Saturday 1 December 2018

ಶರಣಾಗತಿ



ಜನನ ಮರಣಗಳ ಭಯದಿಂದ  ಮುಕ್ತರಾಗಬೇಕಾದರೆ ಇರುವುದು ಒಂದೇ ಮಾರ್ಗ, ಪರಮಾತ್ಮನಲ್ಲಿ ಸಂಪೂರ್ಣ ಶರಣಾಗತಿ. ಅನ್ಯ ದಾರಿಯೇ ಇಲ್ಲ. ಬದುಕಿನ ಭವಣೆಯ ಅನುಭವದಿಂದ ಮುಕ್ತರಾಗಬೇಕಾದರೆ ಪರತತ್ವಕ್ಕೆ ಶರಣಾಗಬೇಕು.  ಅದನ್ನು ಆಧ್ಯಾತ್ಮದ ಹಾದಿಯಲ್ಲಿ ತಪಸ್ಸಿನ ಮತ್ತು ವೈರಾಗ್ಯದ ಸಾಧನೆಯಿಂದ ಮಾತ್ರ ಸಾಧಿಸಬಹುದಾಗಿದೆ.  

ಮಾತ್ರವಲ್ಲ ದೇವರನ್ನು ಪಡೆಯಲು ಅಡ್ಡದಾರಿಗಳಿಲ್ಲ. ದಾರಿಯಲ್ಲಿ ಸಂಪೂರ್ಣ ಪ್ರಯಾಣವಾಗಲೇಬೇಕು. ನಡುವಿನ ಅಂತರವನ್ನು ಸವೆಸಲೇಬೇಕು. ಆದರೆ ಅದು ಬಹಳ ಕಷ್ಟತರವಾದದ್ದು. ಬಹಳ ಸಮಯಬೇಕಾಗುತ್ತದೆ. ಅದೆಷ್ಟು ಕಷ್ಟತರವಾದದ್ದು ಎಂದರೆ ಹಾದಿಯಲ್ಲಿನ ಸಂಕಟ ಮತ್ತು ನೋವುಗಳು, ನಾವು ನಂಪೂರ್ಣವಾಗಿ ಅರಿಯಲಾಗದ ಆ 'ಪರಮಾತ್ಮ' ನನ್ನು ಅರಿಯಲು ಪ್ರಯತ್ನಪಟ್ಟು ವಿಫಲರಾದಾಗ 'ನಮಗಿದೆಲ್ಲಾ ಬೇಕೇ' ಎನ್ನುವ ಭಾವ ಮೂಡಿಸುತ್ತದೆ.  ಅವುಗಳನ್ನು, ಸಾಧಕನಿಗೆ ಪರಮಾತ್ಮ ಒಡ್ಡುವ ಒಂದು ಪರೀಕ್ಷೆಯೆಂದೇ ಅರಿಯಬೇಕು.  ಸಾಧಕ ಎದುರಿಸಬೇಕಾದ ಪರೀಕ್ಷೆಯಲ್ಲಿನ ಪ್ರಶ್ನೆಗಳಿಗೆ ಅವನೇ ಉತ್ತರಿಸಬೇಕು. ಅವನ ಹೊರೆಯನ್ನು ಅವನೇ ಹೊರಬೇಕು, ಮತ್ಯಾರ ಸಹಾಯವನ್ನೂ ಬಯಸುವ ಹಾಗಿಲ್ಲ ಅಥವಾ ಪಡೆಯುವ ಹಾಗೂ ಇಲ್ಲ. ಈ ವಿಷಯದಲ್ಲಿ ದೈವವೂ ಸಹ ನಮಗೊದಗುವುದಿಲ್ಲ. ಈ ಮಾತನ್ನು ಸನ್ಮಾನ್ಯ ಡಿ. ವಿ. ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ :

ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ
ಸನ್ನಾಹ ಸಾಗೀತೆದೈವವೊಪ್ಪೀತೆ ।।
ಮನ್ನಿಸಲಿ ವಿಧಿ ನಿನ್ನ ಬೇಡಿಕೆಯಭಿನ್ನಿಸಲಿ
ನಿನ್ನ ಬಲವನ್ನು ಮೆರೆಸೋ - ಮಂಕುತಿಮ್ಮ ।।

ನಮ್ಮ ಬಲವೃದ್ಧಿಯಾದರೆ ಆಗ ನಮ್ಮ ಬಲದಿಂದಲೇ ನಮ್ಮ ಕೊರತೆ ಅಥವಾ ಅಪರಿಪೂರ್ಣತೆಗಳನ್ನು ನೀಗಿಕೊಂಡು ಶುದ್ಧರಾಗಿ, ಪರಿಪೂರ್ಣನಾದ ಪರಮಾತ್ಮನನ್ನು ಅರಿಯಬಹುದು, ಅರಿತರೆ ಪಡೆಯಬಹುದು. ಪ್ರತಿಯೊಬ್ಬರ ಹೊರೆಯ ರೂಪವೂ ಭಿನ್ನ ಭಿನ್ನ. ಒಬ್ಬರ ನೋವು ಮತ್ತು ಸಂಕಟ ಮತ್ತೊಬ್ಬರದಂತಿಲ್ಲ.  ನಮ್ಮ ನೋವು ಮತ್ತು ಸಂಕಟವನ್ನು ನಾವೇ ಅನುಭವಿಸಬೇಕು,  ಅನ್ಯರ ಹೆಗಲಿಗೆ ಅದನ್ನು ಹೊರಿಸುವಂತಿಲ್ಲ . ಸಾಧಕ ಪರೀಕ್ಷೆಗೆ ಒಳಪಡುವುದು ಇಲ್ಲೇ. "ಓಹೋ!!! ನನ್ನಲ್ಲಿ ಎಲ್ಲಾ ಸುಗುಣಗಳಿವೆ, ನನ್ನಲ್ಲಿ ಆಧ್ಯಾತ್ಮದ ಬೆಳಕಿದೆ, ಕೇವಲ ಒಂದೇ ಒಂದು ಕೊರತೆಯನ್ನು ಹೊರತು, ಎಂದು ನಮ್ಮನ್ನು ನಾವು ಸಮಾಧಾನಪಟ್ಟುಕೊಳ್ಳುವಂತಿಲ್ಲ. ಏಕೆಂದರೆ ಒಂದೇ ಒಂದು ಸಣ್ಣ ಕೊರತೆ ಅಥವಾ ನ್ಯೂನತೆಯಿದ್ದರೂ ಸಾಕು, ಸಕಲ ಗುಣ ಸಂಪನ್ನವಾದ, ಕೊರತೆಗಳೇ ಇಲ್ಲದ,  ಪರಿಪೂರ್ಣತೆಯಿಂದ ಕೂಡಿದ ಪರಮಾತ್ಮ ಅಥವಾ ಪರತತ್ವ ನಮ್ಮಿಂದ ದೂರವೇ ಉಳಿಯುತ್ತದೆ.  ಹಾಗಾಗಿ ಯಾವುದೇ ರೀತಿಯ ಕೊರತೆ ಅಥವಾ ನ್ಯೂನತೆಗಳಿಲ್ಲದ ಸ್ಥಿತಿಗೆ ತಲುಪುವುದೇ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಮಾರ್ಗ.    

ನಮ್ಮಲ್ಲಿ ಒಂದೇ ಒಂದು ಐಬು ಅಥವಾ ನ್ಯೂನತೆಯಿದ್ದರೂ ಪರಮಾತ್ಮ ಸಾಕ್ಷಾತ್ಕಾರದಿಂದ ಮತ್ತು ಆತ್ಮ ಸಾಕ್ಷಾತ್ಕಾರದಿಂದ  ನಾವು,  ದೂರವೆಂದರಿಯಬೇಕು.  ಪರಮಾತ್ಮ ನಮ್ಮನ್ನು ಪರೀಕ್ಷೆಗೊಡ್ಡುತ್ತಾನೆ. ಬಾರಿ ಬಾರಿ ಪರೀಕ್ಷೆಗೊಡ್ಡುತ್ತಾನೆ. ನಮಗಿರುವ ಯಾವುದೋ ಒಂದು ಕೊರತೆಯಲ್ಲೇ ನಮ್ಮನ್ನು ಪರೀಕ್ಷೆಗೊಡ್ಡುತ್ತಾನೆ. ಒಂದು ವೇಳೆ ನಮಗೆ 'ಅಸಹಿಷ್ಣುತೆ' ಯ ಕೊರತೆ ಇದ್ದರೆ, ಮತ್ತೆ ಮತ್ತೆ ತಾಳ್ಮೆಗೆಡುವ ಸಂದರ್ಭಗಳು ಒದಗಿಸಿ ನಮ್ಮನ್ನು ಮತ್ತೆ ಮತ್ತೆ ಪರೀಕ್ಷಿಸುತ್ತಾನೆ. ಒಂದು ವೇಳೆ ನಮಗೆ ಸ್ತ್ರೀ ಬಲಹೀನತೆಯಿದೆ ಎಂದಿಟ್ಟುಕೊಳ್ಳಿ, ಹತ್ತಾರು ಸುಂದರ ಸ್ತ್ರೀಯರು ನಮ್ಮ ಸುತ್ತ ಮುತ್ತ ಸುಳಿಯುವಂತೆ ಮಾಡಿ,  ನಮ್ಮ ಬಲಹೀನತೆಯ ಪರೀಕ್ಷೆ ನಡೆಸುತ್ತಾನೆ.    

ಈ ಮಾಯೆಯಂಬುದು ಹೇಗೆ ಕೆಲಸಮಾಡುತ್ತದೆ ಎಂದು ನೋಡುವ. ಅಕಸ್ಮಾತ್ ನಮಗೆ ಸಣ್ಣ ಸಣ್ಣ ಪ್ರಲೋಭನೆಗಳಿಗೆ ಈಡಾಗುವಂತಹ ಮನೋಭಾವವಿದ್ದರೆ, ಒಂದು ಸಣ್ಣ ವಸ್ತುವೂ ಸಾಕು ನಮ್ಮನ್ನು ಪತನವಾಗಿಸಲು. ಆಗ ಮಾಯೆ ತನ್ನ ಕೆಲಸ ಸುಲಭವಾಗುವುದರಿಂದ ನಮಗೆ ಸಣ್ಣ ಸಣ್ಣ ಆಸೆಗಳನ್ನು ತೋರಿಸುತ್ತಿರುತ್ತದೆ.  ಆದರೆ ನಾವು ನೈತಿಕ ಮತ್ತು ಮಾನಸಿಕವಾಗಿ ಪ್ರಭಲರಾಗಿದ್ದರೆ ಆಗ ಮಾಯೆ, ವಿಶ್ವಾಮಿತ್ರನ ತಪೋಭಂಗಮಾಡಲು ದೇವಲೋಕದ ಅಪ್ಸರೆ ಮೇನಕೆಯನ್ನು ಕಳುಹಿಸಿದಂತೆ,  ಬಹಳ ದೊಡ್ಡದಾದ ಪ್ರಲೋಭನೆಗಳನ್ನೇ ನಮ್ಮ ಮುಂದಿಟ್ಟು ನಮ್ಮನ್ನು ನಮ್ಮ ನೈತಿಕ ನೆಲಗಟ್ಟಿನಿಂದ ಅಲುಗಾಡಿಸಲು ಪ್ರಯತ್ನಿಸುತ್ತದೆ.  ನಾವು ಸಣ್ಣ ಅಥವಾ ದೊಡ್ಡ, ಹೀಗೆ ಯಾವುದೇ ರೀತಿಯ 
ಪ್ರಲೋಭನೆಗಳಿಗೆ ಬಾಗದೆ ನಮ್ಮ ನೈತಿಕತೆಯನ್ನು ಭಧ್ರವಾಗಿ ಕಾಪಾಡಿಕೊಂಡರೆ ಮಾತ್ರ ನಮ್ಮ ಆಧ್ಯಾತ್ಮ ಸಾಧನೆ ಕಲುಷಿತವಾಗದೆ  ಇರುತ್ತದೆ.  

ಈ ರೀತಿ ಆಧ್ಯಾತ್ಮ ಸಾಧಕನನ್ನು ಮಾಯೆ ಪದೇ ಪದೇ ತೀವ್ರವಾಗಿ ಪರೀಕ್ಷೆಗಳಿಗೆ ಒಡ್ಡುತ್ತದೆ, ಕಾಡುತ್ತದೆ ಮತ್ತು ಸಾಧಕನನ್ನು ದಣಿಸುತ್ತದೆ. ಪ್ರತಿಯೊಬ್ಬ ಸಾಧಕನೂ ಈ ರೀತಿಯ ಪರೀಕ್ಷೆಗಳ ಹಂತವನ್ನು ದಾಟಲೇಬೇಕು. ಇದು ಸಾಧಕ ಪಾವನವಾಗುವ ಮಾರ್ಗ. ಕುಲುಮೆಯಲ್ಲಿ ಕಾಯಿಸಿದ ಕಬ್ಬಿಣದಂತೆ. ಹಂತದಲ್ಲಿ ಸಾಧಕನಿಗೆ, 'ಜಗತ್ತಿನ ವಿಷಯಗಳು ನೀಡುವ ಹಿಂಸೆ ಬಾಣಲಿಯಲ್ಲಿ ಬೇಯುತ್ತಿದ್ದಂತೆ ಇದ್ದರೆ, ಆಧ್ಯಾತ್ಮ ಸಾಧನೆಯ ಪರೀಕ್ಷೆಗಳು ಬಾಣಲಿಯಿಂದ ಬೆಂಕಿಯೊಳಕ್ಕೆ ಹಾಕಿದಂತಿದೆಎಂದು ಎನಿಸದೇ ಇರದುಅವನು  ' ಸಾಧನೆಗೆ ಬೇರೆ ದಾರಿಯೇ ಇಲ್ಲವೇ? ' ಎಂದು ಬೆರಗುಗೊಳ್ಳುತ್ತಾನೆ. ಸಾಧಕನ ಮನಸ್ಸು ಬಲಹೀನವಾದರೆ ' ಹೇ! ದೇವರೇ ನನಗೇಕೆ ರೀತಿಯ ಹಿಂಸೆ ನೀಡುತ್ತಿದ್ದೀಯೆ?' ಎಂದು ತನ್ನ ಅಸಹಾಯಕತೆಯಿಂದ   ದೇವರನ್ನೇ ಬಯ್ಯುವ ಅಧಿಕಪ್ರಸಂಗವನ್ನೂ ಮಾಡಬಹುದು. ಅಂತಹ ಸ್ಥಿತಿಯಲ್ಲಿ ಸಾಧಕನಿಗೆ ತನ್ನ ಬಲಹೀನತೆ ಮತ್ತು  ಅಸಹಾಯಕತೆ ಒಂದು ಕಡೆ ಮತ್ತು ಪರಮಾತ್ಮನ ಸರ್ವ ವ್ಯಾಪಕತ್ವ ಮತ್ತು ಸರ್ವಶಕ್ತಿ ಎರಡರ ಅರಿವೂ ಆಗುತ್ತದೆ. ಆಗ ಅವನು ತನ್ನ ಪ್ರಯತ್ನಗಳನ್ನು ಬದಿಗಿಟ್ಟು ತನ್ನ ಅಹಂಕಾರವನ್ನು ತೊಡೆದುಹಾಕಿ ಪರತತ್ವಕ್ಕೆ ಸಂಪೂರ್ಣವಾಗಿ ಶರಣಾಗುತ್ತಾನೆ. ಇದೇ ಶರಣಾಗತಿ ಮತ್ತು ಇದು ಅನಿರ್ಬಂಧಿತ, ಅಡೆತಡೆಯಿಲ್ಲದೆ ಶುದ್ಧ ಶರಣಾಗತಿ. ಹೀಗೆ ಶರಣಾದಾಗ ಪರಮಾತ್ಮನ ಅನುಗ್ರಹ ಅವನೆಡೆಗೆ ಹರಿದು ಬರುತ್ತದೆ, ಸಾಧಕನಲ್ಲಿ ಜ್ಞಾನವುಂಟಾಗಿ ಅವನ ಅಂತರಂಗದಲ್ಲಿ ಶಾಂತಿ ನೆಲೆಸುತ್ತದೆ. ಶರಣಾಗತಿ ಅವನನ್ನು  ಶಾಂತ ಮತ್ತು ಜ್ಞಾನದ ನೆಲೆಯಲ್ಲಿ ಸ್ಥಿರವಾಗಿಸಿ ಸಾಧಕನ ಆತ್ಮೋದ್ಧಾರಕ್ಕೆ ನಾಂದಿ ಹಾಡುತ್ತದೆ.    ಹಾಗಾಗಿ ಶಾಂತಿಯ, ಜ್ಞಾನದ ಮತ್ತು ನಿಜವಾದ ಆನಂದದ ಸ್ಥಿತಿಗೆ ' ಶರಣಾಗತಿ'ಯೊಂದೇ ಮಾರ್ಗ

ಓಂ ತತ್ಸತ್ 

ನಮಸ್ಕಾರ 

No comments:

Post a Comment