹಾಗೆ ಬದುಕಿದರೆ ಬದುಕಿನಲ್ಲಿ ನಿಜವಾದ ಆನಂದವನ್ನು ಪಡೆಯಬಹುದು. 

ಹಾಗಲ್ಲದೆ ಪಾಲಿಗೆ ಬಂದ ಕೆಲಸವನ್ನು ಸಮರ್ಪಕವಾಗಿ ಸಹನೆ ಮತ್ತು ಆಸ್ಥೆಯಿಂದ ಮಾಡದೆ, ಮನಸ್ಸಿನಲ್ಲಿ ಬೇರೆ ಏನನ್ನೋ ಬಯಸಿ, ಅದು ಸಿಗದಿದ್ದಾಗ, ಸಂಕಟವನ್ನನುಭವಿಸಿ ತೊಳಲಾಡುವುದು ಮೂರ್ಖತನ.  ಪ್ರತಿನಿತ್ಯವೂ ಗೋಳಾಡುತ್ತಾ ಬದುಕಬೇಕಾಗುತ್ತದೆ. ಹಾಗಲ್ಲದೆ ಸನ್ಮಾನ್ಯ ಕುಲಶೇಖರ ಅಳ್ವಾರರು ' ತ್ವತ್ ಭೃತ್ಯ, ಭೃತ್ಯ ಪರಿಚಾರಕ ಭೃತ್ಯ ಭೃತ್ಯ ಭೃತ್ಯಸ್ಯ ಭೃತ್ಯ ಇತಿ ಮಾಂ ಸ್ಮರ ಲೋಕನಾಥ' ಎಂದು ನಾವೂ ಸಹ ಪರಮಾತ್ಮನಿಂದ ನಿಯಮಿಸಲ್ಪಟ್ಟ ಸೇವಕರೆಂದು ಬಗೆದು ಅವನು ಕೊಟ್ಟ ಜೀವನವನ್ನು ಅವನ ಸೇವೆಯೆಂದು ಪರಿಗಣಿಸಿ ಸಂತೋಷದಿಂದ ಸಂದ ಕೆಲಸವನ್ನು ಮಾಡಿದರೆ, ಆನಂದದಿಂದ ಜೀವಿಸಬಹುದು ಮತ್ತು ಈ ಬೌಕಿನಿಂದ ಆನಂದದಿಂದ ನಿರ್ಗಮಿಸಬಹುದು. 


Friday 15 June 2018

'ಸ್ವಾತಂತ್ರ್ಯ'




'ಸ್ವಾತಂತ್ರ್ಯ' ಎಂಬ ಪದವನ್ನು ಹೇಳಿದರೆ ಸಾಕು, ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾತಂತ್ರ್ಯದ ಅವಶ್ಯಕತೆ ಇದೆಯೆಂದು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಾನೆ. ಸ್ವಾತಂತ್ರ್ಯವೆಂದರೆ ಸಾಮಾನ್ಯವಾಗಿ ನಾವು ಅರ್ಥೈಸುವುದೇನೆಂದರೆ, ಏನನ್ನಾದರೂ ಮಾಡುವ ಸ್ವಾತಂತ್ರ್ಯ ಅಥವಾ ಯಾವುದರಿಂದಲಾದರೂ ಸ್ವಾತಂತ್ರ್ಯ. ಮಕ್ಕಳು ಯಾವಾಗಲೂ ತಮ್ಮ ಹೆತ್ತವರು ವಿಧಿಸಲ್ಪಡುವ ಶಿಸ್ತು ಮತ್ತು ನಿಯಮಗಳ ಕಟ್ಟಳೆಗಳಿಂದ ಮುಕ್ತರಾಗಲು ಅವಕಾಶಗಳನ್ನು ಹುಡುಕುತ್ತಿರುತ್ತಾರೆ. ವಯಸ್ಕರು ತಮ್ಮ ಸಂಬಂಧಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಬಯಸುತ್ತಾರೆ ಮತ್ತು ಹಿರಿಯರು ಅನಾರೋಗ್ಯದಿಂದ, ಅಭದ್ರತೆಯಿಂದ ಮತ್ತು ಒಂಟಿತನದಿಂದ ಸ್ವಾತಂತ್ರ್ಯವನ್ನು ಬಯಸುತ್ತಾರೆ.  

ಆದರೆ ನಿಜವಾದ ಸ್ವಾತಂತ್ರ್ಯ, ಇವುಗಳಲ್ಲಿ ಯಾವುದೂ ಅಲ್ಲ. ನಿಜವಾದ ಸ್ವಾತಂತ್ರ್ಯ ಎಂದರೆ ನಾವು ನಾವಾಗಿರಲು ಬೇಕಾದ ಶಕ್ತಿ. ಪ್ರತಿಯೊಬ್ಬರೂ ತಮ್ಮದೇ ಆದ ಮೂಲ ವ್ಯಕ್ತಿತ್ವ, ಅವಶ್ಯಕತೆಗಳು, ಬಯಕೆಗಳು ಮತ್ತು ಇಷ್ಟಾನಿಷ್ಟಗಳಿಂದ ರೂಪಿಸಲ್ಪಟ್ಟಿರುತ್ತಾರೆ. ಇವುಗಳ ಸಮುಚ್ಚಯ ರೂಪವೇ ನಾವಾಗಿರುತ್ತೇವೆ. ಆದರೆ ಕೆಲವರು ಮಾತ್ರ ತಮ್ಮ ಒಳಗು ಮತ್ತು ಹೊರಗುಗಳ ಮೇಲೆ ಬೇಕಾದ ನಿಯಂತ್ರಣವನ್ನು ಹೊಂದಿ ತಮ್ಮತನವನ್ನು ತೋರುವಷ್ಟು ಅದೃಷ್ಟಶಾಲಿಗಳಾಗಿರುತ್ತಾರೆ.  ಮಿಕ್ಕವರೆಲ್ಲರೂ ನಾವೇನಲ್ಲವೋ ಅಥವಾ ನಾವು ಏನಾಗಬೇಕೆಂದುಕೊಂಡಿಲ್ಲವೋ ಅದಾಗಿ ಉಳಿದುಬಿಡುತ್ತೇವೆ, ಅಲ್ಲವೇ? ನಮ್ಮ ಸಂಸಾರ, ಸಮಾಜ, ಸ್ನೇಹಿತರು, ಸಹೋದ್ಯೋಗಿಗಳೊಡನೆ ಆಗುವ ನಮ್ಮ ಒಡನಾಟದಿಂದ ರೂಪುಗೊಳ್ಳುವ ಸಂದರ್ಭಗಳಿಂದ ನಾವು ರೂಪಿಸಲ್ಪಡುತ್ತೇವೆ. ಅಂತಹ ಸ್ಥಿತಿಯಲ್ಲಿ ನಾವು ಏನನ್ನು ಮಾಡಲಿಚ್ಚಿಸುವುದಿಲ್ಲವೋ ಅಥವಾ ನಾವೇನಾಗಬಯಸುವುದಿಲ್ಲವೋ ಅದನ್ನು ಮಾಡುವ ಅಥವಾ ಹಾಗಾಗುವ ಒತ್ತಡ ನಮ್ಮ ಮೇಲೆ ಉಂಟಾಗುತ್ತದೆ. ಬಹುಶಃ ನಾವು ಏನಾಗಬೇಕೆಂದಿದ್ದೇವೋ,  ಹಾಗಾಗದೆ ಅನ್ಯರ ಇಚ್ಛೆಯಂತೆ ಅಥವಾ ಪರರಿಗನುಗುಣವಾಗಿ ಇರುವುದನ್ನೇ ನಾವೂ ಇಷ್ಟಪಡುವಂತೆ ಆಗುತ್ತದೆ.     

ಸಾಮಾನ್ಯವಾಗಿ ಎಲ್ಲರೊಂದಿಗೆ ಹೊಂದಿಕೊಳ್ಳುವ, ಎಲ್ಲರ ಮಾತನ್ನೂ ವಿನಯದಿಂದ ಕೇಳುವ  ಮತ್ತು  ಅನ್ಯರ ಅಭಿಪ್ರಾಯಕ್ಕೆ ಬೆಲೆಕೊಡುವ ಮಗುವನ್ನು ಇಷ್ಟಪಡುತ್ತಾರೆ ಮತ್ತು ಮೆಚ್ಚುತ್ತಾರೆ. ಆದರೆ ತನ್ನ ಅಭಿಪ್ರಾಯವನ್ನು ನಿರ್ಭಯವಾಗಿ ಹೇಳುವ, ತಾನಂದುಕೊಂಡದ್ದನ್ನು ಮಾಡಲು ಹಠ ಮಾಡುವ ಮಗುವು ಗದರಿಸಲ್ಪಡುತ್ತದೆ, ಬಯ್ಗಳನ್ನು ತಿನ್ನುತ್ತದೆ ಮತ್ತು ಶಿಕ್ಷಿಸಲ್ಪಡುತ್ತದೆ.  ಪೋಷಕರ, ಶಿಕ್ಷಕರ ಮತ್ತು ಅನ್ಯರ ಮೆಚ್ಚುಗೆಯನ್ನು ಪಡೆಯಲು ಮಕ್ಕಳು ತಮ್ಮ ಮೂಲಗುಣಗಳನ್ನು ಮರೆಸಿ, ಅನ್ಯರು ಏನು ಬಯಸುತ್ತಾರೋ ಆದಾಗಲು  ಪ್ರಯತ್ನಪಡುತ್ತಾರೆ.  ಹೀಗೆ ನಾವು ನಮ್ಮ ಬಾಲ್ಯದಿಂದಲೇ ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಅನ್ಯರು ಏನು ಬಯಸುತ್ತಾರೋ ಅದಾಗುತ್ತೇವೆ.  ಇದರಲ್ಲಿ ತಂದೆತಾಯಿಯರ ಪಾತ್ರ ಬಹಳ ಹೆಚ್ಚು. ಬಹಳ ವಿರಳವಾಗಿ, ಬಹಳ ಕಡಿಮೆ ಸಂಖ್ಯೆಯ ಪೋಷಕರು ತಮ್ಮ ಮಕ್ಕಳ ನೈಜ ಗುಣ, ಕ್ಷಮತೆ ಮತ್ತು ಶಕ್ತಿಗಳನ್ನು ಗುರುತಿಸಿ, ಅವರನ್ನು ಅವರೇನಾಗಬೇಕೋ ಆದಾಗಲು ಮತ್ತು ಹಾಗೆ ಬೆಳೆಯಲು ಒತ್ತಾಸೆ ನೀಡುತ್ತಾರೆ. 

 ನಾವು "ಏನು ಹೇಳಬೇಕು ಅಥವಾ ಮಾಡಬೇಕು ಮತ್ತು ಏನನ್ನು ಮಾಡಲು ನಮ್ಮನ್ನು ಒತ್ತಾಯಿಸಲಾಗಿದೆ ಎಂಬುದರ ನಡುವಿನ ವ್ಯತ್ಯಾಸ ನಮ್ಮ ಮೇಲೆ ಮಾನಸಿಕ ಒತ್ತಡವುಂಟಾಗಿಸುತ್ತದೆ. ಒತ್ತಡ ನಮ್ಮ ದೇಹ , ಮನಸ್ಸು ಮತ್ತು ಬುದ್ಧಿಗಳ ಮೇಲೆ ತನ್ನ ಪರಿಣಾಮ ಬೀರಿ, ನಮ್ಮನ್ನು ಮಾನಸಿಕ ಅನಾರೋಗ್ಯದೆಡೆಗೆ ತಳ್ಳುತ್ತದೆ, ಎಂದು ಈಗಾಗಲೇ ವೈಜ್ಞಾನಿಕವಾಗಿ ನಿರೂಪಿಸಲಾಗಿದೆ. ವಯಸ್ಕರಾದ ನಾವು, ತಲೆನೋವು, ಬೆನ್ನುನೋವು, ಅತಿ ಆಮ್ಲತೆ(ಅಸಿಡಿಟಿ), ಅಧಿಕ ರಕ್ತದೊತ್ತಡ, ಸುಸ್ತು ಅಥವಾ ಮಧುಮೇಹದಂತಹ ಖಾಯಿಲೆಗಳಿಗೆ ತುತ್ತಾಗಿ, ಅವುಗಳ ಮೂಲ ಕಾರಣವೇನೆಂದು ಅರಿಯಲಾಗದೆ ಅಥವಾ ಅರಿಯಲು ಪ್ರಯತ್ನವನ್ನೇ ಪಡದೆ,  ವೈದ್ಯಕೀಯ ಸಲಹೆ ಅಥವಾ ತಪಾಸಣೆಗೆ ನಮ್ಮನ್ನು ನಾವು ಒಡ್ಡಿಕೊಳ್ಳುತ್ತೇವೆ. ಆದರೆ ವೈದ್ಯಶಾಸ್ತ್ರ, ದೈಹಿಕ ಕಾರಣಗಳನ್ನು ಮಾತ್ರ ಪರಿಗಣಿಸಿ ಕೇವಲ ಲಕ್ಷಣಗಳನ್ನು ಅಥವಾ ಪರಿಣಾಮಗಳಿಗೆ ಮಾತ್ರ ಶುಶ್ರೂಷೆ(treatment) ಯನ್ನು ಮಾಡುತ್ತದೆ. ಬಹಳಷ್ಟು ಖಾಯಿಲೆಗಳನ್ನು ಕುರುಹು(symptoms)ಗಳ ಸ್ಥರದಲ್ಲಿಯೇ ನಿಯಂತ್ರಿಸಬಹುದಾದರೂ ಅಥವಾ ಸಂಪೂರ್ಣ ಗುಣಮಾಡಬಹುದಾದರೂ, ಆ ಖಾಯಿಲೆಯ ಮೂಲ ಕಾರಣ ಹಾಗೆ ಉಳಿದುಬಿಡುತ್ತದೆ ಮತ್ತು ಹಲವುರೀತಿಯ ಚಿಕಿತ್ಸೆಗಳು ನಮ್ಮ ಆಜೀವ ಪರ್ಯಂತ ನಡೆಯುತ್ತವೆ.    

ಹಾಗಾಗಿ, ಯೋಚಿಸಲು, ಮಾತನಾಡಲು ಮತ್ತು ನಮಗೆ ಮಾಡಬೇಕೆನಿಸಿದ್ದನ್ನು ಮಾಡುವ ಸ್ವಾತಂತ್ರ್ಯವನ್ನು ನಮಗೆ ನಾವೇ ತಂದುಕೊಳ್ಳಬೇಕು ಅಥವಾ ಕೊಟ್ಟುಕೊಳ್ಳಬೇಕು.  ಇಲ್ಲಿ ನಾವು ಸ್ವಾತಂತ್ರ್ಯ ಎಂದಿದ್ದೇವೆ, ಅದು ಸ್ವೇಚ್ಛೆಯಾಗಬಾರದು. ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ಬಹಳ ವ್ಯತ್ಯಾಸ ಮತ್ತು ಅಂತರವಿದೆ. ನಾವು ಕೇವಲ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕು, ಸ್ವಾರ್ಥವನ್ನಲ್ಲ ಅಥವಾ ಮತ್ತೊಬ್ಬರಿಗೆ ತೊಂದರೆ ಮಾಡುವ ಅಧಿಕಾರವನ್ನಲ್ಲ. ತನ್ನ ಸ್ವಾತಂತ್ರ್ಯವನ್ನು ಬಯಸುವ ವ್ಯಕ್ತಿ ಖಂಡಿತವಾಗಿಯೂ ಅನ್ಯರ ಸ್ವಾತಂತ್ರ್ಯವನ್ನು ಗೌರವಿಸುವವನಾಗಿರುತ್ತಾನೆ. ಸಂಪೂರ್ಣ ಸ್ವಾತಂತ್ರ್ಯವೆಂದರೆ ' ಎಲ್ಲರಿಗೂ ಸ್ವಾತಂತ್ರ್ಯ' ವೆಂದರ್ಥ.  ಹಾಗೆಂದರೆ ನಾವು ನಮ್ಮನ್ನು ಮತ್ತು ಪರರನ್ನು  ನಿಯಂತ್ರಣ ಮುಕ್ತರನ್ನಾಗಿಸುವುದು ಎಂದರ್ಥ.  ಒಮ್ಮೆ ನಾವು ನಮ್ಮ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆದುಕೊಂಡಮೇಲೆ, ಮುಕ್ತ ಮನಸ್ಸಿನಿಂದ ನಮಗೇನು ಬೇಕೆಂದು ಯೋಚಿಸಬೇಕು, ಅದನ್ನು ಪಡೆಯುವ ಮಾರ್ಗವನ್ನು ಕಂಡುಕೊಳ್ಳಬೇಕು ಮತ್ತು ಅದಕ್ಕೆ ನಾವು ಯಾವ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಅರಿತುಕೊಳ್ಳಬೇಕು. ಹಾಗೆ ಶುದ್ಧಮನಸ್ಸಿನಿಂದ ಆಲೋಚನೆಮಾಡಿದಮೇಲೆ ನಾವು ಸರಿಯಾದ ಕಾರ್ಯಮಾರ್ಗವನ್ನು ಆಯ್ದುಕೊಳ್ಳಬಹುದು.  ನಮ್ಮ ಮನಸ್ಸು ಮುಕ್ತವಲ್ಲದಾಗ, ಚಿಂತೆಗೊಳಗಾದ ಸ್ಥಿತಿಯಲ್ಲಿ ಯೋಚನೆಯನ್ನು ಮಾಡಿದಾಗ ಮತ್ತು ಆ ಆಲೋಚನೆಯ ಪ್ರಕಾರ ನಾವು ಕಾರ್ಯಕೆಲಸಗಳನ್ನು ಮಾಡಿದಾಗ, ಅನ್ಯರು ನಾವು ಮಾಡುವ ಕೆಲಸದ ಬಗ್ಗೆ ಏನು ಹೇಳುತ್ತಾರೋ ಎಂಬ ಶಂಖೆ ನಮ್ಮ ಮನಸ್ಸಿನಲ್ಲಿದ್ದಾಗ, ನಾವು ಅನ್ಯರು ನಮ್ಮಿಂದ ಏನನ್ನು ಬಯಸುತ್ತಾರೋ ಅದನ್ನೇ ಮಾಡುತ್ತೇವೆಯೇ ಹೊರತು ನಮ್ಮ ಇಷ್ಟದಂತಲ್ಲ. ಅಂತಹ ಸ್ಥಿತಿಯಲ್ಲಿ ನಾವು ಅನ್ಯರಿಗೆ ಸಂತೋಷವನ್ನುಂಟುಮಾಡಬಹುದಷ್ಟೇ, ಆದರೆ ನಾವು ಶಾಂತವಾಗಿ ಸಂತೋಷದಿಂದ ಇರಲು ಸಾಧ್ಯವೇ ಇಲ್ಲ.  

ಹಾಗಾಗಿ ನಮಗಿರುವ ಸ್ವಾತಂತ್ರ್ಯವನ್ನು ನಾವು ಪುನಃ ಪಡೆಯಬೇಕು. ಆದರೆ ಆ ಸ್ವಾತಂತ್ರ್ಯ, ಸ್ವೇಚ್ಛೆಯಾಗಬಾರದು, ಅನ್ಯರ ಸ್ವಾತಂತ್ರ್ಯವನ್ನು ಕಸಿಯುವಂತಾಗಬಾರದು, ಅನ್ಯರ ಹಿತಕ್ಕೆ ಧಕ್ಕೆಯುಂಟಾಗುವಂತಿರಬಾರದು ಮತ್ತು ಕಡೆಯದಾಗಿ ನಮ್ಮ ಸ್ವಾತಂತ್ರ್ಯ ನಮ್ಮ ' ಹಿತ ' ವನ್ನು ಕಾಯುವಂತಿರಬೇಕು. ಅದು ಖಂಡಿತ ಒಬ್ಬ ವ್ಯಕ್ತಿಯ ಮುಕ್ತ ಸ್ಥಿತಿ. ಅಂತಹ ಸ್ಥಿತಿಯನ್ನು ಪಡೆಯಲು ನಾವು ಮನಃಪೂರ್ವಕವಾಗಿ ಪ್ರಯತ್ನಪಟ್ಟು ಅದನ್ನು ಸಾಧಿಸಿದರೆ ನಾವು ನಿಜವಾಗಲೂ ಸಂತೋಷದಿಂದಿರಬಹುದು.  

  

Tuesday 12 June 2018

ಕೊಡುಗೈ


ಜಗತ್ತಿನ ಸಕಲ ಜೀವ ರಾಶಿಗಳಲ್ಲಿ ' ಮಾನವ' ಹಲವಾರು ರೀತಿಯಲ್ಲಿ  ಒಂದು ವಿಶೇಷ ಪ್ರಾಣಿ. ಇವನು ಊರ್ದ್ವಮುಖನಾಗಿದ್ದಾನೆ, ಬಹುಮುಖ ವಿಚಾರವಂತನಾಗಿದ್ದಾನೆ ಮತ್ತು ಅನ್ಯಪ್ರಾಣಿಗಳಿಗೆ ಹೋಲಿಸಿದರೆ, ಅಧಿಕ ವಿವೇಕವಂತನಾಗಿದ್ದಾನೆ. ಇವನ ಎಲ್ಲಾ ಗುಣಗಳಲ್ಲಿ ನಾ ಕಂಡ ಭಿನ್ನ ಗುಣವೆಂದರೆ ' ಕೊಡುವ' ಗುಣ. ಎಂದರೆ ಇಡೀ  ಸೃಷ್ಟಿಯಲ್ಲಿನ ಅನ್ಯ ಜೀವರಾಶಿಗಳಿಗೆ ಹೋಲಿಸಿದರೆ ನೇರವಾಗಿ ' ಕೊಡುವ ಅಥವಾ ಕೊಡಬಲ್ಲ ' ಗುಣವಿರುವುದು ಕೇವಲ ನಮ್ಮ ಮಾನವನಿಗೆ ಮಾತ್ರ. ಬೇರೆ ಯಾವ ಪ್ರಾಣಿ ಅಥವಾ ಜೀವಿಯೂ ನೇರವಾಗಿ ಅನ್ಯ ಜೀವಿಗಳಿಗೆ ಏನನ್ನೂ ಕೊಡಲಾಗದು. ಆದರೆ ಅವುಗಳ ಪರೋಕ್ಷ ಕೊಡುಗೆಗಳ ಉದ್ದ ಪಟ್ಟಿಯನ್ನು ಮಾಡಬಹುದು. 

ತಾನು 'ಪ್ರತ್ಯಕ್ಷ ' ಕೊಡಲಾಗುವುದಿಲ್ಲವೆಂದು, ಮಾನವನಿಗೆ ಉನ್ನತ ವಿವೇಕವನ್ನು ಕೊಟ್ಟು ಮತ್ತು ಅದರೊಂದಿಗೆ ' ಕೊಡುವ ' ಗುಣವನ್ನೂ ಇತ್ತು,  ಪರಮಾತ್ಮ ತನ್ನ ಸೃಷ್ಟಿಯನ್ನು ಮತ್ತಷ್ಟು ಸುಂದರವಾಗಿಸುವ ಪ್ರಯತ್ನಮಾಡಿದ್ದಾನೆ. ಏನನ್ನು ಕೊಡಬೇಕು ಮತ್ತು ಹೇಗೆ ಕೊಡಬೇಕು ಎನ್ನುವ ಜ್ಞಾನವನ್ನೂ ಕೊಟ್ಟು ಈ ' ಕೊಡುವ ' ಪ್ರಕ್ರಿಯೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿದ್ದಾನೆ. ತನ್ನಲ್ಲಿರುವುದನ್ನು ಕೊಡುವ, ಇಲ್ಲದ್ದನ್ನು ಪಡೆದುಕೊಂಡು ಕೊಡುವ, ಪ್ರತಿಯಾಗಿ ಏನನ್ನೂ ಬಯಸದೆ ನಿಸ್ವಾರ್ಥದಿಂದ ಕೊಡುವ ಮತ್ತು ಕೊಟ್ಟು ಸಂತೋಷಪಡುವ ಗುಣವನ್ನು, ಪರಮಾತ್ಮ.ಕೇವಲ ಮಾನವನಿಗೆ ಕೊಟ್ಟಿದ್ದಾನೆ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕಾದ ಒಂದು ವಿಚಾರ.

ಕೊಡುವುದು ಒಂದು ಬಹು ಉನ್ನತವಾದ ಗುಣ. ಕೊಟ್ಟು ಸಂತೋಷಪಡುವುದು ಅತಿಶಯದ ಗುಣ. ಕೊಡುವ ವಿಚಾರದಲ್ಲಿ ತೈತ್ತರೀಯ ಉಪನಿಷತ್ತು " ಶ್ರದ್ಧಯಾ ದೇಯಂ, ಅಶ್ರದ್ಧಯಾ ಅದೇಯಂ, ಶ್ರಿಯಾ ದೇಯಂ, ಹ್ರಿಯಾ ದೇಯಂ, ಭಿಯಾ ದೇಯಂ, ಸಂವಿದಾ ದೇಯಂ" ಎಂದು ಹೇಗೆ ಕೊಡಬೇಕು ಎನ್ನುವುದನ್ನು ಹೇಳುತ್ತದೆ. ದಾನವೆನ್ನುವುದು ಸನಾತನದ ಮೂಲಗುಣ. ಹೀಗೆ ಕೊಡುವುದರಲ್ಲಿ ಅಗ್ರಗಣ್ಯರಾದ ಮಹಾಭಾರತದ  ಕರ್ಣ ಮತ್ತು ಬಳಿ ಚಕ್ರವರ್ತಿಯನ್ನು ಉಲ್ಲೇಖಿಸಬಹುದು.

ಆದರೆ ಇಂದಿನ ಮಾನವರಾದ ನಾವು ಆ 'ಗುಣ'ವನ್ನು ಉಳಿಸಿಕೊಂಡಿದ್ದೇವೆಯೇ? ಎಂದು ವಿಚಾರಮಾಡಿದರೆ, ದುಃಖವಾಗುತ್ತದೆ. ಸೃಷ್ಟಿಕರ್ತನ ಉದ್ದೇಶ್ಯವನ್ನು ಸುಳ್ಳಾಗಿಸುವ ಹಲವಾರು ದಾರಿಗಳನ್ನು ನಾವು ಕಂಡುಕೊಂಡಿದ್ದೇವೆ ಅಲ್ಲವೇ? ನಮಗೆ ಕೊಡುವ ಶಕ್ತಿಯೇ ಇಲ್ಲ, ಇದ್ದರೂ ಕೊಡುವ ಮನಸ್ಸೇ ಇಲ್ಲ. ಸದಾಕಾಲ ' ನಾನು' ಎಂದು ಆಲೋಚಿಸುವವರಿಗೆ ಕೊಡುವ ಬುದ್ಧಿ ಬರಲು ಸಾಧ್ಯವೇ? ಸ್ವಾರ್ಥದಲ್ಲಿ ಮುಳುಗಿರುವ ನಮಗೆ ಅನ್ಯರ ಕುರಿತು ಯೋಚಿಸುವ ಸಮಯವಾಗಲಿ ಸದ್ಭುದ್ಧಿಯಾಗಲೀ ಇಲ್ಲ, ಅಲ್ಲವೇ? ಇದು ಇಂದಿನ ಮಾನವರಾದ ನಮ್ಮ ಬದುಕಿನ ದುರಂತ. ಇದನ್ನು ನೋಡಿಯೇ ಅಂದು ಒಬ್ಬ ಪುಣ್ಯಾತ್ಮ ' ಇಲ್ಲಿ ಪ್ರತಿಯೊಬ್ಬರ ಅವಶ್ಯಕತೆಗೆ ಸಕಲವೂ ಇದೆ, ಆದರೆ ದುರಾಸೆಗೆ ಏನೂ ಇಲ್ಲ ' ಎಂಬ ಮಾತನ್ನು ನಾಣ್ಣುಡಿಯಂತೆ ಹೇಳಿದಾನೆ. "ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ ಕಳ್ಳಂಗೆ, ನೃಪಂಗೆ, ಸರ್ವಜ್ಞ"  ಎನ್ನುತ್ತಾನೆ ಸರ್ವಜ್ಞ ಕವಿ. ಇಂದಿನ ನಮಗೆ ಸದಾಕಾಲ ಪಡೆದುಕೊಳ್ಳುವ, ಅಧಿಕವಾಗಿ ಪಡೆದುಕೊಳ್ಳುವ ಮತ್ತು ಹಾಗೆ ಪಡೆದುಕೊಂಡದ್ದನ್ನು ಅನ್ಯರಲ್ಲಿ ಹಂಚಿಕೊಳ್ಳದೆ ನಮ್ಮಲ್ಲೇ ಉಳಿಸಿಕೊಳ್ಳುವ ದುರಾಲೋಚನೆಯೇ ಅಧಿಕವಲ್ಲವೇ?

ಸರ್ವರಿಗೂ ಸಕಲವನ್ನೂ ನೀಡುವ ಪರಮಾತ್ಮನಲ್ಲಿ ಏನನ್ನೂ ಬೇಡಬಾರದು ಎನ್ನುವುದು ನಮ್ಮ ಸಿದ್ಧಾಂತ. ಹಾಗೆ ಬೇಡಿದರೂ, ಸಂಪತ್ತು ಮತ್ತು ಸವಲತ್ತನ್ನು ಬೇಡಿ ಅದನ್ನು "ಇತರರೊಡನೆ ಹಂಚಿಕೊಳ್ಳುವ ಬುದ್ಧಿಯನ್ನೂ ಕೊಡು ದೇವರೇ" ಎಂದು ಬೇಡಬೇಕು. 'ಕೊಡುವ ಸುಖ ಪಡೆದುಕೊಳ್ಳುವುದರಲ್ಲಿ ಇರುವುದಿಲ್ಲ' ಎನ್ನುವುದನ್ನು ಮನದಟ್ಟು ಮಾಡಿಕೊಂಡರೆ ಸಮಾಜದ ಹಿತವನ್ನು ಕಾಪಾಡಿದ ಹಾಗಾಗುತ್ತದೆ.