Wednesday 11 July 2012


ಮನಸ್ಸು- ತರಬೇತಿ  
ಮಾನಸಿಕ ತರಬೇತಿ 
ಮಾನವರೆಲ್ಲರೂ ಹೇಗೆ ಒಂದೇ ರೀತಿಯಲ್ಲಿರುವುದಿಲ್ಲವೋ, ಹಾಗೆಯೇ ಅವರುಗಳ ಮನಸ್ಸೂ ಸಹ. ಕೆಲವರ ಮನಸ್ಸು ಉನ್ನತಮಟ್ಟದಲ್ಲಿ ವಿಕಾಸಗೊಂಡಿದ್ದರೆ, ಮತ್ತೆ ಕೆಲವರದು ವಿಕಾಸದ ಹಾದಿಯಲ್ಲಿರಬಹುದು ಅಥವಾ ತೀರ ಕೆಳಮಟ್ಟದ್ದಾಗಿರಬಹುದು. ಆದರೆ ಪ್ರತಿಯೊಬ್ಬರ  ಮನಸ್ಸೂ  ವಿಕಾಸದ ಯಾವುದೇ ಮಟ್ಟದಲ್ಲಿದ್ದರೂ ನಿರಂತರ ತರಬೇತಿಯಿಂದ, ಮೇಲ್ಮಟ್ಟಕ್ಕೆ ತರಬಹುದು. ಮನಸ್ಸಿಗೆ ಮೂರು ರೀತಿಯ ತರಬೇತಿಯನ್ನು ಕೊಡಬಹುದು. ಮೊದಲನೆಯದು, ವೃತ್ತಿಪರ ತರಬೇತಿ ಮತ್ತು ಸಮನ್ವಯದ (Secular ) ತರಬೇತಿ, ಎರಡನೆಯದು ನೈತಿಕ ಮತ್ತು ಕಲೋಪಾಸಕ ತರಬೇತಿ, ಮೂರನೆಯದು ಆಧ್ಯಾತ್ಮಿಕ ಸಾಧನೆ ಮತ್ತು ಅನುಭವದ ತರಬೇತಿ. 

ವಿಧ್ಯಾಭ್ಯಾಸವೆಂದರೆ ನಾವು ಸಾಮಾನ್ಯವಾಗಿ ತಿಳಿದುಕೊಳ್ಳುವುದೇನೆಂದರೆ, ಶಾಲಾ ಕಾಲೇಜುಗಳಲ್ಲಿ ನೀಡುವ, ವಿಜ್ಞಾನ, ಕಲೆ ಮತ್ತು ವೃತ್ತಿಪರ ವಿಧ್ಯಾಭ್ಯಾಸ. ಆ ರೀತಿಯ ವಿಧ್ಯಾಭ್ಯಾಸಕ್ಕೆ ಎಲ್ಲ ದೇಶಗಳೂ ಮತ್ತು  ಸಮಾಜಗಳೂ ಶಾಲೆಗಳನ್ನು ಕಾಲೇಜುಗಳನ್ನು ಕಟ್ಟಿ ಬೆಳೆಸುತ್ತವೆ. ಈ ನಿಟ್ಟಿನಲ್ಲಿ ಎಲ್ಲ ದೇಶಗಳಲ್ಲೂ ಸಾಕಷ್ಟು ಪ್ರಗತಿಯನ್ನು ನಾವು ಕಾಣುತ್ತೇವೆ. ನೀತಿ ನಿಯಮಗಳ ಆಧಾರದಮೇಲೆ ಮತ್ತು ಕಾನೂನಿನ ಒತ್ತಡದಮೇಲೆಯೂ ಇಂದು ಸಮಾಜ ನೈತಿಕ ಮಟ್ಟದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಹಲವು ವಿಧವಾದ ಅಪರಾಧಗಳಿಗೆ ಕಾನೂನಿನಲ್ಲಿ ವಿಧಿಸುವ ದಂಡನೆಯ ಭಯವೂ ಸಹ ಅಪರಾಧಗಳನ್ನು ತಡೆಯುವಲ್ಲಿ ಮತ್ತು ಒಟ್ಟು ಸಮಾಜದಲ್ಲಿ  ನೈತಿಕತೆಯನ್ನು ಒತ್ತಾಯದಿಂದ ರೂಪಿಸುವಲ್ಲಿ ಸಹಾಯ ಮಾಡುತ್ತದೆ. 

ಇವೆಲ್ಲವೂ ಭಾಹ್ಯ ಒತ್ತಡಗಳಿಂದಾಗುವ ಬದಲಾವಣೆಗಳಾದರೆ, ಅಗೋಚರವಾದ ಮನೋ ವ್ಯಾಪಾರದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲಿಕ್ಕೆ, ಶಾಂತವಾಗಿಸಲಿಕ್ಕೆ , ವಿಶ್ವಾಸವಂತವಾಗಿಸಲಿಕ್ಕೆ, ಸತ್ಯ, ಸ್ವನಿಯಂತ್ರಣ, ದೈನ್ಯತೆ, ಮತ್ತು ಕರುಣೆಗಳಂತಹ   ಸದ್ಗುಣಗಳನ್ನು ಬೆಳೆಸಿಕೊಂಡು ಮನಸನ್ನು ಶುಧ್ಧ ಮತ್ತು  ನಿರ್ಮಲವಾಗಿಸಿಕೊಳ್ಳಬಹುದು. ಆದರೆ ಮನಸ್ಸನ್ನು ಹೆಚ್ಚು ಉತ್ತಮವಾಗಿಸಲಿಕ್ಕೆ ಆಧ್ಯಾತ್ಮ ವಿಧ್ಯೆಯಲ್ಲಿ ತರಬೇತಿ ಕೊಡುವುದೇ ಹೆಚ್ಚು ಸೂಕ್ತವೆಂದರೆ ತಪ್ಪಾಗಲಾರದು. 

ಪ್ರತಿಯೊಬ್ಬರೂ ತಮ್ಮ ನಿಜ ಸ್ವರೂಪವನ್ನು ಮತ್ತು ಮಾನವ ಜನ್ಮದ ಉಧ್ಧ್ಯೇಶವನ್ನು ಅರಿತುಕೊಂಡರೆ ಸಾಕು, ಮನಸ್ಸಿನಲ್ಲಿ ಒಳ್ಳೆಯಗುಣಗಳು ಹುಟ್ಟಿಕೊಳ್ಳುತ್ತವೆ ಮತ್ತು ಪ್ರತಿಯೊಬ್ಬರ ವ್ಯಕ್ತಿತ್ವವೂ ಉತ್ತಮವಾಗುತ್ತದೆ.  

ಮನಸ್ಸಿನ  ಸ್ವಭಾವ 
ಮನಸ್ಸು ಒಂದು ಸೂಕ್ಷ್ಮ ವಸ್ತು, ಕ್ಷಣಾರ್ಧದಲ್ಲಿ ಯಾವುದೇ ಆಕಾರವನ್ನು  ತಳೆಯಬಹುದಾದ, ಒಂದು ಶಕ್ತಿಯ ಸ್ವರೂಪ. ತನ್ನ ಶಕ್ತಿಯನ್ನು ತಾನೇ ವೃಧ್ಧಿಸಿ ಕೊಳ್ಳಬಹುದಾದಂತಹ ಗುಣವುಳ್ಳದ್ದು.  ಆದರೆ, ಅದು ಜಡವಸ್ತು. ತನ್ನ ಕಾರ್ಯಕಲಾಪಗಳಿಗೆ ಜಾಗೃತಿಯ ಬೆಳಕನ್ನು ಎರವಲು ಪಡೆಯಲೇಬೇಕು. ಒಂದು ಯೋಚನೆಯನಾಗಲೀ, ಅನುಭವವನ್ನಗಲೀ ಅಥವಾ ಭಾವುಕತೆಯನ್ನಾಗಲೀ, ಮನಸ್ಸೂ ಸಹ ವಸ್ತು ಮತ್ತು ಚೈತನ್ಯದ ಸಮ್ಮಿಶ್ರವನ್ನಾಗಿಯೇ ಪ್ರಸ್ತುತಪಡಿಸಬೇಕು. ಅಧ್ಯಾತ್ಮಿಕತೆಯ ಅಧಾರದಮೇಲೆಯೇ, ಪ್ರಜ್ಞೆಯ ಅಸ್ತಿತ್ವವಿರುತ್ತದೆ ಮತ್ತು ಆತ್ಮವನ್ನು 
ವಿಷಯಾಸಕ್ತತೆಯಿಂದ ಬೇರ್ಪಡಿಸುವುದೇ ಮಾನವ ಜನ್ಮದ ಮೂಲ ಉಧ್ಧ್ಯೇಶ. ಪ್ರಪಂಚದ ಎಲ್ಲ ಮತಗಳ ಮತ್ತು ಧರ್ಮಗಳ ಬೋಧನೆಯೂ ಇದನ್ನೇ ಹೇಳುತ್ತವೆ. 

ಆದರೆ ಆತ್ಮವನ್ನು ಮನಸ್ಸು ಮತ್ತು ಬುಧ್ಧಿಗಳಿಂದ ಬೇರ್ಪಡಿಸಿ  ನೋಡಬೇಕೆಂದಾಗ, ಮನಸ್ಸಿನ ಮೂಲಕವೇ ನೋಡಲು ಸಾಧ್ಯ. ಮೊದಮೊದಲು ಸ್ನೇಹಭಾವದಿಂದ ಇಲ್ಲದಿದ್ದರೂ ಅಹಂಕಾರದಿಂದ  ಅಸಹಕಾರವನ್ನೇ ಮುಂದೊಡ್ಡಿದರೂ ಮನಸ್ಸನ್ನು ಸ್ವಚ್ಚಗೊಳಿಸುವ ಮೂಲಕವೇ, ನಮಗೆ ಆತ್ಮದ ಅರಿವಾಗಲು ಸಾಧ್ಯ. ಎಲ್ಲಾ ವಸ್ತುಗಳಿಗಿರುವಂತೆಯೇ, ಮನಸ್ಸಿಗೂ ಮೂರು ಗುಣಗಳುಂಟು. ಪ್ರಕೃತಿಯ ಸ್ವಾಭಾವದಲ್ಲಿರುವ, ಸತ್ವ, ರಜಸ್ಸು ಮತ್ತು ತಮಸ್ಸೆಂಬ ಮೂರೂ ಗುಣಗಳಿಂದಾಗಿದೆ  ನಮ್ಮ ಮನಸ್ಸು. 

ಮನಸ್ಸಿನ ಸ್ವಭಾವು ಈ ಮೂರು ಗುಣಗಳ ಪ್ರಮಾಣ ಭೇದದ ಮೇಲೆ ಅವಲಂಬಿಸಿರುತ್ತದೆ. ತಮೋಗುಣವು  ಪ್ರಮಾಣದಲ್ಲಿ ಅಧಿಕವಾಗಿದ್ದರೆ, ಮನಸ್ಸು,  ಮೊದ್ದಾಗಿ, ಮೂರ್ಖವಾಗಿ ಮತ್ತು ಸೋಂಬೇರಿತದಿಂದ   ಪ್ರವರ್ತಿಸುತ್ತದೆ ಮತ್ತು ಮೋಹದ ಜಾಲದಲ್ಲಿ ಮತ್ತು ಜಡತ್ವದಲ್ಲಿ ಸಿಕ್ಕಿಕೊಂಡಿರುತ್ತದೆ. ರಜೋಗುಣವು ಅಧಿಕವಾಗಿದ್ದರೆ ಮನಸ್ಸು ಅತೀ ಚುರುಕಾಗಿ, ಅತ್ಯಾಸೆಯಿಂದ  ಕೂಡಿ ರೋಶಾವಿಷ್ಟವಾಗಿರುತ್ತದೆ. ಅಂತಹ ಮನಸ್ಸಿನ ಸ್ವಭಾವ ಮಾನವನನ್ನು ತಪ್ಪು ದಾರಿಗೆ ದೂಡುವ ಸಾಧ್ಯತೆಗಳಿವೆ. ಅಧೋಗತಿಗೆ ಇಳಿಯುವ ಜಾಲದಲ್ಲಿ ಸಿಕ್ಕಿಕೊಂಡು,ಆಮಿಷಗಳಿಗೊಳಗಾಗಿ, ಕೋಪ, ಲಾಲಸೆ, ಈರ್ಷ್ಯೆ ಮತ್ತು ದ್ವೇಷದ ಹಂದರದಲ್ಲಿ ಸಿಕ್ಕಿಕೊಂಡಿರುತ್ತದೆ. ಸತ್ವ ಗುಣವು ಮಾತ್ರ ಬೆಳಕನ್ನು ತೋರುತ್ತಾ, ಮುಕ್ತಿಯ ಹಾದಿಯಲ್ಲಿ ನಮ್ಮನ್ನು ನಡೆಸುತ್ತದೆ.  ಸತ್ವ ಗುಣವು ಸಂತೋಷ, ಆನಂದ, ಕರುಣೆಯಂತಹ ಉದಾತ್ತ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಯಲನುವು ಮಾಡಿ ಕೊಡುತ್ತದೆ. ಹಾಗಾಗಿ ಮನಸ್ಸಿಗೆ ತರಬೇತಿ ಕೊಡುವುದೆಂದರೆ ನಮ್ಮ ಸ್ವಭಾವ ಮತ್ತು ವ್ಯಕ್ತಿತ್ವದಲ್ಲಿ ಸತ್ವ ಗುಣವನ್ನು ಹೆಚ್ಚಿಸಿಕೊಳ್ಳುವುದು ಎಂದು ಅರ್ಥ.  

ಸಾತ್ವಿಕಗುಣದ  ಮನಸ್ಸು, ಮಾನಸಿಕ ಶಾಂತತೆ, ಇಂದ್ರಿಯ ನಿಗ್ರಹ, ನಿರ್ಭಯತೆ, ತಾಳ್ಮೆ, ಸಹಿಷ್ಣುತೆ, ಸಾರ್ವತ್ರಿಕ ಸ್ನೇಹ, ನಂಬಿಕೆ, ಭಕ್ತಿ, ಕ್ರಿಯಾಶೀಲತೆ, ಸಾಹಸ ಮತ್ತು ಪ್ರಯೋಗಶೀಲತೆಯಂತಹ ಸದ್ಗುಣಗಳಿಂದ ತುಂಬಿರುತ್ತದೆ. 

ಸಾಧಕನು ಸರ್ವಕಾಲದಲ್ಲೂ ಮಾನಸಿಕ ಶಾಂತತೆಯಿಂದಿದ್ದರೆ, ಅದು ಸತ್ವಗುಣತ್ವವನ್ನು ಪ್ರತಿಬಿ೦ಬಿಸುತ್ತದೆ. ಹೀಗೆ ತಮ್ಮ ಜೀವನದಲ್ಲಿ ಸತ್ವಗುಣ ಪ್ರಧಾನವಾದ ಮಾನಸಿಕ ಶಾಂತತೆಯನ್ನು ಕಾಪಾಡಿಕೊಂಡ ಮಹನೀಯರ ದೃಷ್ಟಾಂತ, ನಮಗೆ ಹೇರಳವಾಗಿ ಸಿಗುತ್ತದೆ. ಉದಾಹರಣೆಗೆ, ಮಹಾತ್ಮ ಗಾ೦ಧೀಜಿಯವರನ್ನೇ ತೆಗೆದುಕೊಳ್ಳಿ. ಅತೀ ಕ್ಲಿಷ್ಟ ಸಂಧರ್ಭಗಳಲ್ಲೂ ಶಾಂತ ಮನಸ್ಸಿನಿಂದ ದಿಟ್ಟವಾಗಿ ಹೋರಾಡಿ ಅಹಿಂಸಾತ್ಮಕ ಚಳುವಳಿಯಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವಹಾಗೆ ಮಾಡಲಿಲ್ಲವೇ. ಭಕ್ತಿ ಸಂಗೀತ, ಜಿಜ್ಞಾಸೆ, ಸತ್ಯಶೋಧನೆ ಮತ್ತು ಧ್ಯಾನದಂತಹ ಕಾರ್ಯಗಳಿಂದ ಮಾನಸಿಕ ಶಾಂತತೆಯನ್ನು ಸಾಧಿಸಬಹುದು. 

ಆಧ್ಯಾತ್ಮಿಕ ಸಾಧನೆಯ ಅಥವಾ ಜೀವನದಲ್ಲಿ ಏನನ್ನು ಸಾಧಿಸಬೇಕಾದರೂ ಸಾಧನೆಯ ಮಾರ್ಗದಲ್ಲಿ ಬೇಕಾದ ನೈತಿಕ, ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಇಂದ್ರಿಯ ನಿಗ್ರಹ ದಿಂದಲೇ ವೃದ್ಧಿಸಿಕೊಳ್ಳಬಹುದು. ಇಂದ್ರಯಗಳು ಹೇಳಿದಂತೆ ಕೇಳಿದರೆ ಅಥವಾ ಅವುಗಳನ್ನು ಅತಿಯಾಗಿ ಪ್ರೀತಿಸಿದರೆ ಅವುಗಳ ಬೇಡಿಕೆಗಳನ್ನು ನಾವು ಎಂದಿಗೂ ತೀರಿಸುವುದು ಸಾಧ್ಯವಿಲ್ಲ ಮತ್ತು ಅವುಗಳನ್ನು ಎಂದಿಗೂ ತೃಪ್ತಿಪಡಿಸಲು ಸಾಧ್ಯವೇ  ಇಲ್ಲ, ಹುಚ್ಚು ಕುದುರೆಗಳಂತೆ ಅವು ನಮ್ಮನ್ನು ನಮ್ಮ ಧ್ಯೇಯ ಸಾಧನೆಯ ಮಾರ್ಗದಿಂದ ದೂರ ಎಳೆದುಕೊಂಡು ಹೋಗಿ ಬಿಡುತ್ತವೆ.  ಅವುಗಳ ಸೆಳೆತ, ಕೆಲಸಕ್ಕೆ ಬಾರದ್ದಾದರೂ, ಅತಿ ಜೋರು. ಅವು ನಮ್ಮ ಮಾನಸಿಕ ಸ೦ತುಲನೆಯನ್ನು ಕದಡಿ ಜಿಗುಪ್ಸೆ ಮತ್ತು ಸೋಲಿಗೆ ಕಾರಣವಾಗುತ್ತದೆ. ಹಾಗಾಗಿ, ಇಂದ್ರಿಯಗಳನ್ನು ಖಂಡಿತವಾಗಿ, ಪ್ರಜ್ಞಾಪೂರಕವಾಗಿ ಮತ್ತು ಪ್ರಯತ್ನಪೂರಕವಾಗಿ ನಿಗ್ರಹಿಸಲೇಬೇಕು. ಮಾನಸಿಕ ದೃಡತೆಯನ್ನು ಸಾಧಿಸಿದರೆ ಇಂದ್ರಿಯ ನಿಗ್ರಹ ಸುಲಭ.  

ನಾವು, ನಾವೇ ಆಯ್ದುಕೊಂಡ ದಾರಿಯಲ್ಲಿ ಹೋಗಿ ನಮ್ಮ ಗಮ್ಯವನ್ನು ಮುಟ್ಟಲು, ನಮ್ಮ ನಮ್ಮ ಮನಸ್ಸುಗಳಲ್ಲಿ ಖಂಡಿತವಾಗಿಯೂ ನಿರ್ಭಯತ್ವವನ್ನು ರೂಡಿಸಿಕೊಳ್ಳಬೇಕು. ಸೋಲಿನ ಭಯ, ಪರಿಣಾಮಗಳ ಭಯ, 'ಪರರೇನನ್ನುತ್ತಾರೆಂಬ' ಭಯ ಗಳು ನಮ್ಮ ನಿರ್ಧಾರಿತ ಹಾದಿಯಲ್ಲೂ ಹೋಗಲು ಪಾಲಿಸಬೇಕಾದ ಕಟ್ಟುಪಾಡುಗಳನ್ನು ಪಾಲಿಸದೆ ಇರುವುದಕ್ಕೆ, ಮಾತ್ರ ನೆಪವಾಗಬಹುದು. ದೇಹ ಮತ್ತು ಮನಸ್ಸಿನ ಸಂಬಂಧವೇ ಈ ನಿರ್ಭಯತೆಗೆ ಕಾರಣವಾಗಬಹುದು. ಏಕೆಂದರೆ  ಹೆಚ್ಚು ಹೆಚ್ಚು ನಮ್ಮನ್ನು ನಾವು ಆತ್ಮದೊಂದಿಗೆ ಗುರುತಿಸಿಕೊಂಡಾಗ, ಮನವೂ ಹೆಚ್ಚು ಹೆಚ್ಚು ನಿರ್ಭಯವಾಗುತ್ತಾ ಹೋಗುತ್ತದೆ.  

ತಾಳ್ಮೆ ಮತ್ತು ಸಹಿಷ್ಣುತೆ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ. ಎಲ್ಲ ಸಮಯಗಳಲ್ಲೂ, ಕೆಲಸ ಕಾರ್ಯಗಳನ್ನು ಮಾಡುವಾಗ ತಾಳ್ಮೆಯನ್ನು ಕಳೆದು ಕೊಳ್ಳದೆ, ಕೋಪಗೊಳ್ಳದೆ, ಇರುವುದೇ ಲೇಸು. ನಿಯಮಬಧ್ಧತೆ ಮತ್ತು ಅಂತರ೦ಗದಲ್ಲಿ ಪ್ರಾರ್ಥನೆ ಮುಂತಾದವು ತಾಳ್ಮೆಯನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತವೆ. ಸಹಿಷ್ಣುತೆಯನ್ನು ಬೆಳೆಸಿಕೊಂಡರೆ ಪ್ರಕ್ಷುಬ್ಧ ಪರಿಸ್ಥತಿಗಳನ್ನು, ಮಿತ್ಯಾರೋಪ ಮತ್ತು 
ದೋಷಾರೋಪಣೆಯನ್ನು, ಅನರ್ಥ ಮತ್ತು ಅನಾಹುತಗಳಂತಹ ಸಂದರ್ಭಗಳಲ್ಲಿ ಶಾ೦ತವಾಗಿ  ಎದುರಿಸಲು ಮಾನಸಿಕ ಸ್ಥೈರ್ಯ ಇರುತ್ತದೆ. ಮನಸ್ಸಿನಲ್ಲಿ,  ನಮಗೆ ಅಪಕರಿಸಿದವರನ್ನೂ ಕ್ಷಮಿಸುವಂತ ಸಮಭಾವವನ್ನು ಬೆಳೆಸಿಕೊಂಡರೆ, ತಾಳ್ಮೆ ಮತ್ತು ಸಹಿಷ್ಣುತೆ ಖಂಡಿತ ಬೆಳೆಯುತ್ತದೆ.      

ಸ್ನೇಹಭಾವವೆಂದರೆ ಎಲ್ಲ ಜೀವಿಗಳಲ್ಲಿ ಪ್ರೇಮ ಮತ್ತು ಕರುಣೆಯಿಂದಿರುವುದು. ನಾವು ನಮ್ಮ ಹತ್ತಿರದವರನ್ನು ಪ್ರೀತಿಸುತ್ತೇವೆ. ನಮ್ಮ ಹೆಂಡತಿ ಮಕ್ಕಳಿಗಾಗಿ ಯಾವ ರೀತಿಯ ತ್ಯಾಗವನ್ನಾದರೂ ಮಾಡಲು ಸಿದ್ಧರಿರುತ್ತೇವೆ. ನಮ್ಮ ಬಂಧುಗಳಲ್ಲಿ ನಮಗೆ ಪ್ರೀತಿ ಮತ್ತು ಸಹಾಯ ಮಾಡುವ ಪ್ರವೃತ್ತಿ ಇದೆ. ಸ್ನೇಹವೆಂದರೆ ಈ ರೀತಿಯ ಪ್ರೀತಿಯ, ಬಂಧುತ್ವದ, ಕರುಣೆಯ, ತ್ಯಾಗದ, ಸಹಾಯದ ಭಾವಗಳ ಪರಿಧಿಯನ್ನು ಪ್ರಯತ್ನಪೂರ್ವಕವಾಗಿ ಹೆಚ್ಚಿಸಿಕೊಳ್ಳುವುದು. ಭೇಧ ಭಾವವಿಲ್ಲದೆ ಎಲ್ಲರನ್ನೂ ನಮ್ಮ ಪ್ರೇಮದ,  ಪ್ರೀತಿಯ ವೃತ್ತದೊಳಕ್ಕೆ ಸೆಳೆದುಕೊಳ್ಳುವುದು  ಅವಶ್ಯಕ. ಏಕೆಂದರೆ ಆಧ್ಯಾತ್ಮಿಕ ಸ್ನೇಹವು ಲಾಭ - ನಷ್ಟಗಳ ಲೆಕ್ಕಾಚಾರವನ್ನು ಮೀರಿ ಎಲ್ಲರಲ್ಲೂ ಆ ಪರಮಾತ್ಮ ವಾಸವಾಗಿದ್ದಾನೆ ಮತ್ತು ಪರಮಾತ್ಮನಲ್ಲಿ ಎಲ್ಲವೂ ವಾಸವಾಗಿದೆಯೆಂಬ ಏಕೈಕ ತತ್ವವನ್ನು ಅವಲಂಬಿಸಿರುತ್ತದೆ. ವಿಶಾಲ ಮನೋಭಾವದ ತರಬೇತಿ ನಮ್ಮ ಮನಸ್ಸಿಗೆ ಕೊಟ್ಟರೆ, ಆಧ್ಯಾತ್ಮಿಕವಾಗಿ ನಾವು ಬೆಳೆಯಬಹುದು ಅಥವಾ ಆಧ್ಯಾತ್ಮಿಕ ಬೆಳವಣಿಗೆಗೆ ವಿಶಾಲ ಮನೋಭಾವ ಅವಶ್ಯಕ.  

ಮನಸ್ಸಿಗೆ ನಂಬಿಕೆ ಮತ್ತು ಜ್ಞಾನ ಅತೀ ಮುಖ್ಯವಾದದ್ದು. ಆದರೆ ನಂಬಿಕೆ ಇದ್ದದ್ದರಿಂದ ಜ್ಞಾನ ಬೆಳೆಯುವುದೋ ಅಥವಾ ಜ್ಞಾನವಿದೆ ಆದುದರಿಂದ  ನಂಬಿಕೆ ಬೆಳೆಯಿತೋ ಎನ್ನುವುದು ಒಂದು ಪ್ರಶ್ನೆ. ಆದರೆ ಸಾಧುವೆಂದು ತೋರಿದ ಮತ್ತು ಸಾರ್ವತ್ರಿಕವಾಗಿ ಒಪ್ಪಿಕೊಂಡ, ಮಹಾತ್ಮರ ಜೀವನ ಮತ್ತು ಭೋಧನೆ ಮತ್ತು ಅದರಲ್ಲಿಡಗಿರುವ ಜ್ಞಾನವನ್ನು ನಂಬಿದರೆ ಸಾಕು. ಅದಕ್ಕೆ ಉದಾಹರಣೆಯಾಗಿ ಶ್ರೀ ರಾಮಕೃಷ್ಣ ಪರಮಹಂಸರಿಲ್ಲವೇ? ಅವರ ಜೀವನ ಮತ್ತು ಭೋಧನೆಗಳಲ್ಲಿ ನಂಬಿಕೆಯನ್ನಿಟ್ಟುಕೊಂಡು ನಮ್ಮ ಜೀವನವನ್ನೂ ಸುಧಾರಿಸಿಕೊಳ್ಳಬಹುದಲ್ಲವೇ? ಈ ರೀತಿಯ ನಂಬಿಕೆಯನ್ನೇ ನಿಷ್ಠೆಯನ್ನುತ್ತಾರೆ. 

ನಂಬಿಕೆ ಆರಾಧನೆಗೆ, ಆರಾಧನೆ ಭಕ್ತಿಗೆ ಮಾರ್ಗವಾಗುತ್ತದೆ. ಆತ್ಮಜ್ಞಾನವಿರುವ ಯಾರನ್ನಾದರೂ ನಂಬುವುದರಲ್ಲಿ ತಪ್ಪೇನೂ ಇಲ್ಲ. ಸಂತನನ್ನು ಮತ್ತು ದೇವ ದೂತನನ್ನು ಅಧ್ಯಾತ್ಮಿಕ ವಿಜ್ಞಾನಿಯೆಂದೇ ಅರಿಯಬೇಕು. ನಾವು ಆರಿಸಿಕೊಂಡ ತತ್ವದಲ್ಲಿ ನಿಷ್ಟೆಯಿಂದಿದ್ದಾಗ ನಮಗೆ ಅದರಲ್ಲಿ ಪ್ರೀತಿ ಉಂಟಾಗುತ್ತದೆ. 

ಕೊನೆಯದಾಗಿ ನಾವು ಸಮನ್ವಯಿಗಳಾಗಬೇಕು. ಅಂದರೆ ಜಾತಿ ಮತ ಪಂಥಗಳ ಭೇದವಿಲ್ಲದೆ ಇದ್ದರೆ ಅಧ್ಯ್ಯಾತ್ಮಿಕ ಪ್ರಯಾಣದಲ್ಲಿ ಜಯ. ನಾವೇನನ್ನು ಓದುತ್ತೇವೆಯೋ, ಕೇಳುತ್ತೇವೆಯೋ, ಎಲ್ಲವೂ ನ್ಯೂನತೆಯಿಂದ ಕೂಡಿದ ಜ್ಞಾನಾರ್ಜನೆಯ ಸಾಧನಗಳು. ಹಾಗಾಗಿ ಎಚ್ಚೆತ್ತ ಸಾಧಕನು ತಾನು ಕೇಳಿದ ಮತ್ತು  ಓದಿದ ಎಲ್ಲವನ್ನೂ ಅಂತರ೦ಗದಲ್ಲಿ ಸತ್ಯದ ಓರಗೆ ಹಚ್ಚಿ ತನ್ನದೇ ರೀತಿಯಲ್ಲಿ ಸದ್ವಸ್ತುವನ್ನು ಅರಿಯಲು ಪ್ರಯತ್ನ ಪಡಬೇಕು. 

ಹೀಗೆ ಸತ್ವಗುಣದ ಅಂಗಗಳಾದ,  ಮಾನಸಿಕ ಶಾಂತತೆ, ಇಂದ್ರಿಯ ನಿಗ್ರಹ, ನಿರ್ಭಯತೆ, ತಾಳ್ಮೆ, ಸಹಿಷ್ಣುತೆ, ಸಾರ್ವತ್ರಿಕ ಸ್ನೇಹ, ನಂಬಿಕೆ, ಭಕ್ತಿ, ಕ್ರಿಯಾಶೀಲತೆ, ಸಾಹಸ ಮತ್ತು ಪ್ರಯೋಗಶೀಲತೆಗಳನ್ನು ಬೆಳೆಸಿಕೊಂಡರೆ ನಾವು ಶುಧ್ಧ ಮನಸ್ಕರಾಗಿ ಆಧ್ಯಾತ್ಮಿಕ ಚಿಂತನೆ ಮತ್ತು ಪ್ರಯೋಗಗಳನ್ನು ಮಾಡುತ್ತಾ ಔನ್ನತ್ಯವನ್ನು ಪಡೆಯುವುದರಲ್ಲಿ ಸಂದೇಹವೇ ಇಲ್ಲ. 

ಸರ್ವೇ ಜನಾಃ ಸುಜನಾಃ ಭವಂತು 
ಸರ್ವೇ  ಸುಜನಾಃ  ಸುಖಿನಃ ಸಂತು 


ರವಿ ತಿರುಮಲೈ 
2 .6. 2011
9632246255

2 comments:

  1. ಅಸತೋಮ ಸದ್ಗಮಯ
    ತಮಸೋಮ ಜ್ಯೋತಿರ್ಗಮಯ
    ಮೃತ್ಯೋರ್ಮ ಅಮೃತಂಗಮಯ
    ಓಂ ಶಾಂತಿ ಶಾಂತಿ ...

    ತುಂಬಾ ಸರಳ ಧಾಟಿಯಲ್ಲಿ ಜೀವನವನ್ನು ಪಾವನಗೊಳಿಸಿ ..ಸಮಾಜದಲ್ಲಿ ಜನಾನುರಾಗಿಯಾಗಿ ಬದುಕುವ ಮಾರ್ಗ ದರ್ಶನವಾಗಿದೆ
    -ಅಕುವ

    ReplyDelete
  2. ಮಾನಸಿಕ ತರಬೇತ್ಯು ತೀರ ಅವಶ್ಯಕವಾದ ಶಿಕ್ಷಣ ಇದರ ಬಗೆಗಿನ ನಿಮ್ಮ ಈ ಲೇಖನ ಸಂಗ್ರಹ ಯೋಗ್ಯ ಮತ್ತು ರೂಢಿಸಿಕೊಳ್ಳಬೇಕಾದ ವಿಚಾರ.

    ರಜೋ ಮತ್ತು ಸಾತ್ವಿಕ ಗುಣಗಳನ್ನು ಹೇಗೋ ಸಂಭಾಳಿಸಬಹುದು ಆದರೆ ಈ ತಾಮಸ ಗುಣವಿದೆಯಲ್ಲಮ್ ಇದು ಮನುಷ್ಯನನ್ನು ಅರ್ಧ ಕೊಂದೇ ಹಾಕಿಬಿಡುತ್ತದೆ. ಇದಕ್ಕೆ ಮನೋ ಚಿಕಿತ್ಸೆಯಾಗಲೇ ಬೇಕು.

    ReplyDelete